ಕರ್ನಾಟಕ ರಾಜ್ಯ ಸರ್ಕಾರ ಉದ್ದೇಶಿಸಿರುವ ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ತಮಿಳುನಾಡು ಸಚಿವ ದುರೈ ಮುರುಗನ್ ತಿಳಿಸಿದ್ದಾರೆ.
ಕೇಂದ್ರ ನೀರಾವರಿ ಸಚಿವರ ಭೇಟಿ ಬಳಿಕ ಮಾತನಾಡಿದ ಅವರು, “ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ಕಟ್ಟುವುದರಿಂದ ತಮಿಳುನಾಡಿನ ಕೃಷಿಕರ ಮೇಲೆ ದುಷ್ಪರಿಣಾಮ ಬೀರಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಕೊಡುವುದಿಲ್ಲ” ಎಂದಿದ್ದಾರೆ.
ಕರ್ನಾಟಕ ಸರ್ಕಾರ ಈ ಕುರಿತು ಮಾತನಾಡುತ್ತೇವೆ ಎನ್ನುತ್ತಿದೆ. ಅವರು ನಮ್ಮ ಜೊತೆ ಸಭೆ ನಡೆಸಿದರೂ, ಪತ್ರ ಬರೆದರೂ ಸಹ ನಾವು ಒಪ್ಪಿಗೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾವೇರಿ ನದಿ ನೀರನ್ನು ಕರ್ನಾಟಕ ಬಿಡಬೇಕು. ಇಲ್ಲದಿದ್ದರೆ ರೈತರ ಬೆಳೆಗಳಿಗೆ ಹಾನಿಯುಂಟಾಗುತ್ತದೆ. ಹಾಗಾಗಿ ಕರ್ನಾಟಕ ಸುಪ್ರೀಂ ಕೋರ್ಟ್ ತೀರ್ಪಿನಂತೆ ನೀರು ಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಏನಿದು ಮೇಕೆದಾಟು ಯೋಜನೆ?
ಕರ್ನಾಟಕ ಮತ್ತು ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ 67 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಕರ್ನಾಟಕ ಸರ್ಕಾರ ಘೋಷಿಸಿತ್ತು. ಬೆಂಗಳೂರು ಸೇರಿದಂತೆ ಸುತ್ತಲಿನ ಹಳ್ಳಿ-ನಗರಗಳಿಗೆ ಮುಂದಿನ 100 ವರ್ಷಗಳಿಗೆ ಕುಡಿಯುವ ನೀರು ಪೂರೈಸುವುದು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಈ ಯೋಜನೆಯ ಉದ್ದೇಶವೆಂದು ಸರ್ಕಾರ ಹೇಳಿದೆ. 5,000 ಎಕರೆ ಪ್ರದೇಶದಲ್ಲಿ ಸುಮಾರು 6,000 ಕೋಟಿ ರೂ ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಇದರ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಕೇಂದ್ರ ಪರಿಸರ ಇಲಾಖೆಯ ಅನುಮತಿ ದೊರೆತ ಕೂಡಲೇ ಯೋಜನೆ ಆರಂಭಿಸುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ.
