ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ಕಾರಣಕ್ಕಾಗಿ ಉದ್ಯೋಗ ಕಳೆದುಕೊಂಡಿದ್ದ ಎನ್ಐಎಫ್ಟಿ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ) ಹೈದರಾಬಾದ್ನ ಎಲ್ಲಾ 56 ಮಹಿಳಾ ಹೌಸ್ ಕೀಪೀಂಗ್ ಸಿಬ್ಬಂದಿಗಳನ್ನು ಗುರುವಾರದಿಂದ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ಮಹಿಳೆಯರು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ಎನ್ಐಎಫ್ಟಿ ಕ್ಯಾಂಪಸ್ನಲ್ಲಿ ಸದ್ಯ ಸ್ಟೆನೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಿ ಶ್ರೀನಿವಾಸ್ ರೆಡ್ಡಿ ಎಂಬುವವರು ಲೈಂಗಿಕ ಕಿರುಕುಳದ ನೀಡಿದ್ದರು ಎಂದು ಆರೋಪಿಸಿ ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದರು.
ಶ್ರೀನಿವಾಸ್ ಎಂಬುವವರು ನಮ್ಮ ಒಪ್ಪಿಗೆಯಿಲ್ಲದೆ ಮಹಿಳೆಯರ ಚಿತ್ರಗಳನ್ನು ತೆಗೆಯುತ್ತಿದ್ದರು ಮತ್ತು ಅವರೊಂದಿಗೆ ಮಲಗಲು ಹೇಳುವ ಮೂಲಕ ದೌರ್ಜನ್ಯ ನಡೆಸುತ್ತಿದ್ದರು ಎಂದು ಆರೋಪಿಸಿ, ಕಳೆದ ವರ್ಷ ಅಕ್ಟೋಬರ್ನಲ್ಲಿ ಮಹಿಳಾ ಸಿಬ್ಬಂದಿ ಶ್ರೀನಿವಾಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೂರು ನೀಡಿದ್ದರು. ನಂತರ ಕ್ಯಾಂಪಸ್ನಲ್ಲಿ ಆ ಮಹಿಳೆಯರಿಗೆ ತೊಂದರೆ ಉಂಟಾಯಿತು. ಇನ್ನೂ ಹೆಚ್ಚಾದ ಕಿರುಕುಳವನ್ನು ಸಹಿಸಲಾಗದೆ, ಕಳೆದ ವರ್ಷದಲ್ಲಿ 2-3 ಮಹಿಳೆಯರು ತಮ್ಮ ಕೆಲಸವನ್ನು ತ್ಯಜಿಸಿದ್ದರು.
ತದನಂತರ ಮಹಿಳೆಯರು ದೂರನ್ನು ಹಿಂಪಡೆಯುವಂತೆಯೂ, ರಾಜಿಯಾಗುವಂತೆಯೂ ಅವರ ಮೇಲೆ ಎನ್ಐಎಫ್ಟಿ ಆಡಳಿತ ಮಂಡಳಿ ತೀವ್ರ ಒತ್ತಡ ಹಾಕಿತು. ಇಲ್ಲದಿದ್ದರೆ ನಿಮ್ಮ ಕೆಲಸಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೆದರಿಸಲಾಯಿತು. ಜೊತೆಗೆ ಬೆದರಿಕೆಗಳಿಗೆ ಕಾರ್ಮಿಕರ ಬಗ್ಗದೇ ಹೋರಾಟ ಮುಂದುವರೆಸಿದರು. ಆಗ ಎನ್ಐಎಫ್ಟಿ ಅಧಿಕಾರಿಗಳು ಹೊಸ ಟೆಂಡರ್ ಅನ್ನು ಕರೆಯುವ ನಿರ್ಧಾರ ಮಾಡಿದರು. ಇದು ಗುತ್ತಿಗೆದಾರನಿಗೆ ಕ್ಯಾಂಪಸ್ ನಲ್ಲಿ ಪ್ರತಿಭಟಿಸುತ್ತಿರುವ ಎಲ್ಲಾ ಕಾರ್ಮಿಕರನ್ನು ವಜಾಗೊಳಿಸಲು ಮತ್ತು ಹೊಸ ಉದ್ಯೋಗಿಗಳನ್ನು ನಿಯೋಜಿಸಲು ಸಹಕಾರಿಯಾಗಿತ್ತು.
