ಕಳೆದ 70 ವರ್ಷಗಳಿಂದ ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ಇನ್ನಿತರ ರಕ್ಷಣಾ ಹಾಗೂ ವೈಜ್ಞಾನಿಕ ಸಂಸ್ಥೆಗಳು ಅಭೂತಪೂರ್ವ ಸಾಧನೆಗಳನ್ನು ಮಾಡುತ್ತಲೇ ಬಂದಿವೆ. ಪ್ರಪಂಚದಲ್ಲಿ ಅಮೆರಿಕಾ, ರಷ್ಯಾ ಮತ್ತು ಚೀನಾದ ನಂತರ ಭಾರತವೇ ಇದರಲ್ಲಿ ಮುಂಚೂಣಿಯಲ್ಲಿದೆ. ಅಂತಹ ಸಾಧನೆಗಳನ್ನು ಮಾಡಿದಾಗಲೆಲ್ಲಾ ಭಾರತದ ಜನತೆಗೆ ದೇಶದ ಶಕ್ತಿಯ ಕುರಿತ ಹೆಮ್ಮೆ ಎನಿಸಿದೆ. ಅದರಲ್ಲೂ ಉಪಗ್ರಹಗಳ ಉಡಾವಣೆಯು ದೇಶದ ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದಂತೆಯೂ ಹಲವು ಅನುಕೂಲಗಳೂ ಆಗಿವೆ.
ಅಂತಹ ಸಾಧನೆ ಆದಾಗಲೆಲ್ಲಾ ಸಂಬಂಧಿಸಿದ ತಾಂತ್ರಿಕ ಸಂಸ್ಥೆಯ ಮುಖ್ಯಸ್ಥರುಗಳು ಪತ್ರಿಕಾಗೋಷ್ಠಿ ಮಾಡಿ ದೇಶದ ಜನರಿಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಏಕೆಂದರೆ, ನಿಜವಾದ ಸಾಧನೆ ಮಾಡಿರುವವರು ಅವರೇ ಆಗಿರುತ್ತಾರೆ. ಒಂದೊಂದು ಸಾಧನೆಗೂ ದಶಕಗಳ ಕಾಲದ ಯೋಜನೆ, ಅಧ್ಯಯನ, ಸಂಶೋಧನೆ ಮತ್ತು ಇನ್ನಿತರ ತಾಂತ್ರಿಕ ಪ್ರಯೋಗಗಳು ನಡೆದಿರುತ್ತವೆ. ರಾಜಕಾರಣಿಗಳು 5 ವರ್ಷಕ್ಕೊಮ್ಮೆ ಬರುತ್ತಾರೆ, ಹೋಗುತ್ತಾರೆ.
ಆದರೆ, ಈ ಸಾರಿ ನರೇಂದ್ರ ಮೋದಿಯವರು ಆ ಸಂಪ್ರದಾಯವನ್ನು ಮುರಿದಿದ್ದಾರೆ. ಇದು ದೇಶದ ವಿಜ್ಞಾನಿಗಳ ಸಾಧನೆಯನ್ನೂ ರಾಜಕೀಯಕರಣಗೊಳಿಸುವ ತಪ್ಪು ನಡೆಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಸಂಸ್ಥೆಗಳ ಒಳಗೂ ರಾಜಕೀಯವನ್ನು ಎಳೆದುಕೊಂಡು ಹೋಗಲಿದೆ. ಇದರ ಪರಿಣಾಮಗಳು ದೇಶದ ಹಿತದೃಷ್ಟಿಯಿಂದ ಅಷ್ಟು ಒಳ್ಳೆಯದಾಗಿರುವುದಿಲ್ಲ ಎಂಬುದರಲ್ಲಿ ಸಂಶಯವಿಲ್ಲ.
ಎರಡನೆಯದಾಗಿ, ಚುನಾವಣಾ ನೀತಿ ಸಂಹಿತೆ ಘೋಷಣೆಯಾಗಿದ್ದು ಈ ಸಂದರ್ಭದಲ್ಲಿ ಇಂತಹ ಘೋಷಣೆಯನ್ನು ರಾಜಕೀಯ ಅಧಿಕಾರದ ಸ್ಥಾನ ಹಿಡಿದಿರುವ ವ್ಯಕ್ತಿ ಮಾಡುವುದು ನೀತಿಯೂ ಅಲ್ಲ; ಸಂಹಿತೆಯೂ ಅಲ್ಲ. ಆದರೆ, ಐಆರ್ಎಸ್ (ರೆವಿನ್ಯೂ ಸರ್ವೀಸ್) ಇಲಾಖೆಯಲ್ಲಿದ್ದ ತಮ್ಮ ಪರವಾದ ವ್ಯಕ್ತಿಯೊಬ್ಬರನ್ನು ಚುನಾವಣಾ ಆಯುಕ್ತರನ್ನಾಗಿಸಿರುವ ಬಿಜೆಪಿಗೆ ಯಾವ ನಿಯಮಗಳೂ ಅನ್ವಯಿಸುವುದಿಲ್ಲ.
ಒಟ್ಟಿನಲ್ಲಿ ಇಂದು ದೇಶದ ಪಾಲಿಗೆ ಮತ್ತೊಂದು ದೊಡ್ಡ ಸಾಧನೆ ಸಂಭವಿಸಿದೆ – ದೇಶದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಬೇಕು
ದೇಶದ ಪ್ರಜಾತಾಂತ್ರಿಕ ನೀತಿ ಸಂಹಿತೆಯ ದೃಷ್ಟಿಯಿಂದ ಇನ್ನೊಂದು ಪೆಟ್ಟು ಬಿದ್ದಿದೆ – ದೇಶದ ವೈಜ್ಞಾನಿಕ ಇಲಾಖೆ, ತಂತ್ರಜ್ಞರನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ ಮತ್ತೊಮ್ಮೆ ಪ್ರಧಾನಿಯೇ ಎಡವಿದ್ದಾರೆ.