ಮೈತ್ರಿ ಸರ್ಕಾರವಿದ್ದಾಗ ಒಂದು ವರ್ಷ ಪೂರ್ತಿ ಹಾವು ಮುಂಗುಸಿ ರೀತಿ ಕಿತ್ತಾಡಿದ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಉಪಚುನಾವಣೆ ಬಂದ ತಕ್ಷಣ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ಗೆ 15ಕ್ಷೇತ್ರಕ್ಕೆ ಅಭ್ಯರ್ಥಿ ಹಾಕಲು ಯೋಗ್ಯತೆಯಿಲ್ಲ. ಸೋಲುತ್ತೇವೆ ಎನ್ನುವ ಭಯದಿಂದ ಗೂಂಡಾಗಿರಿ ಮಾಡುವುದು, ಚಪ್ಪಲಿ ತೂರುವುದು, ಬಾವುಟದಲ್ಲಿ ಒಡೆಯುವುದು ಮಾಡುತ್ತಿದ್ದಾ ಇದು ಸರಿಯಲ್ಲ ಎಂದಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಪಕ್ಷನಾ? ಪ್ರಾದೇಶಿಕ ಪಕ್ಷನಾ? ಅರ್ಥವಾಗುತ್ತಿಲ್ಲ. ಅವರ ಬೆಂಬಲ ಯಾರಿಗೆ? ದಿನಕ್ಕೆ ಒಂದೊಂದು ಸುದ್ದಿ ಹರಡುತ್ತಾರೆ. ಒಂದು ದಿನ ಕಾಂಗ್ರೆಸ್ ಬೆಂಬಲ ಅನ್ನುತ್ತಾರೆ. ಇನ್ನೊಂದು ದಿನ ಬಿಜೆಪಿಗೆ ಇನ್ನೊಂದು ದಿನ ತಟಸ್ಥ ಎನ್ನುತ್ತಾರೆ. ಒಟ್ಟು ಆ ಪಕ್ಷ ಅತಂತ್ರ ಸ್ಥಿತಿಯಲ್ಲಿದ್ದು, ಡಿಸಾಲ್ವ್ ಆಗಿಬಿಟ್ಟರೆ ಒಳ್ಳೆಯದು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಟ್ವಿಟ್ಟರ್ನಲ್ಲಿ ಸಿದ್ದರಾಮಯ್ಯ – ಸದಾನಂದಗೌಡ – ಶ್ರೀರಾಮುಲು ಕದನ: ಪರಸ್ಪರ ಆರೋಪ ಪ್ರತ್ಯಾರೋಪ
ಸೋಲುತ್ತೀವಿ ಎಂದು ಎರಡು ಪಕ್ಷಕ್ಕೂ ಭೀತಿ ಶುರುವಾಗಿದೆ. ಜೆಡಿಎಸ್ 3 ಕಡೆ ಮಾತ್ರ ಕಠಿಣ ಸ್ಪರ್ಧೆ ಮಾಡುತ್ತೇವೆ ಎಂದೂ, ಕಾಂಗ್ರೆಸ್ 12 ಕಡೆ ಕಠಿಣವಾಗಿ ಹೋರಾಡುತ್ತೇವೆ ಎಂದರೆ ಒಳ ಒಪ್ಪಂದ ಸ್ಪಷ್ಟವಾಗಿ ಕಾಣುತ್ತಿದೆ ಎಂದಿದ್ದಾರೆ.
ಇವರ ಒಂದು ವರ್ಷದ ದುರಾಡಳಿತ ನೋಡಿದ ಮೇಲೆ ಜನಕ್ಕೆ ಬೇಸರವಾಗಿದೆ. ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತು ಎನ್ನುವ ಹಾಗಿದೆ ಅವರ ವರ್ತನೆ. ಹಾಗಾಗಿ ಯಡಿಯೂರಪ್ಪನವರ ಸ್ಥಿರ ಸರ್ಕಾರ ಮುಂದುವರೆಯಬೇಕೆಂದು ಜನರ ಭಾವನೆ. 15ಕ್ಕೆ 15ನ್ನೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರಿಗೆ ಟಿಪ್ಪು ಭೂತ ಹಿಡಿದಿದೆ
