ತೆಲಂಗಾಣ ವಿಧಾನಸಭೆಯ 119 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 8 ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಸಂಜೆ 6ರವರೆಗೆ ಮುಂದುವರಿಯಲಿದೆ.
ತೆಲುಗು ರಾಜ್ಯದ 3.17 ಕೋಟಿ ಮತದಾರರು ರಾಷ್ಟ್ರೀಯ, ಪ್ರಾದೇಶಿಕ ಸೇರಿ 109 ಪಕ್ಷಗಳ 2,290 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆಯಲಿದ್ದಾರೆ. ಈ ಚುನಾವಣೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಯ ಕೆ ಚಂದ್ರಶೇಖರ ರಾವ್ ಅವರಂತಹ ಪ್ರಮುಖ ನಾಯಕರಿಗೆ ಪ್ರತಿಷ್ಠೆಯ ವಿಷಯವಾಗಿದೆ.
ಅಭ್ಯರ್ಥಿಗಳ ಪೈಕಿ 221 ಮಹಿಳೆಯರು, ಒಬ್ಬರು ತೃತೀಯ ಲಿಂಗಿ ಒಳಗೊಂಡಿದ್ದಾರೆ. 103 ಮಂದಿ ಶಾಸಕರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ರಾಜ್ಯದ್ಯಾಂತ 35, 665 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 12 ಸಾವಿರ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 2.8 ಲಕ್ಷ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. ಪೊಲೀಸರು ಬಿಗಿ ಬಂದೋ ಬಸ್ತ್ ಕೈಗೊಂಡಿದ್ದಾರೆ.
ತೆಲಂಗಾಣದಲ್ಲಿ ಪ್ರಪ್ರಥಮ ಬಾರಿಗೆ 80 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು ವಿಶೇಷ ಚೇತನರಿಗೆ ಮನೆಯಿಂದಲೇ ಹಕ್ಕು ಚಲಾಯಿಸುವ ಅವಕಾಶ ಕಲ್ಪಿಸಲಾಗಿದೆ. 27, 600 ಜನರು ಇದಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿಕಾಸ್ ರಾಜ್ ತಿಳಿಸಿದ್ದಾರೆ.
ಡಿಸೆಂಬರ್ 3ರಂದು ದೇಶದ ಇತರ ನಾಲ್ಕು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಮಿಜೋರಾಂ ಜೊತೆ ತೆಲಂಗಾಣದ ಮತ ಎಣಿಕೆಯೂ ನಡೆಯಲಿದೆ.
ಪಂಚರಾಜ್ಯ ಚುನಾವಣೆಯ ಕೊನೆಯ ಮತದಾನ :
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ಮಿಜೋರಾಂ ಮತ್ತು ತೆಲಂಗಾಣ ಸೇರಿ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ತೆಲಂಗಾಣ ಹೊರತು ಇತರ ನಾಲ್ಕು ರಾಜ್ಯಗಳಲ್ಲಿ ನವೆಂಬರ್ 7 ಮತ್ತು 26ರಂದು ಎರಡು ಹಂತಗಳಲ್ಲಿ ಈಗಾಗಲೇ ಮತದಾನ ನಡೆದಿದೆ. ಇಂದು ಕೊನೆಯದಾಗಿ ತೆಲಂಗಾಣದ ಮತದಾನ ನಡೆಯುತ್ತಿದೆ.
ಆಡಳಿತಾರೂಢ ಬಿಆರ್ಎಸ್ ಪಕ್ಷ ಎಲ್ಲಾ 119 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನೆ ಕ್ರಮವಾಗಿ 111 ಮತ್ತು 8 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಕಾಂಗ್ರೆಸ್ ತನ್ನ ಮಿತ್ರ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಗೆ ಒಂದು ಸ್ಥಾನವನ್ನು ಬಿಟ್ಟು ಕೊಟ್ಟಿದೆ. ಉಳಿದ 118 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಗ್ಯಾರಂಟಿ ಕೊಟ್ಟ ಕಾಂಗ್ರೆಸ್ :
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಘೋಷಿಸಿದ್ದ ಅನ್ನಭಾಗ್ಯ, ಗೃಹಲಕ್ಷಿ, ಗೃಹಜ್ಯೋತಿ, ಯುವನಿಧಿ, ಶಕ್ತಿ ಈ ಐದು ಗ್ಯಾರಂಟಿಗಳು ಪಕ್ಷಕ್ಕೆ ಅಭೂತಪೂರ್ವ ಗೆಲುವನ್ನು ತಂದು ಕೊಟ್ಟಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಕಾರಣವಾಗಿತ್ತು.