1960ರಿಂದಲೂ ಕರ್ನಾಟಕ ಈ ಯೋಜನೆ ಬಗ್ಗೆ ಆಸಕ್ತಿ ವಹಿಸಿದೆ. ಆದರೆ ಅದೇ ಸಮಯಕ್ಕೆ ತಮಿಳುನಾಡು ಸಹ ಹೊಗೇನಕಲ್ ಯೋಜನೆ ಘೋಷಿಸಿತು. ಆದರೆ ಕಾವೇರಿ ನದಿ ನೀರು ಹಂಚಿಕೆ ಕುರಿತು ಎರಡು ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಈ ಯೋಜನೆಗಳು ನೆನೆಗುದಿಗೆ ಬಿದ್ದಿದ್ದವು. 1996-97ರ ನಂತರ ಕರ್ನಾಟಕ-ತಮಿಳುನಾಡು ನಡುವೆ ಐದು ಸುತ್ತಿನ ಮಾತುಕತೆಗಳು ನಡೆದು ಕೇಂದ್ರ ಸರ್ಕಾರ ಎರಡೂ ರಾಜ್ಯಗಳು ತಲಾ ಎರಡೆರಡು ಯೋಜನೆ ಕೈಗೆತ್ತಿಕೊಳ್ಳಲು ಅನುಮತಿಸಿತು. 2007ರಲ್ಲಿ ಕಾವೇರಿ ನೀರು ಹಂಚಿಕೆ ಕುರಿತು ಅಂತಿಮ ಆದೇಶದಲ್ಲಿ ಕೃಷಿ ನೀರಾವರಿಗಲ್ಲದ ಯೋಜನೆಗಳನ್ನು ತನ್ನ ಆದೇಶಕ್ಕೆ ಧಕ್ಕೆಯಾಗದಂತೆ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿತು. 2018ರ ತೀರ್ಪಿನ ಬದಲಾವಣೆಗಳಲ್ಲಿಯೂ ಅದನ್ನೇ ಹೇಳಲಾಗಿದೆ. ತದನಂತರ ಕರ್ನಾಟಕ ಈ ಯೋಜನೆಗೆ ಸಾಕಷ್ಟು ಆಸಕ್ತಿ ವಹಿಸಿದೆ. 2013ರಿಂದ ಆರಂಭವಾಗಿ 2019ರಲ್ಲಿ ಈ ಯೋಜನೆಯ ಸಾಧ್ಯತಾ ವರದಿ ತಯಾರಿಸಿ ಕಾಮಗಾರಿ ನಡೆಸಲು ಮುಂದಾಯಿತು.
ಆದರೆ, ಇದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತು. ಈ ಯೋಜನೆ ಕುರಿತು ತಮಿಳುನಾಡಿಗಿರುವ ಅನುಮಾನ ಬಗೆಹರಿಸಿಕೊಳ್ಳಲು ಸಭೆ ನಡೆಸೋಣ ಎಂದು ಕರ್ನಾಟಕದ ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ರವರಿಗೆ ಪತ್ರ ಬರೆದಿದ್ದರು. ಆದರೆ ಸಭೆಗೆ ಒಪ್ಪದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸರ್ವಪಕ್ಷ ಸಭೆ ನಡೆಸಿ ಯೋಜನೆಯನ್ನು ಕೈಬಿಡುವಂತೆ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ.
ತಮಿಳುನಾಡಿನ ವಾದವೇನು?
ಕಾವೇರಿ ನದಿಯಿಂದ ತಮಿಳುನಾಡು ರಾಜ್ಯಕ್ಕೆ ಹರಿಸಬೇಕಾದ ನೀರಿನ ಪ್ರಮಾಣದ ಕುರಿತು ಕಾವೇರಿ ಟ್ರಿಬ್ಯೂನಲ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನೀಡಿದೆ. ಈ ಪರಿಸ್ಥಿತಿಯಲ್ಲಿ ತಮಿಳುನಾಡಿನ ಕಡೆಗೆ ಹರಿಯುವ ನದಿ ನೀರಿಗೆ ತಡೆಯೊಡ್ಡಿ ಅಣೆಕಟ್ಟು ನಿರ್ಮಿಸುವುದಾಗಿ ಹೇಳುವ ಮೂಲಕ ಕರ್ನಾಟಕ ಸರ್ಕಾರ ಸುಪ್ರೀಂ ತೀರ್ಪನ್ನು ಕಡೆಗಣಿಸುತ್ತಿದೆ. ಬೆಂಗಳೂರಿನ ಕುಡಿಯುವ ನೀರಿಗೆ ಈಗಾಗಲೇ ಸಾಕಷ್ಟು ಯೋಜನೆಗಳಿವೆ. 4.75 ಟಿಎಂಸಿ ಕುಡಿಯುವ ನೀರಿಗಾಗಿ 67.17 ಟಿಎಂಸಿ ನೀರು ಸಂಗ್ರಹಿಸುವ ಅಣೆಕಟ್ಟು ಕಟ್ಟುವುದು ಸರಿಯಲ್ಲ. ಯೋಜನೆಯನ್ನು ನಿಲ್ಲಿಸುವ ಕಾನೂನುಬದ್ಧ ಹಕ್ಕು ನಮಗೂ ಇದೆ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಜಲ ಸಂಪನ್ಮೂಲ ಸಚಿವ ದುರೈ ಮುರುಗನ್ ಹೇಳಿದ್ದಾರೆ.
