Homeಸಾಮಾಜಿಕನೇರ ಮಾತಿನ ಹೃದಯವಂತ

ನೇರ ಮಾತಿನ ಹೃದಯವಂತ

- Advertisement -
- Advertisement -

ಬಿ.ಚಂದ್ರೇಗೌಡ |

ಅಂಬರೀಶ್ ತೀರಿಕೊಂಡಿದ್ದಾರೆ. ಹಾಗೆ ನೋಡಿದರೆ ನಾಲ್ಕು ವರ್ಷದ ಹಿಂದಿನ ಘಟನೆ ಅವರ ಸಾವಿನ ರಿಹರ್ಸಲ್‍ನಂತೆ ಕಾಣುತ್ತದೆ. ಅಂದು ಹಠಾತ್ತನೆ ಹುಶಾರು ತಪ್ಪಿ ಪ್ರಜ್ಞೆ ಕಳೆದುಕೊಂಡ ಅಂಬರೀಶ್‍ಗೆ ಪ್ರಜ್ಞೆ ಬಂದದ್ದು ಸಿಂಗಾಪುರದ ಆಸ್ಪತ್ರೆಯಲ್ಲಿ. ಆಗ ಬದುಕಿಬಂದ ಅಂಬರೀಶ್‍ಗೆ ಕರ್ನಾಟಕದ ಜನ ತೋರಿದ ಪ್ರೀತಿ ಅಸಾಮಾನ್ಯವಾದುದು. ಬೆಂಗಳೂರಿನಿಂದ ಮೈಸೂರವರೆಗೂ ಜನ ಜಮಾಯಿಸಿ ಬದುಕಿಬಂದ ನಾಯಕನಿಗೆ ತಮ್ಮ ಪ್ರೀತಿಯ ಧಾರೆ ಎರೆದಿದ್ದರು. ಅಂಬರೀಶ್ ಉದ್ಗರಿಸಿದಂತೆ ತಮ್ಮ ಸಾವಿನಲ್ಲಿ ಜನ ತೋರುವ ದುಃಖ ಮಿಶ್ರಿತ ಪ್ರೀತಿಯನ್ನು ತಾವೇ ಕಣ್ಣಾರೆ ಕಂಡಿದ್ದರು. ಅಂಬರೀಶ್ ನಿಜಕ್ಕೂ ಒಂದು ಅದ್ಭುತ ಚೈತನ್ಯ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಇಷ್ಟೊಂದು ಪ್ರೀತಿ ಸ್ನೇಹ ಸಂಪಾದಿಸಿದ ಕಲಾವಿದ ಮತ್ತು ರಾಜಕಾರಣಿ ಮತ್ತೊಬ್ಬನಿಲ್ಲ.

