Homeಅಂಕಣಗಳುಪತ್ರಕರ್ತರೇ ಕಳ್ಳ ಜ್ಯೋತಿಷಿಗಳಾದಾಗ!

ಪತ್ರಕರ್ತರೇ ಕಳ್ಳ ಜ್ಯೋತಿಷಿಗಳಾದಾಗ!

- Advertisement -
- Advertisement -

ಮೂಢನಂಬಿಕೆಗಳೆಂದರೆ ಸಿಡಿಯುತ್ತಿದ್ದ ‘ಮುಂಗಾರು’ ಪತ್ರಿಕೆ ಬಿಟ್ಟ ಮೇಲೆ ನಾನು ಕೆಲವು ಸಂಜೆ ಪತ್ರಿಕೆಗಳಲ್ಲೂ ಕೆಲಸ ಮಾಡಿದ್ದೆ. ಇವೆಲ್ಲವೂ ದಿನ ಭವಿಷ್ಯ ಪ್ರಕಟಿಸುತ್ತಿದ್ದವು. ಆದರೆ, ಲೇವಡಿಯ ಹೊರತು ನಾವೇನೂ ಮಾಡುವಂತಿರಲಿಲ್ಲ!
ಈ ಭವಿಷ್ಯಗಳು ಹಿಂದೆ ಹವಾಮಾನ ಇಲಾಖೆಯ ಭವಿಷ್ಯಗಳಂತೆ ಇರುತ್ತಿದ್ದವು- ‘ರಾಜ್ಯದ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆ’. ಒಂದೆರಡು ಹಳ್ಳಿಗಳಲ್ಲಿ ನಾಲ್ಕು ಹನಿ ಬಿದ್ದರೂ ಭವಿಷ್ಯ ನಿಜವಾಗುತ್ತದೆ!
ಮನೆಯಲ್ಲಿ ಮನಸ್ತಾಪ, ಹೆಂಡತಿ ಜೊತೆ ಜಗಳ, ಹಣದ ಮುಗ್ಗಟ್ಟು, ಸಹೋದ್ಯೋಗಿಗಳಿಂದ ಕಿರುಕುಳ, ಮೇಲಧಿಕಾರಿಗಳಿಂದ ದಬ್ಬಾಳಿಕೆ, ಸಾಲಗಾರರಿಂದ ತೊಂದರೆ ಇತ್ಯಾದಿಗಳೂ, ಲಾಟರಿಯಲ್ಲಿ ಅದೃಷ್ಟ, ಮಕ್ಕಳಿಂದ ಮನಸ್ಸಿಗೆ ಉಲ್ಲಾಸ, ಸದ್ಯವೇ ಭಡ್ತಿ ಯೋಗ ಇತ್ಯಾದಿಗಳೂ ಇರುತ್ತಿದ್ದವು! ನಾವು ತಮಾಷೆಗೆ ಮಿತ್ರನಿಂದ ಪುತ್ರಭಾಗ್ಯ ಇತ್ಯಾದಿಯಾಗಿ ಲೇವಡಿಯನ್ನೂ ಮಾಡುತ್ತಿದ್ದೆವು. ಇವೆಲ್ಲಾ ಪ್ರತಿಯೊಬ್ಬರ ಜೀವನದಲ್ಲಿ ಸಾಮಾನ್ಯವಾಗಿರುವುದರಿಂದ ಓದುಗರಿಗೆ ಹೇಗೋ ಒಂದೊಂದು ರೀತಿಯಲ್ಲಿ ಹೊಂದಾಣಿಕೆಯಾಗುತ್ತಿದ್ದವು.
ಒಂದು ಪತ್ರಿಕೆಯಲ್ಲಿ ಒಬ್ಬರು ಜ್ಯೋತಿಷಿ ವಾರಕ್ಕೊಮ್ಮೆ ಬಂದು ಇಡೀ ವಾರದ ಭವಿಷ್ಯ ಬರೆದು ತಂದುಕೊಟ್ಟು ಹೋಗುತ್ತಿದ್ದರು! ಸುಮ್ಮನೇ ಹೋಗುತ್ತಿರಲಿಲ್ಲ- ಜ್ಯೋತಿಷ್ಯದ ಬಗ್ಗೆ ಕೊರೆದೇ ಹೋಗುತ್ತಿದ್ದರು! ಇದರಿಂದ ಈ ಮಹಾನ್ ಬುರುಡೆ ಶಾಸ್ತ್ರದ ನನ್ನ ಜ್ಞಾನ ಅಪಾರ ಅಭಿವೃದ್ಧಿಯಾಯಿತು!
