Homeನ್ಯಾಯ ಪಥಮೋದಿ ಭಕ್ತರು ಎಂಬ Cult of stupidity

ಮೋದಿ ಭಕ್ತರು ಎಂಬ Cult of stupidity

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಬರಹಗಾರ ಸರ್ಜಾಶಂಕರ ಹರಳಿಮಠರು, ಇತ್ತೀಚಿನ ಬೆಳವಣಿಗೆಗಳನ್ನು ಇಟ್ಟುಕೊಂಡು ರಚಿಸಿದ ’ನಾನೂ ದೇಶದ್ರೋಹಿ’ ಎಂಬ ಕವನವನ್ನು ತಮ್ಮ ಹೈಸ್ಕೂಲ್ ಸಹಪಾಠಿಗಳ ವ್ಯಾಟ್ಸಪ್ ಗ್ರೂಪ್‌ನಲ್ಲಿ ಹಾಕುತ್ತಾರೆ. ಹಾಕಿದ ಸ್ವಲ್ಪೇ ಸಮಯದಲ್ಲಿ ಅವರನ್ನು ಗ್ರೂಪ್‌ನಿಂದ ಹೊರ ಹಾಕಲಾಗುತ್ತದೆ.

ಪದವಿ ಕಲಿಯುವ ಹೊತ್ತಿನಲ್ಲಿ ಸ್ನೇಹಿತರಾದ ಒಂದಿಪ್ಪತ್ತು ಜನರ ವ್ಯಾಟ್ಸಪ್ ಗ್ರೂಪ್. ಪುಲ್ವಾಮಾ ಮತ್ತು ವಾಯುದಾಳಿಯ ನಂತರದ ಸಂದರ್ಭದಲ್ಲಿ ಮೋದಿಯ ವೈಫಲ್ಯಗಳನ್ನು ಆಧಾರಸಮೇತ ಬರೆದದ್ದಕ್ಕೆ ನನ್ನನ್ನು ಆ ಗ್ರೂಪ್‌ನಿಂದ ತೆಗೆದು ಹಾಕಲಾಗುತ್ತದೆ. ಇನ್ನಿಬ್ಬರು ಆಕ್ಷೇಪಣೆ ಎತ್ತಿದ ನಂತರ ಮತ್ತೆ ಸೇರಿಸಿಕೊಳ್ಳಲಾಗುತ್ತದೆ.

ಇಂತಹ ಪ್ರಸಂಗಗಳನ್ನು ನೀವು ಎದುರಿಸಿರಬಹುದು… ಪತ್ರಿಕೆಯ ಸಂಗಾತಿ ಸರ್ಜಾಶಂಕರ ಆಗಲೀ, ನಾನಾಗಲೀ ವ್ಯಕ್ತಿದ್ವೇಷ ಮಾಡಿದವರಲ್ಲ. ಇಬ್ಬರ ಗ್ರೂಪ್‌ನಲ್ಲೂ ಮಾನವೀಯ ಆಶಯಗಳ ಸದಸ್ಯರ ಸಂಖ್ಯೆಯೇ ಜಾಸ್ತಿಯಿದೆ. ಆದರೆ ಇಂತಹ ಬಹುತೇಕ ಗ್ರೂಪ್‌ಗಳ ನಿಯಂತ್ರಣ ಚೆಡ್ಡಿ ಆರಾಧಕರ ಕೈಗೆ ಬಂದು ಬಿಟ್ಟಿದೆ….

ಅಂದರೆ, ಇಲ್ಲಿ ಜಾಲತಾಣಗಳಲ್ಲಿ ಕೆಲವೇ ಕೆಲವರು ನಿಯಂತ್ರಣ ಹೊಂದುತ್ತ ಬಂದಿದ್ದಾರೆ. ಪ್ರತಿಭಟನೆ ಎದುರಾದ ಕೂಡಲೇ ತಮ್ಮ ಸುಳ್ಳು ಟ್ವೀಟ್‌ಗಳನ್ನು, ಪೋಸ್ಟ್‌ಗಳನ್ನು ಡಿಲೀಟ್ ಮಾಡುತ್ತಾರೆ. ನನ್ನ ಪರವಾಗಿ ಒಬ್ಬ ಮುಸ್ಲಿಂ, ಒಬ್ಬ ತಳವಾರ ಯುವಕ ಧ್ವನಿ ಎತ್ತಿದಕೂಡಲೇ ಅರ್ಧ ಗಂಟೆಯಲ್ಲೇ ಮತ್ತೆ ಗ್ರೂಪ್‌ಗೆ  ಸೇರಿಸಿಕೊಳ್ಳುತ್ತಾರೆ….