ಕರ್ನಾಟಕದ ಸಮರ್ಥನೆ
ಈ ಜಲಾಶಯವು ಕರ್ನಾಟಕದ ಗಡಿಯೊಳಗೆ ನಿರ್ಮಾಣವಾಗುತ್ತಿದೆ. ಸಾಮಾನ್ಯ ವರ್ಷದಲ್ಲಿ ಕರ್ನಾಟಕವು 192 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂ ಹೇಳಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅದಕ್ಕಿಂತಲೂ ಹೆಚ್ಚಿನ ನೀರನ್ನು ಹರಿಸಲಾಗುತ್ತಿದೆ. ಆ ಕಾವೇರಿ ನೀರು ಬಳಕೆಯಾಗದೆ ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದೆ. ಹಾಗಾಗಿ ಹೆಚ್ಚುವರಿ ಕಾವೇರಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡುವ ಯೋಜನೆ ಇದು. ಜಲಾಶಯ ನಿರ್ಮಾಣವಾದ ನಂತರವು ಸುಪ್ರೀಂ ನಿರ್ದೇಶನದಂತೆ ತಮಿಳುನಾಡು ಪಾಲಿನ ನೀರನ್ನು ಯಾವುದೇ ತಡೆಯಿಲ್ಲದೆ ಕೊಡಲಾಗುತ್ತದೆ.
ಆದ್ದರಿಂದ ಈ ಯೋಜನೆಯನ್ನು ಜಾರಿಗೊಳಿಸುವ ಎಲ್ಲಾ ಹಕ್ಕು ಕರ್ನಾಟಕಕ್ಕೆ ಇದೆ ಎಂದು ಸರ್ಕಾರ ಹೇಳಿದೆ.
ಕಾಂಗ್ರೆಸ್ನಿಂದ ಪಾದಯಾತ್ರೆ
ಮೇಕೆದಾಟು ಯೋಜನೆಯನ್ನು ರಾಜ್ಯ ಬಿಜೆಪಿ ಸರ್ಕಾರ ವಿಳಂಬ ಮಾಡುತ್ತಿದೆ. ಆದರೆ ಕೂಡಲೇ ಆರಂಭಿಸಬೇಕು ಮತ್ತು ಗುದ್ದಲಿಪೂಜೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಒತ್ತಾಯಿಸಿ 2022ರಲ್ಲಿ 100 ಕಿ.ಮೀ ಪಾದಯಾತ್ರೆ ನಡೆಸಿತ್ತು. ಕೂಡಲೇ ಕೇಂದ್ರ ಸರ್ಕಾರದಿಂದ ಪರಿಸರ ಸಂಬಂಧಿ ಅನುಮತಿ ಪಡೆದು ಯೋಜನೆ ಆರಂಭಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಆಗಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದರು.