ಒಂದು ಸಲ ಅವರು ಬರಬೇಕಾದ ದಿನ ಬರಲಿಲ್ಲ. ಏನು ಮಾಡುವುದು ಎಂದು ಉಪಸಂಪಾದಕನಿಗೆ ತಲೆಬಿಸಿ! ‘ತಲೆಬಿಸಿ ಎಂತಕ್ಕೆ? ಹಿಂದಿನದ್ದೇ ಒಂದು ಹಾಕು!’ ಎಂದೆ ನಾನು. ಇದು ಓದುಗರಿಗೆ ಮೋಸ ಎಂದು ನನಗೆ ಅನಿಸಲಿಲ್ಲ! ಮೊದಲೇ ಸುಳ್ಳು! ಆ ಸುಳ್ಳಿನಲ್ಲಿ ಮತ್ತೆ ಮೋಸ ಎಂತದ್ದು!? ಅವರು ಮರುದಿನವೂ ಬರಲಿಲ್ಲ! ಈ ಪರಿಪಾಠ ಮುಂದುವರಿಯಿತು. ಕೆಲವು ದಿನಗಳ ನಂತರ ಅತಂಕದಿಂದಲೇ ಬಂದರು- ಬರೆಯುವ ಅವಕಾಶ ತಪ್ಪಿ ಹೋಯಿತೆ ಎಂದು. ಯಾಕೆಂದರೆ, ಪತ್ರಿಕೆಯಲ್ಲಿ ಪ್ರತೀದಿನ ಹೆಸರು ಪ್ರಕಟವಾಗುತ್ತಿದ್ದುದರಿಂದ ಅವರಿಗೆ ಉಚಿತ ಜಾಹೀರಾತು! ಇದರಿಂದ ಕುರಿಗಳ- ಕ್ಷಮಿಸಿ, ಗಿರಾಕಿಗಳ ಸಂಖ್ಯೆ ಹೆಚ್ಚುತ್ತಿತ್ತು!.
ಬಂದವರೇ, ”ನನಗೆ ಹುಷಾರಿರಲಿಲ್ಲ ಮಾರಾಯ್ರೆ! ಮಲೇರಿಯಾ! ನನ್ನ ಬದಲು ಭವಿಷ್ಯ ಯಾರು ಬರೆಯುತ್ತಿದ್ದುದು?” ಎಂದು ಕೇಳಿದರು. ಪಾಪ! ಎಲ್ಲರ ಸಮಸ್ಯೆಗಳನ್ನು ಮುಂಚಿತವಾಗಿ ಹೇಳುವ ಅವರಿಗೆ ತನಗೆ ಮಲೇರಿಯಾ ಬರಲಿದೆ ಎಂದು ಗೊತ್ತಿರಲಿಲ್ಲ! ಗೊತ್ತಿದ್ದರೆ ಮುಂಚಿತವಾಗಿ ಒಂದು ತಿಂಗಳದ್ದು ಬರೆದುಕೊಟ್ಟು ಹೋಗುತ್ತಿರಲಿಲ್ಲವೆ!?
ನಮ್ಮ ಸಂಪಾದಕರು ಸ್ವತಃ ಈ ಜ್ಯೋತಿಷ್ಯದ ಹುಚ್ಚನಾಗಿದ್ದರೂ ಮಹಾ ಕಿಡಿಗೇಡಿ!- (ಈಗ ಅವರಿಲ್ಲ!; ಅವರ ಆತ್ಮಕ್ಕೆ ಶಾಂತಿ ಸಿಗಲಿ!) ಯಾರೋ ಪ್ರಸಿದ್ಧ ಜ್ಯೋತಿಷಿಯ ಹೆಸರು ಹೇಳಿ ಬುರುಡೆಬಿಟ್ಟರು!