ಇಷ್ಟಾದರೂ, ಹೊಸ ಪೀಳಿಗೆಯ ಒಂದು ಸಮೂಹವನ್ನು ಪ್ರೀತಿ, ವಿಶ್ವಾಸದಿಂದ ಗೆಲ್ಲುವುದೊಂದೇ ಮಾರ್ಗ. ಆದರೆ ಇವರಿಗೆ ಓದಿನ ಆಸಕ್ತಿಯೇ ಇಲ್ಲವಾದ್ದರಿಂದ ಅದು ಸದ್ಯಕ್ಕೆ ಕಷ್ಟವೇ!

Cult of stupidity

ಸತ್ಯ ಏನೆಂದು ಪರೀಕ್ಷಿಸಲು ಒಲ್ಲದ, ತಮಗೆ ಅನಿಸಿದ್ದೇ ಅಥವಾ ತಮಗೆ ಸಿಕ್ಕ ಮಾಹಿತಿಯೇ ಸತ್ಯ ಎಂದು ನಂಬುವ ಒಂದು ದೊಡ್ಡ ಸಮೂಹ (ಸಾಪೇಕ್ಷವಾಗಿ ಇದು ಸಣ್ಣದೇ) ಈ ದೇಶದಲ್ಲಿ ಈ ಐದು ವರ್ಷಗಳಲ್ಲಿ ವ್ಯಾಪಕವಾಗಿ ತಲೆ ಎತ್ತಿದೆ. ಅದು ಮುಗುಮ್ಮಾಗಿ ಒಬ್ಬ ಹೀರೊನನ್ನು ಆರಾಧಿಸುತ್ತದೆ. ಪೇಯ್ಡ್ ಮೀಡಿಯಾ ಮತ್ತು ಸಂಘ ಪರಿವಾರ ನೀಡುವ ಕಂಟೆಂಟೇ ಅದಕ್ಕೆ ಅಂತಿಮ ಸತ್ಯ. ಉತ್ತರಿಸಲಾಗದ ಹೊತ್ತಿನಲ್ಲಿ ಅದು ಮತ್ತೆ ಮತ್ತೆ ಸುಳ್ಳುಗಳ ಮೊರೆ ಹೋಗುತ್ತದೆ. ಅವರ ನಾಯಕನನ್ನು ಎತ್ತಿ ಹಿಡಿಯಲು, ಹಿಂದಿನವರು ಏನು ಮಾಡಿದರು ಎಂದು ಪ್ರಶ್ನೆ ಎತ್ತುತ್ತದೆ. ತಮ್ಮ ನೆಚ್ಚಿನ ನಾಯಕ ಮತ್ತು ಪಕ್ಷದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅದು ಆತ್ಮ ವಂಚನೆಗೆ ಇಳಿಯುತ್ತದೆ…ಅಂತಿಮವಾಗಿ ಅದು ತನ್ನ ಆತ್ಮಸಾಕ್ಷಿಯನ್ನೇ ಮಾರಾಟಕ್ಕಿಡುತ್ತದೆ.