ಪರಿಸರವಾದಿಗಳ ತೀವ್ರ ವಿರೋಧ
“ಈ ಯೋಜನೆಯು ಪರಿಸರದ ದೃಷ್ಟಿಯಲ್ಲಿ ಮಾರಕವಾಗಿ ಪರಿಣಮಿಸಲಿದೆ; ಅಣೆಕಟ್ಟು ಕಟ್ಟಲು ಮುಂದಾದರೆ ಈಗಾಗಲೇ ಬರಿದಾಗುತ್ತಿರುವ ಕಾಡು ಇನ್ನಷ್ಟು ನಶಿಸಲಿದೆ. ಇದು ದಟ್ಟ ಕಾಡಿಗೆ ಗೋಡೆ ಕಟ್ಟಿದಂತಾಗಿ ಅಲ್ಲಿನ ಜೀವ ವೈವಿದ್ಯೆತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಪರೂಪದ ಪ್ರಾಣಿ – ಪಕ್ಷಿಗಳು, ಜಲಚರಗಳು ನಾಶವಾಗುತ್ತವೆ. ಇದರಿಂದ ಆನೆ, ಹುಲಿ, ಚಿರತೆ ಸೇರಿದಂತೆ ಹಲವು ಪ್ರಾಣಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಸಾಧ್ಯವಾಗುವುದಿಲ್ಲ. ಆಗ ಪ್ರಾಣಿಗಳು ಮತ್ತು ಮಾನವರ ನಡುವಿನ ಸಂಘರ್ಷ ಹೆಚ್ಚಾಗುತ್ತದೆ. ಇದುವರೆಗೂ ಅಣೆಕಟ್ಟು ಕಟ್ಟಿದ ಕಡೆಗಳಲ್ಲೆಲ್ಲಾ ಈ ಸಂಘರ್ಷ ಹೆಚ್ಚಾಗಿರುವುದನ್ನು ನಾವು ನೋಡಬಹುದು” ಎನ್ನುತ್ತಾರೆ ಪರಿಸರವಾದಿಗಳಾದ ಲಿಯೋ ಸಾಲ್ಡಾನರವರು.
“ಕುಡಿಯುವ ನೀರು ಅಗತ್ಯವಿದೆ. ಆದರೆ ಅದೇ ಕಾವೇರಿ ನೀರನ್ನೆ ಕುಡಿಯಬೇಕು ಎಂದೇನಿಲ್ಲ. ಏಕೆಂದರೆ ಅಲ್ಲಿ ಡ್ಯಾಮ್ ಕಟ್ಟಿದರೆ ನಾವು ಬೆಂಗಳೂರು, ರಾಮನಗರ, ಮಂಡ್ಯ ಮೈಸೂರಿನಿಂದ ಕೊಳಚೆ ನೀರನ್ನು ಅಲ್ಲಿಗೆ ಹರಿಸುತ್ತೇವೆ. ಡ್ಯಾಮ್ನಲ್ಲಿ ಸಂಗ್ರಹವಾದ ಕೊಳಚೆ ನೀರನ್ನು ಮತ್ತೆ ಶುದ್ಧೀಕರಿಸಿ ಬೆಂಗಳೂರಿಗೆ ತಂದು ಕುಡಿಯಬೇಕಾಗುತ್ತದೆ. ಇದರಿಂದ ಪ್ರಯೋಜನವೇನು? ಅದರ ಬದಲು ಮಳೆ ನೀರು ಕೊಯ್ಲು ಮಾಡಿದರೆ, ಕೆರೆಗಳಲ್ಲಿ ಊಳೆತ್ತಿಸಿ ಪುನರುಜ್ಜೀವನ ಮಾಡಿದರೆ, ಸಾಕಷ್ಟು ಕಾಡು ಬೆಳೆಸಿದರೆ ಅನುಕೂಲ ಜಾಸ್ತಿ” ಎಂದು ಅವರು ಹೇಳುತ್ತಾರೆ.
