ಜಮ್ಮುವಿನಲ್ಲಿ ಸೇನಾ ವಶದಲ್ಲಿದ್ದ ಮೂವರು ನಾಗರಿಕರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ಬಳಿಕ ಸೇನಾ ಸಿಬ್ಬಂದಿಗಳು ನಾಗರಿಕರಿಗೆ ಚಿತ್ರಹಿಂಸೆ ನೀಡುವ ವಿಡಿಯೋ ವೈರಲ್ ಆಗಿತ್ತು. ಇದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದ್ದವು. ಸೇನಾ ಸಿಬ್ಬಂದಿಗಳೇ ಮೂವರನ್ನು ಹತ್ಯೆ ಮಾಡಿದ್ದಾರೆಂದು ಸಂತ್ರಸ್ತರ ಕುಟುಂಬಸ್ಥರು ಆರೋಪಿಸಿದ್ದರು. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರ ಹೇಳಿಕೆಯು ಸೇನಾ ಸಿಬ್ಬಂದಿಗಳ ಚಿತ್ರಹಿಂಸೆಯನ್ನು ದೃಢಪಡಿಸಿತ್ತು. ಇದರ ಬೆನ್ನಲ್ಲೇ ಎಚ್ಚರಗೊಂಡ ಭಾರತೀಯ ಸೇನೆ ಮತ್ತು ಕೇಂದ್ರ ಸರಕಾರ, ಕೇಂದ್ರ ಗೃಹ ಇಲಾಖೆ ಹಾನಿ ನಿಯಂತ್ರಿಸಲು ತ್ವರಿತವಾಗಿ ಯತ್ನಿಸಿದೆ. ಗುಜ್ಜರ್-ಬಕರ್ವಾಲ್ ಮತ್ತು ಸೇನೆ ನಡುವಿನ ಬಾಂದ್ಯವನ್ನು ಪುನಃಸ್ಥಾಪಿಸಲು ಮುಂದಾಗಿದೆ.
ನಾಗರಿಕರನ್ನು ಹಿಂಸಿಸುತ್ತಿರುವ ಶಂಕಿತ ವೀಡಿಯೊ ಕಾಣಿಸಿಕೊಂಡ ನಾಲ್ಕು ದಿನಗಳ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಕಸ್ಟಡಿಯಲ್ಲಿ ಮೃತಪಟ್ಟ ಮೂವರು ನಾಗರಿಕರು ಮತ್ತು ಗಾಯಗೊಂಡ ಐವರ ಕುಟುಂಬಗಳನ್ನು ಭೇಟಿ ಮಾಡಿದರು. ಅವರು ಅವರಿಗೆ ನ್ಯಾಯವನ್ನು ಭರವಸೆ ನೀಡಿದ್ದಲ್ಲದೆ, ನಾಗರಿಕರ ಜೊತೆ ಗೌರವದಿಂದ ವರ್ತಿಸಲು ಸೈನ್ಯಕ್ಕೆ ಹೇಳಿದ್ದಾರೆ.
1990ರ ದಶಕದ ಆರಂಭದಿಂದಲೂ ಕಸ್ಟಡಿ ಸಾವಿನ ಇತಿಹಾಸ ಹೊಂದಿರುವ ಈ ಪ್ರದೇಶದಲ್ಲಿ ರಕ್ಷಣಾ ಸಚಿವರು ನಾಗರಿಕರ ಕುಟುಂಬಗಳನ್ನು ಭೇಟಿ ಮಾಡುವುದು ಮತ್ತು ತಪ್ಪುಗಳನ್ನು ಒಪ್ಪಿಕೊಳ್ಳುವುದು ಅಪರೂಪ. ವಿಡಿಯೋ ವೈರಲ್ ಆದ ದಿನ ರಾಜನಾಥ್ ಸಿಂಗ್ ಸೇನೆ ಮತ್ತು ಸಚಿವಾಲಯದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಪರಿಸ್ಥಿತಿಯನ್ನು ಅವಲೋಕಿಸುವುದಲ್ಲದೆ, ಜನರಲ್ಲಿ ನಂಬಿಕೆಯನ್ನು ಪುನಃಸ್ಥಾಪಿಸಲು ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆಗಳನ್ನು ಕೂಡ ನೀಡಿದ್ದಾರೆ ಎಂದು ಸಚಿವರ ಆಪ್ತರು ಹೇಳಿದ್ದಾರೆ.