ಇಂತಹವರಿಗೆ ಜಾಲತಾಣದಲ್ಲಿ ಈಗ ಭಕ್ತರು, ಮಬ್ಭಕ್ತರು ಅಂತೆಲ್ಲ ಹೆಸರು. ಆದರೆ ಈ ಕುರಿತು ಮನಶಾಸ್ತ್ರಜ್ಞರು ಅಳೆದೂ ತೂಗಿ ಒಂದು ಪದವನ್ನು ನಮಗೆ ಕೊಟ್ಟಿದ್ದಾರೆ: ಇಂತಹ ವರ್ತನೆಯನ್ನು ಅವರು ’Cult of stupidity’ ಎನ್ನುತ್ತಿದ್ದಾರೆ. ಇದನ್ನು ಕನ್ನಡದಲ್ಲಿ ’ಮೂರ್ಖತನದ ಆರಾಧನೆ’ ಎನ್ನಬಹುದು. ಈಗಿನ ಸಂದರ್ಭಕ್ಕೆ ’ಮೋದಿಯ ಮಬ್ಭಕ್ತರು’ ಎನ್ನುವುದೇ ಸೂಕ್ತ.

ಪಾಜಿಟಿವ್ ಸೈಕಾಲಜಿ ಮತ್ತು ಸೈಕೊಮೆಟ್ರಿಕ್ಸ್‌ನಲ್ಲಿ ಅನುಭವ ಹೊಂದಿರುವ ರೋಹಿತ್ ಕುಮಾರ್ ಅವರು ಬರೆದ ಲೇಖನದ ಪ್ರಕಾರ, ಇಂತಹ ಒಂದು ಸಂತತಿ ಸಂಖ್ಯೆಯಲ್ಲಿ ಸಾಪೇಕ್ಷವಾಗಿ ದೊಡ್ಡದಲ್ಲದಿದ್ದರೂ ಅದು ಭಾರಣದಾದ್ಯಂತ ಅಸ್ತಿತ್ವ ಹೊಂದಿದೆ ಮತ್ತು ಅದು ತನಗೆ ಸಿಕ್ಕ ಆಧಾರವಿಲ್ಲದ ಕಂಟೆಂಟನ್ನು ಅಮಾಯಕರ ತಲೆಗೆ ತುಂಬಲು ಯತ್ನಿಸುತ್ತಿದೆ…..

ನಾವೆಲ್ಲ  ನಮ್ಮ ಸುತ್ತಮುತ್ತಲೇ ನೋಡಿರುವ ಪ್ರಕಾರ, ಈ ಒಂದು ’ಸಂತತಿ’ಯಲ್ಲಿ ಹಲವು ವಿಧಗಳಿವೆ:

  1. 1. ಮೊದಲಿನಿಂದಲೂ ಆರೆಸ್ಸೆಸ್ ಶಾಖೆಗಳಲ್ಲಿ ಭಾಗವಹಿಸುತ್ತ ಬಂದವರು.
  2. 2. 1992ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ’ಹಿಂದೂತ್ವದ ಅಮಲಿಗೆ ಗುರಿಯಾದವರು.
  3. 3. ಕಳೆದ ಐದಾರು ವರ್ಷಗಳಲ್ಲಿ ಮೀಡಿಯಾಗಳು ನೀಡಿದ ಕಂಟೆಂಟ್ ಆಧಾರದ ಮೇಲೆಯೇ ತಮ್ಮ ಆಲೋಚನಾ ಕ್ರಮವನ್ನು ರೂಪಿಸಿಕೊಂಡವರು.
  4. 4. ಈ ಮೇಲಿನ ’ಆರಾಮದಾಯಕ’ ಗುಂಪುಗಳಿಂದ ಮೋಸ ಹೋಗುತ್ತಿರುವ ವ್ಯಾಟ್ಸಾಪ್ ಅಮಾಯಕರು….

