ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ ಕಲಂ 370ನ್ನು ರದ್ದುಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ಷರಶಃ ಉಸಿರುಗಟ್ಟಿಸುವ ವಾತಾವರಣ ಮನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕಣಿವೆ ರಾಜ್ಯದಲ್ಲಿ ಮೊಬೈಲ್, ಸ್ಥಿರ ದೂರವಾಣಿ, ಬಸ್ ಸೇವೆ ಇಲ್ಲದಂತೆ ಮಾಡಿ ಅಲ್ಲಿನ ಜನರ ಮೂಲಭೂತ ಹಕ್ಕುಗಳನ್ನೇ ಕಸಿಯಲಾಗಿದೆ. ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗಿರುವ ಬಗ್ಗೆ ಇದುವರೆಗೂ ಯಾವೊಂದು ಮಾಧ್ಯಮಗಳು ಕೇಂದ್ರದ ಗಮನ ಸೆಳೆದಿಲ್ಲ. ಕೇಸರಿ ನಾಡಿನ ಜನರ ಮೂಗಿನೊಳಗೆ ಕಮಲದೊಳಗಿನ ಹುಳುಗಳು ಸೇರಿಹೋಗಿ ಉಸಿರು ಬಿಡುವುದು ಕಷ್ಟವಾಗಿದೆ.
ಈ ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಈ ಹಕ್ಕುಗಳಿಗೆ ಚ್ಯುತಿಯಾದಾಗ ಸುಪ್ರೀಂ ಕೋರ್ಟ್ ಜನರ ನೆರವಿಗೆ ಬರಬೇಕು. ಆದರೆ ಇಂತಹ ಯಾವುದೇ ಕೆಲಸ ಸುಪ್ರೀಂಕೋರ್ಟ್ನಿಂದ ಆದಂತೆ ಕಂಡುಬಂದಿಲ್ಲ. ಸ್ವಾತಂತ್ರ್ಯದ ಹಕ್ಕು, ಸಭೆ ಸೇರುವ ಹಕ್ಕು, ಪ್ರತಿಭಟನೆ ನಡೆಸುವ ಹಕ್ಕು, ಮಾತನಾಡುವ ಮತ್ತು ಬರೆಯುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಕೆಲಸದ ಹಕ್ಕು ಹೀಗೆ ಎಲ್ಲ ಮೂಲಭೂತ ಹಕ್ಕುಗಳು ಸಂಪೂರ್ಣ ಮೊಟುಕಾಗಿವೆ. ಇಂತಹ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಜ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಜನರ ಈ ಹಕ್ಕುಗಳನ್ನು ರಕ್ಷಣೆ ಮಾಡಿದೆ. ಅದರಂತೆ ಈಗಲೂ ಮಾಡಬೇಕಿದೆ.
ಭಾರತದ ಒಕ್ಕೂಟ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ಅಮಾನ್ಯಗೊಳಿಸಿರುವ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಸುಮಾರು 17ಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ದಾಖಲಾಗಿವೆ. ಎಲ್ಲರೂ ಕೇವಲ ಸಂವಿಧಾನದ 370 ಮತ್ತು ಅದರಿಂದ ಪ್ರದತ್ತವಾದ 35 ಎ ಕಲಂ ರದ್ದುಗೊಳಿಸಿರುವುದನ್ನು ಮಾತ್ರ ಪ್ರಶ್ನಿಸಲಾಗಿದೆ. ಆದರೆ ಒಂದು ರಾಜ್ಯದ ಮೇಲೆ ಮಿಲಿಟರಿ ಪ್ರಯೋಗಿಸಿ ನಿರ್ಬಂಧ ವಿಧಿಸಿ ಉಸಿರುಗಟ್ಟಿಸುವಂತೆ ಮಾಡಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯೇ ಸರಿ. ಜಮ್ಮು-ಕಾಶ್ಮೀರದಲ್ಲಿ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದ್ದರೂ ಅದನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರೂ ಶೀಘ್ರ ವಿಚಾರಣೆಯ ಜರೂರತ್ತು ಇಲ್ಲವೆಂದು ವಿಚಾರಣೆಯನ್ನು ಮುಂದೂಡಲಾಗಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ದೊರೆತಿದ್ದಾಗಲೂ ಅದು ಭಾರತದ ಭಾಗವಾಗಿತ್ತು ಎಂಬುದನ್ನು ಮರೆಮಾಚಲಾಗುತ್ತಿದೆ. 370 ವಿಧಿಯನ್ನು ರದ್ದುಪಡಿಸಿದ್ದರಿಂದಲೇ ಅದು ಭಾರತದ ಭಾಗವಾಗಿದೆ ಎಂಬ ಭ್ರಮೆಗಳನ್ನು ಬಿತ್ತಲಾಗಿದ್ದು ಮೋದಿಶಾ ಜೋಡಿ ಮಹತ್ವದ ಸಾಧನೆಯನ್ನು ಮಾಡಿದ್ದೇವೆಂಬಂತೆ ಬೀಗುತ್ತಿದ್ದಾರೆ. ಆದರೆ ತಾವು ಇನ್ನೊಬ್ಬರ ಹಕ್ಕುಗಳನ್ನು ಕಸಿಯುತ್ತಿದ್ದೇವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ವರ್ತಿಸುತ್ತಿರುವುದು ಸೋಜಿಗವೇ ಸರಿ. ಅಲ್ಲಿ ಕೇವಲ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾತ್ರವಾಗಿಲ್ಲ. ಬದಲಿಗೆ ಬೇಸಿಕ್ ರೈಟ್ಸ್ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳನ್ನು ಕಸಿಯಲಾಗಿದೆ.
ಕಳೆದ ಎರಡು ತಿಂಗಳಿಂದಲೂ ಅಲ್ಲಿನ ಜನರು ಕೆಲಸಕ್ಕೆ ಹೋಗದಂತಹ ವಾತಾವರಣ ಸೃಷ್ಟಿಯಾಗಿದೆ. ಕೂಲಿಕಾರ್ಮಿಕರು, ರೈತರು, ಸಣ್ಣಪುಟ್ಟ ವ್ಯಾಪಾರಿಗಳು ಎಲ್ಲ ಕೆಲಸಗಳನ್ನು ಬದಿಗೊತ್ತಿ ಮನೆಯಲ್ಲೇ ಕುಳಿತು ದಿನದೂಡುವಂತಹ ಪರಿಸ್ಥಿತಿ ಇದೆ. ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯ ಸದ್ದು ಮಾಡುತ್ತಿದೆ. ಆದರೂ ಮೋದಿ ಸರ್ಕಾರ ಜನರು ಹಕ್ಕುಗಳಿಂದ ವಂಚಿತರಾದರೂ ಚಿಂತೆ ಇಲ್ಲ, ವಿಜೃಂಭಣೆಯಿಂದ ಅಧಿಕಾರ ಅನುಭವಿಸಬೇಕು ಎಂಬ ಅಮಲಿನಲ್ಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕೇವಲ ಎರಡು ತಿಂಗಳ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಹೀಗಾಗಿ ಆ ರಾಜ್ಯ ಮತ್ತೆ ಚೇತರಿಸಿಕೊಳ್ಳಬೇಕೆಂದು ಹಲವು ವರ್ಷಗಳೇ ಕಳೆಯಬೇಕು. ಸೇಬು, ಕೇಸರಿ ವ್ಯಾಪಾರಿಗಳು ಸಾಕಷ್ಟು ನಷ್ಟಕ್ಕೆ ಗುರಿಯಾಗಿದ್ದಾರೆ. ಆದರೆ ಜೆಕೆಯಲ್ಲಿ ಏನೂ ಆಗಿಲ್ಲವೆಂದೇ ಕೇಂದ್ರ ಸರ್ಕಾರ ಭಂಡ ವಾದ ಮಾಡುತ್ತಿದೆ. ನಾಗರಿಕ ಸಂಘಟನೆಗಳು, ಪ್ರಗತಿಪರರು, ಸಾಹಿತಿಗಳು, ಕಲಾವಿದರು ದೊಡ್ಡ ಮಟ್ಟದಲ್ಲಿ ದನಿ ಎತ್ತಿ ಮೂಲಭೂತ ಹಕ್ಕುಗಳು, ಮಾನವ ಹಕ್ಕುಗಳು, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿರುವ ಕುರಿತು ಹೋರಾಟಕ್ಕೆ ಸಜ್ಜಾಗಬೇಕಾಗಿದೆ. ಇಂತಹ ಕ್ರಮಗಳಿಂದ ರಾಜ್ಯಗಳ ಅಧಿಕಾರವನ್ನು ಮೊಟುಕುಗೊಳಿಸುವ ಹುನ್ನಾರ ಕೇಂದ್ರ ಸರ್ಕಾರದ ಕ್ರಮದಲ್ಲಿ ಅಡಗಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.