ಕಾಶ್ಮೀರದಲ್ಲಿ 370 ರದ್ದುಗೊಳಿಸಿದ ನಂತರ ಉಗ್ರರ ಹಾವಳಿ ಕಡಿಮೆಯಾಗಿದೆ. ಕಾಶ್ಮೀರದ ಸ್ಥಿತಿಗತಿ ಸುಧಾರಿಸುತ್ತಿದೆ ಎಂದು ಕೇಂದ್ರ ನಾಯಕರು ಹೇಳುತ್ತಿದ್ದಾರೆ. ಆದರೆ ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿಲ್ಲ ಎಂಬುದನ್ನು ಉಗ್ರರು ಸ್ಫೋಟಿಸುತ್ತಿರುವ ಗ್ರೆನೇಡ್ ಗಳು ಹೇಳುತ್ತಿವೆ. ಅನಂತನಾಗ್ ಜಿಲ್ಲೆಯ ದಕ್ಷಿಣ ಕಾಶ್ಮೀರ ಭಾಗದಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಗ್ರೆನೇಡ್ ದಾಳಿಯಲ್ಲಿ ಪೊಲೀಸರು, ಪಾದಚಾರಿಗಳು ಹಾಗೂ ಪತ್ರಕರ್ತರು ಸೇರಿ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಆದರೆ ಗುರಿ ತಪ್ಪಿ ರಸ್ತೆಯಲ್ಲಿ ಗ್ರೆನೇಡ್ ಸ್ಫೋಟಗೊಂಡಿದೆ. ಅನಂತನಾಗ್ ಜಿಲ್ಲೆಯಿಂದ ಸುಮಾರು 55 ಕಿ.ಮೀ ದೂರದಲ್ಲಿ ಗ್ರೆನೇಡ್ ಸ್ಫೋಟಗೊಂಡಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಶ್ಮೀರದಲ್ಲಿ ಆಗಸ್ಟ್ 5ರಂದು ಆರ್ಟಿಕಲ್ 370 ರದ್ದಾದ ಬಳಿಕ ಉಗ್ರರಿಂದ ನಡೆಸಲಾದ ಎರಡನೇ ಗ್ರೆನೇಡ್ ದಾಳಿ ಇದಾಗಿದೆ. ಸೆಪ್ಟಂಬರ್ 28ರಂದು ಉಗ್ರರು ಸಿಆರ್ ಪಿಎಫ್ ನ 38 ನೇ ಬಟಾಲಿಯನ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು. ಇನ್ನು ಕಾಶ್ಮೀರದಲ್ಲಿ ಮಾಧ್ಯಮದವರ ಮೇಲಿನ ನಿರ್ಬಂಧ ತೆರವಾಗಿಲ್ಲ. ಹೀಗಾಗಿ ಕಾಶ್ಮೀರದ ವಸ್ತುಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಅಲ್ಲದೇ ಮಾಧ್ಯಮದವರ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ಪತ್ರಕರ್ತರು ಆಗ್ರಹಿಸಿದ್ದು, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.