ಇಲ್ಲಿ ಮೊದಲನೇ ಗುಂಪು ಹಿಂದೆ ನಿಂತು ಕಂಟೆಂಟ್ ಒದಗಿಸುತ್ತಿದೆ. ಅದು ಸತ್ಯವೋ ಅಲ್ಲವೋ ಎಂಬುದನ್ನು ಪರೀಕ್ಷಿಸದ ಎರಡು ಮತ್ತು ಮೂರನೇ ಗುಂಪುಗಳು ಸುಳ್ಳನ್ನು ಹರಡುತ್ತ ಹೋಗುತ್ತಿವೆ. ಎರಡನೇ ಗುಂಪಿನಲ್ಲಿ ನಿರುದ್ಯೋಗಿ, ಸಾಹಸಪ್ರಿಯ ಮತ್ತು ಭಾರಿ ಆಕಾಂಕ್ಷೆಗಳ ಶೂದ್ರ ಯುವಜನ ಜಾಸ್ತಿಯಿದ್ದರೆ, ಮೂರನೇ ಗುಂಪಿನಲ್ಲಿ ನವ ಉದ್ಯಮಗಳಲ್ಲಿ ’ಸಂತೃಪ್ತ’ ಸಂಬಳ ಪಡೆಯುತ್ತಿರುವ ಯುವಜನರಿದ್ದಾರೆ. ಇವರಲ್ಲಿ ಮೇಲ್ವರ್ಗದವರೇ ಹೆಚ್ಚಿದ್ದು, ಇದು ಮೀಸಲಾತಿ ವಿರೋಧಿಸುವ ಗುಂಪೂ ಹೌದು. ಇದರಲ್ಲಿರುವ ಶೂದ್ರರು, ದಲಿತರು ತಾವೇನೋ ಸಾಧಿಸಿಬಿಟ್ಟಿದ್ದೇವೆ, ತಮ್ಮಂತಹ ಜಾಣರಾರಿಲ್ಲ ಎಂಬ ಧಿಮಾಕಿನಲ್ಲಿ ಮೇಲ್ವರ್ಗದ, ಮೇಲ್ ಜಾತಿಯ ಗುಲಾಮರಂತೆ ವರ್ತಿಸುತ್ತಿದ್ದಾರೆ. ಕೊನೆಯ ಗುಂಪಿನಲ್ಲಿ ಅಸಹಾಯಕ, ಅಮಾಯಕ ಯುವಜನತೆಯಿದ್ದು, ಇವರನ್ನು ಹಿಂದೂತ್ವ ಮತ್ತು ದೇಶಭಕ್ತಿಯ ಹೆಸರಲ್ಲಿ ದಾರಿ ತಪ್ಪಿಸಲಾಗುತ್ತಿದೆ.

ಇದನ್ನು ಗೌರಿ ಮೇಡಮ್ ಪದೇ ಪದೇ ಬಿಡಿಬಿಡಿಯಾಗಿ, ಬೇರೆ ಬೇರೆ ಸಂದರ್ಭಗಳಲ್ಲಿ  ಉಲ್ಲೇಖಿಸುತ್ತಲೇ ಬಂದಿದ್ದರು. ನೂರಾರು ಪ್ರಗತಿಪರರೂ ಈ ವಿಷಯವಾಗಿ ದನಿ ಎತ್ತುತ್ತಲೇ ಬಂದಿದ್ದರೂ, ಮೇಲಿನ ಗುಂಪುಗಳಿಗೆ ಮನದಟ್ಟಾಗುತ್ತಲೇ ಇಲ್ಲ. ಅವರ ಮೂಲಭೂತ ಸಮಸ್ಯೆ ಎಂದರೆ ಓದಿನ ಕೊರತೆ. ರವೀಶಕುಮಾರ್ (ಎನ್‌ಡಿಟಿವಿ) ಹೇಳುವಂತೆ, ಅವರೆಲ್ಲ ವ್ಯಾಟ್ಸಾಪ್ ಯುನಿವರ್ಸಿಟಿಯ ವಿದ್ಯಾರ್ಥಿಗಳು.

ಇವರೆಲ್ಲರ ಮಾಹಿತಿ ಮೂಲ ಬಿಜೆಪಿಯ ಐಟಿ ಸೆಲ್ಲು ಮತ್ತು ಪೇಯ್ಡ್ ಮೀಡಿಯಾ. ಅರ್ನಾಬ್ ಗೋಸ್ವಾಮಿ ಇಂಗ್ಲಿಷ್ ಬಲ್ಲವರನ್ನು, ರಂಗ, ಹನುಮಕ್ಕನವರ್ ತರದವರು ಪ್ರಾದೇಶಿಕ ಭಾಷೆಯಷ್ಟೇ ಗೊತ್ತಿರುವವರನ್ನು ’ರೋಚಕ’ ಸ್ಟೋರಿಗಳ ಮೂಲಕ ಯಾಮಾರಿಸುತ್ತಲೇ ಇದ್ದಾರೆ.