ಅಂಬಿ ಎಂತಹ ಅದೃಷ್ಟವಂತ ಎಂದರೆ, ಯಾರಾದರೂ ಚಿತ್ರರಂಗ ಸೇರಬೇಕಾದರೆ ಹರಸಾಹಸ ಮಾಡಿಕೊಂಡು ಸೇರಿದರೆ, ಅಂಬಿಗೆ ಅದು ಬಲವಂತದ ಪ್ರವೇಶವಾಗಿತ್ತು. ಅಕಸ್ಮಾತ್ ನಾಗರಹಾವಿನ ಚಿತ್ರದಲ್ಲಿ ನಟಿಸುವ ಅವಕಾಶ ಕೇವಲ ಎರಡೇ ದೃಶ್ಯವಾಗಿತ್ತು. ಆದರೆ ಪಟ್ಟಣ್ಣ ಕಣಗಾಲ್ ತಮ್ಮ ಎಲ್ಲಾ ಚಿತ್ರಗಳಲ್ಲೂ ಅವಕಾಶ ಕಲ್ಪಿಸಿದರು. ಆ ಪೈಕಿ ರಂಗನಾಯಕಿ ಚಿತ್ರದ ಪೋಷಕ ಪಾತ್ರ ಅಂಬಿಯು ನಟಿಸಿದ ಅತ್ಯುತ್ತಮ ಪಾತ್ರ. ಮುಂದೆ ಪುಟ್ಟಣ್ಣ ಮಸಣದ ಹೂ ಚಿತ್ರದಲ್ಲಿ ನಾಯಕನ ಪಾತ್ರ ನೀಡಿದರು. ಅದಕ್ಕೂ ಮೊದಲು ಅಂಬಿ ಯಾವ ಪಾತ್ರವಾದರೂ ನಟಿಸುವ ಹೃದಯ ವೈಶಾಲ್ಯತೆ ಇದ್ದ ಕಲಾವಿದ. ಆ ಕಾರಣಕ್ಕೆ ಬನಶಂಕರಿ ಚಿತ್ರದಲ್ಲಿ ಅಶ್ವಥ್ ಮನೆಯ ಆಳಿನ ಪಾತ್ರ ಮಾಡಿದ್ದೊಂದು ವಿಶೇಷ. ಅವರೊಳಗಿನ ಕಲಾವಿದನನ್ನು ಗುರುತಿಸಿ ಸಮರ್ಥ ಪಾತ್ರ ಕೊಡುವ ನಿರ್ದೇಶಕನ ಕೊರತೆ ಕಾರಣಕ್ಕೆ ಸಿಕ್ಕಸಿಕ್ಕ ಪಾತ್ರಗಳನ್ನ ಯಾವುದೇ ಶ್ರಮವಿಲ್ಲದೆ ಲೀಲಾಜಾಲವಾಗಿ ಮಾಡಿದ ಅಂಬಿಗೆ ಚಿತ್ರರಂಗವೇ ಅಂತಿಮ ಎನ್ನುವಂತಿರಲಿಲ್ಲ. ಆದ್ದರಿಂದ ರಾಜಕಾರಣದ ಕಡೆ ನುಗ್ಗಿದರು. ಅಂಬರೀಶ್‍ರ ವ್ಯಕ್ತಿತ್ವಕ್ಕೆ ಯಾರನ್ನೂ ಹೋಲಿಸು ವಂತಿರಲಿಲ್ಲ. ಚಿತ್ರರಂಗದ ಯಾವುದೇ ಸೋಗಲಾಡಿ ವ್ಯಕ್ತಿತ್ವ ಅವರ ಬಳಿ ಸುಳಿಯದಂತೆ `ನಾನಿರುವುದೇ ಹೀಗೆ’ ಎಂಬ ಛಾಪು ಮೂಡಿಸಿದ್ದರು. ಆದ್ದರಿಂದ ಇಡೀ ಚಿತ್ರರಂಗದ ಎಲ್ಲರೂ ಅಂಬಿಗೆ ಹೊಂದಿಕೊಂಡರೇ ಹೊರತು ಅಂಬಿ ತನ್ನ ತನ ಬಿಟ್ಟುಕೊಡಲಿಲ್ಲ. ಹೀಗೆ ಬಿಚ್ಚು ಮಾತಿನ ನೇರನುಡಿಯ ಈ ಹೃದಯವಂತ ರಾಜ್ ನಂತರ ಚಿತ್ರರಂಗದ ಯಜಮಾನ ರಾದರು. ಚಿತ್ರರಂಗದ ಎಲ್ಲಾ ಸಮಸ್ಯೆಗಳೂ ಪರಿಹಾರಕ್ಕಾಗಿ ಅಂಬರೀಶ್ ಬಳಿ ಬರತೊಡಗಿದವು. ಈಗಂತೂ ಮುಂದೆ ಇಂತಹ ಹೊರೆ ಹೊರುವವರಾರು ಎಂಬ ಅರಾಜಕತೆ ಸೃಷ್ಟಿಯಾಗಿದೆ.

