Homeರಾಜಕೀಯಸಾಧನೆಶೂನ್ಯ ಬಿಜೆಪಿಯಿಂದ ಮತ್ತೆ ರಾಮ ಮಂದಿರದ ಜಪ

ಸಾಧನೆಶೂನ್ಯ ಬಿಜೆಪಿಯಿಂದ ಮತ್ತೆ ರಾಮ ಮಂದಿರದ ಜಪ

- Advertisement -
- Advertisement -

ಪಿ.ಕೆ. ಮಲ್ಲನಗೌಡರ್ |

ರಾಮಮಂದಿರದ ಹೆಸರಲ್ಲಿ ಕೋಮು ಧ್ರುವೀಕರಣ ಮಾಡಿ, 2019ರ ಚುನಾವಣೆ ಗೆಲ್ಲಲು ಸಂಘಪರಿವಾರ ರೂಪಿಸಿರುವ ಜೀವದ್ವೇಷಿ ಕಾರ್ಯಕ್ರಮದ ರಿಹರ್ಸಲ್ ರವಿವಾರ ಯಾವುದೇ ಅಹಿತಕರ ಘಟನೆಗಳಿಲ್ಲದೇ ಮುಗಿದಿದೆ. ಆದರೆ ಅದು ಒಂದು ಅಪಾಯದ ಮುನ್ಸೂಚನೆಯನ್ನು ನೀಡಿದೆ. 1992ರಲ್ಲಾದಂತೆ ಮತ್ತೆ ಹಿಂಸಾಚಾರದ ಮೂಲಕ ಧ್ರುವೀಕರಣ ಮಾಡವ ಹುನ್ನಾರಕ್ಕೆ ಚಾಲನೆ ನೀಡಲಾಗಿದೆ.

ವಿಎಚ್‍ಪಿ, ಆರ್‍ಎಸ್‍ಎಸ್‍ಗಳ ಈ ಸರಣಿ ಕಾರ್ಯಕ್ರಮ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದ್ದು ಎನಿಸುವಂತೆ ಬಿಂಬಿಸಲಾಗಿದೆ. ಆದರೆ ಈ ಕಾರ್ಯಕ್ರಮದ ಪ್ರಾಯೋಜಕ ಖುದ್ದು ಬಿಜೆಪಿಯೇ ಆಗಿದೆ. ಇನ್ನು ಸ್ಪಷ್ಟವಾಗಿ ನರೇಂದ್ರ ಮೋದಿ ಮತ್ತು ಅಮಿತ್‍ಶಾಗಳೇ ಆಗಿದ್ದಾರೆ.

ನೋಟು ಅಮಾನ್ಯೀಕರಣ, ಜಿಎಸ್‍ಟಿಗಳಿಂದ ಜರ್ಜರಿತಗೊಂಡ ಜನಸಾಮಾನ್ಯರನ್ನು ಒಲಿಸಿಕೊಳ್ಳಲು ಅದಕ್ಕೆ ಈಗ ಉಳಿದಿರುವ ದಾರಿ ಇದೇ ಆಗಿದೆ. 2014ರ ನಂತರ ನಡೆದ ಲೋಕಸಭಾ ಉಪಚುನಾವಣೆಗಳಲ್ಲಿ, ವಿಪಕ್ಷಗಳು ಒಮ್ಮತದ ಅಭ್ಯರ್ಥಿ ಹಾಕಿದರೆ ಬಿಜೆಪಿಗೆ ಹೀನಾಯ ಸೋಲು ಎಂಬುದು ಪಕ್ಕಾ ಆಗಿದೆ. ಒಟ್ಟು 16 ಉಪಚುನಾವಣೆಗಳಲ್ಲಿ ಸೋತಿರುವ ಬಿಜೆಪಿ, 2014ರಲ್ಲಿ ತಾನು ಗೆದ್ದಿದ್ದ 10 ಕ್ಷೇತ್ರಗಳನ್ನು ಕಳೆದುಕೊಂಡು, 282ರಿಂದ 272ಕ್ಕೆ ಕುಸಿದಿದೆ. ಭಾರಿ ಅಂತರದ ಸೋಲುಗಳು ಅದನ್ನು ಕಂಗೆಡಿಸಿವೆ.

