ಮೈಸೂರು: ಶಕ್ತಿಧಾಮ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಶಕ್ತಿಧಾಮಕ್ಕೆ 5 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಮೈಸೂರಿನ ಶಕ್ತಿಧಾಮದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ವತಿಯಿಂದ ನಿರ್ಮಿಸಿರುವ ಇನ್ಫೋಸಿಸ್ ಬ್ಲಾಕ್ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಟ ಶಿವರಾಜ್ ಕುಮಾರ್ ಅವರೊಂದಿಗೆ ಶಕ್ತಿಧಾಮದ ಬಗ್ಗೆ ಚರ್ಚೆ ಮಾಡಿದಾಗ ಸಂಸ್ಥೆಗಳಿಗೆ ಅನುದಾನ ನೀಡಬೇಕೆಂಬ ಪ್ರೇರಣೆ ದೊರೆತಿದ್ದಾಗಿ ತಿಳಿಸಿದ ಮುಖ್ಯಮಂತ್ರಿಯವರು, ಶಕ್ತಿಧಾಮದ ಯಶಸ್ಸಿನಿಂದ ಇನ್ನಷ್ಟು ಸಂಸ್ಥೆಗಳು ಹುಟ್ಟಿ ಬರಲಿ ಎಂದು ಆಶಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ತಾಯಂದಿರ ಶೋಷಣೆಯನ್ನು ನಿರಂತರವಾಗಿ ಸಮಾಜ ಅನಾದಿ ಕಾಲದಿಂದಲೂ ಮಾಡಿಕೊಂಡು ಬಂದಿರುವುದು ಅತ್ಯಂತ ನೋವಿನ ಸಂಗತಿ. ನಾವೆಲ್ಲಾ ಅಂತಃಕರಣ ಕಳೆದುಕೊಂಡಾಗ ಬಹಳಷ್ಟು ಮಕ್ಕಳು ಅನಾಥರಾಗುತ್ತಾರೆ, ಶೋಷಣೆಗೆ ಒಳಗಾಗುತ್ತಾರೆ ಎಂದರು.
ಆಶ್ರಯದಾತ ಸಂಸ್ಥೆ: ತಾಯಿ ಕರುಳನ್ನು ತೋರಿದ ಪೊಲೀಸ್ ಅಧಿಕಾರಿ ಕೆಂಪಯ್ಯ ಸಮಾಜದಲ್ಲಿ ಶೋಷಿತ ಹೆಣ್ಣು ಮಕ್ಕಳಿಗೆ ದಾರಿ ತೋರಲು ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರಲ್ಲಿ ತಿಳಿಸಿದರು. ಶೋಷಿತ ವರ್ಗದ ಹೆಣ್ಣುಮಕ್ಕಳಿಗೆ ಆಶ್ರಯ, ಬದುಕು ನೀಡಬೇಕು ಎಂದು ಆಶ್ರಯದಾತ ಸಂಸ್ಥೆಯಾಗಿ ಶಕ್ತಿಧಾಮವನ್ನು ಡಾ. ರಾಜ್ ಕುಮಾರ್ ಅವರ ಕುಟುಂಬದವರು ಬೆಳೆಸಿದ್ದಾರೆ. ಸರ್ಕಾರ ಮತ್ತು ಸಮಾಜ ಮಾಡುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಸ್ಮರಿಸಿದರು.