“ಹೋ! ಹೌದೆ? ನೋಡುವಾಗಲೇ ಅಂದಾಜಾಯಿತು- ಯಾರೋ ದೊಡ್ಡಜನ ಬರೆದದ್ದು ಅಂತ! ಸರೀಯಾಗಿತ್ತು!” ಎಂದು ಒತ್ತಿಹೇಳಿ, ಮುಂದಿನ ವಾರದ ಭವಿಷ್ಯ ಕೊಟ್ಟು ಹೋದರು. ಒಂದು ವೇಳೆ ಸಂಪಾದಕರು ಯಾವುದೋ ಕಾಂಜಿಪೀಂಜಿ ಹೆಸರು ಹೇಳಿರುತ್ತಿದ್ದರೆ, “ಛೇ! ಏನೇನೂ ಸರಿಯಿರಲಿಲ್ಲ!! ಮೂರನೇ ಮನೆಯಲ್ಲಿ ಕುಜ ಇರುವಾಗ….” ಎಂದೆಲ್ಲಾ ಕೊರೆಯುತ್ತಿದ್ದರು.
ನಂತರ ನಾನು ಸೇರಿದ ಸಂಜೆ ಪತ್ರಿಕೆ ಮಾಲಕರು ಪಕ್ಕಾ ವ್ಯಾಪಾರಿ. ಪತ್ರಿಕೆ ಅರಂಭವಾಗುವ ಮೊದಲೇ ಸೇರಿದ್ದ ನಾನು ಭವಿಷ್ಯ ಬೇಡವೆಂದರೂ ಕೇಳಲಿಲ್ಲ! ‘ಹೇ! ನಿಮಗೆ ಗೊತ್ತಿಲ್ಲ! ಅದಕ್ಕೇ ಓದುಗರಿದ್ದಾರೆ. ಭವಿಷ್ಯ ಬೇಕೇಬೇಕು. ದಿನ ಭವಿಷ್ಯದ ಜೊತೆಗೆ ವಾರಭವಿಷ್ಯವೂ ಬೇಕು’ ಎಂದರು. ಸರಿ ಡೆಸ್ಕಿನಲ್ಲೇ ಒಂದಷ್ಟು ಭವಿಷ್ಯ ಬರೆಯಲಾಯಿತು! ಅದನ್ನು ಡಿಟಿಪಿಯವರ ಕೈಗೆ ಒಪ್ಪಿಸಲಾಯಿತು! ಅವರೇ ಲಾಟರಿ ತೆಗೆದಂತೆ ತಿರುಗಿಸಿ ತಿರುಗಿಸಿ, ಒಂದೊಂದು ರಾಶಿಗೆ ಒಂದೊಂದು ಹಾಕುತ್ತಿದ್ದರು! ಇದರಲ್ಲಿ ಮೋಸವೇನೂ ಇಲ್ಲ! ಭವಿಷ್ಯ ಎಂದರೆ ‘ಅದೃಷ್ಟದ ಆಟ’ವಲ್ಲವೆ!!? ಗಿಣಿಶಾಸ್ತ್ರದಂತೆ ಗಿಣಿಯ ಬದಲು ಮನುಷ್ಯರು ಚೀಟಿ ಹೆಕ್ಕಿದಂತೆ ಆಯಿತಷ್ಟೇ!
ಇದನ್ನು ಓದಿದ ಮೇಲೆ, ನೀವೂ ನಿಮ್ಮ ಪತ್ರಿಕೆಗಳಲ್ಲಿ ಬರುವ ದಿನಭವಿಷ್ಯ ತಪ್ಪದೇ ಓದಿ ಮಾರ್ಗದರ್ಶನ ಪಡೆಯಿರಿ!
ಇದನ್ನು ಬರೆಯಲು ಕಾರಣವೆಂದರೆ, ಈ ರೀತಿ ಮಾಡದ ಪತ್ರಿಕೆಗಳೇ ಕಡಿಮೆ ಎಂದು ಹಳೆಯ ಪತ್ರಕರ್ತರನ್ನು ಕೇಳಿದರೆ ಸಾಕ್ಷಿ ಹೇಳುತ್ತಾರೆ. ನಾವು ಹಿಂದೆ ಮಾಡಿದ್ದು, ಮಹಾ ಅನೈತಿಕ ಅನಿಸಿದರೂ ಮಹಾ ಮೋಸವೆಂದು ನನಗನಿಸಿಲ್ಲ! ಇದರಿಂದ ನಮಗೇನೂ ಲಾಭವಿರಲಿಲ್ಲ! ಆದರೀಗ ಮಹಾಮೋಸಗಾರರ ಕದೀಮ ದಂಡೇ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಲ್ಲಿ ವಕ್ಕರಿಸಿ ವಿಜ್ಞಾನದ ಕಪಾಳಕ್ಕೆ ಹೊಡೆಯುವಂತಹ ಸಂಶೋಧನೆಗಳನ್ನು ಯಾವುದೇ ನಾಚಿಕೆ ಅಥವಾ ಹಿಂಜರಿಕೆ ಇಲ್ಲದೇ ಬೊಗಳುತ್ತವೆ.