ಇತರರು ಎರಡನೇ ದರ್ಜೆ

ಈ ಮೂರ್ಖತನದ ಆರಾಧಕರ ಪ್ರಕಾರ, ಅವರು ಹೇಳಿದ್ದೆಲ್ಲ ಸತ್ಯ, ಅವರ ನಾಯಕನ ವಿರುದ್ಧ ಪ್ರಶ್ನೆ ಎತ್ತುವುದೇ ದೇಶದ್ರೋಹ. ತಮ್ಮನ್ನು ಒಪ್ಪದ ಇತರರೆಲ್ಲ ಇವರ ಪಾಲಿಗೆ ಎರಡನೇ ದರ್ಜೆಯ ನಾಗರಿಕರು. ಇದು ಫ್ಯಾಸಿಸಂ ಅಲ್ಲದೇ ಇನ್ನೇನು? ಅಘೋಷಿತ ತುರ್ತು ಪರಿಸ್ಥಿತಿಯೇ ಅಲ್ಲವಾ? ಧರ್ಮ, ಭಾಷೆ, ಧ್ವಜ, ಭಾರತಮಾತೆಯ ಫೋಟೊ-ಇವೆಲ್ಲ ಸಂಕೇತಗಳು ಇವರ ಪಾಲಿಗೆ ಓಟಿನ ಸರಕುಗಳಷ್ಟೇ. ಹುಬ್ಬಳ್ಳಿಯಲ್ಲಿ ಈದ್ಗಾ ವಿವಾದಕ್ಕೆ ರಾಷ್ಟ್ರಧ್ವಜವನ್ನು ತಳುಕು ಹಾಕಿ, ಧ್ವಜವನ್ನು ಬೀದಿಪಾಲು ಮಾಡಿ, ಅಮಾಯಕರ ಹೆಣಗಳ ಮೇಲೆ ಅಲ್ಲಿ ಪ್ರಾಬಲ್ಯ ಸಾಧಿಸಿದ ಗುಂಪಿದು ಎಂದು ಭಕ್ತರಿಗೆ ಮನದಟ್ಟು ಮಾಡಲು ಹೋದರೆ ಅವರಿಗ್ಯಾರಿಗೂ ತಾಳ್ಮೆ, ಸಹನೆಯೇ ಇಲ್ಲ. 1947, 1952ರ ನಂತರ ಆರೆಸ್ಸೆಸ್ ತನ್ನ ನಾಗಪುರ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದು 50 ವರ್ಷಗಳ ನಂತರ ಎಂಬ ಸತ್ಯವನ್ನು ಎತ್ತಿದ ಕೂಡಲೇ ವಿಷಯಾಂತರ ಮಾಡುವುದು ಈ ಆರಾಧಕರ ಕಸುಬು. ಹೆಡಗೆವಾರ್, ಗೋಲ್ವಾಳ್ಕರ್ ಎಂಬ ಮೋದಿ ಗುರುಗಳು ಈ ದೇಶಕ್ಕೆ ನೀಡಿದ ಕೊಡುಗೆಯೇನು ಎಂದು ಕೇಳಿದರೆ ಮತ್ತದೇ ಪಲಾಯನವಾದ.

ಗೂಂಡಾಗಿರಿಗೆ ’ಧರ್ಮದೇಟು’ಎಂಬ ಹೆಸರು!

ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆ ಮಾಡುವುದನ್ನು, ಕೊಲ್ಲುವುದನ್ನು ಈ ಆರಾಧಕರು ಬೆಂಬಲಿಸುತ್ತಾರೆ. ಇಲ್ಲಿನ ಪೊಲೀಸ್ ವ್ಯವಸ್ಥೆಯ ಮೇಲೂ ಇವರಿಗೆ ನಂಬಿಕೆಯಿಲ್ಲ. ಕನ್ನಡದ ಕೆಲವು ಮತಾಂಧ ಮಾಧ್ಯಮಗಳು ಇಂತಹ ಬೀದಿನ್ಯಾಯಕ್ಕೆ ’ಧರ್ಮದೇಟು’ ಎಂದೆಲ್ಲ ಸ್ಕೋಪು ಕೊಟ್ಟು ಬೆಂಬಲಿಸುತ್ತ ಬಂದಿವೆ.

