ಕರಾವಳಿಯನ್ನು ಬೆಚ್ಚಿಬೀಳಿಸಿದ್ದ ಏರ್ ಇಂಡಿಯಾ ಗಗನಸಖಿ ಮತ್ತು ಆಕೆಯ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದ ಮೂರು ತಿಂಗಳ ಬಳಿಕ ಉಡುಪಿ ಪೊಲೀಸರು ಆರೋಪಿ ಪ್ರವೀಣ್ ಚೌಗಲೆ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಫೆಬ್ರವರಿ 12 ರಂದು ಮಲ್ಪೆ ಪೊಲೀಸರು ಪ್ರವೀಣ್ ಅರುಣ್ ಚೌಗುಲೆ (39) ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದು ಮನೆ ಅತಿಕ್ರಮಣ (ಕಲಂ 449), ಸೆಕ್ಷನ್ 324, ಸೆಕ್ಷನ್ 201 ಸೇರಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಸನ್ಗಳಡಿಯಲ್ಲಿ ಆರೋಪವನ್ನು ಹೊರಿಸಲಾಗಿದೆ.
ನವೆಂಬರ್ 12ರಂದು ಉಡುಪಿ ಸಮೀಪದ ನೇಜಾರು ಬಳಿಯ ತೃಪ್ತಿ ಲೇಜೌಟ್ನಲ್ಲಿ ಮನೆಯೊಂದರಲ್ಲಿ ತಾಯಿ ಹಸೀನಾ ಹಾಗೂ ಮೂವರು ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಆಸೀಮ್ನ್ನು (12) ಬರ್ಬರವಾಗಿ ಇರಿದು ಹತ್ಯೆ ಮಾಡಲಾಗಿತ್ತು. ಇದಲ್ಲದೆ ಅಯ್ನಾಜ್ ಅವರ ಅಜ್ಜಿ ಹಾಜಿರಾ ಎಂ ಅವರನ್ನು ಕೊಲೆಗೆ ಯತ್ನಿಸಿದ್ದ. ಅವರು ಶೌಚಾಲಯದ ಬಾಗಿಲು ಹಾಕಿಕೊಳ್ಳುವ ಮೂಲಕ ಕೊಲೆಯಿಂದ ಪಾರಾಗಿದ್ದರು. ಈ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು ಆರೋಪಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಕುರಿತು ತನಿಖೆಗೆ ಪೊಲೀಸರ 5 ತಂಡಗಳನ್ನು ರಚಿಸಲಾಗಿತ್ತು.
ದಾಳಿಯಿಂದ ತಪ್ಪಿಸಿಕೊಂಡ ಹಾಜಿರಾ, ಸ್ಥಳೀಯ ಆಟೋ ರಿಕ್ಷಾ ಚಾಲಕರು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫೋನ್ ಬಳಕೆಯಂತಹ ತಾಂತ್ರಿಕ ಪುರಾವೆಗಳು ಸೇರಿದಂತೆ ಪ್ರತ್ಯಕ್ಷದರ್ಶಿ ಹೇಳಿಕೆಗಳನ್ನು ಆಧರಿಸಿ ಪೊಲೀಸರು ಶಂಕಿತನ ಜಾಡು ಹಿಡಿದಿದ್ದರು. ಇದರ ಭಾಗವಾಗಿ ಬೆಳಗಾವಿಯಲ್ಲಿ ಆರೋಪಿ ಪ್ರವೀಣ್ ಚೌಗಲೆಯನ್ನು ಬೆಳಗಾವಿಯ ಸಂಬಂಧಿಕರ ಮನೆಯಿಂದ ಬಂಧಿಸಲಾಗಿತ್ತು. ಆರೋಪಿಯನ್ನು ವಿಚಾರಣೆ ನಡೆಸಿದಾಗ ಆತ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಇದೀಗ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಡಿಸೆಂಬರ್ 2023ರಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯವು ಪ್ರಕರಣದ ಗಂಭೀರತೆಯ ಆಧಾರದ ಮೇಲೆ ಪ್ರವೀಣ್ ಚೌಗುಲೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಆರೋಪಿ ಪ್ರವೀಣ್ ಹಾಗೂ ಅಯ್ನಾಝ್ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಪ್ರವೀಣ್ ಅಯ್ನಾಝ್ ಮೇಲೆ ದ್ವೇಷವನ್ನು ಇಟ್ಟುಕೊಂಡು ಕೊಲೆಯನ್ನು ಮಾಡಿದ್ದಾನೆ ಎನ್ನುವುದು ತನಿಖೆಯ ವೇಳೆ ತಿಳಿದು ಬಂದಿತ್ತು. ಘಟನೆ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್ಪ್ರೆಸ್ ಆರೋಪಿ ಪ್ರವೀಣ್ ಚೌಗಲೆಯನ್ನು ಅಮಾನತುಗೊಳಿಸಿ ಕೃತ್ಯದ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿತ್ತು.
ಭೀಕರ ಹತ್ಯಾಕಾಂಡದ ಕುರಿತು ತ್ವರಿತ ವಿಚಾರಣೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಮುಸ್ಲಿಂ ಒಕ್ಕೂಟ ಹಾಗೂ ಮುಸ್ಲಿಂ ಜಸ್ಟೀಸ್ ಫೋರಂ ನೇತೃತ್ವದ ನಿಯೋಗ ಈ ಮೊದಲು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಇತ್ತೀಚೆಗೆ ಸಂತ್ರಸ್ತ ಕುಟುಂಬದ ಯಜಮಾನ ನೂರ್ ಮಹಮ್ಮದ್ ಅವರು ಕೂಡ ಸಿಎಂ ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿ ಪ್ರಕರಣದಲ್ಲಿ ತ್ವರಿತ ನ್ಯಾಯಕ್ಕೆ ಆಗ್ರಹಿಸಿದ್ದರು.
ಇದನ್ನು ಓದಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ಸರಕಾರ