“ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲು ಸಚಿವರು ಮತ್ತು ಶಾಸಕರು 40 ಪರ್ಸೆಂಟ್ ಕಮಿಷನ್ಗೆ ಬೇಡಿಕೆಯಿಡುತ್ತಾರೆ” ಎಂದು ಆರೋಪಿಸಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಪ್ರಧಾನಿ ಕಚೇರಿಗೆ ಪತ್ರ ಬರೆದ ತಿಂಗಳುಗಳ ನಂತರ ಪ್ರಧಾನಮಂತ್ರಿ ಕಚೇರಿ, ಸಂಘವನ್ನು ಸಂಪರ್ಕಿಸಿದೆ” ಎಂದು ವರದಿಗಳಾಗಿವೆ. ಆದರೆ ಗುತ್ತಿಗೆದಾರರ ಸಂಘ ಈ ವರದಿಗಳನ್ನು ನಿರಾಕರಿಸಿದೆ.
“ಪ್ರಧಾನಿ ಕಚೇರಿಯಿಂದ ಯಾವುದೇ ಕರೆ ಬಂದಿಲ್ಲ” ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸ್ಪಷ್ಟಡಿಸಿದ್ದಾರೆ.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, “ಗೃಹ ಇಲಾಖೆಯಿಂದ ಶುಕ್ರವಾರ ಪ್ರತಿನಿಧಿಯೊಬ್ಬರು ಕರೆ ಮಾಡಿದ್ದರು. ಕೆಲವು ದಾಖಲೆಗಳು ಬೇಕು ಎಂದಿದ್ದರು. ಅವರು ಬೆಂಗಳೂರಿನಲ್ಲಿಯೇ ಇದ್ದರು. ನಾನು ಮೈಸೂರಿನಲ್ಲಿ ಇದ್ದೆ. ಹೀಗಾಗಿ ತುರ್ತಾಗಿ ಭೇಟಿಯಾಗಲು ಸಾಧ್ಯವಾಗದು. ಶನಿವಾರ ಸಿಗುತ್ತೇನೆ ಎಂದಿದ್ದೆ. ಶನಿವಾರವೂ ಭೇಟಿಯಾಗಲು ಸಾಧ್ಯವಾಗಲಿಲ್ಲ” ಎಂದು ತಿಳಿಸಿದರು.
“ಭಾನುವಾರ ಭೇಟಿಯಾಗುವುದಾಗಿ ಅಧಿಕಾರಿ ಮಾಹಿತಿ ನೀಡಿದರು. ಆದರೆ ನನಗೆ ಕೆಲವು ಸಮಸ್ಯೆಗಳು ಎದುರಾದವು. ಭಾನುವಾರವೂ ಭೇಟಿಯಾಗಲು ಸಾಧ್ಯವಾಗಲಿಲ್ಲ. ಸೋಮವಾರ ಕಚೇರಿಗೆ ಬರುತ್ತೇನೆ ಎಂದರು. ಅಷ್ಟರಲ್ಲಿ ಸುಮಾರು ಐವತ್ತು ಮಂದಿ ಪತ್ರಕರ್ತರು ಅಲ್ಲಿ ಹಾಜರಿದ್ದರು. ಆ ವೇಳೆಗೆ ಫೋನ್ ಮಾಡಿದ ಅಧಿಕಾರಿ ಇನ್ನೊಮ್ಮೆ ಭೇಟಿಯಾಗೋಣ ಎಂದು ಹೇಳಿ ಹೊರಟು ಹೋದರು. ಒಬ್ಬ ಅಧಿಕಾರಿ ಮಾತ್ರ ಬಂದಿದ್ದರು. ಗೃಹ ಸಚಿವಾಲಯಕ್ಕೆ ಪ್ರಧಾನಮಂತ್ರಿ ಕಚೇರಿಯಿಂದ ಸೂಚನೆ ನೀಡಿದ್ದಾರೋನೋ ಗೊತ್ತಿಲ್ಲ. ಆದರೆ ನೇರವಾಗಿ ಪ್ರಧಾನಿ ಕಚೇರಿಯೇ ನಮ್ಮನ್ನು ಸಂಪರ್ಕಿಸಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿರಿ: 40% ಕಮಿಷನ್ ನಿಜ; 25,000 ಕೋಟಿ ರೂ. ಪೆಂಡಿಂಗ್ ಬಿಲ್ ಇದೆ: ಗುತ್ತಿಗೆದಾರರ ಸಂಘದ ಅಧ್ಯಕ್ಷರ ಗಂಭೀರ ಆರೋಪ
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಬಳಿಕ ಗುತ್ತಿಗೆದಾರರ ಸಮಸ್ಯೆಗಳು ಹೊರಬೀಳತೊಡಗಿದ್ದವು. ಸರ್ಕಾರ ಹಾಗೂ ಸಚಿವರ ಮೇಲೆ ಗುತ್ತಿಗೆದಾರರು ಆರೋಪಗಳನ್ನು ಮಾಡುತ್ತಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು.
“ಗುತ್ತಿಗೆದಾರರಿಂದ 40% ಕಮಿಷನ್ ಪಡೆಯುತ್ತಿರುವುದು ನಿಜ. ಈ ಕುರಿತು ಈ ಹಿಂದೆಯೇ ಪತ್ರ ಬರೆಯಲಾಗಿತ್ತು. ಇಷ್ಟು ದಿನವಾದರೂ ಮುಖ್ಯಮಂತ್ರಿಯವರು ನಮ್ಮನ್ನು ಕರೆದು ಮಾತನಾಡಲಿಲ್ಲ. ಸರ್ಕಾರದ ಸ್ಪಷ್ಟ ನಿಲವು ಕೂಡ ವ್ಯಕ್ತವಾಗಿಲ್ಲ. ಈಗಲಾದರೂ ನಿಲುವು ತಾಳುತ್ತಾರೋ ಗೊತ್ತಿಲ್ಲ” ಎಂದು ಕೆಂಪಣ್ಣ ವಿಷಾದಿಸಿದ್ದರು.
“ಪೇಮೆಂಟ್ಗಾಗಿ ಗುತ್ತಿಗೆದಾರರು ಇಲಾಖೆಗಳನ್ನು ಅಲೆಯುತ್ತಿದ್ದಾರೆ. 25,000 ಕೋಟಿ ರೂ. ಪೆಂಡಿಂಗ್ ಬಿಲ್ ಇದೆ ಎಂದರೆ ಅಲೆದಾಟ ಎಷ್ಟಿರಬಹುದೆಂದು ಊಹಿಸಿ. 40% ಪರ್ಸೆಂಟ್ ಕಮಿಷನ್ ಕೊಟ್ಟು ನಾವು ಒಳ್ಳೆಯ ಕಾಮಗಾರಿಯನ್ನು ಮಾಡಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದರು.