ರಾಜ್ಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಶಾಸಕರ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಲೋಕಾಯುಕ್ತ ರೈಡ್ ಬೆನ್ನಲ್ಲೇ ಸುಮಾರು 20 ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣಕ್ಕೆ ಮರುಜೀವ ಬಂದಿದೆ.
ಶಾಸಕ ಮಾಡಾಳು ಕೆ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳು ಅವರೊಂದಿಗೇ ಅರೋಮಾ ಕಂಪನಿಯ ಸಿಬ್ಬಂದಿಯಾದ ಆಲ್ಬರ್ಟ್ ನಿಕೋಲಾ ಮತ್ತು ಗಂಗಾಧರ ಎಂಬುವರು ಬಂಧನಕ್ಕೊಳಗಾಗಿರುವುದು ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ.
ಅರೋಮಾ ಕಂಪನಿ ಮತ್ತು ಇದರ ಸೋದರ ಸಂಸ್ಥೆಯ ಕಂಪನಿಯಿಂದ ಸೋಪ್ ನೂಡಲ್ಸ್ ಖರೀದಿಯಲ್ಲಿ 20 ಕೋಟಿ ಮೊತ್ತದ ಅವ್ಯವಹಾರ ನಡೆದಿದೆ ಎನ್ನಲಾದ ಪ್ರಕರಣ ಈ ಹಿಂದೆ ಬೆಳಕಿಗೆ ಬಂದಿತ್ತು. ಆದರೆ ಸೂಕ್ತ ತನಿಖೆ ನಡೆಯದೆ ಮುಚ್ಚಿ ಹೋಗಿತ್ತು ಎಂದಿರುವ ‘ದಿ ಫೈಲ್’ ವರದಿ, “ಪ್ರಶಾಂತ್ ಮಾಡಾಳುವಿನೊಂದಿಗೇ ಅರೋಮಾ ಕಂಪನಿಯ ಇಬ್ಬರು ಸಿಬ್ಬಂದಿಯನ್ನೂ ಬಂಧನವೂ ಈಗ ಆಗಿರುವುದರಿಂದ 20 ಕೋಟಿ ರೂ. ಅವ್ಯವಹಾರ ಆರೋಪ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ” ಎಂದಿದೆ.
ರೈಡ್ ವೇಳೆ ಅರೋಮಾ ಕಂಪನಿಯ ಸಿಬ್ಬಂದಿಯ ಬಳಿ ಒಟ್ಟು 90 ಲಕ್ಷ ರೂ. (ಪ್ರಶಾಂತ್ಗೆ ನೀಡಲು ತಂದಿದ್ದ ಹಣ) ಇತ್ತೆಂದು ಲೋಕಾಯುಕ್ತ ಮೂಲಗಳು ಹೇಳುತ್ತಿರುವುದಾಗಿ ವರದಿ ಬಹಿರಂಗಪಡಿಸಿದೆ. ಈ ಸಿಬ್ಬಂದಿಯ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
ಏನಿದು 20 ಕೋಟಿ ರೂ. ಹಗರಣ?
“ಕರ್ನಾಟಕ ಕೆಮಿಕಲ್ ಮತ್ತು ಕರ್ನಾಟಕ ಅರೋಮಾ ಕಂಪನಿ ಸೋದರ ಸಂಸ್ಥೆಗಳಾಗಿವೆ. ಇವೆರಡೂ ಒಂದೇ ವಿಳಾಸದಲ್ಲಿ ಕೆಲಸ ಮಾಡುತ್ತಿವೆ. ಇಂತಹ ಸಂಸ್ಥೆಗಳಿಗೆ ಆರ್ಥಿಕ ಬಿಡ್ನಲ್ಲಿ ಅವಕಾಶ ನೀಡಿ ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ ಎಂದು ಕೆಎಸ್ಡಿಎಲ್ ನೌಕರರ ಸಂಘವು ದೂರು ನೀಡಿತ್ತು. ಆದರೆ ತನಿಖೆ ಸಮರ್ಪಕವಾಗಿ ಆಗಿರಲಿಲ್ಲ. ಪ್ರತಿಷ್ಟಿತ ಕಂಪನಿಗಳನ್ನು ಕಡೆಗಣಿಸಿ ಸೋಪ್ ನೂಡಲ್ಸ್ ಸರಬರಾಜು ಮಾಡಿದ ಅನುಭವವೇ ಇಲ್ಲದ ಕರ್ನಾಟಕ ಕೆಮಿಕಲ್ಸ್ ಕಂಪನಿಯ ಬಿಡ್ಅನ್ನು ಅನುಮೋದಿಸಲಾಗಿತ್ತು” ಎಂದು ‘ದಿ ಫೈಲ್’ ತನಿಖಾ ವರದಿ ಬಯಲಿಗೆಳೆದಿತ್ತು.
