Homeಮುಖಪುಟಕಡಿದಾಳು ಶಾಮಣ್ಣ ಜತೆ ಹೀಗೊಂದು ಸಂಜೆ

ಕಡಿದಾಳು ಶಾಮಣ್ಣ ಜತೆ ಹೀಗೊಂದು ಸಂಜೆ

- Advertisement -
- Advertisement -

ಒಂದು ಹಾಲುಗಲ್ಲದ ಹಸುಳೆಗೆ ಬಿಳಿ ಗಡ್ಡ ಬೆಳೆದು, ಆ ಗಡ್ಡದ ರಾಶಿಯ ನಡುವಿನಿಂದ ಆ ಮಗು ಕಿಲಕಿಲ ನಕ್ಕರೆ ಹೇಗೆ ಕಾಣಬಹುದೋ, ಹಾಗೆ ಶಾಮಣ್ಣ ನಮ್ಮೆದುರು ನಗುತ್ತಾ ಕೂತಿದ್ದರು. ಹೌದು, ಅವರು ಕಡಿದಾಳು ಶಾಮಣ್ಣ. ನಾನು ತೇಜಸ್ವಿಯವರನ್ನು ಓದಲು ಶುರು ಮಾಡಿದಾಗಿನಿಂದ, ಶಾಮಣ್ಣನವರ ಬಗೆಗೂ ಒಂದು ರೀತಿಯ ಬೆರಗು ನನ್ನನ್ನು ಆವರಿಸಿತ್ತು. ಬದುಕನ್ನು ಅಷ್ಟು ಸರಳವಾಗಿ, ಸಲೀಸಾಗಿ, ಪ್ರಕೃತಿಗೆ ಅಷ್ಟು ಸನಿಹವಾಗಿ ಕಳೆದ ತೇಜಸ್ವಿ ಮತ್ತು ಶಾಮಣ್ಣನವರದು ಎಂತವರನ್ನೂ ಆಕರ್ಷಿಸಬಲ್ಲ ವ್ಯಕ್ತಿತ್ವಗಳು. “ಥೋ…. ಸಾಕು ಮಾರಾಯ” ಎಂದು ಈ ಜಗತ್ತಿನ ಮೇಲೆ ಬೇಸರಿಸಿಕೊಂಡವರಂತೆ ಬಲುಬೇಗನೆ ನಮ್ಮನ್ನಗಲಿ ಹೋದ ತೇಜಸ್ವಿಯವರನ್ನು ನೋಡಬೇಕೆಂಬ ನನ್ನ ಆಸೆ ಆಸೆಯಾಗಿಯೇ ಉಳಿಯಿತು. ಕಡೇಪಕ್ಷ ಶಾಮಣ್ಣನವರನ್ನಾದರೂ ಒಮ್ಮೆ ಭೇಟಿ ಮಾಡಿ ಮಾತಾಡಿಸಬೇಕೆಂದು ತುಂಬಾ ದಿನಗಳಿಂದ ಕಾತರಿಸುತ್ತಿದ್ದೆ. ಅವಕಾಶ ಒದಗಿಬಂದಿರಲಿಲ್ಲ.

ಮೊನ್ನೆ ಅಚಾನಕ್ಕಾಗಿ ಅದೃಷ್ಟ ಒಲಿದುಬಂತು. ನಾನು ಮತ್ತು ಕೆ.ಎಲ್. ಅಶೋಕ್ ಅವರು, ಹಿರಿಯ ರೈತ ಹೋರಾಟಗಾರ ಎಚ್.ಆರ್.ಬಸವರಾಜಪ್ಪನವರ ಬದುಕನ್ನು ತಿರುಗಣೆಯಾಗಿಸಿಕೊಂಡು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ರೈತ ಹೋರಾಟಗಳ ಚರಿತ್ರೆಯನ್ನು ಕಟ್ಟಿಕೊಡುವ ಒಂದು ಪುಸ್ತಕ ಬರೆಯುವ ಪ್ರಯತ್ನದಲ್ಲಿದ್ದೇವೆ. ಬರವಣಿಗೆಯ ಕೆಲಸ ಬಹುಪಾಲು ಮುಗಿದಿದ್ದು, ಅದೀಗ ಸಂಪಾದನೆಯ ಹಂತದಲ್ಲಿದೆ. ಅದಕ್ಕೆ ಶಾಮಣ್ಣನವರಿಂದ ಬೆನ್ನುಡಿ ಬರೆಸಿದರೆ ಹೇಗೆಂಬ ಆಲೋಚನೆ ಬಂದಿದ್ದರಿಂದ ನಾವು ಭಗವತಿಕೆರೆಯ ಶಾಮಣ್ಣನವರ ಆ ಪುಟ್ಟ ಕಾನನ ಕುಟೀರಕ್ಕೆ ಹೋಗುವ ಅವಕಾಶ ಸೃಷ್ಟಿಸಿಕೊಂಡೆವು.