“ಇನ್ನೊಂದು ಮುಖ್ಯ ಅಂಶವೆಂದರೆ ಬೆಂಗಳೂರು ನಗರದ ಬೆಳವಣಿಗೆಗೆ ಮಿತಿ ಏಕಿಲ್ಲ? ರಾಜ್ಯದ ಬೇರೆ ನಗರಗಳನ್ನು ಬೆಳೆಸಬಹುದು ಅಲ್ಲವೇ? ಏರ್ಪೋರ್ಟ್ ಅಕ್ಕಪಕ್ಕದಲ್ಲಿ ದೊಡ್ಡ ಶ್ರೀಮಂತರು ರೆಸಾರ್ಟ್, ಗಾಲ್ಫ್ ಕೋರ್ಟ್ಗಳನ್ನು ಕಟ್ಟುತ್ತಿದ್ದಾರೆ. ಅವರಿಗೆ ನೀರು ಕೊಡಲು ಈ ಯೋಜನೆಗಳನ್ನು ಮಾಡುತ್ತಿದ್ದಾರೆ ಹೊರತು ಬೆಂಗಳೂರಿನ ಸಾಮಾನ್ಯ ಜನರಿಗಲ್ಲ. ಕಾವೇರಿಯಿಂದ ನಾಲ್ಕು ಪೈಪ್ಲೈನ್ಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರು ತರುತ್ತಿದ್ದರೂ ಸಹ ಬೆಂಗಳೂರಿನ ಶೇ.60 ರಷ್ಟು ಜನಕ್ಕೆ ಸಮರ್ಪಕ ಕುಡಿಯುವ ನೀರು ಸಿಕ್ಕಿಲ್ಲ. ಇಂದಿಗೂ ಅಂತರ್ಜಲವನ್ನೆ ಬಳಸುತ್ತಿದ್ದಾರೆ” ಎನ್ನುತ್ತಾರೆ ಲಿಯೋ ಸಾಲ್ಡಾನ.
ಈ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಿದ ಪರಿಸರವಾದಿ ನಾಗೇಶ್ ಹೆಗಡೆ ಅವರು “ನನ್ನನ್ನು ಕೇಳಿದರೆ ಕಾವೇರಿಯಿಂದ ಬೆಂಗಳೂರಿಗೆ ನೀರು ಕೊಡಲೇಬೇಡಿ ಎನ್ನುತ್ತೇನೆ. ನೀರು ಕೊಟ್ಟಷ್ಟು ಬೆಂಗಳೂರಿಗರು ಉಡಾಳರಾಗುತ್ತಾರೆ ಅಷ್ಟೇ. ಇಷ್ಟೊಂದು ಮಳೆ ಬಿದ್ದರೂ ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸಾಧ್ಯವಿಲ್ಲವೇ? ಬೆಂಗಳೂರಿನಲ್ಲಿ ಎಷ್ಟೊಂದು ಕೆರೆಗಳಿವೆ, ಅವುಗಳ ಊಳೆತ್ತಿಸಿ ಹೆಚ್ಚು ಹೆಚ್ಚು ನೀರು ಸಂಗ್ರಹಿಸಲು ಸಾಧ್ಯವಿಲ್ಲವೇ? ಅದನ್ನು ಏಕೆ ಮಾಡುತ್ತಿಲ್ಲ ಕರ್ನಾಟಕದ ಎಲ್ಲಾ ನದಿಗಳು ನೀರು ಬೆಂಗಳೂರಿಗರಿಗೆ ಬೇಕೆ” ಎಂದು ಕಟುವಾಗಿ ಪ್ರಶ್ನಿಸುತ್ತಾರೆ.