ತಕ್ಷಣ ಎಫ್ಐಆರ್ ದಾಖಲಿಸಿ ನ್ಯಾಯಾಲಯದ ವಿಚಾರಣೆಯನ್ನು ಘೋಷಿಸಲಾಗಿದೆ ಮತ್ತು ಅಧಿಕಾರಿಗಳನ್ನು ಸ್ಥಳಾಂತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಕೂಡ ಸೋಮವಾರ ಜಮ್ಮುವಿಗೆ ಭೇಟಿ ನೀಡಿ ಅವಲೋಕಿಸಿದ್ದಾರೆ. ಸೆಕ್ಟರ್ 6ರ ರಾಷ್ಟ್ರೀಯ ರೈಫಲ್ಸ್ ನ ಕಮಾಂಡರ್ ಮತ್ತು 16 ರಾಷ್ಟ್ರೀಯ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಬ್ರಿಗೇಡಿಯರ್ ಎಂ ಪಿ ಸಿಂಗ್ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಮೃತರ ಕುಟುಂಬಗಳನ್ನು ಭೇಟಿ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಭರವಸೆ ನೀಡಿದ್ದರು. ಸೇನೆಯು ತಮ್ಮೊಂದಿಗೆ ಇದೆ ಎಂದು ಅವರು ಕುಟುಂಬಗಳಿಗೆ ಭರವಸೆ ನೀಡಿದ್ದರು.
ನಾಲ್ವರು ಯೋಧರು ಹುತಾತ್ಮರಾದ ನಂತರ ಗೃಹ ಸಚಿವಾಲಯವೂ ಕ್ರಮಕ್ಕೆ ಮುಂದಾಗಿತ್ತು. ಆದರೆ ನಾಗರಿಕರಿಗೆ ಚಿತ್ರಹಿಂಸೆಯ ವೀಡಿಯೋ ಹೊರಬಂದ ನಂತರ ತ್ವರಿತ ಮತ್ತು ಗೋಚರ ಕ್ರಮದ ಅಗತ್ಯವಿದೆ ಎಂದು ಕೇಂದ್ರವು ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಹತ್ಯೆಗೀಡಾದ ಮೂವರ ಮುಂದಿನ ಸಂಬಂಧಿಕರಿಗೆ ತಕ್ಷಣವೇ ಸುಮಾರು 30 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಯಿತು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೊಲೆಗಾಗಿ ಎಫ್ಐಆರ್ ದಾಖಲಿಸಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಕೂಡ ನೀಡಲಾಗುತ್ತಿದೆ.
ಘಟನೆಯ ನಂತರ ಗೃಹ ಸಚಿವ ಅಮಿತ್ ಶಾ ಕೂಡ ಜಮ್ಮು-ಕಾಶ್ಮೀರದ ಆಡಳಿತದ ಜೊತೆ ತಕ್ಷಣ ಮಾತುಕತೆ ನಡೆಸಿದ್ದರು. ಕಳೆದ ವಾರ ಸೇನಾ ಸಿಬ್ಬಂದಿಗಳು ಚಿತ್ರಹಿಂಸೆ ನೀಡಿ ನಾಗರಿಕರನ್ನು ಹತ್ಯೆ ಮಾಡುವ ವೀಡಿಯೋ ವೈರಲ್ ಆದ ನಂತರ ಸರ್ಕಾರವು ಎಷ್ಟು ಚುರುಕಾಗಿ ವರ್ತಿಸಿದೆ ಎಂಬುದನ್ನು ಈ ಬೆಳವಣಿಗೆಗಳು ಒತ್ತಿಹೇಳುತ್ತವೆ.