ಪ್ರತಿಭಟನೆಯ ನೇತೃತ್ವವನ್ನು ಅವರ ಮೇಲ್ವಿಚಾರಕಿ ರತ್ನ ಕುಮಾರಿ ವಹಿಸಿದ್ದರು, ಅವರು ಕಳೆದ ಅಕ್ಟೋಬರ್ನಲ್ಲಿ ಆರೋಪಿ ಶ್ರೀನಿವಾಸ್ ರೆಡ್ಡಿ ವಿರುದ್ಧ ಪೊಲೀಸರಿಗೆ ಮೊದಲು ದೂರು ನೀಡಿದ್ದರು. ನಂತರ ಅವರು ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಿಸಿದರು ಮಾತ್ರವಲ್ಲ ಹೋರಾಟವನ್ನು ಇನ್ನೂ ತೀವ್ರಗೊಳಿಸಿದರು. ಹತ್ತು ತಿಂಗಳ ಅವಿರತ ಹೋರಾಟ ಮತ್ತು ತನಿಖೆಯ ನಂತರ ಕಾರ್ಮಿಕ ಇಲಾಖೆ ಮಹಿಳೆಯರ ಪರ ತೀರ್ಪು ನೀಡಿದೆ.
ಈಗಿರುವ ಟೆಂಡರ್ ಅಮಾನ್ಯವಾಗುವಂತೆ ಮತ್ತು ಎಲ್ಲಾ ಮಹಿಳೆಯರು ಎನ್ಐಎಫ್ಟಿಯಲ್ಲಿ ತಮ್ಮ ಉದ್ಯೋಗಕ್ಕೆ ಮರಳುವಂತೆ ನೋಡಿಕೊಳ್ಳುವುದಾಗಿ ರಾಜ್ಯ ಕಾರ್ಮಿಕ ಆಯುಕ್ತರು ಮೌಖಿಕವಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಈಗ ಅಸ್ತಿತ್ವಕ್ಕೆ ಬರುವ ಹೊಸ ಕೆಲಸದ ಕಾಂಟ್ರಾಕ್ಟ್ ಮುಂದಿನ ಎರಡು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಈ ಕುರಿತು ದಿ ನ್ಯೂಸ್ ಮಿನಿಟ್ ಜೊತೆ ಮಾತನಾಡಿರುವ ರತ್ನ ಕುಮಾರಿ, ಬುಧವಾರ ಮಧ್ಯಾಹ್ನ ಏಜೆನ್ಸಿ ಗುತ್ತಿಗೆದಾರರಿಂದ ಕರೆ ಬಂದಿದ್ದು, ಎಲ್ಲಾ ಮಹಿಳಾ ಸಿಬ್ಬಂದಿಗಳು ಗುರುವಾರ ಕ್ಯಾಂಪಸ್ಗೆ ಮರಳುವಂತೆ ಕೇಳಿಕೊಂಡಿದ್ದಾರೆ.
“ನಾವೆಲ್ಲರೂ ಈಗ ಕ್ಯಾಂಪಸ್ಗೆ ಮರಳಿದ್ದೇವೆ ಮತ್ತು ನಮ್ಮ ಕರ್ತವ್ಯವನ್ನು ಮುಂದುವರಿಸುತ್ತಿದ್ದೇವೆ. ಸದ್ಯಕ್ಕೆ ನಮ್ಮ ಉದ್ಯೋಗಗಳು ಸುರಕ್ಷಿತವೆಂದು ತೋರುತ್ತದೆ. ಆದರೆ ಎನ್ಐಎಫ್ಟಿಯ ಯಾವುದೇ ಅಧಿಕಾರಿಗಳು ಇನ್ನೂ ನಮ್ಮನ್ನು ಸಂಪರ್ಕಿಸಿಲ್ಲ. ಶ್ರೀನಿವಾಸ್ ರೆಡ್ಡಿ ಕೂಡ ಇಲ್ಲಿಯೇ ಇದ್ದು ಪ್ರಸ್ತುತ ನಿರ್ದೇಶಕರೊಂದಿಗೆ ಸಭೆಯಲ್ಲಿದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ. ಎನ್ಐಎಫ್ಟಿಯ ನಿರ್ದೇಶಕರು ದೆಹಲಿಯಿಂದ ಹೈದರಾಬಾದ್ಗೆ ಗುರುವಾರ ಬರಲಿದ್ದು ಈ ಬಗ್ಗೆ ಪರಿಶೀಲನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಅಮಾಯಕ ಮಹಿಳೆಯರು ತಮ್ಮದಲ್ಲದ ತಪ್ಪಿಗೆ 10 ತಿಂಗಳು ಕಿರುಕುಳ ಅನುಭವಿಸಬೇಕಾದರೂ ಅವರ ದಿಟ್ಟ ಹೋರಾಟದ ಕಾರಣದಿಂದ ಮತ್ತೆ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಕೃಪೆ: ದಿ ನ್ಯೂಸ್ ಮಿನಿಟ್