ವಯೋಸಹಜ ವೃದ್ಧಾಪ್ಯ ಕಾರಣಕ್ಕೆ ಅವರೀಗ ಮೊದಲಿನಷ್ಟು ಲವಲವಿಕೆಯಿಂದಿಲ್ಲ, ಅಲ್ಲದೇ, ಕೆಲ ದಿನಗಳ ಕೆಳಗೆ ಮನೆಯಲ್ಲೇ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡ ನಂತರ ಅವರ ನೆನಪಿನ ಶಕ್ತಿಯೂ ಕುಂದಿದೆ, ಹಾಗಾಗಿ ಅವರು ಬರೆಯಲಾರರು ಎಂಬ ಮಾಹಿತಿಗಳು ನಮಗೆ ತಲುಪಿದವು. ಆದರೆ ಅವರನ್ನು ನೋಡುವ ಈ ಅವಕಾಶ ಮಿಸ್ ಮಾಡಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಅಂತೂ ಹೊರಟೆವು. ಮೊದಲೇ ಅವರ ಮನೆಯವರಿಗೆ ಫೋನ್ ಮಾಡಿ, ಭೇಟಿಗೆ ಅನುಮತಿ ಪಡೆದಿದ್ದೆವು. ಹಾಗಾಗಿ, ಸಂಜೆಯ ನಸುಗತ್ತಲಿನ ನಮ್ಮ ಆಗಮನವನ್ನು ಮನೆಯವರ ಬೆಚ್ಚನೆಯ ಆತಿಥ್ಯ ಸ್ವಾಗತಿಸಿತು.

ಶಾಮಣ್ಣನವರ ಅನಾರೋಗ್ಯದ ಬಗ್ಗೆ ಬಹಳಷ್ಟು ಅನುಕಂಪದ ಮಾತುಗಳನ್ನು ಕೇಳಿದ್ದ ನನ್ನ ತಲೆಯ ತುಂಬಾ, ಹಾಸಿಗೆ ಹಿಡಿದು ಮಲಗಿರುವ ಶಾಮಣ್ಣನವರ ಚಿತ್ರಣವೇ ತುಂಬಿಹೋಗಿತ್ತು. ನನ್ನಿಷ್ಟದ ವ್ಯಕ್ತಿತ್ವವನ್ನು ಆ ಪರಿಸ್ಥಿತಿಯಲ್ಲಿ ನೋಡಬೇಕಲ್ಲ ಎಂಬ ಬೇಸರವೂ ಕಾಡುತ್ತಿತ್ತು.

ಆದರೆ ಅಲ್ಲಿ ನಾನು ಕಂಡಿದ್ದೇ ಬೇರೆ. ಕೈಯಲ್ಲೊಂದು ಊರುಗೋಲು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿತ್ತು ಎಂಬುದನ್ನು ಬಿಟ್ಟರೆ, ನನ್ನ ಹಳೆಯ ನೆನಪುಗಳಲ್ಲಿ ಶಾಮಣ್ಣನವರ ಯಾವ ರೂಪ ಅಚ್ಚೊತ್ತಿತ್ತೋ, ಅದೇ ಪ್ರತಿರೂಪದಲ್ಲಿ ಶಾಮಣ್ಣ ನಗುನಗುತ್ತಾ ವರಾಂಡದಲ್ಲಿ ನಿಂತಿದ್ದರು. ತಲೆಮೇಲೆ ಟೊಪ್ಪಿ, ಕುತ್ತಿಗೆಯಲ್ಲಿ ಕ್ಯಾಮೆರಾ ಇರಲಿಲ್ಲ ಅನ್ನುವುದನ್ನು ಬಿಟ್ಟರೆ ಅದೇ ಬಿಳಿ ಜುಬ್ಬ, ಪೈಜಾಮಾ, ಹಸಿರು ಶಲ್ಯ, ನಗುಮುಖ. ಶಾಮಣ್ಣ ಶಾಮಣ್ಣರಾಗಿಯೇ ನಮಗೆ ಸಿಕ್ಕರು. ನಮ್ಮ ಜೊತೆಗಿದ್ದ ಬಸವರಾಜಪ್ಪನವರನ್ನು ಗುರುತು ಹಿಡಿದು ಕುಶಲೋಪರಿಯ ಮಾತುಗಳನ್ನಾಡಿ ಸ್ವಾಗತಿಸಿದರು.