ಮೋದಿಯ ಭಾಷಣಗಳು ಈಗ ಜನರಿಂದ ಲೇವಡಿಗೆ ಒಳಗಾಗುತ್ತಿವೆ. ಅಭಿವೃದ್ಧಿ ಆಧಾರದಲ್ಲಿ ಮತ ಕೇಳುವೆವು ಎಂಬ ಸೋಗಲಾಡಿತನ ಮಾಡುತ್ತಲೇ ಅಡ್ಡ ಮಾರ್ಗಗಳನ್ನು ಹಿಡಿಯುತ್ತ ಸಾಗಿದೆ. ಉತ್ತರದಲ್ಲಿ ಈಗ ಚುನಾವಣಾ ಪ್ರಚಾರಗಳಲ್ಲಿ ಮೋದಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ವ್ಯಂಗ್ಯ ಮಾಡುವ ಕಸರತ್ತಿನಲ್ಲಿ ತೊಡಗಿದ್ದಾರೆ. ಇದು ಫಲ ಕೊಡಲಾರದು ಎಂದು ಸಂಶಯ ಬರತೊಡಗಿದ ಮೇಲೆ ಸಂಘ ಪರಿವಾರ ಅಖಾಡಕ್ಕೆ ಇಳಿದಿದೆ. ರಕ್ತಪಾತ ನಡೆಸಿಯಾದರೂ 2019ರ ಚುನಾವಣೆ ಗೆಲ್ಲುವ ಜೀವವಿರೋಧಿ, ದೇಶವಿರೋಧಿ ಕೃತ್ಯಕ್ಕೆ ಧರ್ಮಸಂಸದ್ ಎಂಬ ಅಧರ್ಮದ ಕಾರ್ಯಕ್ರಮಕ್ಕೆ ಈಗ ಖುಲ್ಲಂಖುಲ್ಲಂ ಕೈಹಾಕಿದೆ.

ಆದರೆ ಅನಧಿಕೃತವಾಗಿಇದು ಎಂದೋ ಶುರುವಾಗಿದೆ. ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಅದು ಗೆದ್ದಿದ್ದು ಜನರ ಬದುಕಿಗೆ ಬೆಂಕಿ ಇಡುವ ಮೂಲಕವೇ. ಅಲ್ಲಿ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡಿಸಿದ್ದು, ಹಿಂದೂ ಮತಗಳ ಧ್ರುವೀಕರಣಕ್ಕಾಗಿಯೇ. ಮೊದಲ ದಿನದಿಂದಲೂ ಯೋಗಿ ಇದಕ್ಕೆ ಪೂರಕವಾದ ಹುಚ್ಚಾಟವನ್ನೇ ನಡೆಸುತ್ತ ಬಂದಿದ್ದಾರೆ. ಕಳೆದ 2 ತಿಂಗಳಿಂದ ಈ ಪುಣ್ಯಾತ್ನ ಮುಖ್ಯಮಂತ್ರಿಯ ಅಜೆಂಡಾ ಅಯೋಧ್ಯಾ, ರಾಮಮಂದಿರವಷ್ಟೇ ಆಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಆಹಾರಧಾನ್ಯಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಅಸಮರ್ಥವಾಗಿರುವ ಸರ್ಕಾರ, ಈಗ ರಫೇಲ್ ರಾಡಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇದೆಲ್ಲಕ್ಕೂ ಮುಖ್ಯವಾಗಿ ರೈತಾಪಿ ಸಮುದಾಯದ ಕಷ್ಟಗಳಿಗೆ ಸ್ಪಂದಿಸುವ ಒಂದೇಒಂದು ಕಾರ್ಯಕ್ರಮವನ್ನೂ ರೂಪಿಸದ ಸರ್ಕಾರ, ಉದ್ಯಮಿಗಳ ಹಿತ ಕಾಯುತ್ತ ದೇಶದ ಆರ್ಥಿಕತೆಯನ್ನೇ ಡೋಲಾಯಮಾನ ಮಾಡಿದೆ.