ಇತ್ತೀಚೆಗಷ್ಟೇ ಮಲ್ಪೆಯಲ್ಲಿ ಮುಸ್ಲಿಮರ ಹೆಸರಲ್ಲಿ ವಿಡಿಯೋ ಹಾಕಿ, ಭಾರತವನ್ನು ನಿಂದಿಸಿ, ಮಲ್ಪೆಗೆ ಬಾಂಬ್ ಹಾಕುತ್ತೇನೆ ಎಂದು ಬೆದರಿಸಿದವನು ಭಜರಂಗಿ ಗುಂಪಿಗೆ ಸೇರಿದವನು. ರಾಮದುರ್ಗದಲ್ಲಿ ಕಾಂಗ್ರೆಸ್‌ನ ಮುಸ್ಲಿಂ ಕಾರ್ಯಕರ್ತನ ಫೇಸ್‌ಬುಕ್ ಪೇಜ್‌ನಲ್ಲಿ ದೇಶದ್ರೋಹಿ ಬರಹ ಹಾಕಿ ಸಿಕ್ಕವನು ಬಿಜೆಪಿಯ ’ಹಿಂದೂ’. ಸತ್ಯ ಗೊತ್ತಾದಾಕ್ಷಣ ತಮ್ಮ ಕಾರ್ಯಕರ್ತರನ್ನು ’ಮಾನಸಿಕ ಅಸ್ವಸ್ಥ’ ಎಂದು ಬಿಂಬಿಸಿ ಕೈ ತೊಳೆದುಕೊಳ್ಳುವುದು ಇವರ ಜಾಯಮಾನ. ಇದಕ್ಕೆ ಜನಪ್ರಿಯ ಮೀಡಿಯಾಗಳ ಸಾಥ್ ಕೂಡ ಇದೆ.

ವಿಜಯಪುರದ ಬಿಎಲ್‌ಡಿಇ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರೊಬ್ಬರು ಪಾಕಿಸ್ತಾನದ ಸಂಸತ್ತಿನಲ್ಲಿ ಶಾಂತಿ ಸ್ಥಾಪನೆ ಕುರಿತು ಇಮ್ರಾನ್ ಖಾನ್ ಮಾಡಿದ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಎಬಿವಿಪಿಯ ಪುಂಡರು ಅದನ್ನು ದೇಶದ್ರೋಹ ಎಂದು ಕರೆದು, ಕಾಲೇಜಿಗೆ ನುಗ್ಗಿ, ಆ ಉಪನ್ಯಾಸಕ ಮಂಡಿಯೂರಿ ಕ್ಷಮೆ ಕೇಳುವಂತೆ ಮಾಡಿತು. ಕಾಲೇಜಿನ ಆಡಳಿತ ಮಂಡಳಿ ಆತನ ನೆರವಿಗೆ ಬರಲಿಲ್ಲ. ಅದು ಗೃಹ ಸಚಿವ ಎಂ.ಬಿ. ಪಾಟೀಲರ ಕಾಲೇಜು!

ಈಗ ಸರ್ಫ್ ಎಕ್ಸೆಲ್ ಜಾಹಿರಾತಿನಲ್ಲೂ ಈ ಮೂರ್ಖರು ತಪ್ಪು ಹುಡುಕುತ್ತಿದ್ದಾರೆ. ಯಾರೂ ಸರ್ಫ್ ಎಕ್ಸೆಲ್ ಕೊಳ್ಳಬಾರದು ಎಂದೆಲ್ಲ ಮೆಸ್ಸೇಜ್ ಮಾಡುತ್ತಾರೆ. ಇದರಿಂದ ಸರ್ಫ್ ಎಕ್ಸೆಲ್‌ಗೆ ಲಾಭವೇ ಆಯಿತು ಎನ್ನುವುದೂ ಈ ಅರಿವುಗೇಡಿಗಳಿಗೆ ಗೊತ್ತಾಗಲ್ಲ.