ಇದೇ ಗ್ಯಾರಂಟಿ ದಾಳವನ್ನು ತೆಲುಗು ರಾಜ್ಯದಲ್ಲೂ ಕಾಂಗ್ರೆಸ್ ಉರುಳಿಸಿದೆ. ತೆಲಂಗಾಣದಲ್ಲೂ, ಪ್ರತಿ ತಿಂಗಳು ಅತ್ತೆಗೆ 4,000 ರೂ., ಸೊಸೆಗೆ 2,500 ರೂ. ಪ್ರತಿ ಹೆಣ್ಣುಮಗುವಿನ ಖಾತೆಗೆ ಪ್ರತಿ ತಿಂಗಳು 2,500 ರೂ. (ಮಹಾಲಕ್ಷ್ಮಿ ಯೋಜನೆ), ಪಿಂಚಣಿ ಮೊತ್ತ 2,000 ರೂ.ನಿಂದ 4,000 ರೂ.ಗೆ ಹೆಚ್ಚಳ, 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್, ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು ಬಡವರಿಗೆ 200 ಯೂನಿಟ್ವರೆಗೂ ಉಚಿತ ವಿದ್ಯುತ್, ಹೀಗೆ 6 ಗ್ಯಾರಂಟಿಗಳನ್ನು ಘೋಷಿಸಿದೆ.
ಬಿಆರ್ಎಸ್ ಭರವಸೆ ಏನು?
ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತ ಏರಿಕೆ, ರೈತರಿಗೆ ‘ರೈತಬಂಧು’ ಹೂಡಿಕೆ ಯೋಜನೆಯಡಿ ಆರ್ಥಿಕ ನೆರವು, 400 ರೂ.ಗೆ ಎಲ್ಪಿಜಿ ಸಿಲಿಂಡರ್ ಪೂರೈಕೆ, ಬಿಪಿಎಲ್ ವರ್ಗದ 93 ಲಕ್ಷ ಕುಟುಂಬಗಳಿಗೆ 5 ಲಕ್ಷ ರೂ.ಗಳ ಜೀವವಿಮೆ. ವಿಕಲಾಂಗರಿಗೆ ನೀಡುತ್ತಿರುವ ಪಿಂಚಣಿ ಮೊತ್ತ 4,016 ರೂ. ನಿಂದ ಮುಂದಿನ ಐದು ವರ್ಷಗಳಲ್ಲಿ 6,016 ರೂ.ಗೆ ಏರಿಕೆ. ಹೀಗೆ ಹಲವು ಭರವಸೆಗಳನ್ನು ಆಢಳಿತರೂಡ ಬಿಆರ್ಎಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ.
ಬಿಜೆಪಿ ವಾಗ್ದಾನ ಏನು?
ಬಿಜೆಪಿ ಪಕ್ಷ ಸಮಾನ ನಾಗರಿಕ ಸಂಹಿತೆ ಜಾರಿ, ಉಜ್ವಲ ಯೋಜನೆಯಡಿ ಉಚಿತ ಎಲ್ಪಿಜಿ ಸಿಲಿಂಡರ್ ವಿತರಣೆ, ಕೃಷ್ಣ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಬರಬೇಕಿರುವ ನ್ಯಾಯಯುತ ಪಾಲು ದೊರಕಿಸುವುದು, ಧರ್ಮಾಧಾರಿತ ಮೀಸಲು ರದ್ದು, ತೈಲದ ಮೇಲಿನ ವ್ಯಾಟ್ ತೆರಿಗೆ ಕಡಿತ ಹೀಗೆ ಹಲವು ಭರವಸೆಗಳನ್ನು ಕೊಟ್ಟಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದೇನು?
ಲೋಕ್ಪೋಲ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಎಂದು ತಿಳಿಸಿದೆ. ಕಾಂಗ್ರೆಸ್ 69-72 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಆಢಳಿತರೂಡ ಬಿಆರ್ಎಸ್ 36-39, ಎಐಎಂಐಎಂ 5-6, ಬಿಜೆಪಿ 2-3, ಇತರರು 0-1 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಬಹುದು ಎಂದಿದೆ.
ಸೌತ್ ಫಸ್ಟ್ ಮಾಡಿರುವ ಸಮೀಕ್ಷೆಯು ಕೂಡ ಕಾಂಗ್ರೆಸ್ ಗೆಲುವು ದಾಖಲಿಸಲಿದೆ ಎಂದಿದೆ. ಕಾಂಗ್ರೆಸ್ 57-62, ಬಿಆರ್ಎಸ್ 41-46, ಎಐಎಂಐಎಂ 6-7, ಬಿಜೆಪಿ, 3-6 ಮತ್ತು ಇತರರು 1-2 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.
ಇದನ್ನೂ ಓದಿ : ಸಿಎಎ ಜಾರಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಅಮಿತ್ ಶಾ