“ನಾನು ಎಲ್ಲಾ ದೊಡ್ಡ ಅಣೆಕಟ್ಟು ಯೋಜನೆಗಳನ್ನು ವಿರೋಧಿಸುತ್ತೇನೆ. ಎಷ್ಟೋ ದೇಶಗಳಲ್ಲಿ ಅಣೆಕಟ್ಟುಗಳಿಂದಾದ ಅಪಾಯಗಳನ್ನು ನಿವಾರಿಸಿಕೊಳ್ಳಲಾಗದೇ ಇರುವ ಅಣೆಕಟ್ಟುಗಳನ್ನು ಸಹ ಒಡೆದುಹಾಕುತ್ತಿದ್ದಾರೆ. ಈಗ ಕಲುಷಿತ ನೀರನ್ನು ಶುದ್ಧೀಕರಿಸುವ ಹಲವಾರು ತಂತ್ರಜ್ಞಾನಗಳು ಬಂದಿವೆ. ಬಿಲ್ಗೇಟ್ಸ್ ಆಸಕ್ತಿವಹಿಸಿ ಒಂದು ಯಂತ್ರ ಸಿದ್ಧಪಡಿಸಲು ನೆರವಾಗಿದ್ದಾರೆ. ನೇರವಾಗಿ ಚರಂಡಿ ನೀರು ಶುದ್ದ ಕುಡಿಯುವ ನೀರಾಗಿ ಪರಿವರ್ತನೆಯಾಗುತ್ತಿದೆ. ಬೆಂಗಳೂರಿನಲ್ಲಿ ಇಷ್ಟೊಂದು ತಂತ್ರಜ್ಞಾನ ತಿಳಿದವರು ಅದನ್ನು ಮಾಡಲು ಸಾಧ್ಯವಿಲ್ಲವೇ? ಮೇಕೆದಾಟು ಯೋಜನೆಗಾಗಿ ಸುರಿಯುವ ಅರ್ಧ ಹಣದಲ್ಲಿ ಈ ತಂತ್ರಜ್ಞಾನವನ್ನು ಸಿದ್ಧಪಡಿಸಿ, ಎಲ್ಲ ಬೆಂಗಳೂರಿಗೆ ಕುಡಿಯುವ ನೀರು ಒದಗಿಸಬಹುದು” ಎನ್ನುತ್ತಾರೆ ನಾಗೇಶ್ ಹೆಗಡೆ..
ಕಾವೇರಿಯ ಉಳಿವಿಗೆ ‘ಮೇಕೆದಾಟು ಅಣೆಕಟ್ಟು’ ಪ್ರಸ್ತಾಪ ಕೈಬಿಡಬೇಕು: ಮೇಧಾ ಪಾಟ್ಕರ್
ಮೇಕೆದಾಟು ಪರಿಸರವನ್ನು ಹಾಗೆ ಉಳಿಸಿಕೊಳ್ಳಬೇಕು, ಮೇಕೆದಾಟು ಅಣೆಕಟ್ಟು ನಿರ್ಮಿಸಿದರೆ 1,200 ಹೆಕ್ಟೇರ್ ಅರಣ್ಯ ಭೂಮಿಯೊಂದಿಗೆ ಆ ಭಾಗದಲ್ಲಿ ವಾಸಿಸುವ ಪ್ರಾಣಿ ಸಂಕುಲವೂ ನಾಶವಾಗಲಿದೆ. ಕಾಡು ನಾಶವಾದರೆ ಸಾವಿರಾರು ಜನರ ಬದುಕಿಗೆ ಗಂಡಾಂತರ ಒದಗಲಿದೆ. ಪರಿಸರದ ಮೇಲೆಯೂ ಇವೆಲ್ಲವೂ ಪರಿಣಾಮ ಬೀರಲಿದೆ. ಅಣೆಕಟ್ಟು ಕಟ್ಟುವ ಬದಲು ಕೆರೆ, ಕುಂಟೆಗಳನ್ನು ಸಂರಕ್ಷಿಸಿ, ಜೀವಜಲ ಉಳಿಸಿಕೊಳ್ಳಬೇಕು” ಎಂದು ಮೇಧಾ ಪಾಟ್ಕರ್ ಹೇಳಿದ್ದಾರೆ.
“ಅಣೆಕಟ್ಟು ಕಟ್ಟುವುದರಿಂದ ಕೆಲ ರಾಜಕಾರಿಣಿಗಳಿಗೆ, ಗುತ್ತಿಗೆದಾರರಿಗೆ ಅನುಕೂಲವಾಗುತ್ತದೆ. ಜನರಿಗೆ ಇದರಿಂದ ಯಾವ ಅನುಕೂಲವೂ ಇಲ್ಲ. ಉತ್ತಮ ಪರಿಸರ ಉಳಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ” ಎಂದು ಮೇಧಾ ಪಾಟ್ಕರ್ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಕಾವೇರಿಯ ಉಳಿವಿಗೆ ‘ಮೇಕೆದಾಟು ಅಣೆಕಟ್ಟು’ ಪ್ರಸ್ತಾಪ ಕೈಬಿಡಬೇಕು: ಮೇಧಾ ಪಾಟ್ಕರ್


