Homeಅಂಕಣಗಳು'ಭಾರತ್ ಸೇವಕ್’ ಸಮಾಜ ಮತ್ತು ನಾನು

‘ಭಾರತ್ ಸೇವಕ್’ ಸಮಾಜ ಮತ್ತು ನಾನು

- Advertisement -
- Advertisement -

1952ರಲ್ಲಿ ನಾನು ಭಾರತ ಸೇವಕ ಸಮಾಜದ ಸಂಚಾಲಕನಾದೆ. ಭಾರತ ಸೇವಕ ಸಮಾಜ ಜವಾಹರ ಲಾಲರ ಕನಸಿನ ಕೂಸು. ಭಾರತ ಸೇವಕ ಸಮಾಜ ಬಡವರ, ದಲಿತರ, ಶೋಷಣೆಗೊಳಗಾದವರ ಸಲುವಾಗಿ ಕೆಲಸ ಮಾಡುವ ಸೇವಾ ಸಂಸ್ಥೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿರುವ ನುರಿತ ಸಮಾಜ ಸೇವಕರು ತಮ್ಮದೇ ರೀತಿಯಲ್ಲಿ ಪ್ರಯೋಗಾರ್ಥವಾಗಿ ಸಮಾಜದ ಉಪೇಕ್ಷೆಗೊಳಗಾದವರ ಒಳಿತಿಗಾಗಿ ಪ್ರಯೋಗಗಳನ್ನು ನಡೆಸತಕ್ಕ ಜವಾಬ್ದಾರಿ ಸಂಚಾಲಕರ ಮೇಲಿತ್ತು. ಇವರು ಕೈಗೊಂಡ ಪ್ರಯೋಗಗಳು ಪೂರ್ಣ ಫಲ ನೀಡಿದರೆ ಅಂತಹ ಪ್ರಯೋಗಗಳನ್ನು ಪೈಲಟ್ ಪ್ರಾಜೆಕ್ಟ್ ಎಂದು ಭಾರತ ಸರ್ಕಾರ ಅಂಗೀಕರಿಸಿ ಆ ಪ್ರಯೋಗಗಳನ್ನು ದೇಶಾದ್ಯಂತ ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿತ್ತು. ಭಾರತ ಸೇವಕ ಸಮಾಜ ಪರಿಣಾಮಕಾರಿಯಾಗಿ ಪ್ರಯೋಗಗಳನ್ನು ಕೊಡಬೇಕೆಂಬುದು ಸರ್ಕಾರದ ಆಶಯವಾಗಿತ್ತು. ಪ್ರಧಾನಿ ಜವಹರಲಾಲ್ ನೆಹರುರವರು ಭಾರತ ಸೇವಕ ಸಮಾಜದ ರಾಷ್ಟ್ರಾಧ್ಯಕ್ಷರಾಗಿದ್ದರು. ಸಚಿವ ಗುಲ್ಚಾರಿಲಾಲ್ ನಂದ ಅದರ ಕಾರ್ಯಾಧ್ಯಕ್ಷರಾಗಿದ್ದರು.