ನ್ಯಾಯಾಲಯಕ್ಕೇ ಸವಾಲು

ಹೊರಮಾತಿನಲ್ಲಿ ನ್ಯಾಯಾಲಯದ ತೀರ್ಪಿಗೆ ಬದ್ಧ ಎಂದು 4 ವರ್ಷ ಕಾಲ ಹಾಕಿದ ಬಿಜೆಪಿ, ಈಗ ತನ್ನ ಮಾನ ಮುಚ್ಚಿಕೊಳ್ಳಲು ಸಂಘ ಪರಿವಾರದ ಇತರ ಅಂಗಗಳ ಮೂಲಕ ಕಾನೂನು ಅಥವಾ ಸುಗ್ರಿವಾಜ್ಞೆಯ ಬೇಡಿಕೆಯನ್ನು ಮುನ್ನೆಲೆಗೆ ತಂದಿದೆ. ನ್ಯಾಯಾಲಯ ವಿಚಾರಣೆಯನ್ನು ಈಗಲೇ ಆರಂಭಿಸಿದ್ದರೂ ಅದರ ನಿಲುವೇನೂ ಬದಲಾಗುತ್ತಿರಲಿಲ್ಲ. ಕಳೆದ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಮಂದಿರದ ಭರಸ ನೀಡಿ, ‘ರಾಮಭಕ್ತರಿಗೇ’ ವಂಚಿಸಿದ ನಡೆಯ ಲಾಭವನ್ನು ಶಿವಸೇನಾ ಪಡೆಯಲು ಕಣಕ್ಕೆ ಇಳಿದ ಮೇಲಂತೂ ಸಂಘಕ್ಕೆ ಹಿಂದೂತ್ವದ ಹಾದಿಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಅನಿವಾರ್ಯತೆಯೂ ಸೃಷ್ಟಿಯಾಗಿದೆ.

2017ರಲ್ಲಿ ಸುಪ್ರಿಂ ತೀರ್ಪ ಉಲ್ಲಂಘನೆ

ಬಿಜೆಪಿ ಮತ್ತೆ ಧ್ವಂಸ ರಾಜಕಾರಣಕ್ಕೆ ಇಳಿಯುವ ಸುಳಿವು 2017ರಲ್ಲಿಯೇ ಸಿಕ್ಕಿತ್ತು. ವಿಎಚ್‍ಪಿ ಮುಖಡ ರಾಮ ವಿಲಾಸ್ ವೇದಾಂತಿ, ಅಭಯ ಚೈತನ್ಯ ಸ್ವಾಮಿಯ ನೇತೃತ್ವದಲ್ಲಿ ಸಾಧುಸಂತರ ಗುಂಪೊಂದು ರಾಮಲಲ್ಲಾ ದೇಗುಲಕ್ಕೆ ತ್ರಿಶೂಲ ಹಿಡಿದು ಪ್ರವೇಶಿಸುವ ಮೂಲಕ ಸುಪ್ರಿಂ ಕೋರ್ಟ್‍ನ 2002ರ ಆದೇಶವನ್ನು ಉಲ್ಲಂಘಿಸಿತ್ತು. ಯಾವುದೇ ಆಯುಧ, ಧರ್ಮದ ಸಂಕೇತಗಳನ್ನು ಈ ನಿಷೇಧಿತ ಪ್ರದೇಶದಲ್ಲಿ ತರಬಾರದು ಎಂಬ ಆದೇಶವನ್ನು ಉಲ್ಲಂಘಿಸಲು ಯೋಗಿ ಆದಿತ್ಯನಾಥ ಸರ್ಕಾರ ಕುಮ್ಮಕ್ಕು ನೀಡಿತ್ತು. ಫೈಜಾಬಾದ್‍ನ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿಎಚ್‍ಪಿಯ ನಡೆಯನ್ನು ಬೆಂಬಲಿಸಿ ಮಾತಾಡಿದ್ದರು.

