ಕಳೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಸಾರ್ವಜನಿಕವಾಗಿ ಬೆಂಬಲಿಸಿದ್ದ ಆಗಿನ ಭೂಪಾಲ್ ಬಿಜೆಪಿ ಅಭ್ಯರ್ಥಿ (ಈಗ ಸಂಸದೆ) ಪ್ರಗ್ಯಾ ಸಿಂಗ್ರ ಈ ನಡೆಯಿಂದ ಬಿಜೆಪಿಗೆ ಆಂತರಿಕವಾಗಿ ಖುಷಿಯಾಗಿದ್ದರೂ ಬಾಹ್ಯವಾಗಿ ಮುಜುಗರವಾಗಿತ್ತು. ಘಟನೆ ನಡೆದು ಇಂದಿಗೆ ಒಂದು ತಿಂಗಳು ಆಗಿದೆ. ಆಗ ಪಕ್ಷದ ಅಧ್ಯಕ್ಷ ಅಮಿತ್ಶಾ ಈ ಪ್ರಕರಣವನ್ನು ಬಿಜೆಪಿಯ ಶಿಸ್ತು ಕ್ರಮ ಸಮಿತಿಗೆ ಒಪ್ಪಿಸಿ, 10 ದಿನದಲ್ಲಿ ಕ್ರಮ ಕೈಗೊಳ್ಳಿ ಎಂದಿದ್ದರು. ವಿಚಿತ್ರವೆಂದರೆ ಆಗ ಬಿಜೆಪಿಯ ಶಿಸ್ತು ಕ್ರಮ ಸಮಿತಿ ಅಸ್ತಿತ್ವದಲ್ಲೇ ಇರಲಿಲ್ಲ. ಶಾ ಕೊಟ್ಟ ಗಡುವು ಎಂದೋ ಮುಗಿದರೂ ಹೊಸ ಸಮಿತಿ ಕಾರ್ಯೋನ್ಮುಖವೇ ಆಗಿಲ್ಲ!
ಸದ್ಯದ ಬಿಜೆಪಿಯು ಭಯೋತ್ಪಾದನಾ ಆರೋಪಿ ಮತ್ತು ಭೂಪಾಲ್ ಸಂಸದೆ ಪ್ರಗ್ಯಾ ಸಿಂಗ್ರ ಮೇಲಿನ ಶಿಸ್ತುಕ್ರಮದ ವಿಚಾರವನ್ನು ಮುಚ್ಚಿಯೇ ಹಾಕಿದೆ ಎನ್ನಬಹುದು. ಚುನಾವಣಾ ಪ್ರಚಾರದ ವೇಳೆ ಪ್ರಗ್ಯಾ ಗಾಂಧಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎಂದಾಗ, ‘ದೇಶದೆಲ್ಲಡೆ ಮತ್ತು ಬಿಜೆಪಿ ಮಿತ್ರಪಕ್ಷಗಳಿಂದಲೂ ಆಕ್ಷೇಪಣೆ ಎದುರಾದಾಗ ಡ್ಯಾಮೇಜ್ ಕಂಟ್ರೋಲ್’ಗೆ ಬಿಜೆಪಿ ಇಳಿದಿತ್ತು. ಆಗ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಈ ಪ್ರಕರಣವನ್ನು ಪಕ್ಷದ ಶಿಸ್ತು ಸಮಿತಿಗೆ ಒಪ್ಪಿಸಿ ಹತ್ತು ದಿನದಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮದ ವಿವರ ನೀಡಬೇಕು ಎಂದು ಮೇ 17ರಂದು ಆದೇಶ ಮಾಡಿದ್ದರು.
ಆದರೆ ಈಗ ಒಂದು ತಿಂಗಳಾದರೂ ಏನೂ ಸಂಭವಿಸಿಲ್ಲ ಶಿಸ್ತು ಸಮಿತಿ ಏನು ಮಾಡುತ್ತಿದೆ? ಬಿಜೆಪಿ ಅಧ್ಯಕ್ಷರ ಆದೇಶ ಏನಾಯ್ತು?
ಕಾರಣ ಈ ಪ್ರಕರಣವನ್ನು ಶಿಸ್ತು ಸಮಿತಿಗೆ ವರ್ಗಾಯಿಸಿದಾಗ ಶಿಸ್ತು ಸಮಿತಿಯೇ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆಗ ಈ ಸಮಿತಿಯ ಅಧ್ಯಕ್ಷರನ್ನು ರಾಜ್ಯವೊಂದರ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು, ಇನ್ನೊಬ್ಬ ಸದಸ್ಯ ರಾಜಿನಾಮೆ ನೀಡಿದ್ದರು!
ನಿಷ್ಕ್ರಿಯ ಸಮಿತಿ!
ಬಿಜೆಪಿಯ ಶಿಸ್ತು ಸಮಿತಿಯಲ್ಲಿ ಮೂವರು ಸದಸ್ಯರಿರುತ್ತಾರೆ. ಪ್ರಗ್ಯಾ ಕೇಸನ್ನು ಅದಕ್ಕೆ ನೀಡಿದಾಗ ಸಮಿತಿ ಅಧ್ಯಕ್ಷ ಗಣೇಶಿ ಲಾಲ್ ಒರಿಸ್ಸಾದ ರಾಜ್ಯಪಾಲರಾಗಿ ನೇಮಕವಾಗಿದ್ದರು. ಇನ್ನೊಬ್ಬ ಸದಸ್ಯ ವಿಜಯ ಚಕ್ರವರ್ತಿ ವೈಯಕ್ತಿಕ ಕಾರಣದಿಂದ ಸಮಿತಿಗೆ ರಾಜಿನಾಮೆ ನೀಡಿದ್ದರು. ಮೂರನೇ ಸದಸ್ಯ ಸತ್ಯದೇವ ಸಿಂಗ್ ಬಿಜೆಪಿ ಬಿಹಾರದ ಶಿಸ್ತು ಸಮಿತಿಯನ್ನೂ ನೋಡಿಕೊಳ್ಳುತ್ತಿದ್ದರು. ಅಲ್ಲಿ ಅವರು ನೂರಕ್ಕೂ ಹೆಚ್ಚು ಅಶಿಸ್ತಿನ ಪ್ರಕರಣಗಳನ್ನು ಬಗೆಹರಿಸುವಲ್ಲಿ ಬ್ಯುಸಿ ಆಗಿದ್ದರು.