ಮೈಸೂರು ಸಂಸ್ಥಾನದ ಘಟಕಕ್ಕೆ ಸಂಚಾಲಕನಾದ ಮೇಲೆ ನಾನು ಎರಡು ಕೊಳಗೇರಿಗಳನ್ನು ಆಯ್ಕೆ ಮಾಡಿಕೊಂಡು ಪ್ರಯೋಗ ಮಾಡತೊಡಗಿದೆ. ಅವುಗಳೆಂದರೆ ಬೆಂಗಳೂರು ವಿಜಯ ಕಾಲೇಜ್ ಹಿಂಭಾಗದಲ್ಲಿರುವ ದಾಸರ ಕಾಲೋನಿ ಹಾಗೂ ಮೈಸೂರು ರಸ್ತೆಯಲ್ಲಿರುವ ವಾಲ್ಮೀಕಿ ನಗರ. ಜಯನಗರದ ದಾಸರ ಕಾಲೋನಿ ಬಹಳ ಹಳೆಯ ಕೊಳೆಗೇರಿ. ಅಲ್ಲಿನ ನಿವಾಸಿಗಳು ಬ್ರಿಟಿಷ್ ಸೈನ್ಯದ ಕುದುರೆಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದರು. ಅವರದು 23 ಗುಡಿಸಲುಗಳು ಇದ್ದವು. ಆ ಕೊಳೆಗೇರಿಯ ಸ್ವಚ್ಛತಾ ಕಾರ್ಯವನ್ನು ಮೊದಲು ಕೈಗೆತ್ತಿಕೊಳ್ಳಲಾಯಿತು. ಈ ಕೆಲಸದಲ್ಲಿ ಸ್ವಯಂಸೇವಕರಾಗಿ ಆಗ ವಿದ್ಯಾರ್ಥಿಗಳಾಗಿದ್ದ ಎಂ.ಆರ್.ದೊರೆಸ್ವಾಮಿ, ಮುಂದೆ ಶಾಸಕರಾದ ವಕೀಲ ಸುಬ್ಬಾರೆಡ್ಡಿ ಮುಂತಾದವರು ತೊಡಗಿಸಿಕೊಳ್ಳುತ್ತಿದ್ದರು. ಜಯನಗರ ಆ ಹೊತ್ತಿಗೆ ಉತ್ತಮ ಬಡಾವಣೆಯಾಗಿ ರೂಪಿತವಾಗಿತ್ತು. ಉನ್ನತಾಧಿಕಾರಿಗಳು, ಪ್ರತಿಷ್ಟಿತ ವ್ಯಕ್ತಿಗಳು ಸುಸಜ್ಜಿತ ಮನೆಗಳನ್ನು ಕಟ್ಟಿಕೊಂಡಿದ್ದರು. ಅವರಿಗೆ ಈ ಕೊಳೆಗೇರಿ ಅಲ್ಲಿರುವುದು ಸರಿಕಾಣಲಿಲ್ಲ. ದಾಸರ ಕಾಲೋನಿ ಖಾಲಿಮಾಡಿಸಿ, ಅಲ್ಲಿದ್ದವರನ್ನು ಓಡಿಸಿಬಿಡುವ ಪ್ರಯತ್ನದಲ್ಲಿದ್ದರು. ಈ ಕೊಳೆಗೇರಿ ನಿವಾಸಿಗಳನ್ನು ಅಲ್ಲಿಯೇ ಉಳಿಸಿ ಅವರ ಜೀವನ ಶೈಲಿ ಬದಲಾಯಿಸಲಿಕ್ಕಾಗಿ ಗುಡಿಸಲುಗಳನ್ನು ತೆಗೆದು ಮನೆಗಳನ್ನು ಕಟ್ಟಿಸಿಕೊಡುವ ತೀರ್ಮಾನ ತೆಗೆದುಕೊಂಡೆ. ಬೆಂಗಳೂರು ನಗರಾಭಿವೃದ್ಧಿ ಸಮಿತಿಗೆ ಆಗ ದೀನದಯಾಳು ನಾಯ್ಡು ಛೇರ್‍ಮನ್ ಆಗಿದ್ದರು. ಅವರು ಬೆಂಗಳೂರು ನಗರ ಮೇಯರ್ ಆಗಿದ್ದವರು. ಅವರು ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆವಾಸವನ್ನೂ ಅನುಭವಿಸಿದ್ದರು.