ಅಂಬರೀಶ್ ರಾಜಕಾರಣಕ್ಕೆ ಜನತಾದಳದ ಮುಖಾಂತರ ಪ್ರವೇಶ ಪಡೆದರು. ಆದರೆ ಸೂಕ್ಷ್ಮ ಮನಸ್ಸಿನ ಅಂಬಿಗೆ ಆ ಜಾಗ ಸರಿಹೋಗಲಿಲ್ಲ. ಆದ್ದರಿಂದ ಕಡೆಯವರೆಗೂ ಕಾಂಗ್ರೆಸ್‍ನಲ್ಲಿದ್ದರು. ಕಾಂಗ್ರೆಸ್ಸಿನಲ್ಲಿ ಗರ್ಭಗುಡಿ ದೇವತೆಗೆ ಒಂದು ಕೈ ಮುಗಿದರಾಯ್ತು ನಿಮ್ಮಷ್ಟಕ್ಕೆ ನೀವು ಆರಾಮವಾಗಿರಬಹುದು. ನಿಮ್ಮದೇ ದ್ವೀಪದಲ್ಲಿ ಇದ್ದುಬಿಡಬಹುದು, ಇಂತಹ ಪಾರ್ಟಿಗೆ ಬಂದ ಅಂಬಿ ತನ್ನ ಉಡಾಫೆ ಮಾತಿಗೆ ಆ ಪಾರ್ಟಿಯನ್ನ ಒಗ್ಗಿಸಿಕೊಂಡರು. ಅಲ್ಲಿನ ಘಟಾನುಘಟಿ ನಾಯಕರೆಲ್ಲಾ ಅಂಬಿಗೆ ಹೊಂದಿಕೊಂಡಿದ್ದು ಒಂದು ವಿಶೇಷ. ಒಮ್ಮೆ ಕಾಂಗ್ರೆಸ್ ಪಾರ್ಟಿಯ ಮೀಟಿಂಗ್ ನಡೆಯುವುದಿತ್ತು. ಕಾಂಗ್ರೆಸ್‍ನ ಒಎಪಿಗಳೆಲ್ಲಾ (ಓಲ್ಡ್ ಏಜ್ ಪರ್ಸನ್ಸ್) ಹುಸಿ ಗಾಂಭೀರ್ಯ ಧರಿಸಿ ನಗಲಾರದಂತೆ ಕುಳಿತಿದ್ದರು. ಅಲ್ಲಿಗೆ ನುಗ್ಗಿದ ಅಂಬಿಯನ್ನ ನೋಡಿದ ಹೆಚ್.ಸಿ. ಶ್ರೀಕಂಠಯ್ಯ ಅಂಬಿಯಂತಹ ನಟನೊಂದಿಗೆ ತಾನೆಷ್ಟು ಸಲುಗೆಯಿಂದ ಇದ್ದೇನೆ ಎಂದು ತೋರಿಸಿಕೊಳ್ಳಲು ‘ಏನೋ ಮರಿ’ ಎಂದರು. ಕೂಡಲೇ ಅಂಬಿ ತು…… ಮರಿ ಎಂದು ಮುಂದೆ ಹೋದರು. ಕಾಂಗೈ ಲೀಡರ್‍ಗಳೆಲ್ಲ ಈ ಅಶ್ಲೀಲ ಮಾತಿಗೆ ಮೈ ಕುಣಿಸಿ ನಕ್ಕರು. ಅಂಬರೀಶ್ ಜೊತೆಯಲ್ಲೇ ಸಾವು ಕಂಡ ಜಾಫರ್ ಶರೀಫ್ ಅವರ ಬಳಿಗೋದ ಅಂಬಿ, ಶರೀಫ್ ಟೋಪಿ ತೆಗೆದು ತಲೆಯನ್ನು ಸವರಿ ‘ಅಹಹ ಜಟಕಾ ಸಾಬಿ ಜಟಕ ಸಾಬಿ’ ಎಂದು ತುಂಟ ಕಣ್ಣಿನಿಂದ ನೋಡಿ ಮತ್ತೆ ಟೋಪಿ ಹಾಕಿದರು. ಜಾಫರ್ ಶರೀಫ್ ಬುದ್ದಿ ಮಾಂದ್ಯನಂತೆ ನಕ್ಕು ಅಂಬಿ ಹಾಸ್ಯವನ್ನು ಸಹಿಸಿಕೊಂಡರು. ಸನಿಹದಲ್ಲೇ ಮಂಡ್ಯ ಜಿಲ್ಲೆ ನಾಗಮಂಗಲದ ಹೆಚ್.ಟಿ.ಕೃಷ್ಣಪ್ಪನವರು ಕುಳಿತಿದ್ದರು. ಅವರು ಕಣ್ಣಿಗೆ ಬಿದ್ದ ಕೂಡಲೆ ಅಂಬಿ ‘ಓಹೋ ನನ್‍ಮಗ ಯಜಮಾನ ಬಂದವುನೆ’ ಎಂದು ಆಯಾ ರಾಜಕಾರಣಿಗಳ ಯೋಗ್ಯತೆಗೆ ತಕ್ಕಂತೆ ಪಕ್ಕೆಗೆ ಗುದ್ದಿ ಚಿವುಟಿ ಮುಂದೆ ಹೋದರು. ಮಂಡ್ಯ ಜಿಲ್ಲೆಯ ರಾಜಕರಣಿ ಕುಳಿತಿದ್ದ, ಏನೋ ಲೌ..ಕೆ ಬಾ.. ಎಂಬ ಅಂಬಿಯ ಹೊಡೆತಕ್ಕೆ ತುಸು ಆಘಾತದಿಂದಲೇ ಪ್ರತಿಕ್ರಿಯಿಸಿದ ಆ ಯುವ ರಾಜಕಾರಣಿ ನಗಲು ಯತ್ನಿಸಿದ. ಹೀಗೆ ದನದ ಕೊಟ್ಟಿಗೆಯಂತಿದ್ದ ಆ ಪಾರ್ಟಿ ಹಾಲಿಗೆ ನುಗ್ಗಿದ ಮಂಡ್ಯದ ಹೋರಿ ಎಲ್ಲರ ಮೇಲೂ ಹಾರಿ ಒಂದು ಜೀವ ಸಂಚಾರ ಉಂಟುಮಾಡಿತು. ಆದರೆ ಮೀಟಿಂಗ್ ಮುಗಿಯುವವರೆಗೂ ಅಲ್ಲಿ ಕೂರುವ ವ್ಯವಧಾನವಿರಲಿಲ್ಲ. ಅಂಬರೀಶ್‍ನನ್ನು ಸೂಕ್ಷ್ಮವಾಗಿ ಗ್ರಹಿಸಿದ ಜಿ.ಮಾದೇಗೌಡರು ‘ಏನೋ ಅಂಬರೀಶ್ ಒಳ್ಳೆ ಬುದ್ದಿನೆ ಕಲಿಲಿಲ್ಲವಲ್ಲೊ ನೀನು’ ಎಂದಿದ್ದರು. ಅದಕ್ಕೆ ಅಂಬಿ ‘ಲೇ ಮುದುಕ ಸುಮ್ಮನೆ ಕೂತುಗೋ ಇಲ್ಲ ಅಂದ್ರೆ ಸಾಯಿಸಿ ಬುಡ್ತೀನಿ’ ಎಂದು ಕುತ್ತಿಗೆ ಬಳಿ ಕೈ ಹಾಕಿ ನಗಿಸಿದ್ದರು. ಅಂಬಿ ಎಲ್ಲಿಗೆ ಹೋದರೂ ಅಲ್ಲೊಂದು ಜೀವ ಸಂಚಾರವಾಗುತ್ತಿತ್ತು. ವಿಲಾಸಿ ಜೀವನಕ್ಕೆ ಒಗ್ಗಿಕೊಂಡಿದ್ದ ಅಂಬಿ ರಾಜಕಾರಣವನ್ನಾಗಲಿ, ಚಿತ್ರರಂಗವನ್ನಾಗಲೀ ಗಂಭೀರವಾಗಿ ಸ್ವೀಕರಿಸದ ಜಾಲಿಮ್ಯಾನ್. ಮತದಾರರಿಗೆ ಅವರಷ್ಟು ಮುಲಾಜಿಲ್ಲದೆ ಗದರಿದ ರಾಜಕಾರಣಿ ಇಲ್ಲ. ಅವರನ್ನು ಚೆನ್ನಾಗಿ ಅರಿತಿದ್ದ ಮತದಾರರು ಅಂಬಿ ಬೈದರೆ ನಗುತ್ತಿದ್ದರು.