ಅವರ ಸ್ಮೃತಿಯಲ್ಲಿ ದಾಖಲಾಗಿದ್ದ ಹಳೆಯ ನೆನಪುಗಳು ಛಂಗನೆ ಚಿಮ್ಮಿ ಮುನ್ನೆಲೆಗೆ ಬರುತ್ತಿಲ್ಲ ಮತ್ತು ಪ್ರಸ್ತುತ ಈಗ ಅವರ ಸುತ್ತ ನಡೆಯುತ್ತಿರುವ ಘಟನೆಗಳು ಸಮರ್ಪಕವಾಗಿ ದಾಖಲಾಗುತ್ತಿಲ್ಲ ಎಂಬ ಲಕ್ಷಣಗಳಂತವನ್ನು ಬಿಟ್ಟರೆ, ಅವರು ಅಪ್ಪಟ ಆರೋಗ್ಯವಂತ. ಬದುಕನ್ನು ನಾವು ಊಹಿಸಿದ್ದಕ್ಕಿಂತ ವೈವಿಧ್ಯವಾಗಿ, ಸೊಗಸಾಗಿ, ಪರೋಪಕಾರಿಯಾಗಿ ಬದುಕಬಹುದೆಂಬುದನ್ನು ತೋರಿಸಿಕೊಟ್ಟ ಆ ಕಲರ್‌ಫುಲ್ ನೆನಪುಗಳಿಲ್ಲದ ಶಾಮಣ್ಣನವರನ್ನು ಕಾಣಲು ಆಪ್ತರಿಗೆ ಕಷ್ಟವಾಗಬಹುದು. ಜೊತೆಗೆ, ಕಲ್ಲನ್ನೂ ಮಾತಾಡಿಸುವ ಛಾತಿಯಿದ್ದ ಅವರು ಈಗ ಮಾತಿಗಿಂತ ಹೆಚ್ಚಾಗಿ ಬುದ್ಧನಂತೆ ನಗುತ್ತಾ ಕೂತಿರುವುದನ್ನು ನೋಡಲೂ ಬೇಸರವಾಗಬಹುದು. ಆದರೆ ಒಂದು ನೆಮ್ಮದಿಯ ಸಂಗತಿಯೆಂದರೆ, ಬೇರೆಲ್ಲ ಕಾಯಿಲೆಗಳಲ್ಲಿ ರೋಗಿ ನರಳುವುದನ್ನು ನೋಡಿ ನಾವೂ ಸಂಕಟ ಅನುಭವಿಸುತ್ತೇವೆ. ಆದರೆ ಶಾಮಣ್ಣನವರ ವಿಚಾರದಲ್ಲಿ, ಅವರಿಗೆ ಹೀಗಾಗಿದೆಯಲ್ಲ ಎಂದು ನಾವು ವ್ಯಥೆ ಪಡಬಹುದೇ ವಿನಾ, ಆ ಕೊರಗು ಅವರಿಗಿಲ್ಲ. ತಮ್ಮ ಬಳಿ ಇರುವಷ್ಟೆ ನೆನಪಿನ ಕಣಜದೊಂದಿಗೆ ನೆಮ್ಮದಿಯಾಗಿದ್ದಾರೆ, ಅದೇ ಹಳೆಯ ಶಾಮಣ್ಣನಂತೆ!