ಮೂಢನಂಬಿಕೆಗಳನ್ನು ನಿವಾರಿಸಬೇಕಾದ ಮಾಧ್ಯಮಗಳೇ ಅವುಗಳಿಗೆ ಪ್ರೋತ್ಸಾಹ ನೀಡಿ ಧನಲಾಭ ಮಾಡಿಕೊಳ್ಳುತ್ತಿವೆ. ಪತ್ರಿಕೆಗಳಲ್ಲಿ ಕೇವಲ ದಿನ, ವಾರ ಭವಿಷ್ಯಗಳೇ ಅಲ್ಲದೆ, ಮಹಾನ್ ಸಂಶೋಧನಾ ಲೇಖನಗಳೂ ಬರುತ್ತಿವೆ! ಪ್ರಳಯವಾಗುತ್ತದೆ ಎಂದು ಸಾವಿರಾರು ಜನರನ್ನು ಹೆದರಿಸಿದ ದಂಡಪಿಂಡ ಇಂದಿಗೂ ತನ್ನ ಬ್ರಹ್ಮಾಂಡ ಹೊಟ್ಟೆಯನ್ನು ಹೊತ್ತುಕೊಂಡು ಒದರುತ್ತಾ ಹೊಟ್ಟೆಹೊರೆದುಕೊಳ್ಳುತ್ತಿದ್ದಾನೆ!
ಕೇವಲ ಉದಾಹರಣೆಗಾಗಿ ಕೆಲವು ಪ್ರಸಿದ್ಧ ಪತ್ರಿಕೆಗಳಲ್ಲಿ ಬಂದ ಲೇಖನಗಳಿಂದಲೇ ನಾನು ಪಡೆದುಕೊಂಡ ಜ್ಞಾನವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
“ಕೆಲವರಿಗೆ ಎಷ್ಟು ಹುಡುಕಾಡಿದರೂ ಸರಿಯಾದ ಸಂಗಾತಿ ಸಿಗದೆ ಇರುವುದರಿಂದ ಮದುವೆ ವಿಳಂಬವಾಗಿರುತ್ತದೆ. ಇದಕ್ಕೆ ಜ್ಯೋತಿಷ್ಯದ ಪ್ರಕಾರ ಪಿತೃದೋಷ ಅಥವಾ ಸರ್ಪದೋಷವೆಂದು ಕರೆಯಲಾಗುತ್ತದೆ. ಆದರೆ ಈ ದೋಷಗಳನ್ನು ನಿವಾರಣೆ ಮಾಡಲು ಆಧ್ಯಾತ್ಮಿಕ ಪರಿಹಾರಗಳು ಇವೆ! ಇದನ್ನು ಪಾಲಿಸಿಕೊಂಡು ಹೋದರೆ ಮುಂದೆ ಸಂಗಾತಿ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ!” ಇದು ಜೋಯಿಸರುಗಳ ಒಂದು ಸಾಮಾನ್ಯ ಬುರುಡೆ. ಪರಿಹಾರ ಇದೆ! ಲಾಭ ಗ್ಯಾರಂಟಿ- ಜೋಯಿಸರಿಗೆ!
ಎಂತಹ ವಿಚಿತ್ರ ನೋಡಿ! ‘ನನ್ನ ತಂಗಿಗೊಂದು ಗಂಡು ಕೊಡಿ’ ಎಂಬ ನಾಟಕವನ್ನೇ ಪಿ.ಲಂಕೇಶರು ಬರೆದಿದ್ದಾರೆ! ಬಹುತೇಕ ಜನರಿಗೆ ಈ ಸಮಸ್ಯೆ ಇದೆ! ಜಾತಿ, ಉಪಜಾತಿ, ಕುಲ, ಜಾತಕ, ನಕ್ಷತ್ರ, ಐಶ್ವರ್ಯ, ಅಂತಸ್ತು, ರೂಪ, ಬಣ್ಣ, ಗುಣ, ಎತ್ತರ, ವಿದ್ಯೆ…ಮಣ್ಣು ಮಸಣ ಎಂದು ಹೆಣಗಾಡುವುದರಿಂದ ಈ ಸಮಸ್ಯೆ ಉಂಟಾಗುವುದಿಲ್ಲ! ಇದಕ್ಕೆ ಪಿತೃದೋಷ, ಶನಿದೋಷ, ನಾಗದೋಷಗಳೇ ಕಾರಣ!