ಈ ಕುರಿತು ದಿ ಪ್ರಿಂಟ್ಗೆ ಪ್ರತಿಕ್ರಿಯಿಸಿದ ಸತ್ಯದೇವ ಸಿಂಗ್, ‘ಸಮಿತಿಗೆ ಪ್ರಗ್ಯಾ-ಗೋಡ್ಸೆ ಕೇಸು ರೆಫರ್ ಮಾಡಿದಾಗ ಸಮಿತಿಗೆ ಅಧ್ಯಕ್ಷರ್ಯಾರು ಇರಲಿಲ್ಲ, ಕಾರ್ಯದರ್ಶಿಯೂ ಇರಲಿಲ್ಲ. ಕೇಸನ್ನು ಒಬ್ಬ ಸದಸ್ಯ ತೀರ್ಮಾನಿಸಿವುದು ತಪ್ಪು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವರ ಗಮನಕ್ಕೆ ತಂದು, ಪ್ರಗ್ಯಾರನ್ನು ಸಸ್ಪೆಂಡ್ ಮಾಡುವ ನಿರ್ಧಾರವನ್ನು ನೀವೇ ತೆಗೆದುಕೊಳ್ಳಿ ಅಥವಾ ಈ ಪ್ರಕರಣವನ್ನು ಅಧ್ಯಕ್ಷ ಅಮಿತ್ ಶಾರಿಗೇ ರೆಫರ್ ಮಾಡಿ’ ಎಂದು ವಿನಂತಿಸಿದ್ದಾಗಿ ಹೇಳಿದ್ದಾರು.
ಶಾರ ಹತ್ತು ದಿನದ ಗಡುವು ಮುಗಿದು ವಾರದ ನಂತರ ಜೂನ್ 4ರಂದು ಶಿಸ್ತು ಸಮಿತಿಗೆ ಇನ್ನಿಬ್ಬರು ಸದಸ್ಯರನ್ನು ನೇಮಕ ಮಾಡಲಾಗಿತು. ಉತ್ತರಪ್ರದೇಶದ ಓಂ ಪಾಠಕ್ ಮತ್ತು ಪಂಜಾಬಿನ ಅವಿನಾಶ್ ರೈ ಖನ್ನಾ ಹೊಸ ಸದಸ್ಯರಾದರು. ಪಾಠಕ್ ಅವರಿಗೆ ಈ ಬಗ್ಗೆ ಕೇಳಿದರೆ, ಈ ವಿಷಯದ ಕುರಿತು ಮಾತಾಡಲು ನನಗೆ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.
ಸಮಿತಿಯ ಸಭೆಗಳ ದಾಖಲೆಗಳಲ್ಲವೂ ಪಕ್ಷದ ಕಾರ್ಯದರ್ಶಿ ಮಹೇಂದ್ರ ಪಾಂಡೆ ಬಳಿಯಿವೆ ಎಂದು ಪಾಠಕ್ ಪಾಂಡೆ ಆ ಕಡೆ ಬೆರಳು ಮಾಡಿದ್ದಾರೆ. ಈ ಪ್ರಕರಣದ ಕುರಿತು ಸದದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದು, ಚೆಂಡು ಈಗ ಅಮಿತ್ ಶಾ ಅಂಗಳದಲ್ಲಿದೆ ಎಂದಿದ್ದಾರೆ.
ಅಂದರೆ ಇಲ್ಲಿ ಚುನಾವಣಾ ಸಂದರ್ಭದ ಮುಜುಗರ, ಒತ್ತಡದಿಂದ ಪಾರಾಗಲು ಪ್ರಗ್ಯಾ ಪ್ರಕರಣವನ್ನು ಕಾಟಾಚಾರಕ್ಕೆ ನಿಷ್ಕ್ರಿಯ ಶಿಸ್ತು ಸಮಿತಿಗೆ ರೆಫರ್ ಮಾಡಲಾಗಿತ್ತೇ? ಈಗ ಇಬ್ಬರು ಹೊಸ ಸದಸ್ಯರನ್ನು ನೇಮಕ ಮಾಡಿದ ಮೇಲೂ ಸಮಿತಿ ಪ್ರಗ್ಯಾ ಪ್ರಕರಣವನ್ನು ಕೈಗೆತ್ತಿಕೊಂಡಿಲ್ಲವೇಕೆ? ಸಮಿತಿಯ ಸದಸ್ಯರೊಬ್ಬರೇ ಚೆಂಡು ಈಗ ಶಾ ಅಂಗಳದಲ್ಲಿ ಇದೆ ಎಂದಿರುವುದರ ಅರ್ಥ ಏನು?
‘ಶಿಸ್ತಿನ ಪಕ್ಷ’ ಎಂದು ಕರೆದುಕೊಳ್ಳುವ ಪಕ್ಷಕ್ಕೆ ಈಗ ಪ್ರಗ್ಯಾ ರಕ್ಷಣೆಗೆ ನಿಂತಿದೆಯೇ?