ಪಾನ್ ಸೆಂಚುರಿ, ಬಿರ್ಲಾ ಕಂಪನಿ, ಮಲೇಶಿಯಾ, ಕೆಎಲ್ಕೆ ಪಾಲೋಸಾ, ಇಜೀಲ್ ಕೆಮಿಕಲ್ಸ್ ಪ್ರೈವೈಟ್ ಲಿಮಿಟೆಡ್ ಚೆನ್ನೈ, ಕರನೀತ್ ಎಂಟರ್ಪ್ರೈಸೆಸ್ ಇಂಡಿಯಾ ಪ್ರೈವೈಟ್ ಲಿಮಿಟೆಡ್, ಬೆಂಗಳೂರು ಬಿರ್ಲಾ ಲಿಮಿಟೆಡ್, ಮಲೇಷಿಯಾ ಕಂಪನಿ 3ಎಫ್ ಇಂಡಸ್ಟ್ರೀಸ್ ಇಂಡಿಯಾ ಸೇರಿದಂತೆ ಹಲವು ಕಂಪನಿಗಳು ನೂಡಲ್ಸ್ನ್ನು ಕೇವಲ 55ರಿಂದ 60 ಸಾವಿರ ರು.ಗೆ ಮಾರಾಟ ಮಾಡುತ್ತಿದ್ದವು. ಆದರೆ ಕೆಎಸ್ಡಿಎಲ್ನ ಭ್ರಷ್ಟ ಅಧಿಕಾರಿಗಳು ಕರ್ನಾಟಕ ಕೆಮಿಕಲ್ಸ್ ಕಂಪನಿಯಿಂದ ಖರೀದಿಸಿ ಕಂಪನಿಯ ಬೊಕ್ಕಸಕ್ಕೆ ನಷ್ಟಕ್ಕೆ ಕಾರಣರಾಗಿದ್ದರು ಎಂಬ ಆರೋಪ ಬಂದಿತ್ತು. ನಿಖೆ ನಡೆಸಿದ್ದ ಹಿರಿಯ ಐಎಎಸ್ ಅಧಿಕಾರಿ ಗುಂಜನ್ ಕೃಷ್ಣ ಅವರು ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯ ಆರೋಪಿತ ಅಧಿಕಾರಿಗಳ ವಿರುದ್ಧದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ವರದಿ ನೀಡಿದ್ದರು. ಆದರೀಗ ಲೋಕಾಯುಕ್ತ ರೈಡ್ನಲ್ಲಿ ಅರೋಮ ಕಂಪನಿಯ ಹೆಸರು ಥಳುಕು ಹಾಕಿಕೊಂಡಿರುವುದರಿಂದ ಹಳೆಯ ಪ್ರಕರಣಕ್ಕೆ ಮರುಜೀವ ಬಂದಿದೆ.
ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ನಿಜವಾದ ಕಾರಣವೇನು?
ಪುತ್ರನ ಕಚೇರಿ ಹಾಗೂ ಮನೆಯ ಮೇಲೆ ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆಎಸ್ಡಿಎಲ್ (ಕರ್ನಾಟಕ ಸಾಬೂನು ಮತ್ತು ಮಾರ್ಜಕ) ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶಾಸಕನ ಪುತ್ರ ದಾಳಿಯಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಸಹಜವಾಗಿ ಸರ್ಕಾರಕ್ಕೆ ಇದು ಮುಜುಗರ ತಂದೊಡ್ಡಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್ಡಿಎಲ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಾಳ್ ವಿರೂಪಾಪಕ್ಷಪ್ಪ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ತಮ್ಮ ಆಪ್ತರ ಮೂಲಕಜಕ ಸಿಎಂ ಕಚೇರಿಗೆ ರಾಜೀನಾಮೆ ಪತ್ರವನ್ನು ಮಾಡಾಳ್ ಸಲ್ಲಿಕೆ ಮಾಡಿದ್ದಾರೆ. ಪತ್ರದಲ್ಲಿ, 2.03.2023ರಂದು ನಡೆದ ಲೋಕಾಯುಕ್ತ ದಾಳಿಗೂ ನನಗೂ ಸಂಬಂಧವಿಲ್ಲ. ಇದು ನನ್ನ ಕುಟುಂಬದ ವಿರುದ್ಧ ಷಡ್ಯಂತ್ರ. ಆದ್ರೂ ನನ್ನ ಮೇಲೆ ಆಪಾದನೆ ಬಂದಿರುವುದರಿಂದ ನಾನು ನೈತಿಕ ಹೊಣೆ ಹೊತ್ತು KSDL ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಮಾಡಾಳ್ ತಿಳಿಸಿದ್ದಾರೆ. ಆದರೆ ಹಳೆಯ ಪ್ರಕರಣ ಮುನ್ನೆಲೆಗೆ ಬರುತ್ತಿರುವುದರಿಂದ ಹಲವು ಅನುಮಾನಗಳಿಗೆ ಆಸ್ಪದ ನೀಡಿದಂತಾಗಿದೆ.