ಇದಕ್ಕೆ ಪರಿಹಾರ ನೋಡಿ! “ಹಾಲು, ಮೊಸರು, ಎಳನೀರು, ಹೂ, ಜೇನುತುಪ್ಪ, ಕಬ್ಬಿನ ಹಾಲು ಇತ್ಯಾದಿಯಿಂದ ಶಿವನ ಲಿಂಗಕ್ಕೆ ಅಭಿಷೇಕ ಮಾಡಬೇಕು.” (ಇದನ್ನೇ ಮಕ್ಕಳಿಗಾಗಲೀ, ಹಸಿದವರಿಗಾಗಲೀ ಕೊಟ್ಟರೆ ಫಲವಿಲ್ಲ!)
ಸೋಮವಾರ ಅಥವಾ ಶನಿವಾರದಂದೇ ಈ ಕಾರ್ಯಗಳನ್ನು ಮಾಡಬೇಕು. (ಬೇರೆ ದಿನಗಳಲ್ಲಿ ಇವುಗಳನ್ನು ಸೇವಿಸುವುದಿಲ್ಲ ಎಂದು ಟೈಮ್‍ಟೇಬಲ್ ಹಾಕಿರುವ ದೇವರು ಅದನ್ನು ಸೀಕ್ರೆಟಾಗಿ ಈ ಜೋಯಿಸರಿಗೆ ತಿಳಿಸಿರುತ್ತಾನೆ!)
“ಪಿತೃದೋಷ ಅಥವಾ ಶಿಕ್ಷೆಯನ್ನು ನಿವಾರಣೆ ಮಾಡುವ ಸಲುವಾಗಿ ಶನಿದೇವರನ್ನು ಒಲಿಸಿಕೊಳ್ಳಲು ಹನುಮಂತನಿಗೆ ಹರಕೆ ಒಪ್ಪಿಸಬೇಕು! ಅಥವಾ ಓಂ ಶಂ ಶನೈಶ್ಚರಾಯ ನಮಃ ಮಂತ್ರವನ್ನು ಪಠಿಸಬೇಕು.” ಇದೆಂತಹ ಲಾಜಿಕ್ ಎಂದು ಅರ್ಥವಾಗುವುದಿಲ್ಲ. ಈಗ ಬೆಂಗಳೂರು ಮತ್ತಿತರ ನಗರಗಳಲ್ಲಿ ಶನಿದೇವರು ಜೀಪು ರಥದಲ್ಲಿ ಪ್ರದಕ್ಷಿಣೆ ಬಂದು ಕಲೆಕ್ಷನ್ ಮಾಡುವುದರಿಂದ ಮತ್ತು ಹಳ್ಳಿಹಳ್ಳಿಗಳಲ್ಲಿ ಸಾಮೂಹಿಕ ಶನಿಪೂಜೆಗಳು ನಡೆಯುತ್ತಿರುವುದರಿಂದ ಆತನ ವಿಷಯದಲ್ಲಿ ಹನುಮಂತನಿಗೇನು ಕೆಲಸ? ಇದು ಅನ್‍ಫೇರ್ ಟ್ರೇಡ್ ಪ್ರ್ಯಾಕ್ಟೀಸ್ ಆಗುವುದಿಲ್ಲವೇ!?
ಇದೇ ರೀತಿಯಲ್ಲಿ ಪಿತೃದೋಷ, ಶನಿದೋಷ, ನಾಗದೋಷ, ಗ್ರಹದೋಷಗಳಿಂದ ನಿಮಗೆ ಆಗುವ ಅನಾಹುತಗಳನ್ನೂ, ಅದರಿಂದ ಜೋಯಿಸರಿಗೆ ಆಗುವ ಲಾಭಗಳನ್ನು ಮುಂದೆ ನೋಡೋಣ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....