ಸೊಲ್ಲಾಪುರದಲ್ಲಿ ನಡೆದ ‘ಹಿಂದೂ ಜನ್ ಆಕ್ರೋಶ್’ ರ್ಯಾಲಿಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಮಹರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ರಾಣೆ, ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ರಾಜೇಂದ್ರ ಚೌಕ್ ಮತ್ತು ಕನ್ನಾ ಚೌಕ್ ನಡುವೆ ರ್ಯಾಲಿ ನಡೆದಿದ್ದು, ‘ಸಕಲ್ ಹಿಂದೂ ಸಮಾಜ’ಸಂಘಟನೆಯ ಮುಖಂಡರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಸಂಘಟನೆಯ ಪದಾಧಿಕಾರಿಗಳ ವಿರುದ್ಧ ಕೂಡ ಎಫ್ಐಆರ್ ದಾಖಲಿಸಲಾಗಿದೆ ಎಂದು ಜೈಲ್ ರೋಡ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ನಿತೇಶ್ ರಾಣೆ ಭಾಷಣದಲ್ಲಿ ‘ಜಿಹಾದಿಗಳು’ ಮತ್ತು ಮಸೀದಿಗಳ ಧ್ವಂಸವನ್ನು ಪ್ರಸ್ತಾಪಿಸಿದ್ದು, ಹೈದರಾಬಾದ್ನ ಗೋಶಾಮಹಲ್ನ ಶಾಸಕ ರಾಜಾ ಸಿಂಗ್, ‘ಲವ್ ಜಿಹಾದ್’ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ನಿತೇಶ್ ರಾಣೆ, ರಾಜಾ ಸಿಂಗ್, ಸಕಲ್ ಹಿಂದೂ ಸಮಾಜ ಸಂಘಟನೆಯ ಪದಾಧಿಕಾರಿ ಸುಧಾಕರ ಮಹಾದೇವ್ ಬಹಿರ್ವಾಡೆ ಮತ್ತು ಇತರ 8-10 ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ಎರಡು ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಕೃತ್ಯ) ಮತ್ತು ಇತರ ಸೆಕ್ಸನ್ಗಳಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಕಳೆದ ತಿಂಗಳು, ನಿತೇಶ್ ರಾಣೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಪ್ರಕಾರ ಮಹಾರಾಷ್ಟ್ರದಲ್ಲಿ ಕೂಡ ಹಲಾಲ್ ನಿಷೇಧಿಸುವಂತೆ ಬೇಡಿಕೆ ಇಟ್ಟಿದ್ದರು. ಡಿಸೆಂಬರ್ 23ರಂದು ಬುಧವಾರ ನಾಗ್ಪುರದ ವಿಧಾನ ಭವನ ಸಂಕೀರ್ಣದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಣೆ, ಹಲಾಲ್ ಉತ್ಪನ್ನದಿಂದ ಬಂದ ಹಣವನ್ನು ಭಯೋತ್ಪಾದನೆಗೆ ನಿಧಿಗೆ ಬಳಸಲಾಗುತ್ತಿದೆ ಎಂದು ಅಸಂಬದ್ಧವಾದ ಹೇಳಿಕೆಯನ್ನು ನೀಡಿದ್ದರು.
ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ಮೊಹಮ್ಮದ್ ಪೈಗಂಬರ್ ವಿರುದ್ಧ ವಿವಾದಾತ್ಮಕ ಹೇಳಿಕೆ ಪ್ರಕರಣದಲ್ಲಿ ಈ ಮೊದಲು ಬಂಧಿಸಲಾಗಿತ್ತು. ತೆಲಂಗಾಣ ಬಿಜೆಪಿ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಟಿ.ರಾಜಾ ಸಿಂಗ್ನ್ನು 2022ರ ಆಗಸ್ಟ್ನಲ್ಲಿ ಅಮಾನತುಗೊಳಿಸಿತ್ತು. ಆ ಬಳಿಕ ಮತ್ತೆ ಬಿಜೆಪಿಗೆ ಸೇರ್ಪಡೆಗೊಳಿಸಿತ್ತು.
ಇದನ್ನು ಓದಿ: ಬುಡಕಟ್ಟು ಮಕ್ಕಳ ಜೀವನದಲ್ಲಿ ಶಿಕ್ಷಣದ ಬೆಳಕು ಚೆಲ್ಲಿದ ಶಿಕ್ಷಕಿ