ಬೆಳಿಗ್ಗೆ ಮನೆ ಎದುರು ಕಾಣಿಸಿಕೊಂಡವರನ್ನು ಟವಲ್‍ನಿಂದಲೇ ರುಬ್ಬತ್ತಾ ‘ನಡಿರಿ ನನ್ ಮಕ್ಕಳ ಬಂದುಬಿಟ್ರು ಬೆಳಿಗ್ಗೆನೆ’ ಎಂದು ಗೇಟಿನಿಂದಾಚೆ ಕಳಿಸಿದರೆ, ಅವರು ಅಂಬಿ ಹಿಂದೆಯೇ ಒಳ ಬರುತ್ತಿದ್ದರು. ರಾಜಕಾರಣದಲ್ಲಿನ ಗಜಗಂಭೀರ ರಾಜಕಾರಣಿಗಳನ್ನು ಎಳೆದುಕೊಂಡು ಹೋಗಿ ರೇಸ್ ಆಡಿಸಿದ್ದರು ಮತ್ತು ಕಾರ್ಡ್ ಆಡಿಸಿ ಬರಿಗೈ ಮಾಡಿ ಕಳಿಸುತ್ತಿದ್ದರು. ಒಂದೇ ಬೇಟೆಯಲ್ಲಿ ಅಂಬಿ ಏನು ಎಂದು ಗ್ರಹಿಸುತ್ತಿದ್ದವರಿಗೆ ಅಂಬಿ ಅರ್ಥವಾಗಿ ಹೋಗುತ್ತಿದ್ದರು. ಅಂಬರೀಶ್ ಯರ ಬಗ್ಗೆಯೂ ಒಳಗೊಂದು ಹೊರಗೊಂದು ಮಾತನಾಡಿದವರಲ್ಲ. ಕಾಂಗ್ರೆಸ್ ಪಾರ್ಟಿಯ ಅಭ್ಯರ್ಥಿಯಾದರೂ ದಳ ಮತ್ತು ಬಿಜೆಪಿ ಪಾರ್ಟಿ ಅಥವಾ ಅಭ್ಯರ್ಥಿಗಳ ಬಗ್ಗೆ ಒಂದೇ ಒಂದು ಟೀಕೆ ಮಾಡುತ್ತಿರಲಿಲ್ಲ. ಕೆಟ್ಟ ಜನ ಅಂತ ಗೊತ್ತಾದರೆ ಅತ್ತ ಸುಳಿಯುತ್ತಿರಲಿಲ್ಲ. ಸುಳಿದರೂ ಮುಖಕ್ಕೆ ಹೊಡೆದಂತೆ ಅಂದುಬಿಡುತ್ತಿದ್ದರು.

ಅಭಿಮಾನಿಗಳ ಅಣ್ಣ

ಅಂಬರೀಶ್‍ಗೆ ಮೊದಲು ಅಭಿಮಾನಿಗಳ ಅಪ್ಪುಗೆ ಬಹಳ ಮೆಚ್ಚುಗೆಯಾಗುತ್ತಿತ್ತು. ಆ ನಂತರ ನೋಡಿಕೊಂಡರೆ ವಾಚು, ಉಂಗುರ ಚೈನು ಜೇಬಿನಲ್ಲಿದ್ದ ದುಡ್ಡು ಏನೂ ಇರುತ್ತಿರಲಿಲ್ಲ. ಇಂತಹ ತೀವ್ರ ಅಭಿಮಾನಕ್ಕೆ ತುತ್ತಾದ ನಂತರ ಓಡಿ ಮುತ್ತಿಕೊಳ್ಳುವ ಅಭಿಮಾನಿಗಳನ್ನು ಕೈ ಎತ್ತಿ ತಡೆಯುತ್ತಿದ್ದ ಅಂಬಿ ತನ್ನಲಿದ್ದ ಧನ ಕನಕ ವಸ್ತುಗಳನ್ನ ತೆಗೆದು ಆಪ್ತನಿಗೆ ಕೊಟ್ಟು ನಂತರ ‘ಬನ್ರೋ ಈಗ ತಬ್ಬಿಕಳ್ಳಿ ಅಭಿಮಾನಿಗಳಂತೆ ಅಭಿಮಾನಿಗಳು ನನ್ ಮಕ್ಕಳು ಹುಟ್ಟು ಕಳ್ರು’ ಎಂದಿದ್ದರು. ಒಮ್ಮೆ ಚುನವಣೆಗೆ ಸ್ಪರ್ಧಿಸಲು ಬಂದಾಗ ಜೇಬಿನಲ್ಲಿದ್ದ ಠೇವಣಿ ಹಣವೇ ಎಗರಿ ಹೋಗಿತ್ತು.