ಪಕ್ಷಾಂತರಿಗಳು ಎಂದು ಬಿಜೆಪಿಯ ಅಭ್ಯರ್ಥಿಗಳನ್ನು ಸಿದ್ದರಾಮಯ್ಯ ಹೋದಲ್ಲಿ, ಬಂದಲ್ಲಿ ತೆಗೆಳುತ್ತಿದ್ದಾರೆ. ಆದರೆ ವಿಪಕ್ಷದ ನಾಯಕರಾದ ಅವರು ಹಿಂದೆ ಸ್ವತಂತ್ರವಾಗಿ ಗೆದ್ದು, ಜನತಾದಳ, ಜೆಡಿಎಸ್ ಸೇರಿ ಈಗ ಕಾಂಗ್ರೆಸ್ ಸೇರುವ ಮೂಲಕ ಮೂರು ಪಕ್ಷ ಬದಲಾಯಿಸಿದ್ದಾರೆ. ಅವರಿಗೆ ಪಕ್ಷಾಂತರದ ವಿಷಯದಲ್ಲಿ ಒಂದು ಪಿಎಚ್ಡಿಯನ್ನು ಕೊಡಬೇಕು ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯನವರು ಎಂಎಲ್ಎಗಳನ್ನು ಕೋಳಿ, ಕುರಿ, ದನದ ರೀತಿ ಮಾರಾಟವಾಗುತ್ತಿದ್ದಾರೆ ಎಂದು ವ್ಯಾಖ್ಯಾನ ಮಾಡುತ್ತಿದ್ದಾರೆ. ನೀವು ಜೆಡಿಎಸ್ ಬಿಟ್ಟು ಬಂದಾಗ ತಾವು ಯಾವ ಪ್ರಾಣಿಯಾಗಿದ್ದೀರಿ ಎಂದು ಈಗ ಅವರನ್ನು ಜನ ಕೇಳುತ್ತಿದ್ದಾರೆ. ಪಕ್ಷಾಂತರ ಮಾಡುವುದರಲ್ಲಿ ಸಿದ್ದರಾಮಯ್ಯನವರು ಎತ್ತಿದ ಕೈ. ಅವರನ್ನು ವಿರೋಧ ಪಕ್ಷದ ನಾಯಕರಾಗಿ ಮಾಡಲಿಲ್ಲವಾದರೆ ಮತ್ತೆ ಅಹಿಂದ ಕಟ್ಟುತ್ತಿದ್ದರು ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಈ ರೀತಿಯ ಮಾತುಗಳನ್ನು ಬಿಟ್ಟು ಚುನಾವಣೆ ಮಾಡಿ. ನಿಮಗೆ ಟಿಪ್ಪು ಭೂತ ಅಂಟಿಕೊಂಡುಬಿಟ್ಟಿದೆ. ಅದರಿಂದ ಹೊರಗಡೆ ಬರುತ್ತಿಲ್ಲ. ನಿನ್ನೆ ಕೆ.ಆರ್ ಪೇಟೆಯಲ್ಲಿ ಮಹಿಳೆ ಹಣೆಗೆ ತಿಲಕ ಇಡಲು ಹೋದಾಗ ಬೇಡ ಅಂದಿದ್ದಾರೆ ಎಂದು ಸಿದ್ದು ವಿರುದ್ಧ ಗುಡುಗಿದರು.
ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಕೊಲೆಯತ್ನ: ಪಿಎಫ್ಐ ಮುಗಿಸಲು ಬಿಜೆಪಿ ಶತಪ್ರಯತ್ನ
ಮೈಸೂರಿನ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆಯಾಗಿದೆ. ಎಸ್ಡಿಪಿಐ ಮತ್ತು ಪಿಎಫ್ಐ ನ ಕಾರ್ಯಕರ್ತರೆ ಕಾರಣ ಎಂದು ಗೊತ್ತಾಗಿದೆ. ಅವರ ಮೇಲಿನ 120 ಕೇಸುಗಳನ್ನು ಸಿದ್ದರಾಮಯ್ಯನವರು ವಾಪಸ್ ಪಡೆದಿದ್ದು ಏಕೆ? ಕಾನೂನು ಸುವ್ಯವಸ್ಥೆ ಕುಸಿದು ಬೀಳಲು ಕಾರಣ ಯಾರು? ನಿಮ್ಮ ಹಳೆ ಸರ್ಕಾರ ಕಾರಣವೇ? ಕೆಎಫ್ಡಿಯಿಂದ ಹುಣಸೂರಿನಲ್ಲಿ ಇಬ್ಬರೂ ವಿದ್ಯಾರ್ಥಿಗಳ ಹತ್ಯೆಯಾದಾಗ ಅವರ ಮೇಲೆ ಕೇಸು ಹಾಕಿದ್ದೀರಿ. ಅದನ್ನು ವಾಪಸ್ ಪಡೆದಿದ್ದು ಏಕೆ? ಅವರ ಮೇಲೆ ಸಾಫ್ಟ್ ನೇಚರ್ ಏಕೆ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಹಾಗಾಗಿ ಟಿಪ್ಪು ಭೂತದಿಂದ ಆಚೆ ಬಂದರೆ ನೀವು ನಿಜವಾಗಿಯೂ ಸಿದ್ದರಾಮಯ್ಯನವರು ಆಗುತ್ತೀರಿ? ಇಲ್ಲದಿದ್ದರೆ ಟಿಪ್ಪು ಸಿದ್ದರಾಮಯ್ಯ ಆಗುತ್ತೀರಿ ಎಂದು ಛೇಡಿಸಿದ್ದಾರೆ.
Nimage sawarkar hucchu hididilwa…! Haage