ಬದುಕಿನ ರೀತಿ, ನಿಲುವು, ಒಲವುಗಳಲ್ಲಿ ಕಿಂಚಿತ್ತೂ ಬದಲಾಗಿಲ್ಲ. ಅವರ ಹಿರಿಯ ಮಗಳು ಉಲುಪಿಯವರು ಹೇಳಿದ ಇತ್ತೀಚಿನ ಒಂದು ಪ್ರಸಂಗ ಇದಕ್ಕೆ ಸಾಕ್ಷಿ.

ಮನುಷ್ಯರ ಜೊತೆಗಿನ ಒಡನಾಟದ ನೆನಪುಗಳು ಕೊಂಚ ಮಾಸಿಹೋಗಿದ್ದರೂ, ಗಿಡ-ಮರಗಳ ಜತೆಗಿನ ನಂಟು ಅವರಲ್ಲಿ ಇನ್ನೂ ಹಸಿರಾಗಿಯೇ ಇದೆ. ಮರದ ಸಣ್ಣ ಕೊಂಬೆ ಕತ್ತರಿಸುವುದಕ್ಕೂ ಅವರು ಒಪ್ಪುವುದಿಲ್ಲವಂತೆ. ಇತ್ತೀಚೆಗೆ ಒಂದು ಮಧ್ಯಾಹ್ನ ಶಾಮಣ್ಣನವರು ಮನೆಯೊಳಗೆ ಕೂತಿರಬೇಕಾದರೆ ಪಕ್ಕ ಎಲ್ಲಿಂದಲೋ ಮರ ಕಡಿಯುತ್ತಿರುವ ಕಟ್-ಕಟ್ ಸದ್ದು ಕಿವಿಗೆ ಬಿದ್ದಿದೆ. ಕೂಡಲೇ ಊರುಗೋಲು ಕೈಗೇರಿಸಿಕೊಂಡು, ತಡವರಿಕೆಯ ಹೆಜ್ಜೆಗಳನ್ನಿಡುತ್ತಾ, ಮೆಟ್ಟಿಲಿಳಿದು ಸದ್ದಿನ ದಿಕ್ಕನ್ನು ಅನುಸರಿಸಿ ಹೊರಟಿದ್ದಾರೆ. ಅಲ್ಲಿ, ತೋಟ ನೋಡಿಕೊಳ್ಳುವ ಕೆಲಸದ ಮನುಷ್ಯ ಮರದ ಕೊಂಬೆಯೊಂದನ್ನು ಕತ್ತರಿಸುತ್ತಿರುವುದು ಕಣ್ಣಿಗೆ ಬಿದ್ದಿದೆ. ಕೂಡಲೇ ಆತನನ್ನು ಕೆಳಗಿಳಿಸಿದ ಶಾಮಣ್ಣ, “ಯಾಕಪ್ಪಾ? ಈ ಕೊಂಬೆ ಯಾಕೆ ಕತ್ತರಿಸುತಿದೀಯಾ?” ಅಂತ ಕೇಳಿದ್ದಾರೆ.

ಇವರ ಪರಿಸರ ಪ್ರೇಮದ ಬಗ್ಗೆ ತಿಳಿದಿದ್ದ ಆತ ಅಳುಕುತ್ತಲೇ “ಇಲ್ಲಾ ಅಯ್ಯಾ, ಈ ಕೊಂಬೆ ಅಡಿಕೆ ಮರಗಳಿಗೆ ಸ್ವಲುಪ ಸ್ವಾಲೆಯಾಗಿ ತ್ರಾಸು ಕೊಡ್ತಿತ್ತು. ಅದುಕ್ಕೇ ಚೂರು ಸವರುತಿದೀನಿ ಆಟೆಯಾ” ಎಂದಿದ್ದಾನೆ.

“ಈ ಕೊಂಬೆಯಿಂದ ನಮಿಗೆ ತೊಂದ್ರೆ ಆಗ್ತಾ ಐತೆ ಅಂತ ಅಡಿಕೆ ಮರಗಳು ನಿನ್ನತ್ರ ದೂರು ಹೇಳಿದ್ವಾ?” ಶಾಮಣ್ಣನವರ ಪ್ರಶ್ನೆ ತೂರಿಬಂದಿದೆ.