ವಿಶ್ವ ಸುಂದರಿ ಮೇಳ

ಜೆ.ಹೆಚ್.ಪಟೇಲರು ವಿಶ್ವಸುಂದರಿ ಮೇಳ ನಡೆಸಲು ತಯಾರಿ ನಡೆಸುತ್ತಿದ್ದರು. ಅಲ್ಲಿಗೆ ಹೋಗಲು ತರುಣ ರಾಜಕಾರಣಿಯೊಬ್ಬ ತಯಾರಾಗಿ ಅಂಬಿ ಜೊತೆ ಹೋಗಲು ಮನೆಯ ಬಳಿ ಬಂದ. ಆತನ ತಯಾರಿ ಖುಷಿಯನ್ನು ಗಮನಿಸಿದ ಅಂಬಿ ಕಾರಿಗೆ ಕೂರಿಸಿಕೊಂಡು ಶರವೇಗದಲ್ಲಿ ಬೆಂಗಳೂರಿನ ಪಶ್ಚಿಮ ದಿಕ್ಕಿಗೆ ಹೊರಟರು. ‘ಎಲ್ಲಿಗೆ ಹೋಗ್ತಾಯಿದ್ದಿ’ ಎಂದು ಕೇಳಿದರೆ, ‘ಮುಚ್ಕಂಡು ಕುಂತ್ಕಳಲೇ’ ಎಂಬ ಉತ್ತರ ಬಂತು. ಕಡೆಗೆ ಬಹು ದೂರದ ಸಣ್ಣ ಹೋಟೆಲ್ ಮುಂದೆ ಕಾರು ನಿಂತಿತು. ಅಂಬಿ ಹಾರನ್ ಮಾಡಿದರು. ಹೋಟೆಲ್ ಮಾಲೀಕ ಮಸಾಲೆ ದೋಸೆ ತಂದುಕೊಟ್ಟ. ಇಂತ ದೋಸೇನಾ ನಮ್ಮ ಎಂ.ಟಿ.ಆರಲ್ಲೆ ಕೊಡುಸ್ತಿದ್ದೆ ಎಂದ ರಾಜಕರಣಿ. ಮಗನೆ ಅಭಿಮಾನ ಅಂದ್ರೆ ನಿನಗೇನು ಗೊತ್ತು. ಮುಚಕಂಡು ತಿನ್ನು, ಪಾಪ ಆ ಹುಡುಗ ಸಣ್ಣ ಹೋಟ್ಳು ಮಾಡಿಕಂಡು ಜೀವನ ಮಾಡ್ತಾ ಅವುನೆ. ನನ್ನ ಹೋಟ್ಳಿಗೆ ಬಂದು ಮಸಾಲೆದೋಸೆ ತಿನ್ನಣ್ಣ ಅಂತ ವರುಷದಿಂದ ಜೀವ ತಿಂತಿದ್ದ, ಅಂಥಾ ಅವಕಾಶ ಇವತ್ತು ಸಿಕ್ತು ನೋಡು ಎಂದು ಅಂಬಿ ಹೇಳಿದಾಗ ವಿಶ್ವಸುಂದರಿಗಳನ್ನ ನೋಡಿ ಜೊಲ್ಲು ಹರಿಸಲು ತಯಾರಾಗಿದ್ದ ಆ ಜೊಲ್ಲು ಬುರುಕ ರಾಜಕಾರಣಿಗೆ ಇನ್ನ ಈ ಅಂಬಿ ಸಹವಾಸ ಮಾಡಬಾರದೆನ್ನಿದಿತು!