ಅವರ ಮುಖಾಂತರ ದಾಸರ ಕಾಲೋನಿಯ ಗುಡಿಸಲುಗಳನ್ನು ತೆರವುಗೊಳಿಸಿ ಅಲ್ಲಿ ಮನೆಗಳನ್ನು ಕಟ್ಡಿಕೊಡಲು ವಿನಂತಿ ಮಾಡಿಕೊಂಡೆ. ದೀನ ದಯಾಳು ನಾಯ್ಡು ಈ ನನ್ನ ಸಲಹೆಗೆ ಒಪ್ಪಿದರು. ದಾಸರ ಕಾಲೋನಿ ವಾಸಿಗಳು ತಾವೇ ಗುಡಿಸಲುಗಳನ್ನು ತೆಗೆದು ಜಾಗ ಖಾಲಿ ಮಾಡಿಕೊಟ್ಟರು. 23 ಮನೆಗಳನ್ನು ಕಟ್ಟಲಾಯಿತು. ಪ್ರತಿ ಮನೆಗೂ ಒಂದು ಮಲಗುವ ಕೋಣೆ, ಒಂದು ಹಜಾರೆ, ಒಂದು ಅಡುಗೆ ಕೋಣೆಯನ್ನೊಳಗೊಂಡ ಮನೆಗಳು ತಯಾರಾದವು. ಆ ಮನೆಗಳನ್ನು ಕಟ್ಟಿ ಇಲ್ಲಿಗೆ 50 ವರ್ಷಗಳಾಗಿವೆ. ಈಗ ದಾಸರ ಕಾಲೋನಿಯ ಮಕ್ಕಳೆಲ್ಲ ಓದಿ ಮುಂದಕ್ಕೆ ಬಂದಿದ್ದಾರೆ. ಅನೇಕರು ಫ್ಯಾಕ್ಟರಿಗಳಲ್ಲಿ, ಖಾಸಗಿ ಉದ್ಯಮಿಗಳ ಬಳಿ ಕೆಲಸ ಮಾಡುತ್ತಾರೆ. ದಾಸರ ಕಾಲೋನಿಯ ಜನರಿಗೆ ಒಂದು ರೀತಿಯಲ್ಲಿ ಶಾಪವಿಮೋಚನೆ ಆಗಿದೆ. ಕೊಳಗೇರಿಯನ್ನು ಕಾಲಿ ಮಾಡಿಸಲು ತುದಿಗಾಲಲ್ಲಿ ನಿಂತಿದ್ದ ಸಭ್ಯಸ್ಥರಿಗೂ ಅಲ್ಪಸ್ವಲ್ಪ ಸಮಾಧಾನವಾಗಿರಬಹುದು.
ವಾಲ್ಮೀಕಿ ನಗರ ಒಂದು ಹರಿಜನ ಕಾಲೋನಿ. ಸಂಪಂಗಿರಾಮ ನಗರದ ಕಡೆ ಇದ್ದ ಜನರನ್ನು ಬೆಂಗಳೂರು ಬೆಳೆದಂತೆ ದೂಡುತ್ತಾ ಮೈಸೂರು ರೋಡಿಗೆ ತಂದು ದಬ್ಬಿದ್ದರು. ಇಲ್ಲಿನ ಬಹುತೇಕರು ಬೂಟು, ಚಪ್ಪಲಿ ತಯಾರಿಸುವುದರಲ್ಲಿ ಪರಿಣಿತರಿದ್ದರು. ಆ ಏರಿಯಾದಲ್ಲಿ ಒಂದು ಚಪ್ಪಲಿ ಉದ್ಯಮವನ್ನು ನೊಂದಾವಣೆ ಮಾಡಿಸಿ, ಒಂದು ಕಾರ್ಯಾಗಾರ ಕಟ್ಟಿಸಿದೆ. ಕೇಂದ್ರ ಸರ್ಕಾರದ ಸಣ್ಣ ಕೈಗಾರಿಕೆಗಳ ನಿಗಮದಿಂದ 2 ಲಕ್ಷ ರೂಪಾಯಿ ಸಹಾಯಧನ ದೊರಕಿತು. 40 ಜನರನ್ನು ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಬೇರೆಯವರು ಕೊಡುವುದಕ್ಕಿಂತ ಹೆಚ್ಚಿಗೆ ಮಜೂರಿ ಕೊಡಲಾಯಿತು. ಬಂದ ಕಾಸಿನಿಂದ ಹೋಲ್‍ಸೇಲ್‍ದರದಲ್ಲಿ ಚರ್ಮವನ್ನು ಖರೀದಿಸಲಾಯಿತು. ಕೆಲವು ಯಂತ್ರ ಸಾಮಗ್ರಿಗಳನ್ನೂ ಕೊಳ್ಳಲಾಯಿತು. ಅವರು ತಯಾರಿಸುವ ಬೂಟ್‍ಗೆ ‘ಭಾರತ್ ಸೇವಕ್’ ಎಂದು ನಾಮಕರಣ ಮಾಡಲಾಯಿತು. ಕೆಲಸ ಬಿರುಸಿನಿಂದ ನಡೆಯಿತು. ಶೂ ಅಂಗಡಿಯವರು ಬೂಟು ಚಪ್ಪಲಿಗಳನ್ನು ಹೋಲ್‍ಸೇಲ್ ದರದಲ್ಲಿ ಕೊಂಡುಕೊಳ್ಳುತ್ತಿದ್ದರು.
