ಹರಿಯಾಣದ ಕಾಂಗ್ರೆಸ್ ನಾಯಕ ಅಶೋಕ್ ತನ್ವಾರ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಅಶೋಕ್ ಅವರನ್ನು ತೆಗೆದು ಹಾಕಲಾಗಿತ್ತು. ಈಗ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಅಶೋಕ್ ರಿಸೈನ್ ಮಾಡಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲ ದಿನಗಳು ಮಾತ್ರ ಬಾಕಿಯಿವೆ. ಹೀಗಿರುವಾಗ ಅಶೋಕ್ ರಾಜೀನಾಮೆ ಪಕ್ಷಕ್ಕೆ ಹೊಡೆತ ನೀಡುವ ಸಾಧ್ಯತೆ ಹೆಚ್ಚಿದೆ.
ಪಕ್ಷದ ಕಾರ್ಯಕರ್ತರೊಂದಿಗೆ ಸುದೀರ್ಘ ಚರ್ಚೆ ನಡೆಸಿ ರಾಜೀನಾಮೆ ನೀಡಿದ್ದೇನೆ ಎಂದು ಅಶೋಕ್ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿರುವ ನಾಲ್ಕು ಪುಟದ ರಾಜೀನಾಮೆ ಪತ್ರವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಕಾಂಗ್ರೆಸ್ ಆಂತರಿಕವಾಗಿ ಮತ್ತು ಬಾಹ್ಯವಾಗಿ ಸಾಕಷ್ಟು ಬಿಕ್ಕಟ್ಟು ಎದುರಿಸುತ್ತಿದೆ. ರಾಜಕೀಯ ವಿರೋಧಿಗಳಿಗಿಂತಲೂ ಆಂತರಿಕ ವಿರೋಧಾಭಾಸಗಳು ಪಕ್ಷದಲ್ಲಿ ಹೆಚ್ಚಿವೆ ಹೀಗಾಗಿ ಪಕ್ಷ ತೊರೆಯುತ್ತಿರುವುದಾಗಿ ಬರೆದಿದ್ದಾರೆ.
ಹಲವು ತಿಂಗಳುಗಳವರೆಗೆ ಬಗ್ಗೆ ಚಿಂತಿಸಿ, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ನನ್ನ ಬೆವರು ಮತ್ತು ರಕ್ತದಲ್ಲಿದೆ. ರಾಜೀನಾಮೆ ನೀಡಿರುವುದು ವೈಯಕ್ತಿಕ ಹೋರಾಟವಲ್ಲ. ಬದಲಾಗಿ ಅತ್ಯಂತ ಹಳೆಯ ಪಕ್ಷವನ್ನು ನಾಶಪಡಿಸುವ ವ್ಯವಸ್ಥೆಯ ವಿರುದ್ಧ ಸಾರುತ್ತಿರುವ ಸಮರ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಡೆದಿರುವ ಅಕ್ರಮ ಮತ್ತು ಭ್ರಷ್ಟಾಚಾರ ಆರೋಪದ ವಿರುದ್ಧ ದಂಗೆ ಎದ್ದಿದ್ದರು. ಇದಾದ ಕೇವಲ ಎರಡೇ ವಾರದಲ್ಲಿ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ತನ್ವಾರ್ ರಿಸೈನ್ ಮಾಡಿದ್ದಾರೆ.