ಇವತ್ತಷ್ಟೇ ಸೇನೆಯ ಕ್ಯಾಂಪ್ ಬಳಿ ಗ್ರೇನೇಡ್ ಮತ್ತು ಇತರ ಸ್ಫೋಟಕ ಇಟ್ಟುಕೊಂಡು ಸಿಕ್ಕಿಬಿದ್ದವನು ಸಂಘ ಪರಿವಾರಕ್ಕೆ ಸೇರಿದವನು. ಈ ಕುರಿತು ಮುಖ್ಯವಾಹಿನಿ ಮಾಧ್ಯಮಗಳದ್ದು ಮತ್ತದೇ ತಾತ್ಸಾರ!

1925ರಿಂದಲೇ ಬ್ರೇನ್‌ವಾಶ್

1925ರಲ್ಲಿ ಆರೆಸ್ಸೆಸ್‌ನ ಸ್ಥಾಪನೆಯಾದಾಗಿನಿಂದ ಈ ಬ್ರೇನ್‌ವಾಶ್ ಕೆಲಸ ಶುರುವಾಗಿದೆ. ವೈದಿಕಶಾಹಿಯ ಹಿಡಿತದಲ್ಲೇ ಇದ್ದ ಆರೆಸ್ಸೆಸ್ ಬ್ರಿಟಿಷರ ಗುಲಾಮಿತನದಲ್ಲೇ ಕಾಲ ಹಾಕುತ್ತ, ತನ್ನ ಹಿಂದೂ ರಾಷ್ಟ್ರದ ಪ್ರಚಾರ ಮಾಡುತ್ತಿತ್ತು. ಆಗಿಂದಲೇ ಹಿಂದೂಗಳಿಗೆ ಒಂದು ಕಲ್ಪಿತ ಶತ್ರುವನ್ನು ಸೃಷ್ಟಿಸಲು ಯತ್ನಿಸುತ್ತ ಬಂದಿದ್ದ ಅದು, ದೇಶ ವಿಭಜನೆಯ ನಂತರ ಬಹಿರಂಗವಾಗಿಯೇ ಮುಸ್ಲಿಮರನ್ನು ಆ ಕಲ್ಪಿತ ಶತ್ರುವಿನ ಸ್ಥಾನದಲ್ಲಿ ಕೂಡಿಸಿತು. ಈ ದೇಶದಲ್ಲಿ ಹಿಂದೆಲ್ಲ ಮುಸ್ಲಿಮ್ ರಾಜರು ಮಾಡಿದ ಅನಾಚಾರಗಳನ್ನಷ್ಟೇ ಮುಂದು ಮಾಡಿ, ಹಿಂದೂ ರಾಜರು ಮಾಡಿದ ಜನದ್ರೋಹಿ ಕೆಲಸಗಳನ್ನು ಮರೆಮಾಚುವ ನಕಲಿ ಇತಿಹಾಸವನ್ನು ಹರಡುತ್ತ ಬಂದಿತು.

ಭಾರತ ಆಲಿಪ್ತ ಗುಂಪಿಗೆ ಸೇರಿದ ಮೇಲೆ ರಷ್ಯಾಕ್ಕೆ ಹತ್ತಿರವಾಯಿತು. ಆಗಲೇ ಅಮೆರಿಕ ಪಾಕಿಸ್ತಾನದ ಪೋಷಕನಾಗಿತ್ತು. 1970ರ ದಶಕದ ಅಂತ್ಯದಲ್ಲಿ ರಷ್ಯಾ ನೆರವಿನಿಂದ ಅಫಘಾನಿಸ್ತಾನದಲ್ಲಿ ಮುಲ್ಲಾಗಳ ಆಡಳಿತ ಕಿತ್ತೊಗೆದು, ಪ್ರಜಾತಾಂತ್ರಿಕ ಚಳವಳಿ ಹುಟ್ಟಿತು. ಆಗ ಪಾಕಿಸ್ತಾನದಲ್ಲಿ 112 ತರಬೇತಿ ಕೇಂದ್ರಗಳನ್ನು ತೆರೆದ ಅಮೆರಿಕ ತಾಲಿಬಾನಿಗಳ, ಮುಂದೆ ಒಸಮಾ ಬಿನ್ ಲಾಡೆನ್‌ಗಳ ಸೃಷ್ಟಿಗೆ ಕಾರಣವಾಯ್ತು.

