ಬೆಂಗಳೂರಿನಲ್ಲಿ BBMP ಶಾಲೆ ನಿರ್ಮಾಣಕ್ಕೆ 2010ರಲ್ಲಿ ಬಿಡಿಎ ವತಿಯಿಂದ ಮಂಜೂರಾದ ನಾಗರಿಕ ಸೌಕರ್ಯಗಳ ನಿವೇಶನವನ್ನು ಅಕ್ರಮವಾಗಿ ಹೊಳಲ್ಕೆರೆಯ ಬಿಜೆಪಿ ಶಾಸಕ ಎಂ ಚಂದ್ರಪ್ಪನವರು ಕಬಳಿಸಿದ್ದಾರೆ ಎಂದು ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆಯ ಬಿ.ಎಂ ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಕೆಂಗೇರಿಯ ಸರ್.ಎಂ ವಿಶ್ವೇಶ್ವರಯ್ಯ ಬಡವಣೆಯ 2ನೇ ಬ್ಲಾಕ್ನಲ್ಲಿರುವ 25,225 ಚ.ಅಡಿಯ ಸಿಎ ನಿವೇಶನವನ್ನು ಬಿಬಿಎಂಪಿ ಕನ್ನಡ ಶಾಲೆ ನಿರ್ಮಾಣಕ್ಕೆ ಬಿಡಿಎ 2010ರ ಫೆಬ್ರವರಿ ತಿಂಗಳಿನಲ್ಲಿ ಹಂಚಿಕೆ ಮಾಡಿತ್ತು. ಅದೇ ವರ್ಷ ಜುಲೈನಲ್ಲಿ ಹಂಚಿಕೆ ಪತ್ರ ಸಹ ನೀಡಿತ್ತು. ಆದರೆ ಅಂದಿನ ಸಿಎಂ ಬಿ.ಎಸ್ ಯಡಿಯೂರಪ್ಪನವರ ಮೂಲಕ ಹಾಲಿ ಶಾಸಕ ಎಂ ಚಂದ್ರಪ್ಪನವರು ಅದೇ ನಿವೇಶನವನ್ನು ತನ್ನ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ.
ಚಂದ್ರಪ್ಪನವರು ಕುಮಾರಸ್ವಾಮಿ ಲೇಔಟ್ನಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ನಿವೇಶನಗಳನ್ನು ಬೇರೆಯವರಿಗೆ ಹಂಚಿಯಾಗಿತ್ತು. ಹಾಗಾಗಿ ಅವರು ಕೆಂಗೇರಿಯ ಕನ್ನಡ ಶಾಲೆಗೆ ಮಂಜೂರಾದ ನಿವೇಶನವನ್ನಾದರೂ ತಮ್ಮ ದೇವರಾಜು ಅರಸು ಶಿಕ್ಷಣ ಸಂಸ್ಥೆಗೆ ನಿಡುವಂತೆ ಚಂದ್ರಪ್ಪ ಯಡಿಯೂರಪ್ಪರವರ ಬಳಿ ಕೇಳಿದ್ದರು. ಆಗ ಯಡಿಯೂರಪ್ಪನವರು ಬಿಡಿಎ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದರು. ಆದರೆ ಬಿಡಿಎ ಅಧಿಕಾರಿಗಳು ಕನ್ನಡ ಶಾಲೆಗೆ ಮಂಜೂರಾದ ನಿವೇಶನವನ್ನು ಶಾಸಕರಿಗೆ ನೀಡಲು ಬರುವುದಿಲ್ಲ ಎಂದು ಸಭೆಯಲ್ಲಿ ತಿರಸ್ಕರಿಸಿದ್ದರು ಎಂದು ಶಿವಕುಮಾರ್ ತಿಳಿಸಿದರು.
ಆದರೆ ಯಡಿಯೂರಪ್ಪರವರ ಮೂಲಕ ಒತ್ತಡ ತಂದ ಶಾಸಕ ಚಂದ್ರಪ್ಪನವರು ಕೊನೆಗೂ 2011ರ ಫೆಬ್ರವರಿ ತಿಂಗಳಿನಲ್ಲಿ ಆ ನಿವೇಶನವನ್ನು ದೇವರಾಜು ಅರಸು ಶಿಕ್ಷಣ ಸಂಸ್ಥೆಗೆ ವರ್ಗಾಹಿಸಿಕೊಂಡಿದ್ದಾರೆ. ಎರಡು ವರ್ಷಗಳಲ್ಲಿ ಅಲ್ಲಿ ಕನ್ನಡ ಶಾಲೆ ಮತ್ತು ಸಮುದಾಯ ಭವನ ನಿರ್ಮಿಸಬೇಕೆಂಬ ಷರತ್ತಗಳನ್ನು ಉಲ್ಲಂಘಿಸಿ 11 ವರ್ಷ ಕಳೆದರೂ ಆ ನಿವೇಶನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
2010 ರಲ್ಲಿ ಆ ನಿವೇಶನವನ್ನು 10 ಕೋಟಿ ರೂಗೆ ಶಾಸಕ ಚಂದ್ರಪ್ಪನವರಿಗೆ ಮಾರಲಾಗಿದೆ. ಅವರು 2022ರಲ್ಲಿ ಕೇವಲ 1 ಕೋಟಿ ರೂ ಮಾತ್ರ ಪಾವತಿಸಿದ್ದಾರೆ. ಆದರೆ ಆ ನಿವೇಶನದ ಮಾರುಕಟ್ಟೆ ಬೆಲೆ 38 ಕೋಟಿ ರೂ ಇದೆ. ಆದರೆ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಸಿಎಂ ಬೊಮ್ಮಾಯಿ ಮತ್ತು ಬಿಡಿಎ ಅಧ್ಯಕ್ಷ ಹಾಗೂ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ರವರ ಚಕಾರ ಎತ್ತಿಲ್ಲ. ಕಾನೂನುಬಾಹಿರವಾಗಿ ಹಂಚಿಕೆಯಾಗಿರುವ ಈ ನಿವೇಶನವನ್ನು ರದ್ದುಪಡಿಸಬೇಕು ಎಂದು ಕಾನೂನ ಹೋರಾಟ ಮಾಡುವುದಾಗಿ ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಿಂದ ಮರಳಿದ ವೈದ್ಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಸೀಟು ಕೊಡಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ
ಇವರಿಗೆ ದೋಚುವುದು ಕಬಳಿಸುವುದು ಬಿಟ್ರೆ ಬೇರೇನೂ ಬರಲ್ಲ…..ಒಂದಾದ್ರು ಅಭಿವೃದ್ಧಿ ಕೆಲಸ ಕಾಣಿಸಿದ್ದಾರೆ ಇವರು ಶಾಸಕರಾಗಿ ಮಂತ್ರಿಗಳಾಗಿ ಏನ್ ಕಾಣ್ತಿದ್ದೀರಾ ಏನ್ ಅಭಿವೃದ್ಧಿಯಾಗಿದೆ ಜನರೆ ಹೇಳಬೇಕು …..ನ್ಯೂಸ್ ನೋಡಿ ಕಮೆಂಟ್ ಮಾಡುತ್ತೇವೆ ನಾವು ಅಷ್ಟೇ.