“ಇಲ್ಲಾ ಅಯ್ಯಾ” ಆತ ತಲೆ ಕೆರೆದುಕೊಳ್ಳುತ್ತಾ ಉತ್ತರಿಸಿದ್ದಾನೆ.

“ಮತ್ತೆ, ಮರಗಳಿಗೆ ತೊಂದ್ರೆ ಆಗ್ತಾ ಐತೆ ಅಂತ ನಿನಿಗೆ ಹ್ಯೆಂಗೆ ಗೊತ್ತಾತು? ಅದು ನಿನ್ನ ಅಭಿಪ್ರಾಯ ಅಷ್ಟೆ. ಪರಿಸರದಲ್ಲಿ ಮರಗಿಡಗಳು ಒಂದಕ್ಕೊಂದು ಹೊಂದಿಕೊಂಡು ಬಾಳೋದನ್ನು ನಮಿಗಿಂತ ಚೆನ್ನಾಗಿ ತಿಳ್ಕಂಡವೆ. ನಮ್ಮ ಸಹಾಯ ಅವುಕ್ಕೆ ಬೇಕಿಲ್ಲ” ಶಾಮಣ್ಣನವರ ಈ ಮಾತು ಕೇಳಿಸಿಕೊಂಡ ವ್ಯಕ್ತಿ “ತೆಪ್ಪಾಯ್ತಯ್ಯಾ” ಎಂದೇಳಿ ಹೊರಟುಹೋದನಂತೆ.

ಮಗಳು ಈ ಪ್ರಸಂಗ ವಿವರಿಸುವಾಗ ಶಾಮಣ್ಣ ಯಥಾಪ್ರಕಾರ ನಗುತ್ತಾ ಕೂತಿದ್ದರು. ನಾವು ಬಂದ ಉದ್ದೇಶವನ್ನು ಅರುಹಿದಾಗಲೂ ನಕ್ಕು ಪ್ರತಿಕ್ರಿಯಿಸಿದರೆ ಹೊರತು ಬೇರೇನೂ ಹೇಳಲಿಲ್ಲ. ಅವರ ಮಡದಿ ಶ್ರೀದೇವಿಯಮ್ಮನವರ ತಾಯ್ತನದ ಆತಿಥ್ಯ, ಆತ್ಮೀಯತೆಗಳು ನಮ್ಮನ್ನು ಮತ್ತಷ್ಟು ಉಲ್ಲಸಿತರಾಗಿಸಿತು. ಶಾಮಣ್ಣನವರು ನಮ್ಮ ಕೋರಿಕೆಯನ್ನು ಮನ್ನಿಸಿ, ತಮ್ಮ ನೆನಪುಗಳಿಂದ ಮಾತುಗಳನ್ನು ಹೆಕ್ಕಲು ಒಂದಷ್ಟು ಶ್ರಮ ಹಾಕಿದರು. ಆದರೆ ಸ್ಮೃತಿ ಅವರಿಗೆ ಸಾಥ್ ಕೊಡಲಿಲ್ಲ. ನಾವು ಕೆದಕಿ, ಉತ್ತೇಜಿಸಿದ್ದರೆ ನೆನಪುಗಳು ಮುನ್ನೆಲೆಗೆ ಬರುತ್ತಿದ್ದವೇನೋ, ಆದರೆ ನಮ್ಮ ಒತ್ತಾಯವು ಅವರಲ್ಲಿ ತನಗೇನೋ ನೆನಪಿನ ಶಕ್ತಿಯ ಸಮಸ್ಯೆಯಿದೆ ಎಂಬ ಕಿರಿಕಿರಿ ಹುಟ್ಟುಹಾಕುವುದು ನಮಗೆ ಇಷ್ಟವಾಗಲಿಲ್ಲ. ನಿಧಾನಕ್ಕೆ ಯೋಚಿಸಿ, ಸಾಧ್ಯವಾದರೆ ದಾಖಲಿಸಿ ಎಂದು ಹೇಳಿ ನಮ್ಮ ನಿರೀಕ್ಷೆಯನ್ನು ಕೈಚೆಲ್ಲಿದೆವು.