ಎಂ.ಪಿ ಫಂಡು

ಲೋಕಸಭಾ ಸದಸ್ಯರಿಗೆ ಕೊಡುವ ನಿಧಿ ಬಳಕೆಯನ್ನ ಅಂಬರೀಶ್‍ರಷ್ಟು ವ್ಯವಸ್ಥಿತವಾಗಿ ಯಾರೂ ವಿತರಿಸಲಿಲ್ಲ. ಅವರ ಸಹಾಯಕರು ಅದನ್ನ ಪ್ರಾಮಾಣಿಕವಾಗಿ ಬಿಡುಗಡೆ ಮಾಡುತ್ತಿದ್ದರು. ಇದನ್ನ ತಿಳಿದ ನಾನು ನಮ್ಮೂರಲ್ಲಿ ಲಂಕೇಶ್ ಹೆಸರಲ್ಲಿ ಬಯಲು ರಂಗಮಂದಿರ ನಿರ್ಮಿಸಲೋಸ್ಕರ ಅವರು ಶೂಟಿಂಗ್‍ನಲ್ಲಿದ್ದ ಜಾಗಕ್ಕೆ ಹೊಗಿ ಕೇಳಿದ್ದೆ. ವಾಸುಕಿ ಕರೆದು ‘ಇವುನದೇನೋ ಕೇಳ್ತನೆ ಕೊಡು’ ಎಂದರು. ಇಷ್ಟು ಸಾಲದೆಂಬಂತೆ ನಾನು ಗೌರಿಯಿಂದಲೂ ಫೋನ್ ಮಾಡಿಸಿದೆ. ಆಗ ಅಂಬರೀಶ್ ‘ಆ ನಾಗಮಂಗಲದವು ಏನುಕೊಟ್ರು ಹಿಡಿದ ಕೆಲಸ ಮಾಡಲ್ಲ’ ಎಂದರು. ‘ನಮ್ಮ ಚಂದ್ರೇಗೌಡ್ರು ಹಾಗಲ್ಲ ನೀವು ಕೊಡಬಹುದು’ ಎಂದಳು. ಅವುನು ಅರ್ಜಿಕೊಟ್ಟು ಒಂದು ವಾರ ಆಗ್ಯದೆ, ಈಗ್ಲೆ ಕೊಟ್ಟು ಬುಟ್ಟರ ಕಾಯಕ್ಕೇಳು’ ಎಂದರು. ನಾಗಮಂಗಲದವರನ್ನು ಕಂಡರೆ ಅಂಬಿಗೇಕೆ ಸಿಟ್ಟು ಬಂದಿತ್ತೆಂದರೆ, ಎಂಪಿ ಫಂಡ್‍ನಿಂದ ಯಾವ್‍ಯಾವುದಕ್ಕೋ ಹಣ ಪಡೆದವರು ಆ ಕೆಲಸ ಮಾಡದೆ ತಿಂದುಹಾಕಿ ಕೆಟ್ಟ ಹೆಸರು ತಂದಿದ್ದರು. ನಾನು ಹೇಳಿದಂತೆ ರಂಗಮಂದಿರ ನಿರ್ಮಿಸಿ ಅದರ ಫೋಟೊ ಕಳಿಸಿದೆ. ಖುಷಿಯಾದ ಅಂಬಿ ತಮ್ಮ ಹುಟ್ಟು ಹಬ್ಬಕ್ಕೆ ಬರೇಳಿದ್ದರು.

`ಏಯ್ ಸ್ಲಮ್ಮು’, `ಏನಣ್ಣಾ’

ರೆಬಲ್‍ಸ್ಟಾರ್ ಅಂಬರೀಶ್‍ರಂತೆ ತಾನೂ ಸಿನಿಮಾರಂಗ ರಾಜಕಾರಣದಲ್ಲಿ ಮಿಂಚಬೇಕೆಂಬ ಮಹದಾಸೆಯಿಂದ ರಾಜಕರಣಕ್ಕೆ ಬಂದ ಜಗ್ಗೇಶ್‍ನನ್ನು ಅಂಬರೀಶ್ ಬಹು ಪ್ರಿತಿಯಿಂದ ‘ಏಯ್ ಸ್ಲಮ್ಮು’ ಎನ್ನುತ್ತಿದ್ದರು. ಜಗ್ಗೇಶ್ ಬೇಸರಗೊಳ್ಳದೆ ‘ಏನಣ್ಣ’ ಎನ್ನುತ್ತಿದ್ದ. ಇಂತ ಜಗ್ಗೇಶ್ ಕಾಂಗ್ರೆಸ್‍ಗೆ ಕೈಕೊಟ್ಟು ಮನೆ ಹಿಂದಿನಿಂದ ಬಿಲ್ಡಿಂಗ್ ಹಾರಿ ಬಿಜೆಪಿ ಸೇರಿದಾಗ ಅತನ ನಡದಳಿಕೆ ಗೊತ್ತಿದ್ದ ಅಂಬಿ ನಕ್ಕಿದ್ದರು. ಆದರೆ ಜಗ್ಗೇಶ್ ಹೋಗಿ ನಿಂತ ಜಾಗದ ಮಹಿಮೆಯಿಂದ ಅಂಬರೀಶ್‍ರನ್ನ ಟೀಕಿಸುವಂತಾಗಿದ್ದ. ಇದು ಅಂಬಿಗೆ ಬೇಸರವುಂಟು ಮಾಡಿತ್ತು. ಏಕೆಂದರೆ, ನಮ್ಮ ಕೆ.ಆರ್.ಪೇಟೆ ನಾಗಮಂಗಲದ ಕಡೆಯ ಯಾವುದೇ ಹುಡುಗರು ಮಾಡುವ ಹಾಸ್ಯ ಮಾಡಿಕೊಂಡು ಸೈಡಲ್ಲೇ ಇದ್ದ ಜಗ್ಗೇಶ್‍ನನ್ನು ಹೀರೋ ಮಾಡಿದವರು ಅಂಬರೀಶ್. ಸಿಂಹದ ಜೊತೆಯಿದ್ದ ಕತ್ತೆ ಕಾಡುಪ್ರಾಣಿಗಳೆಲ್ಲಾ ಗೌರವ ಕೊಡುವುದು ಹೆದರುವುದು ನನ್ನಿಂದಲೇ ಎಂದು ಭಾವಿಸಿತ್ತಂತೆ. ಇಂತಹ ವ್ಯಕ್ತಿಗಳಿಗೆಲ್ಲಾ ಸಹಾಯ ಮಾಡಿದ ಅಂಬರೀಶ್ ಬಾಯಿಬಿಡದಿದ್ದರೂ ಬೇಸರ ಮಾಡಿಕೊಳ್ಳುತ್ತಿದ್ದರು.

