ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನರವರು ತಮ್ಮ ಪ್ರಾಯೋಜಿತ ಪಕ್ಷೇತರ ಅಭ್ಯರ್ಥಿ ಜೊತೆ ಸೇರಿ ಪಾಕ್ ಪರ ಕರಪತ್ರ ಸೃಷ್ಟಿಸಿ ಕೋಮುಗಲಭೆಗೆ ಸಂಚು ರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪನವರು ದೂರು ಸಲ್ಲಿಸಿದ್ದಾರೆ.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರಿ ನೀಡಿರುವ ಅವರು, “ಪಕ್ಷೇತರ ಅಭ್ಯರ್ಥಿಯಾದ ಆರಿಫ್ ಪಾಷಾ ಅಲಿಯಾಸ್ ಯಾರಬ್ ಎಂಬುವವರು ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೊತೆಗೂಡಿ ಪಾಕಿಸ್ತಾನದ ಹೆಸರಿನಲ್ಲಿ ನಕಲಿಯಾಗಿ ಕರಪತ್ರ ರಚಿಸಿ ನನಗೆ ಬೆಂಬಲ ಸೂಚಿಸುವುದಾಗಿ ಘೋಷಣೆ ಮಾಡುವ ಷಡ್ಯಂತ್ರ ರೂಪಿಸಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಪದೇ ಪದೇ ಶಾಂತಿ-ಸುವ್ಯವಸ್ಥೆಯನ್ನು ಕದಡಿ ಕೋಮುಗಲಭೆ ಸೃಷ್ಟಿಸಲೆತ್ನಿಸುತ್ತಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಯಾರಬ್ ಮುದ್ರಿಸಿದ ಕರಪತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಭಾವಚಿತ್ರಗಳು ಮತ್ತು ಚಿಹ್ನೆಯ ಜೊತೆಗೆ ದುರುದ್ದೇಶಪೂರ್ವಕವಾಗಿ ಪಾಕಿಸ್ತಾನದ ಧ್ವಜವನ್ನು ಸೇರಿಸಿದ್ದಾರೆ. ಈ ಕರಪತ್ರದಲ್ಲಿ ಸ್ವಯಂಘೋಷಿತವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂದು ಘೋಷಿಸಿಕೊಂಡು ತಮ್ಮ ಬೆಂಬಲವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕುಸುಮ.ಹೆಚ್ ಅವರಿಗೆ ನೀಡುತ್ತಿರುವುದಾಗಿ ಮುದ್ರಿಸಿದ್ದಾರೆ. ಆದರೆ ಯಾರಬ್ ಸಚಿವ ಮತ್ತು ಕ್ಷೇತ್ರದ ಶಾಸಕ ಮುನಿರತ್ನ, ಬಿಜೆಪಿ ಮುಖಂಡ ವೇಲು ನಾಯ್ಕ ಮುಂತಾದವರೊಂದಿಗೆ ಇರುವ ಚಿತ್ರಗಳು, ಬಿಜೆಪಿ ಮುಖಂಡರೊಬ್ಬರ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ ಪ್ಲೆಕ್ಸ್ ಡಿಸೈನ್ಗಳು ಲಭ್ಯವಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ಗೊಂದಲ ಮೂಡಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನ್ನ ಮೇಲೆ ಕೋಮು ಪ್ರಚೋದನೆ ಮೂಡಿಸುವ ಸಲುವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಮುನಿರತ್ನ ದುರುದ್ದೇಶಪೂರ್ವಕವಾಗಿ ಯಾರಬ್ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಪ್ರೇರಣೆ ನೀಡಿ ಆತನಿಂದ ಪಾಕಿಸ್ತಾನದ ಧ್ವಜ ಹೊಂದಿರುವ ಕರಪತ್ರ ಮುದ್ರಿಸಿ ಚುನಾವಣೆಯಲ್ಲಿ ಗಲಭೆ ಮೂಡಿಸುವ ಸಂಚು ರೂಪಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಅಭ್ಯರ್ಥಿಯಾದ ನನ್ನ ವಿರುದ್ಧ ಅಪಪ್ರಚಾರ ಮಾಡುವ ಹುನ್ನಾರದಿಂದ ಪ್ರಚೋದನಕಾರಿ ಕರಪತ್ರ ಮುದ್ರಿಸಿ ಹಂಚಿರುವ ಯಾರಬ್, ಆತನಿಗೆ ಪ್ರೇರಣೆ ನೀಡಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಮುನಿರತ್ನ ಹಾಗೂ ವೇಲು ನಾಯ್ಕ ಮುಂತಾದ ಬಿಜೆಪಿ ನಾಯಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮ ದೂರಿನಲ್ಲಿ ತಿಳಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕುಸುಮರವರು ಭಾನುವಾರ ರಾತ್ರಿ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ್ದು, ಯಾರಬ್ ಯಶವಂತಪುರದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚು ಇರುವ ಕಡೆ ರ್ಯಾಲಿ ನಡೆಸಲು ಉದ್ದೇಶಿಸಿದ್ದಾರೆ. ಈ ಬಗ್ಗೆ ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ; BJP ಕಳೆದ ಚುನಾವಣೆಯಲ್ಲಿ ನೀಡಿದ್ದ 90% ಭರವಸೆಗಳನ್ನು ಈಡೇರಿಸಿಲ್ಲ: ಸಿದ್ದರಾಮಯ್ಯ