ಹೊಸದಾಗಿ ಪ್ರಕಟವಾದ ನನ್ನ ’ಸ್ವಾತಂತ್ರ್ಯಪೂರ್ವ ಶಿಕಾರಿ ಕತೆಗಳು’ ಪುಸ್ತಕದ ಬಗ್ಗೆ ಹಾಗೂ ಅದಕ್ಕೆ ಮುನ್ನುಡಿ ಬರೆದ ಪ್ರದೀಪ್ ಕೆಂಜಿಗೆಯವರು ತಮ್ಮ ಬರಹದಲ್ಲಿ ಶಾಮಣ್ಣನವರ ತಂದೆ ಕಡಿದಾಳು ರಾಮಪ್ಪಗೌಡರ ಶಿಕಾರಿ ಸಾಹಿತ್ಯದ ಬಗ್ಗೆ ಪ್ರಸ್ತಾಪಿಸಿರುವುದನ್ನು ಹೇಳಿದಾಗ ಶಾಮಣ್ಣ ತುಂಬಾ ಖುಷಿಪಟ್ಟರು. ತಮ್ಮ ತಂದೆಯವರ ’ಮಲೆನಾಡಿನ ಶಿಕಾರಿಯ ಅನುಭವಗಳು’ ಪುಸ್ತಕವನ್ನು ಮನೆಯೊಳಗಿನಿಂದ ತರಿಸಿಕೊಂಡು, ಹಸ್ತಾಕ್ಷರದೊಂದಿಗೆ ನನಗೆ ಕೊಟ್ಟು ಶುಭ ಹಾರೈಸಿದರು.

ಹೊತ್ತು ಹೋದದ್ದೇ ಗೊತ್ತಾಗಲಿಲ್ಲ. ನಮಗೆ ಹೊರಡಲು ಮನಸಿರಲಿಲ್ಲ. ಆದರೆ ಆ ಪರಿಸರಕ್ಕೆ ತೀರಾ ಪರಕೀಯರಂತೆ ಪ್ರವೇಶಿಸಿದ್ದ ನಮ್ಮ ಮೇಲೆ ಸ್ಥಳೀಯ ಸೊಳ್ಳೆಗಳು ಹರತಾಳ ಆರಂಭಿಸಿದ್ದವು. ಅವುಗಳ ಕುಟುಕು ಕಾರ್ಯಾಚರಣೆಯಿಂದ ಮೈಯೆಲ್ಲೆ ತಿಂಡಿ ಏಳುತ್ತಿತ್ತು. ಆದರೆ ತಮ್ಮ ಇಡೀ ಬದುಕನ್ನು ಹೀಗೆ ಪ್ರಾಣಿ, ಪಕ್ಷಿ, ಕೀಟ, ಮೃಗ, ಗಿಡ, ಮರಗಳ ನಡುವೆಯೇ ಕಳೆದಿದ್ದ ಆ ಮನೆಯವರು ಇಂತಹ ಅನುಭವಗಳೊಂದಿಗೆ ಗೆಳೆತನ ಏರ್ಪಡಿಸಿಕೊಂಡವರಷ್ಟು ಸಲೀಸಾಗಿದ್ದರು. ಅಲ್ಲದೇ, ನಾವು ಹೊರಡುವ ರೈಲಿನ ಸಮಯ ಸಮೀಪಿಸುತ್ತಿದ್ದರಿಂದ ಬೀಳ್ಕೊಂಡು ಹೊರಡಲು ಅನುವಾದೆವು.

ಅಷ್ಟರಲ್ಲಿ ಶ್ರೀದೇವಿಯಮ್ಮನವರು ಒಂದು ಪೊಟ್ಟಣದ ತುಂಬಾ ತಮ್ಮದೇ ಮರಗಳ ಸಪೋಟಾ ಹಣ್ಣುಗಳನ್ನು ಪ್ಯಾಕ್ ಮಾಡಿ ನನ್ನ ಕೈಗಿತ್ತರು. ನಾವು ಎಷ್ಟೇ ಮನವಿ ಮಾಡಿಕೊಂಡರೂ ಹಠ ಹಿಡಿದವರಂತೆ, ಗೇಟಿನವರೆಗೂ ಬಂದು ಬೀಳ್ಕೊಡುತ್ತೇನೆ ಅಂತ ಶಾಮಣ್ಣ ಹೆಜ್ಜೆ ಹಾಕಿದರು. ಅವರ ಕುಟುಂಬವೂ ಜತೆಗೆ ಬಂತು. ನಾವು ಕಾರಿನಲ್ಲಿ ಕೂತು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಏನೋ ಪ್ರಮಾದವಾದವರಂತೆ ಶ್ರೀದೇವಿಯಮ್ಮನವರು “ಅಯ್ಯೋ, ಎಂಥಾ ಕೆಲ್ಸ ಆಯ್ತು” ಎಂದು ಉದ್ಘರಿಸಿದರು.

ನಾವೆಲ್ಲ ಅವರತ್ತ ಕುತೂಹಲದಿಂದ ನೋಡುತ್ತಿರಬೇಕಾದರೆ ಶಾಮಣ್ಣನವರು, “ಏನಾಯ್ತು?” ಎಂದು ಕೇಳಿಯೇಬಿಟ್ಟರು. “ಏನಿಲ್ಲ ಗಿರೀಶ್‌ಗೆ ಕೊಡೋಕೆ ಅಂತ ಒಂದಿಷ್ಟು ರವೆ ಉಂಡೆ, ಚಕ್ಕುಲಿ ಕಟ್ಟಿಟ್ಟಿದ್ದೆ. ಗಡಿಬಿಡೀಲಿ ಮರೆತೇ ಹೋಯ್ತು” ಅಂದರು ಅಮ್ಮ.

“ಈಗೇನಾಯ್ತು, ಹೋಗಿ ತಂದುಕೊಡಬಹುದಲ್ವಾ” ಶಾಮಣ್ಣ ಪ್ರತಿಕ್ರಿಯಿಸಿದರು.

ಗೇಟಿನಿಂದ ಮನೆವರೆಗಿನ ಆ ಕತ್ತಲು ಹಾದಿಯಲ್ಲಿ ಅವರನ್ನು ಮತ್ತೆ ಕಳಿಸಿ ತೊಂದರೆಕೊಡಲು ನನಗೆ ಕೊಂಚವೂ ಇಷ್ಟವಾಗಲಿಲ್ಲ. “ಇರಲಿ ಬಿಡಿ ಸಾರ್. ಈ ಪುಸ್ತಕದ ಕುರಿತು ಮಾತಾಡಲು ಮತ್ತೆ ಬರ್ತೀನಿ. ಆಗ ತಗೊಂಡ್ ಹೋಗ್ತೀನಿ. ಈಗ ಹಣ್ಣು ಸಿಕ್ಕಿದೆಯಲ್ಲ, ಅಷ್ಟೇ ಸಾಕು” ಎಂದು ಗೋಗರೆದ ನಂತರ ಸುಮ್ಮನಾದರು. ನಾನು ಅವರ ಮನೆಗೆ ಹೋಗಿದ್ದು ಮತ್ತು ಇಡೀ ಕುಟುಂಬವನ್ನು ಭೇಟಿಯಾಗಿದ್ದೂ ಇದೇ ಮೊದಲು. ನನ್ನಂತವನಿಗೇ ಇಷ್ಟು ಪ್ರೀತಿ ತೋರುವ ಆ ಕುಟುಂಬದ ಆತ್ಮೀಯತೆ ಬೆರಗು ಹುಟ್ಟಿಸುವಂತಿತ್ತು! ಮನೆಗೆ ಯಾರೇ ಹೋಗಲಿ, ಹೋದವರಿಗೆ ಈ ಬೆಚ್ಚನೆಯ ಪ್ರೀತಿ ಕಟ್ಟಿಟ್ಟ ಬುತ್ತಿ… ಉಣ್ಣಲೇಬೇಕು, ಉಂಡು ತೇಗಲೇಬೇಕು. ಬೇರೆ ದಾರಿಯೇ ಇಲ್ಲ!

ಗಿರೀಶ್ ತಾಳಿಕಟ್ಟೆ

ಗಿರೀಶ್ ತಾಳಿಕಟ್ಟೆ
ಸಮಾಜದ ಆಗು-ಹೋಗುಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಯುವ ಬರಹಗಾರರು ಮತ್ತು ಪತ್ರಕರ್ತರು.


ಇದನ್ನೂ ಓದಿ: ಶಾಮಣ್ಣ ಮತ್ತು ಇಬ್ರಾಹಿಂ ಸಾಹೇಬರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...