ಗುಜ್ಜರ್-ಬಕರ್ವಾಲ್ ಸಮುದಾಯ ಮತ್ತು ಸೇನೆ
ಗುಜ್ಜರ್-ಬಕರ್ವಾಲ್ ಸಮುದಾಯ ಕಾಶ್ಮೀರದ ಬುಡಕಟ್ಟು ಸಮುದಾಯವಾಗಿದೆ. ಇವರು ಸಾಂಪ್ರದಾಯಿಕವಾಗಿ ಭಾರತೀಯ ಸಶಸ್ತ್ರ ಪಡೆಗಳ ಜೊತೆ ನಿಕಟವಾದ ಸಂಬಂಧವನ್ನು ಹೊಂದಿರುವವರು ಎಂದು ಪರಿಗಣಿಸಲ್ಪಟ್ಟಿರುವ ಸಮುದಾಯಕ್ಕೆ ಸೇರಿದವರು. ಈ ಹಿಂದೆ ಈ ಪ್ರದೇಶದಲ್ಲಿ ಉಗ್ರಗಾಮಿಗಳನ್ನು ಮಟ್ಟ ಹಾಕಲು ಈ ಸಮುದಾಯ ಭದ್ರತಾ ಪಡೆಗಳಿಗೆ ಸಹಾಯ ಮಾಡಿದ್ದರು. ಗುಜ್ಜರ್-ಬಕರ್ವಾಲ್ ಸಮುದಾಯದ ಜೊತೆಗಿನ ನಂಬಿಕೆಯನ್ನು ಕಳೆದುಕೊಳ್ಳುವುದು ಈ ಪ್ರದೇಶದಲ್ಲಿ ಭದ್ರತಾ ಕಾರ್ಯಾಚರಣೆಗಳಿಗೆ ಹಾನಿಕಾರಕವಾಗಿದೆ ಎಂದು ಸೇನೆಗೆ ಕೂಡ ತಿಳಿದ ಸಂಗತಿಯೇ ಆಗಿದೆ.
ಎರಡು ದಶಕಗಳಿಂದ ಗುಜ್ಜರ್-ಗುಜ್ಜರ್-ಬಕರ್ವಾಲ್ ಪಿರ್ ಪಂಜಾಲ್ ಪ್ರದೇಶದ ಅರಣ್ಯಗಳಲ್ಲಿ ಭದ್ರತಾ ಏಜೆನ್ಸಿಗಳ ಕಣ್ಣು ಮತ್ತು ಕಿವಿಗಳಾಗಿದ್ದಾರೆ. ಪಿರ್ ಪಂಜಾಲ್ನ ಹಿಲ್ಕಾಕಾ ಪರ್ವತಗಳಲ್ಲಿ 2003ರಲ್ಲಿ ಸೇನೆಯು ಆಪರೇಷನ್ ಸರ್ಪ್ ವಿನಾಶ್ ಪ್ರಾರಂಭಿಸಿದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನ್ಯದ ಜೊತೆಗೆ ಈ ಸಮುದಾಯವು ನಿಂತುಕೊಂಡಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದದ ದಿನಗಳಲ್ಲಿ ಅವರು ಸೇನೆಯ ಅತ್ಯಂತ ವಿಶ್ವಾಸಾರ್ಹ ಸ್ನೇಹಿತರಾಗಿದ್ದರು. 2000ದ ದಶಕದ ಆರಂಭದಲ್ಲಿ ಈ ಪ್ರದೇಶದಲ್ಲಿ ಉಗ್ರಗಾಮಿ ಚಟುವಟಿಕೆಯನ್ನು ಮಟ್ಟ ಹಾಕುವಲ್ಲಿ ಅವರು ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಅವರ ಅಲೆಮಾರಿ ಜೀವನಶೈಲಿಯನ್ನು ಗಮನಿಸಿದರೆ ಅವರು ಸೇನಾ ಅತ್ಯುತ್ತಮ ಮಾಹಿತಿದಾರರಲ್ಲಿ ಒಬ್ಬರಾಗಿದ್ದರು. ಈ ಪ್ರದೇಶದಲ್ಲಿ ನಾಗರಿಕರನ್ನು ಎದುರು ಹಾಕಿಕೊಂಡರೆ ಸೇನೆಗೆ ದೊಡ್ಡ ಸಮಸ್ಯೆಯಾಗಲಿದೆ ಎನ್ನವುದು ಸೇನೆಗೆ ತಿಳಿದಿದೆ. ಇತ್ತೀಚಿನ ಬೆಳವಣಿಗೆ ನಾಗರಿಕರಿಗೆ ಸೇನೆಯ ಮೇಲಿನ ವಿಶ್ವಾಸಕ್ಕೆ ಆಘಾತ ತಂದಿತ್ತು.