ಈ ಮಧ್ಯೆ ಒಂದು ಸಮಸ್ಯೆ ಎದುರಾಯಿತು. ಶನಿವಾರ ಕಾರ್ಮಿಕರಿಗೆ ವಾರದ ಬಟವಾಡೆ ಮಾಡಿದರೆ ಅವರು ಸೋಮವಾರ, ಮಂಗಳವಾರ ಕೆಲಸಕ್ಕೆ ಗೈರುಹಾಜರಾಗುತ್ತಿದ್ದರು. ಪಡೆದ ಹಣದ ಬಹುಭಾಗ ಅವರ ಕುಡಿತಕ್ಕೆ ಹೋಗುತ್ತಿತ್ತು. ಇದನ್ನು ಗಮನಿಸಿ ಕೆಲಸಗಾರರಿಗೆ ಶನಿವಾರ 15ರೂ ಕೊಡುವುದು, ಉಳಿದ ಹಣಕ್ಕೆ ಅವರ ಮನೆಗೆ ಬೇಕಾದಷ್ಟು ರೇಷನ್, ಅಕ್ಕಿ, ರಾಗಿ, ನುಚ್ಚು ಹಾಗೂ ಇತರ ಪರಿಗಳನ್ನು ಹೋಲ್‍ಸೇಲ್‍ನಲ್ಲಿ ಕೊಂಡು ತಂದು ಅವರ ಮನೆಗಳಿಗೆ ತಂದು ಹಾಕುವುದೆಂದು ನಿರ್ಧರಿಸಿದೆವು. ಈ ಏರ್ಪಾಡಿನಿಂದ ಅವರ ಮನೆಮಂದಿಗೆ ಊಟ ಸಿಗೋದು ಖಾತ್ರಿಯಾಯ್ತು. ಕೆಲಸಗಾರರು ತಪ್ಪಿಸಿಕೊಳ್ಳದೆ ಪ್ರತಿದಿನವೂ ಕೆಲಸಕ್ಕೆ ಬರುವಂತಾಯಿತು. ಆಗಾಗ ನಾವು ಅವರ ಮನೆಗಳಿಗೆ ಹೋಗಿ ಕೊಡಿಸಿದ್ದ ರೇಷನ್ ಇದೆಯೋ, ಇಲ್ಲ ಮಾರಿಹಾಕಿಬಿಟ್ಟಿದ್ದಾರೆಯೋ ಎಂದು ತನಿಖೆ ನಡೆಸುತ್ತಿದ್ದೆವು.
ಇದಲ್ಲದೆ ಕೊಳಚೆಯಿಂದ ಕೂಡಿದ್ದ ಈ ಸ್ಲಂ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಲು ಅಲ್ಲಿಯ ಯುವಕರ ತಂಡವೊಂದನ್ನು ರಚಿಸಿದೆ. ಸಣ್ಣ ಮಕ್ಕಳಿಗಾಗಿ ಒಂದು ಕ್ರಷ್, 3 ರಿಂದ 5 ವರ್ಷದ ಮಕ್ಕಳಿಗೆ ಒಂದು ನರ್ಸರಿ ಸ್ಥಾಪಿಸಲಾಯಿತು. ಈ ಮಕ್ಕಳಿಗೆಲ್ಲಾ ಹಾಲು, ಹಣ್ಣಿನ ರಸ ಹಂಚುವ ವ್ಯವಸ್ಥೆಯಾಯಿತು. ಕೇರಿಯ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕೆಂದು ಒತ್ತಾಯ ತಂದ ಕಾರಣದಿಂದಾಗಿ ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರಕಿತು. ಸ್ಲಂನಲ್ಲಿ ಜಗಳವಾದರೆ ಇದನ್ನು ಪರಿಹರಿಸಲು ಊರಿನ ಯಜಮಾನರ ತಂಡವಿತ್ತು. ಇವರು ವಿಚಾರಣೆ ನಡೆಸಿ ಎರಡೂ ಬಣದವರಿಗೂ ಜುಲ್ಮಾನೆ ಹಾಕಿ ಬಂದ ಹಣವನ್ನು ಕುಡಿಯಲು ಬಳಸುತ್ತಿದ್ದರು. ಅದನ್ನೂ ತಪ್ಪಿಸಿ, ಊರಿನ ಎಲ್ಲರ ಸಭೆ ಕರೆದು ಅವರೆದುರಿನಲ್ಲಿ ವ್ಯಾಜ್ಯಗಳನ್ನು ಪರಿಹರಿಸಲು ಆರಂಭಮಾಡಿದೆ. ಕಾಲಕ್ರಮೇಣ ಜಗಳ, ಕದನಗಳು ನಿಂತುಹೋದವು.