2014ರಿಂದ ಕಲ್ಲು ಸಂಗ್ರಹ

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿಎಚ್‍ಪಿ ದೇಶಾದ್ಯಂತ ಕಲ್ಲು ಸಂಗ್ರಹ ಕೆಲಸವನ್ನು ಆರಂಭಿಸಿತ್ತು. ಅಯೋಧ್ಯೆಯಲ್ಲಿರುವ ತನ್ನ ವರ್ಕ್‍ಶಾಪ್‍ನಲ್ಲಿ ಕಲ್ಲು ಕೆತ್ತನೆಯ ಕೆಲಸಕ್ಕೆ ವೇಗ ನೀಡಲಾರಂಭಿಸಿತು. 2017ರಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್‍ಮಂದಿರ ನಿರ್ಮಾಣಕ್ಕೆ ಕೋರ್ಟ್ ಸಂಧಾನ ವಹಿಸಲು ಸಿದ್ದವೆಂದಾಗ, ಇನ್ನಷ್ಟು ಚುರುಕುಗೊಂಡ ವಿಎಚ್‍ಪಿ, ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ ಆಕ್ಷೇಪಣಾ ಅರ್ಜಿಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿತ್ತು. ಆದರೆ ಆ ವರ್ಷ ಅಪೆಕ್ಸ್ ಕೋರ್ಟ್ ಬಿಜೆಪಿಯ ಲಾಲ ಕೃಷ್ಣ ಅದ್ವಾನಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿಯವರ ಮೇಲೆ ಹೊರಿಸಿದ್ದ ಕ್ರಿಮಿನಲ್‍ಸಂಚಿನ ಆರೋಪಗಳನ್ನು ಮಾನ್ಯ ಮಾಡಿತು.ಹೀಗಾಗಿ ಖೇಹರ್ ಸಾಹೇಬರ ‘ಸಂಧಾನ’ ಶುರುವೇ ಆಗಲಿಲ್ಲ.

ಸಂಕಟ ಬಂದಾಗ ರಾಮರಮಣ!

ಜನಪರ ಆಡಳಿತ ನೀಡುವ ಯಾವ ಪ್ರಯತ್ನವನ್ನೂ ಇಲ್ಲಿವರೆಗಿನ ಬಿಜೆಪಿ ಸರ್ಕಾರಗಳು (ಕೇಂದ್ರ ಮತ್ತು ರಾಜ್ಯ ಸರ್ಕಾರಗಳು) ನೀಡಿಲ್ಲ. ಸಂಘ ಪರಿವಾರದ ತಲೆಯಲ್ಲಿ ಹಿಂದೂರಾಷ್ಟ್ರ ಎಂಬ ಗೊಬ್ಬರ ಬಿಟ್ಟರೆ ಮತ್ತೇನಿಲ್ಲ. ಗೋಳ್ವಾಲ್ಕರ್ ಎಂಬ ಜೀವವಿರೋಧಿಯ ‘ಸಿದ್ದಾಂತ’ವೇ ಅದಕ್ಕೆ ಸಂವಿಧಾನ. ಗಾಂಧಿ, ಅಂಬೇಡ್ಕರ್, ಪಟೇಲರ ಹೆಸರನ್ನು ಕೇವಲ ಲಾಭಕ್ಕಷ್ಟೇ ಅದು ಬಳಸಿಕೊಳ್ಳುತ್ತದೆ. ಈಗ ಮೋದಿ ಮಾಡುತ್ತಿರುವುದೂ ಅದನ್ನೇ. ಮೋದಿಯ ‘ಅಭಿವೃದ್ಧಿ’ ಎಂದರೆ ಖದೀಮ ಉದ್ಯಮಿಗಳಿಗಾಗಿ ಯೋಜನೆ ರೂಪಿಸುವುದು, ಹಣ ಕೊಳ್ಳೆ ಹೊಡೆದು, ಅದನ್ನು ಹಿಂದೂತ್ವದ ಉದ್ಯಮದಲ್ಲಿ ಹೂಡುವುದು.

ಜನರ ನಿತ್ಯ ಬವಣೆಗಳ ಬಗ್ಗೆ ಯೋಚಿಸದ ಬಿಜೆಪಿಗೆ ಚುನಾವಣೆ ಬಂದಾಗ ರಾಮ ನೆನಪಾಗುತ್ತಾನೆ. ಆದರೆ ಈ ಸಲ ಮಾಧ್ಯಮಗಳ ಭಾರಿಬೆಂಬಲದ ಹೊರತಾಗಿಯೂ 2019ರ ಚುನಾವಣೆಯ ಭಯ ಶುರುವಾಗಿರುವುದರಿಂದ ಮತ್ತೆ ಅದು ಧ್ರುವೀಕರಣಕ್ಕೆ ಕೈ ಹಾಕಿದೆ.