ಪುನೀತ್ ರಾಜ್ ಕುಮಾರ್ ಅವರಿಗೂ ತಾಯಿ ಕರುಳಿತ್ತು. ಅವರು ಇದ್ದಲ್ಲಿಂದಲೇ ಸಂಸ್ಥೆಗೆ ಶಕ್ತಿ ತುಂಬುತ್ತಿದ್ದಾರೆ. ಸಮಾಜದಲ್ಲಿ ಶೋಷಿತ, ಪೀಡಿತ ದುರ್ಬಲ ವರ್ಗದವರಿಗೆ ಸಮಾಜ ಸರ್ಕಾರ ಕೈ ಹಿಡಿದು ಎತ್ತಿ ನಡೆಸಬೇಕು. ಮಾತುಗಳಲ್ಲಿ ಸಾಮಾಜಿಕ ನ್ಯಾಯ ಆಗುವುದಿಲ್ಲ. ಅವಕಾಶಗಳು ಸಿಕ್ಕಾಗ ಅವರ ಪರವಾಗಿ ಕೆಲಸ ಮಾಡಬೇಕು. ಸಮಾಜದ ನೋವುಗಳಿಗೆ ಚಿಕಿತ್ಸೆ ಕೊಡುವ ಕೆಲಸವನ್ನು ಎಲ್ಲರೂ ಮಾಡಬೇಕು. ಈ ಬಗ್ಗೆ ಎಲ್ಲರೂ ಚಿಂತನೆ ಮಾಡಿ, ಸಮಾಜಕ್ಕೆ ಮರಳಿ ನೀಡಿದಾಗ ಬದುಕಿನ ಬ್ಯಾಲೆನ್ಸ್ ಶೀಟ್ನಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು ಎಂದರು.
ಮಕ್ಕಳ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿ, ಕ್ರಿಯಾಶೀಲರನ್ನಾಗಿಸಿ, ಹಲವಾರು ರಂಗಗಳಲ್ಲಿ ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆತ್ಮವಿಶ್ವಾಸವನ್ನು ತುಂಬಿತ್ತಿದೆ. ಮಕ್ಕಳ ಭವಿಷ್ಯಕ್ಕೆ ಶಕ್ತಿಯಾಗಿದೆ. ಮಕ್ಕಳಲ್ಲಿ ದೇವರಿದ್ದಾರೆ. ಮಕ್ಕಳನ್ನು ಯಾರೂ ಅನಾಥರು ಎಂದು ಕರೆಯಬಾರದು. ಅವರು ದೇವರ ಮಕ್ಕಳು ಎಂದು ಅಭಿಪ್ರಾಯಪಟ್ಟರು.
ಕೆಂಪಯ್ಯ, ಡಾ.ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅವರಂಥ ತಂದೆತಾಯಿಯರನ್ನು ಪಡೆದಿರುವ ಮಕ್ಕಳೇ ಧನ್ಯರು ಎಂದರು.
ಮೈಸೂರಿನ ಕೆ.ಆರ್.ಆಸ್ಪತ್ರೆಗೆ 100 ವರ್ಷವಾಗಿರುವ ಹಿನ್ನೆಲೆಯಲ್ಲಿ 85 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು, ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ 185 ಕೋಟಿ ರೂ.ಗಳ ವೆಚ್ಚದಲ್ಲಿ ಭೂಸ್ವಾಧೀನ ಕೆಲಸವನ್ನು ಇದೇ ವರ್ಷದಲ್ಲಿ ಮಾಡಲು ಅನುದಾನ ಮೀಸಲಿರಿಸಿದೆ. ಎಲ್ಲಾ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯ ಜೊತೆಗೆ ಮಾನವ ಸಂಪನ್ಮೂಲ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ, ನಿರಂಜನ್ ಕುಮಾರ್, ನಟ ಶಿವರಾಜ್ಕುಮಾರ್, ಶಕ್ತಿ ಧಾಮದ ಅಧ್ಯಕ್ಷೆ ಗೀತಾ ಶಿವರಾಜ್ ಕುಮಾರ್, ಇನ್ಫೋಸಿಸ್ ಪ್ರತಿಷ್ಠಾನದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಷಾಜಿ ಮ್ಯಾಥ್ಯೂ ಉಪಸ್ಥಿತರಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿರಿ: ಮಧ್ಯಪ್ರದೇಶ: ಪತ್ರಕರ್ತರ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ ಪೊಲೀಸರು


