ಹದಿನೆಂಟು ವರ್ಷದ ದಲಿತ ಯುವತಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಶಾಸಕರ ಪುತ್ರ ಮತ್ತು ಸೊಸೆಯ ವಿರುದ್ಧ ಚೆನ್ನೈ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿ ಐದು ದಿನಗಳು ಕಳೆದರೂ, ಆರೋಪಿಗಳ ಬಂಧನವಾಗಿಲ್ಲ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳಾದ ಆಂಟೊ ಮತ್ತು ಮೆರ್ಲಿನಾ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
“ನಾವು ಶಾಸಕ ಕರುಣಾನಿಧಿಗೆ ಕರೆ ಮಾಡಿ ವಿಚಾರಿಸಿದಾಗ ಅವರು, ನನ್ನ ಮಗ ಸೊಸೆ ಮದುವೆಯಾಗಿ ಏಳು ವರ್ಷ ಕಳೆದಿದೆ. ಈಗ ಅವರು ಎಲ್ಲಿದ್ದಾರೋ ನನಗೆ ಗೊತ್ತಿಲ್ಲ. ದಲಿತ ಯುವತಿಯ ಮೇಲೆ ಹಲ್ಲೆ ಮಾಡಿರುವ ಕುರಿತು ನನಗೆ ಮಾಹಿತಿಯಿಲ್ಲವೆಂದು ಹೇಳಿದ್ದಾಗಿ” ನ್ಯೂಸ್ ಮಿನಿಟ್ ತಿಳಿಸಿದೆ.
ಆರೋಪಿಗಳ ಫೋನ್ ನಂಬರ್ ಬಳಸಿಕೊಂಡು ಅವರು ಇರುವ ಸ್ಥಳವನ್ನು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ ಇನ್ನೂ ಬಂಧಿಸಿಲ್ಲ. ಶೋಧ ಕಾರ್ಯ ನಡೆಯುತ್ತಿದೆ ಎಂದು ಚೆನ್ನೈನ ತಿರುವನ್ಮಿಯೂರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ: ಹನ್ನೆರಡನೇ ತರಗತಿ ಓದಿರುವ ಅನು (ಹೆಸರು ಬದಲಾಯಿಸಲಾಗಿದೆ) ಎಂಬ ದಲಿತ ಹುಡುಗಿಯನ್ನು ಶಾಕರ ಮಗ ಆಂಟೊ ಮತ್ತು ಆತನ ಪತ್ನಿ ಮೆರ್ಲಿನಾ 2023ರಲ್ಲಿ ತಮ್ಮ ಮನೆ ಕೆಲಸಗಾರ್ತಿಯಾಗಿ ನೇಮಿಸಿಕೊಂಡಿದ್ದರು. ಯುವತಿ ತಮಿಳುನಾಡಿನಲ್ಲಿ ಪರಿಶಿಷ್ಟ ಜಾತಿ ಎಂದು ವರ್ಗೀಕರಿಸಲಾಗಿರುವ ಪರಯ್ಯರ್ ಸಮುದಾಯಕ್ಕೆ ಸೇರಿದವಳು. “ತಾನು ಮೆರ್ಲಿನಾ ಮತ್ತು ಆಂಟೊ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಮೆರ್ಲಿನಾ ನನಗೆ ಥಳಿಸುತ್ತಿದ್ದರು. ಸಿಗರೇಟ್ ತುಂಡುಗಳಿಂದ ಚರ್ಮವನ್ನು ಸುಡುತ್ತಿದ್ದರು. ಕೂದಲನ್ನು ಚಿಕ್ಕದಾಗಿ ಕತ್ತರಿಸಿದ್ದರು” ಎಂದು ಯುವತಿ ಆರೋಪಿಸಿದ್ದಾಳೆ.
ದೌರ್ಜನ್ಯದ ಬಗ್ಗೆ ಯಾರಿಗೂ ಹೇಳದಂತೆ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಅನು ಆರೋಪಿಸಿದ್ದಾರೆ. ದಂಪತಿ ತನ್ನನ್ನು ಡಾಕ್ಯುಮೆಂಟ್ಗೆ ಸಹಿ ಮಾಡುವಂತೆ ಒತ್ತಾಯಿಸಿದ್ದರು. ಅದರ, ಪ್ರಕಾರ ನಾನು ಅವರಿಗೆ 2 ಲಕ್ಷ ರೂ. ಕೊಡಲು ಬಾಕಿ ಇದೆ. ಅದಕ್ಕಾಗಿ ನಾನು ಇನ್ನೂ ಮೂರು ವರ್ಷಗಳ ಕಾಲ ಅವರ ಮನೆಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿಕೊಂಡಿದ್ದಳು.
ಪೊಂಗಲ್ ಹಬ್ಬಕ್ಕೆ ಉಲುಂದೂರುಪೇಟೆಯಲ್ಲಿರುವ ತನ್ನ ಮನೆಗೆ ತೆರಳಿದ್ದ ವೇಳೆ ಅನು ವೈದ್ಯಕೀಯ ಚಿಕಿತ್ಸೆ ಪಡೆದಿದ್ದಳು. ಆ ಸಮಯದಲ್ಲಿ ಆಕೆಯ ತಾಯಿ ಆಕೆಯ ದೇಹದ ಮೇಲೆ ಗಾಯಗಳನ್ನು ಗಮನಿಸಿದ್ದರು. ಅನು ಚಿಕಿತ್ಸೆ ಪಡೆದ ಉಲುಂದೂರುಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರು, ಆಕೆಯ ಮೇಲೆ ದೊಣ್ಣೆ, ಹೇರ್ ಸ್ಟ್ರೈಟ್ನರ್ನಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿಸಿದ್ದರು. ಆಕೆಯ ಕಣ್ಣು, ಹಣೆ ಮತ್ತು ಗಲ್ಲದ ಮೇಲೆ ಗಾಯದ ಗುರುತಿತ್ತು ಮತ್ತು ಎರಡೂ ಮುಂದೋಳಿನ ಮೇಲೆ ಸುಟ್ಟ ಗಾಯಗಳು ಕಂಡು ಬಂದಿತ್ತು.
ಈ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ ಉಲುಂದೂರ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ತಿರುವನ್ಮಿಯೂರ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರು.
ತಿರುವನ್ಮಿಯೂರ್ ಪೊಲೀಸರು ಜನವರಿ 18 ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಬಿ) (ಅಶ್ಲೀಲ ಕೃತ್ಯಗಳು), 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), 325 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ನೋವುಂಟು ಮಾಡುವ ಶಿಕ್ಷೆ), 506(1) (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಸೆಕ್ಷನ್ 3(1)(ಆರ್) ಮತ್ತು 3(1)(ಗಳು) (ಅಪರಾಧ ದೌರ್ಜನ್ಯಗಳಿಗೆ ಶಿಕ್ಷೆ) ಅಡಿಯಲ್ಲಿ ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಜಯಲಲಿತಾ ಆಸ್ತಿ ಹರಾಜು ಬೇಡ: ಬೆಂಗಳೂರು ಕೋರ್ಟ್ ಆದೇಶ