ಘಟನೆಯ ವಿವರ:
ಜಮ್ಮು ಮತ್ತು ಕಾಶ್ಮೀರದ ಪೂಂಛ್ ರಜೌರಿ ಪ್ರದೇಶದಲ್ಲಿ ಸೇನಾ ಸಿಬ್ಬಂದಿಗಳ ಚಿತ್ರಹಿಂಸೆಯಿಂದ ಸಫೀರ್ ಹುಸೇನ್ (43), ಮೊಹಮ್ಮದ್ ಶೌಕತ್ (27) ಮತ್ತು ಶಬೀರ್ ಅಹ್ಮದ್ (32) ಮೃತಪಟ್ಟಿದ್ದರು. ಅವರು ಗುಜ್ಜರ್-ಬಕರ್ವಾಲ್ ಸಮುದಾಯಕ್ಕೆ ಸೇರಿದವರಾಗಿದ್ದರು.
ಡಿಸೆಂಬರ್ 22ರಂದ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಸೇನಾ ಸಿಬ್ಬಂದಿಗಳು ಎಂಟು ನಾಗರಿಕರನ್ನು ವಶಕ್ಕೆ ಪಡೆದುಕೊಂಡಿದ್ದರು. ಅವರಲ್ಲಿ ಮೂವರು ಚಿತ್ರಹಿಂಸೆಗೆ ಒಳಗಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇತರ ಐವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ಚಿತ್ರಹಿಂಸೆಯ ವಿಡಿಯೋ ವೈರಲ್ ಆಗಿತ್ತು. ಇದು ನಾಗರಿಕರಿಗೆ ಸೇನೆಯ ಮೇಲಿನ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋ ವೈರಲ್ ಬೆನ್ನಲ್ಲೇ ಈ ಪ್ರದೇಶದಲ್ಲಿ ಇಂಟರ್ನೆಟ್ ಬಂದ್ ಮಾಡಿ , ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿತ್ತು. ಸಂತ್ರಸ್ತರ ಕುಟುಂಬಸ್ಥರನ್ನು ಇತರರು ಭೇಟಿ ಮಾಡದಂತೆ ನಿರ್ಬಂಧವನ್ನು ವಿಧಿಸಲಾಗಿತ್ತು.
ಅವರಿಗೇಕೆ ಈ ರೀತಿ ಶಿಕ್ಷೆ ವಿಧಿಸಿದರು?
ಅವರಿಗೇಕೆ ಈ ರೀತಿ ಶಿಕ್ಷೆ ವಿಧಿಸಿದರು? ಈಗ ನನ್ನ ಮಗನನ್ನು ಯಾರು ವಾಪಾಸ್ಸು ಕೊಡುತ್ತಾರೆ? ನಾನು ಇನ್ನು ಭದ್ರತಾ ಪಡೆಗಳನ್ನು ಹೇಗೆ ನಂಬಲಿ? ಇದು ಪೂಂಛ್ನಲ್ಲಿ ಸೇನೆಯಿಂದ ಚಿತ್ರಹಿಂಸೆಗೆ ಒಳಗಾಗಿ ಮೃತಪಟ್ಟ ನಾಗರಿಕನೋರ್ವನ ತಂದೆಯ ಕಣ್ಣೀರಿನ ಪ್ರಶ್ನೆ. ಅವರು ಅವರನ್ನು ಕೊಲ್ಲಲು ಬಯಸಿದ್ದರೆ, ಸೇನೆಯು ಅವರನ್ನು ಶೂಟ್ ಮಾಡಿ ಕೊಲ್ಲಬೇಕಿತ್ತು. ಇಷ್ಟೊಂದು ಚಿತ್ರಹಿಂಸೆ ನೀಡಿ ನನ್ನ ಮಗನನ್ನು ಏಕೆ ಕೊಲ್ಲಬೇಕು? ಎಂದು ಮೃತ ಮೊಹಮ್ಮದ್ ಶೋಕತ್ (26) ತಂದೆ ನಜೀರ್ ಹುಸೇನ್ ಅವರು ಕೇಳಿದ್ದಾರೆ.
ಮೊಹಮ್ಮದ್ ಶೋಕತ್ ಪತ್ನಿ ಕೌಶರ್ ಬಿ ಈ ಬಗ್ಗೆ ದುಃಖವನ್ನು ವ್ಯಕ್ತಪಡಿಸುತ್ತಾ, ತನ್ನ ಪತಿಯ ದೇಹವು ಕಪ್ಪು ಬಣ್ಣಕ್ಕೆ ತಿರುಗಿತ್ತು, ಆ ರೀತಿ ಅವರಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಇದನ್ನು ಓದಿ: ಪೂಂಛ್ನಲ್ಲಿ ನಾಗರಿಕರ ಹತ್ಯೆ ಪ್ರಕರಣ: ವಿವರಣೆ ಕೋರಿದ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ


