ವಿವಾದಾತ್ಮಕ ಗೋಲಿನ ಕಾರಣದಿಂದಾಗಿ ಬೆಂಗಳೂರು ಎಫ್ಸಿ ಎದುರಿನ ಪಂದ್ಯದಿಂದ ಕೇರಳ ಬ್ಲಾಸ್ಟರ್ ಫುಟ್ಬಾಲ್ ಕ್ಲಬ್ ವಾಕ್ಔಟ್ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮಾರ್ಚ್ 3ರಂದು ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ನಾಕೌಟ್ ಪಂದ್ಯದಲ್ಲಿ ಭಾರತದ ಸ್ಟ್ರೈಕರ್ ಸುನಿಲ್ ಚೆಟ್ರಿಯವರು ಭಾರಿಸಿದ ಗೋಲು ವಿವಾದವನ್ನು ಹುಟ್ಟಿಹಾಕಿತ್ತು.
ಬೆಂಗಳೂರು ಎಫ್ಸಿ (ಬಿಎಫ್ಸಿ) ಮತ್ತು ಕೇರಳ ಬ್ಲಾಸ್ಟರ್ ಫುಟ್ಬಾಲ್ ಕ್ಲಬ್ (ಕೆಬಿಎಫ್ಸಿ) ನಡುವೆ ಪಂದ್ಯ ನಡೆಯುತ್ತಿತ್ತು. ಬೆಂಗಳೂರು ತಂಡದಲ್ಲಿನ ಸುನಿಲ್ ಚೆಟ್ರಿಯವರು ಫ್ರೀಕಿಕ್ ವೇಳೆ ಮೋಸ ಮಾಡಿದ್ದಾರೆಂದು ಆರೋಪಿಸಿ ಕೇರಳ ತಂಡ ಪಂದ್ಯವನ್ನು ಮೊಟುಕುಗೊಳಿಸಿ ಹೊರನಡೆದಿದೆ. ಪಂದ್ಯದ 96ನೇ ನಿಮಿಷದಲ್ಲಿ ಈ ಘಟನೆ ನಡೆದಿದೆ.
.@chetrisunil11's goal helps @bengalurufc reach the #HeroISL 2022-23 semi-finals where they will face league winners #MumbaiCityFC!
Watch the full highlights! 📺#BFCKBFC #HeroISLPlayoffs #LetsFootball #BengaluruFC #KeralaBlasters
— Indian Super League (@IndSuperLeague) March 4, 2023
ಕೇರಳ ಬ್ಲಾಸ್ಟರ್ಸ್ ವಿರುದ್ಧ ಸುನಿಲ್ ಚೆಟ್ರಿ ವಿವಾದಾತ್ಮಕ ಗೋಲು
ಸುನಿಲ್ ಚೆಟ್ರಿ ಅವರು ಗೋಲ್ ಭಾರಿಸಿದಾಗ ಕೇರಳ ಬ್ಲಾಸ್ಟರ್ ತಂಡದ ಆಟಗಾರರು ತಡೆಗೋಡೆಯಾಗಿ ನಿಲ್ಲಲು ಸಿದ್ಧವಾಗುತ್ತಿದ್ದರು. ಅಷ್ಟರಲ್ಲಿಯೇ ಗೋಲ್ ಹೊಡೆಯಲಾಗಿದೆ ಎಂದು ಕೇರಳ ಆಟಗಾರರು ಆರೋಪಿಸಿದ್ದಾರೆ.
ರೆಫರಿಯವರು ಬೆಂಗಳೂರು ಎಫ್ಸಿಗೆ ಗೋಲು ನೀಡಿದ್ದು, ಮರು ಕ್ಷಣವೇ ಕೇರಳದ ಆಟಗಾರರು ಇದನ್ನು ಪ್ರಶ್ನಿಸಿದರು.
ಸಮಯವನ್ನು ವ್ಯರ್ಥ ಮಾಡದೆ ಹೊರ ನಡೆದು ಬರುವಂತೆ ಕೇರಳ ಬ್ಲಾಸ್ಟರ್ಸ್ ತರಬೇತುದಾರ ಇವಾನ್ ವುಕೊಮಾನೋವಿಕ್ ಅವರು ತಮ್ಮ ತಂಡಕ್ಕೆ ಸೂಚಿಸಿದರು. ಕೋಚ್ ಕೂಡ ತೀರ್ಪುಗಾರರ ನಿರ್ಧಾರದಿಂದ ಅಸಮಾಧಾನಗೊಂಡಿದ್ದರು.
ಗೊಂದಲಕ್ಕೊಳಗಾದ ಕೇರಳ ಬ್ಲಾಸ್ಟರ್ಸ್ ಆಟಗಾರರು ಐಎಸ್ಎಲ್ ರೆಫರಿ ನಿರ್ಧಾರವನ್ನು ವಿರೋಧಿಸಿ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಹೊರನಡೆದರು.
ಸುಮಾರು 20 ನಿಮಿಷಗಳ ನಂತರವೂ ಆಟಗಾರರು ಹಿಂತಿರುಗದ ಕಾರಣ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ 1-0 ಅಂತರದಲ್ಲಿ ಗೆಲುವು ಸಿಕ್ಕಿದೆ ಎಂದು ಘೋಷಿಸಲಾಯಿತು.
ಮುಂದಿನ ವಾರ ಸೆಮಿ ಫೈನಲ್ನಲ್ಲಿ ಬೆಂಗಳೂರು ತಂಡವು ಮುಂಬೈ ಸಿಟಿ ಎಫ್ಸಿಯನ್ನು ಎದುರಿಸಲಿದೆ.
ಸುನಿಲ್ ಚೆಟ್ರಿ ಪ್ರತಿಕ್ರಿಯೆ
ಕೇರಳ ತಂಡದ ವಾಕ್ಔಟ್ ಕುರಿತು ಪ್ರತಿಕ್ರಿಯಿಸಿರುವ ಚೆಟ್ರಿ, “ನನ್ನ 22 ವರ್ಷಗಳ ವೃತ್ತಿ ಬದುಕಿನಲ್ಲಿ ಅಂತಹದನ್ನು ನೋಡಿಲ್ಲವಾದ್ದರಿಂದ ಏನಾಯಿತು ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ” ಎಂದಿದ್ದಾರೆ.
ಗೆಲುವಿನಿಂದ ಸಂತಸಗೊಂಡಿದ್ದು, ಸೆಮಿಫೈನಲ್ನಲ್ಲಿ ಮುಂಬೈ ಸಿಟಿ ಎಫ್ಸಿಯನ್ನು ಎದುರಿಸಲು ಸಿದ್ಧ ಎಂದು ಛೆಟ್ರಿ ತಿಳಿಸಿದ್ದಾರೆ.
“(ಫ್ರೀ- ಕಿಕ್ ತೆಗೆದುಕೊಳ್ಳಲು ಸಾಧ್ಯವಾದರೆ) ನಾನು ಯಾವಾಗಲೂ ರೆಫರಿಯನ್ನು ಕೇಳುತ್ತೇನೆ. ಏಕೆಂದರೆ ಅವರು ಅನುಮತಿಸಬೇಕಾಗುತ್ತದೆ. ಅದೊಂದು ಕಹಿ-ಸಿಹಿ ಕ್ಷಣ. ಮೊದಲು ಪಂದ್ಯ ನಡೆಯುತ್ತದೋ ಇಲ್ಲವೋ ಎಂದು ಯೋಚಿಸಿದೆವು. ಆದರೆ ನಾವು ಸೆಮಿಫೈನಲ್ಗೆ ಪ್ರವೇಶಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಮುಂಬೈ ವಿರುದ್ಧ ಹೋರಾಡಲು ಕಾಯುತ್ತಿದ್ದೇವೆ” ಎಂದು ಹೇಳಿದ್ದಾರೆ.