ನಂತರ ತಿರುಗಿಬಿದ್ದ ಅವರ ವಿರುದ್ಧವೇ ’ಯುದ್ಧ’ ಸಾರಿ ಜಗತ್ತಿನಾದ್ಯಂತ ಕ್ಷೆಭೆ ಹುಟ್ಟಿಸಲು ಯತ್ನಿಸಿತು. ಅಮೆರಿಕಕ್ಕೆ ಜಗತ್ತಿನ ಹಲವು ಕಡೆ ಕ್ಷೆಭೆ ಇರಬೇಕು, ತನ್ನ ಶಸ್ತ್ರಾಸ್ತಗಳು ಮಾರಾಟವಾಗಬೇಕು ಅಷ್ಟೇ. ಇದನ್ನೆಲ್ಲ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದ ಭಕ್ತರು ಅಮೆರಿಕದ ಗುಣಗಾನದಲ್ಲಿ ತೊಡಗಿದ್ದಾರೆ. ಈ ದೇಶದ ಸಂವಿಧಾನ, ರಾಷ್ಟ್ರಧ್ವಜವನ್ನು ಎಂದೂ ಮನಸಾರೆ ಗೌರವಿಸದ ಸಂಘ ಪರಿವಾರ ತೇಲಿಬಿಟ್ಟಿರುವ ಸುಳ್ಳು ಚರಿತ್ರೆಯನ್ನೇ ಸತ್ಯ ಎಂಬಂತೆ ಹರಡುತ್ತಿದ್ದಾರೆ.

ಬಿಜೆಪಿ ಕೇವಲ ರಾಜಕೀಯ ಪಕ್ಷವಲ್ಲ, ಅದೊಂದು ಹಿಡನ್ ಅಜೆಂಡಾ ಇರುವ ಪಕ್ಷ ಎಂಬುದು ಅರ್ಥವಾದಾಗ ಮಾತ್ರ ಅವರು ಬದಲಾಗಲು ಸಾಧ್ಯ.

ಅಲ್ಲಿವರೆಗೆ ಅವರೆಲ್ಲ ಭಾರತೀಯ ರಕ್ತ ಎಂದೆಲ್ಲ ಅರಚುತ್ತ, ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ಮಾಡುತ್ತ ಸಾಗುತ್ತಾರೆ. ಇದಕ್ಕೂ ಭೀಕರವಾಗಿ ಟ್ರಾಲ್ ಕೂಡ ಮಾಡಬಲ್ಲರು…

ಇವರಲ್ಲಿ ಬಹುಪಾಲು ಜನ ಮೂಲತ: ಸಂಘಿಗಳೇನೂ ಅಲ್ಲ. ಹಾಗಂತ ಇವರನ್ನು Cult of stupidity’  ಗುಂಪಿಗೆ ಸೇರಿಸದೇ ಇರಲು ಆಗುತ್ತಾ? ಅವರು ಮಾಡುತ್ತಿರುವ ಅನಾಹುತಗಳೇ ಹಾಗಿವೆಯಲ್ಲ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸೊರೇನ್ ಜಾಮೀನು ಅರ್ಜಿಗೆ ಉತ್ತರಿಸಲು ಇಡಿಗೆ ಕಾಲಾವಕಾಶ ನೀಡಿದ ಕೋರ್ಟ್‌

0
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಗೆ ಉತ್ತರಿಸಲು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇನ್ನೂ ಒಂದು ವಾರ ಕಾಲಾವಕಾಶ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ...