ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ವಿಚಾರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬುಧವಾರ ಬೆಂಬಲ ಸೂಚಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರವು ರೈತರ ಸಮಂಜಸವಾದ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಅಗತ್ಯ ಬೆಳೆಗಳಿಗೆ ಎಂಎಸ್ಪಿ ನೀಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕದ ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಂಎಸ್ಪಿ ಕಾನೂನು ಖಾತರಿಯನ್ನು ಸೇರಿಸಲಿದೆ. ನಾವು ರೈತರಿಗೆ ಬೆಂಬಲ ನೀಡುತ್ತೇವೆ, ಅವರ ಸಮಂಜಸವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ನಾವು ಬಹಿರಂಗವಾಗಿ ಹೇಳುತ್ತಿದ್ದೇವೆ, ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ಕಾನೂನು ಭರವಸೆ ನೀಡುತ್ತೇವೆ. ಎಲ್ಲಾ ಬೆಳೆಗಳಿಗೆ ರಕ್ಷಣೆ ನೀಡಲಾಗುವುದಿಲ್ಲ ಆದರೆ ಅಗತ್ಯ ಬೆಳೆಗಳಿಗೆ ನೀಡಬೇಕು ಎಂದು ಖರ್ಗೆ ಹೇಳಿದ್ದಾರೆ.
ಇದಕ್ಕೂ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಂಎಸ್ ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದಲ್ಲಿ 14 ಲಕ್ಷ ಕೋಟಿ ಮೌಲ್ಯದ ಬ್ಯಾಂಕ್ ಸಾಲ ಮನ್ನಾ, 1.8 ಲಕ್ಷ ಕೋಟಿ ಕಾರ್ಪೊರೇಟ್ ತೆರಿಗೆ ವಿನಾಯ್ತಿ ನೀಡಿದ್ದು, ರೈತರ ಮೇಲೆ ಅಲ್ಪಸ್ವಲ್ಪ ಖರ್ಚು ಮಾಡುವುದಕ್ಕೂ ಹಿಂದೆ-ಮುಂದೆ ನೋಡುವುದು ಯಾಕೆ? ಎಂಎಸ್ಪಿ ಗ್ಯಾರಂಟಿ, ಕೃಷಿಯಲ್ಲಿ ಹೂಡಿಕೆ ಹೆಚ್ಚಳಕ್ಕೆ ಕಾರಣವಾಗುತ್ತದೆ, ಗ್ರಾಮೀಣ ಭಾರತದಲ್ಲಿ ಬೇಡಿಕೆ ಹೆಚ್ಚುತ್ತದೆ ಮತ್ತು ರೈತರು ವಿವಿಧ ರೀತಿಯ ಬೆಳೆಗಳನ್ನು ಬೆಳೆಯಲು ವಿಶ್ವಾಸವನ್ನು ಹೊಂದುತ್ತಾರೆ. MSP ಕುರಿತು ಗೊಂದಲವನ್ನು ಹರಡುತ್ತಿರುವವರು ಡಾ. ಸ್ವಾಮಿನಾಥನ್ ಮತ್ತು ಅವರ ಕನಸುಗಳನ್ನು ಅವಮಾನಿಸುತ್ತಿದ್ದಾರೆ ಎಂದು ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಮಧ್ಯೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಅರ್ಜುನ್ ಮುಂಡಾ, ರೈತರು ಪ್ರಸ್ತಾಪಿಸಿದ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಕೇಂದ್ರವು ಪ್ರತಿಭಟನಾನಿರತ ರೈತರೊಂದಿಗೆ 5ನೇ ಸುತ್ತಿನ ಮಾತುಕತೆ ನಡೆಸಲು ಮುಕ್ತವಾಗಿದೆ ಮತ್ತು ರೈತರು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಕೇಂದ್ರದ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆ ರೈತರು ದೆಹಲಿ ಚಲೋ ಪುನರಾರಂಭಕ್ಕೆ ನಿರ್ಧರಿಸಿದ್ದರು. ಪಂಜಾಬ್-ಹರಿಯಾಣದ ಶಂಭು ಗಡಿಯಲ್ಲಿ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಬಳಸಿ ರೈತರನ್ನು ತಡೆದಿದ್ದರಿಂದ ಗೊಂದಲವು ಉಂಟಾಗಿತ್ತು. ಭದ್ರತಾ ಪಡೆಗಳು ಪ್ರತಿರೋಧಕ ಕ್ರಮಗಳಿಂದ ರಕ್ಷಿಸಲು ರೈತ ಮುಖಂಡರು ಸುರಕ್ಷತಾ ಕನ್ನಡಕ ಮತ್ತು ಹೆಡ್ಫೋನ್ಗಳು ಸೇರಿದಂತೆ ರಕ್ಷಣಾತ್ಮಕ ಕವಚಗಳನ್ನು ಧರಿಸಿರುವುದು ಕಂಡುಬಂದಿದೆ.
ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಅವರು ಎಂಎಸ್ಪಿಯ ಕಾನೂನು ಖಾತರಿಯ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ ಮತ್ತು ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು. ನಾಲ್ಕನೇ ಸುತ್ತಿನ ಮಾತುಕತೆ ಕೊನೆಗೂ ಕೊನೆಗೊಂಡ ನಂತರ ಬುಧವಾರ ಬೆಳಗ್ಗೆ ರೈತರು ತಮ್ಮ ಪಾದಯಾತ್ರೆ ಆರಂಭಿಸಿದರು. ಫೆಬ್ರವರಿ 19ರಂದು ರೈತ ಮುಖಂಡರು ಎಂಎಸ್ಪಿ ಖರೀದಿ ಕುರಿತು ಕೇಂದ್ರದ ಪ್ರಸ್ತಾವನೆಯನ್ನು ತಿರಸ್ಕರಿಸಿ, ಕೇಂದ್ರದ ಪ್ರಸ್ತಾವನೆಯು ರೈತರ ಪರವಾಗಿಲ್ಲ ಎಂದು ಹೇಳಿದ್ದರು.
ಇದನ್ನು ಓದಿ: ಕದನ ವಿರಾಮ ನಿರ್ಣಯ: ಉಲ್ಟಾ ಹೊಡೆದ ಯುಎಸ್: ಅಮೆರಿಕದ ಯುದ್ಧ ದಾಹಕ್ಕೆ ಜಗತ್ತಿನ ಹಲವು ರಾಷ್ಟ್ರಗಳು ಖಂಡನೆ