ಸ್ಲಂನಲ್ಲಿ ಕೊಳೆತ ಹಣ್ಣುಗಳು, ಕೊಳೆತ ತರಕಾರಿಗಳನ್ನು ಮಾರಲಾಗುತ್ತಿತ್ತು. ಅವನ್ನು ತಪ್ಪಿಸಿ, ತಾಜಾ ಹಣ್ಣು ತರಕಾರಿಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಯಿತು. ಹೀಗೆ ನನಗೆ ಸಾಮಾಜಿಕ ಜವಾಬ್ದಾರಿಗಳು ಹೆಚ್ಚುತ್ತಿದ್ದಂತೆ, ಹಣಕಾಸಿನ ವಹಿವಾಟು ನೋಡಿಕೊಳ್ಳಲು ಮ್ಯಾಸ್ಕರ್‍ನಾಸ್ ಎಂಬ ಸಜ್ಜನರನ್ನು ವಿನಂತಿಸಿಕೊಂಡೆ. ಅವರು ಚಾಮರಾಜಪೇಟೆಯಿಂದ ಅಸೆಂಬ್ಲಿ ಸದಸ್ಯರಾಗಿದ್ದವರು. ಎಲ್ಲವೂ ಸುಗಮವಾಗಿ ನಡೆಯಲು ಈ ಏರ್ಪಾಟು ನೆರವಿಗೆ ಬಂದಿತು.
ಇದೆಲ್ಲಾ ನಡೆದು 50 ವರ್ಷಗಳಾಗಿವೆ. ದುಶ್ಚಟಗಳು ಗಣನೀಯವಾಗಿ ಇಳಿಮುಖವಾಗಿದ್ದವು. ಈಗ ವಾಲ್ಮೀಕಿ ನಗರದ ನಿವಾಸಿಗಳು ಆರ್ಥಿಕವಾಗಿ ಸುಧಾರಿಸಿದ್ದಾರೆ. ಕಲಿತ ಯುವಕ-ಯುವತಿಯರ ಸಂಖ್ಯೆ ಗಣನೀಯವಾಗಿದೆ. ಡಿಪ್ಲೊಮಾ, ಡಿಗ್ರಿಗಳನ್ನು ಪಡೆದಿದ್ದಾರೆ. ಅಂದು ನಾನು ಮಾಡಿದ ಸೇವೆ ಒಳ್ಳೆಯ ಫಲವನ್ನು ಕೊಟ್ಟಿದೆ ಎಂಬ ಸಮಾಧಾನ ನನಗಿದೆ.
ಸ್ವಾರ್ಥ ಫಲಾಪೇಕ್ಷೆಯಿಲ್ಲದೆ ಸಮಾಜಮುಖಿಯಾಗಿ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡರೆ ಸಮಾಜದಿಂದ ಉತ್ತಮ ಸ್ಪಂದನೆ ಸಿಗುತ್ತದೆ ಎಂಬುದಕ್ಕೆ ಇವು ನಿದರ್ಶನ ಎನ್ನಬಹುದು. ರಚನಾತ್ಮಕ ಧೋರಣೆಯಿಂದ, ಸೇವಾ ಭಾವದಿಂದ ಕಾರ್ಯೋನ್ಮುಖರಾಗುವ ಯುವಕ-ಯುವತಿಯರ ಅವಶ್ಯಕತೆ ಹಿಂದಿಗಿಂತಲೂ ಇಂದು ಹೆಚ್ಚಾಗಿಯೇ ಇದೆ. ಇದು ನಿಜವಾದ ಅರ್ಥದಲ್ಲಿ ರಾಷ್ಟ್ರ ನಿರ್ಮಾಣದ ಕಾರ್ಯ ಎಂಬುದನ್ನು ಇಂದಿನ ಪೀಳಿಗೆ ಮನಗಾಣುತ್ತದೆ ಎಂಬ ಆಶಾಭಾವ ನನ್ನದು.

 

– ಹೆಚ್.ಎಸ್.ದೊರೆಸಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...