ಮೊನ್ನೆ ದೇಶಾದ್ಯಂತ ನಡೆಸಿದ ಸಭೆಗಳ ಸ್ವರೂಪ, ಧಾಟಿ ನೋಡಿದರೆ 1992 ಮತ್ತು 2002ರ ಹತ್ಯಾಕಾಂಡಗಳಿಗಿಂತಲೂ ಭೀಕರವಾದ ಕೋಮುಗಲಭೆಗೆ ಅದು ಸಿದ್ಧತೆ ನಡೆಸಿರುವ ಸೂಚನೆಗಳು ಕಾಣುತ್ತಿವೆ. ಅಯೋಧ್ಯೆಯಲ್ಲಿ ನಡೆದ ಧರ್ಮಸಂಸದ್ ಬರೀ ಆರಂಭ ಮತ್ತು ರಿಹರ್ಸಲ್ ಮಾತ್ರ…..

ಈ ದೇಶದ ರೈತರು, ದಲಿತರು ಮತ್ತು ಎಲ್ಲ ಶ್ರಮಜೀವಿಗಳು ಈ ಹುನ್ನಾರವನ್ನು ಚಿವುಟಿ ಹಾಕಲು ಜನಾಂದೋಲನ ರೂಪಿಸಬೇಕಿದೆ.

ನಂಬುಗೆ, ಪುರಾಣ ಮತ್ತು ನ್ಯಾಯ!

2010ರಲ್ಲಿ ಅಲಹಾಬಾದ್ ಹೈಕೋರ್ಟ್ ಬಾಬ್ರಿ ಮಸೀದಿಯ ಜಾಗವನ್ನು ಮೂವರೂ ದಾವೆದಾರರಿಗೆ ಸರಿಸಮವಾಗಿ ಹಂಚಿ ನೀಡಿದ ತೀರ್ಪಿಗೆ ಆಗ ಜನಸಾಮಾನ್ಯರು ಸ್ವಾಗತಿಸಿದ್ದರು. ಮತ್ತೆ 1992ರ ದುಸ್ವಪ್ನ ಕಾಡಲಾರದು ಎಂಬ ಆಶಾಭಾವನೆಯೇ ಅದಕ್ಕೆ ಕಾರಣವಾಗಿತ್ತು.

ಆದರೆ ಪುರಾಣ ಮತ್ತು ದೇಶದ ಬಹುಸಂಖ್ಯಾತರ ನಂಬುಗೆಗಳನ್ನು ಆಧರಿಸಿ ಆ ವಿಲಕ್ಷಣ ತೀರ್ಪನ್ನು ನೀಡಲಾಗಿತ್ತು. ಆಶಿಶ್ ನಂದಿಯವರಂತಹ ದೇಸಿ ಚಿಂತಕರು ಕೂಡ, ನ್ಯಾಯದ ಚೌಕಟ್ಟನ್ನು ಮೀರಿ, ದೇಶದ ಜನರ ನಂಬಿಕೆಗಳನ್ನು ಆಧರಿಸಿ ತೀರ್ಪು ನೀಡುವ ಮೂಲಕ ಕೋರ್ಟ್ ಇತಿಹಾಸ ಸೃಷ್ಟಿಸಲು ಯತ್ನಿಸಿದೆ ಎಂದು ಕೊಂಡಾಡಿದ್ದರು! ಕನ್ನಡದ ‘ದೇಸಿ’ ಚಿಂತಕರಲ್ಲಿ ಒಬ್ಬರಾದ ಕೆ.ವಿ. ಅಕ್ಷರ ಕೂಡ ಸಂಭ್ರಮಪಟ್ಟಿದ್ದರು.

ಈ ದೇಶದ ಬಹುಸಂಖ್ಯಾತ ಶ್ರಮಿಕರಿಗೆ ರಾಮ ಆರಾಧ್ಯ ದೈವವೇ ಅಲ್ಲ. ರಾಮನ್ನು ಆರಾಧಿಸುವ ಬಹುಪಾಲು ಜನರು ‘ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದ’ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿಯೇ ಇಲ್ಲ. ಮಾಧ್ಯಮಗಳ ನೆರವಿನಿಂದ ಸಂಘಪರಿವಾರ ಅಂತಹ ನಂಬಿಕೆಯನ್ನು ಸೃಷಿಸಲು ಯತ್ನಿಸುತ್ತ ಬಂದಿದೆಯಷ್ಟೇ. ಸುಪ್ರಿಂಕೋರ್ಟ್ ವಿಚಾರಣೆ ಈ ಬಿಂಬಿತ ‘ಸತ್ಯ’ಗಳನ್ನು ದಾಟಿ ನ್ಯಾಯ ನೀಡುತ್ತದೆ ಎಂದು ಆಶಿಸೋಣ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...