ವಿಶ್ವಾಸ ದ್ರೊಹ

ಅಂಬಿ ಚಿತ್ರರಂಗದಲ್ಲಿ ಮತ್ತು ರಾಜಕಾರಣದಲ್ಲಿ ಉತ್ತುಂಗದಲ್ಲಿದ್ದ ಕಾಲದಲ್ಲಿ ಶಿವರಾಮೇಗೌಡನ ಊರಿಗೆ ಬಂದರು. ಅದೂ ಶಿವರಾಮೇಗೌಡರ ಅಜ್ಜಿ ತಿಥಿಗೆ. ಆಗ ನಮಗೆಲ್ಲ ಬೇಸರವಾಗಿತ್ತು. ಮುಂದೆ ಅಂಬಿಯನ್ನ ನಾಗಮಂಗಲಕ್ಕೆ ಕರೆದರೆ ಮತದಾರರು ಚಲುವರಾಯಸ್ವಾಮಿ ಕಡೆಗೆ ವಾಲುತ್ತಾರೆಂದು ಗ್ರಹಿಸಿ ಅಂಬಿಯನ್ನ ತಾಲ್ಲೂಕಿಗೆ ಕರೆತಂದೆವು. ನಮ್ಮ ಕೆಲಸ ಫಲಕೊಟ್ಟಿತು. ಅಂದು ಸೇರಿದ್ದ ಜನಸಮೂಹ ಅಂಬಿಯನ್ನ ಕರೆತಂದ ಚಲುವರಾಯ ಸ್ವಾಮಿ ಕಡೆ ವಾಲಿತು. ಆ ಚುನಾವಣೆಯಲ್ಲಿ ಸೋತ ಶಿವರಾಮೇಗೌಡ 22 ವರ್ಷಗಳ ನಂತರ ದೇವೇಗೌಡರು ಕೈ ಹಿಡಿಯಲಾಗಿ ಗೆದ್ದರು.

ಚಾಮುಂಡೇಶ್ವರಿಯಲ್ಲಿ ನಿಂತಿದ್ದ ಸಿದ್ದರಾಮಯ್ಯನ ಗೆಲುವಿನಲ್ಲಿ ಅಂಬಿ ಪಾಲು ದೊಡ್ಡದಿತ್ತು. ಕೇವಲ 274 ಮತಗಳಲ್ಲಿ ಸಿದ್ದು ಗೆಲ್ಲಬೇಕಾದರೆ ಅಂಬಿ ಹಗಲುರಾತ್ರಿ ಓಡಾಡಿದ್ದರು. ಆದರೆ ಸಿದ್ದರಾಮಯ್ಯ ಮುಲಾಜಿಲ್ಲದೆ ತಮ್ಮ ಸಂಪುಟದಿಂದ ಕೈಬಿಟ್ಟಿದ್ದು ಅಂಬಿಗೆ ವಿಶ್ವಾಸದ್ರೋಹವಾಗಿ ಕಂಡಿತ್ತು. ಆದರೆ ಸರಕಾರ ನಡೆಸುವವರು ನಿಷ್ಠುರವಾಗಿರಬೇಕಾಗುತ್ತದೆ. ಅಂಬಿ ವಹಿಸಿಕೊಂಡ ಖಾತೆಯಲ್ಲಿ ಹಿಂದಿನ ಸರ್ಕಾರದ ಹೆಗ್ಗಣಗಳೇ ತುಂಬಿಕೊಂಡು ಆ ವಸತಿ ಖಾತೆ ಕ್ರಮೇಣ ಖಾಸಗಿ ಸಹಭಾಗಿತ್ವದ ಪಾಲಾಗುವ ಅಪಾಯ ಕಂಡಿತ್ತು. ಈ ಎಲ್ಲಾ ತರ್ಕವನ್ನ ಮೀರಿ ಯೋಚಿಸಿದ್ದಾದರೆ ಸಿದ್ದರಾಮಯ್ಯ ಅಂಬಿ ಕೈಬಿಟ್ಟು ಕಡಿದು ಕಟ್ಟೆ ಹಾಕಿದ್ದೇನು ಎಂಬ ಉದ್ಘಾರ ಏಳುತ್ತದೆ.

ಕೆಮ್ಮಣ್ಣು ಗುಂಡೀಲಿ

ಕೆಮ್ಮಣ್ಣು ಗುಂಡಿಯಲ್ಲಿ ಅಂಬರೀಶ್‍ರವರ ಪ್ರೀತಿ ಎಂಬ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ನಾವೊಂದಿಷ್ಟು ಗೆಳೆಯರು ನೋಡಲು ಹೋದೆವು. ರಾಜಭವನದ ಎದುರು ಮಂತ್ರಿ ಸೋಮಶೇಖರ್ ಕುಟುಂಬಸಮೇತ ಕುಳಿತು ಸೂರ್ಯಾಸ್ಥಮಾನದ ನೋಟದಲ್ಲಿದ್ದರು. ಆಗ ಅಂಬರೀಶ್ ಶೂಟಿಂಗ್ ಮುಗಿಸಿ ಬಂದರು. ಮಂತ್ರಿವರ್ಯರು ಆ ಕಡೆ ತಿರುಗಿ ನೋಡಲಿಲ್ಲ. ರಾಜಭವನದ ಒಳಬಂದ ಅಂಬರೀಶ್ ‘ನೋಡಯ್ಯ ಆ ಸೋಮಶೇಖ್ರ ಮೈಸೂರಲ್ಲಿ ನಮ್ಮ ಜೊತೆಯಿದ್ದ. ಎಲ್ಲ ಮೋಟುಬೀಡಿ ಸೇತಿದ್ದೋ. ಈಗ ಮಂತ್ರಿಯಾಗಿಬುಟ್ಟಿದ್ದೀನಿ ಅಂತ ಅಹಂಕಾರ ಬಂದಿದೆ’ ಎಂದರು. ಅವರ ಆಗಿನ ಮಾತಿನಲ್ಲಿ ಗೆಳೆಯರಾದವರು ಸ್ಥಾನಮಾನ ಸಿಕ್ಕಕೂಡಲೆ ಅಹಂಕಾರಿಗಳಾಗುವ ಬಗ್ಗೆ ವಿಶಾದವಿತ್ತು. ಮುಂದೆ ಅಂಬರೀಶ್ ಎಂಪಿಯಾಗಿ ಮಂತ್ರಿಯಾದರು, ರಾಜ್ಯದಲ್ಲೂ ಮಂತ್ರಿಯಾದರು. ಆದರೂ ಕೂಡ ಆ ಸ್ಥಾನಮಾನಕ್ಕೆ ಅಂಬಿಯನ್ನ ಅಲ್ಲಾಡಿಸಲಾಗಲಿಲ್ಲ. ಕೇಂದ್ರದ ಮಂತ್ರಿಯಾಗಿ ಕಾವೇರಿ ಸಮಸ್ಯೆಗೋಸ್ಕರ ಆ ಮಂತ್ರಿಪದವಿಯನ್ನೇ ಬಿಟ್ಟರು. ಆದರೆ ಆ ಚುನಾವಣೆಯಲ್ಲಿ ಅಂಬಿಯ ತ್ಯಾಗಕ್ಕೆ ಯಾವ ಬೆಲೆಯೂ ಸಿಗಲಿಲ್ಲ. ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಬಲಿಯಾದರು.

ತನ್ನ ಮಿತಿ ಮತ್ತು ಅತಿಯನ್ನ ಸರಿಯಾಗಿ ಗ್ರಹಿಸಿದ್ದ ಅಂಬಿ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಸ್ಪರ್ಧಿಸಿದ್ದರೆ ಅವರನ್ನ ಸೋಲಿಸುವ ಶಕ್ತಿಗಳು ಸಂಘಟಿತವಾಗಿದ್ದವು. ಇದರ ಅರಿವು ಅಂಬಿಗೂ ಇತ್ತು. ಅವರದ್ದು ಸ್ವಚ್ಛ ಮನಸ್ಸಾಗಿತ್ತು. ಆದ್ದರಿಂದಲೇ ಮಾತುಗಳೆಲ್ಲಾ ನೇರವಾಗಿ ಮಾನವೀಯ ಕಾಳಜಿಯಿಂದ ಕೂಡಿರುತ್ತಿದ್ದವು. ಅಂಬಿ, ಶಂಕರೇಗೌಡರನ್ನ ನೀಡಿದಂತಹ ಮಂಡ್ಯದ ಅನನ್ಯ ಕೊಡುಗೆ. ಆ ತರಹ ಇದ್ದ ಒಬ್ಬನೇ ವ್ಯಕ್ತಿ. ಈಗ ಕಣ್ಮರೆಯಾಗಿದ್ದಾರೆ. ಅವರಿಗಿಂತಲೂ ಎರಡು ದಶಕದಷ್ಟು ಹಿರಿಯರಾದ ರಾಜಕಾರಣಿಗಳು ಇನ್ನ ಆರಾಮವಾಗಿರುವಾಗ ಅಂಬಿ ಹೊರಟುಹೋದದ್ದು `ತುಂಬಲಾರದ ನಷ್ಟ’ ಎಂಬ ಕ್ಲೀಷೆ ಪದವನ್ನೇ ಮೀರಿದ್ದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...