ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಅಪರಾಧಿಗಳು ತಮಗೆ ನೀಡಲಾದ ಕ್ಷಮಾಧಾನವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಿದ್ದು, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ಜನವರಿ 8 ರಂದು ಸುಪ್ರೀಂಕೋರ್ಟ್ ಬಿಲ್ಕಿಸ್ ಬಾನು ಪ್ರಕರಣದಲ್ಲಿ 11 ಅಪರಾಧಿಗಳ ಬಿಡುಗಡೆಯನ್ನು ರದ್ದುಗೊಳಿಸಿದೆ ಮತ್ತು ಆದೇಶದ ದಿನಾಂಕದಿಂದ ಎರಡು ವಾರಗಳಲ್ಲಿ ಶರಣಾಗುವಂತೆ ಸೂಚಿಸಿತ್ತು.
ಪ್ರಕರಣದ 11 ಅಪರಾಧಿಗಳ ಪೈಕಿ ಇಬ್ಬರು ಅಪರಾಧಿಗಳಾದ ರಾಧೇಶೈಮ್ ಭಗವಾನದಾಸ್ ಶಾ ಮತ್ತು ರಾಜುಭಾಯಿ ಬಾಬುಲಾಲ್ ಸೋನಿ ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಸುಪ್ರೀಂನ ಎರಡು ವಿಭಿನ್ನ ಪೀಠಗಳು ಕ್ಷಮಾಧಾನ ನೀಡಿ ಬಿಡುಗಡೆಯ ವಿಷಯದ ಬಗ್ಗೆ ವಿಭಿನ್ನ ತೀರ್ಪನ್ನು ನೀಡಿರುವುದು ಅಸಂಗತವಾಗಿದೆ. ಕ್ಷಮಾದಾನ ರದ್ದುಪಡಿಸಿರುವ ತೀರ್ಪು, 2002ರ ಸಂವಿಧಾನ ಪೀಠ ನೀಡಿದ್ದ ಆದೇಶಕ್ಕೆ ವ್ಯತಿರಿಕ್ತವಾಗಿದೆ. ಆದ್ದರಿಂದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದಾರೆ.
ತಮ್ಮ ಅರ್ಜಿಯಲ್ಲಿ, ಷಾ ಮತ್ತು ಸೋನಿ ನ್ಯಾಯಾಲಯದ ಆದೇಶವು ಕಾನೂನು ಮತ್ತು ನ್ಯಾಯಾಂಗ ಔಚಿತ್ಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಮೇ 2022ರ ಆದೇಶದ ವಿರುದ್ಧ ಬಿಲ್ಕಿಸ್ ಈಗಾಗಲೇ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದು ಅದನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದ್ದು, ಸಂತ್ರಸ್ತೆ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಬೇಕಿತ್ತು ಮತ್ತು ಮೇ 13ರ ಹಿಂದಿನ ಆದೇಶವನ್ನು ಪ್ರಶ್ನಿಸಿ ರಿಟ್ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ವಕೀಲ ರಿಷಿ ಮಲ್ಹೋತ್ರಾ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, 2022ರ ಮೇ 13ರಂದು ಒಂದು ಪೀಠವು ಗುಜರಾತ್ ಸರ್ಕಾರಕ್ಕೆ ರಾಜ್ಯ ಸರ್ಕಾರದ ಕ್ಷಮಾಧಾನ ನೀತಿಯ ನಿಯಮಗಳಿಗೆ ಸಂಬಂಧಿಸಿದಂತೆ ಅವಧಿಪೂರ್ವ ಬಿಡುಗಡೆಗಾಗಿ ಷಾ ಅವರ ಅರ್ಜಿಯನ್ನು ಪರಿಗಣಿಸುವಂತೆ ಆದೇಶ ನೀಡಿತ್ತು. ಈ ತೀರ್ಪು ಪ್ರಕಟಿಸಿದ ಪೀಠ ಜನವರಿ 8, 2024ರಂದು ಮಹಾರಾಷ್ಟ್ರವು ಪ್ರಕರಣದಲ್ಲಿ ಕ್ಷಮಾಧಾನ ನೀಡಲು ಅರ್ಹತೆ ಹೊಂದಿದೆ ಹೊರತು ಗುಜರಾತ್ ಸರ್ಕಾರವಲ್ಲ ಎಂದು ಹೇಳಿದೆ.
ಜನವರಿ 8 ರಂದು, ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಅಪರಾಧಿಗಳಿಗೆ ನೀಡಲಾದ ಕ್ಷಮಾಧಾನವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಮತ್ತು ಎರಡು ವಾರಗಳಲ್ಲಿ ಅಪರಾಧಿಗಳಿಗೆ ಶರಣಾಗುವಂತೆ ನಿರ್ದೇಶನ ನೀಡಿತ್ತು. ಗುಜರಾತ್ ಸರ್ಕಾರವು ಖೈದಿಗಳೊಂದಿಗೆ ರಾಜಿ ಮಾಡಿಕೊಂಡಿದೆ ಮತ್ತು ಅವಧಿ ಪೂರ್ವ ಬಿಡುಗಡೆಗೆ ಆದೇಶ ನೀಡುವ ತನ್ನ ಅಧಿಕಾರವನ್ನು ತಪ್ಪಾಗಿ ಚಲಾಯಿಸಿದೆ ಎಂದು ಕೋರ್ಟ್ ಹೇಳಿತ್ತು.
2002ರಲ್ಲಿ ಗೋಧ್ರಾದಲ್ಲಿ ರೈಲು ಸುಟ್ಟ ಘಟನೆಯ ನಂತರ ನಡೆದಿದ್ದ ಕೋಮು ಗಲಭೆ ವೇಳೆ ಐದು ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆದರೆ ಆಕೆಯ ಮೂರು ವರ್ಷದ ಮಗಳು ಮತ್ತು ಇತರ ಆರು ಕುಟುಂಬ ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು 11 ಅಪರಾಧಿಗಳಿಗೆ ನೀಡಲಾದ ವಿನಾಯಿತಿಯನ್ನು ಸುಪ್ರೀಂಕೋರ್ಟ್ ಈ ಮೊದಲು ರದ್ದುಗೊಳಿಸಿತ್ತು. 2022ರ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾದ ಎಲ್ಲಾ ಅಪರಾಧಿಗಳನ್ನು ಎರಡು ವಾರಗಳಲ್ಲಿ ಶರಣಾಗುವಂತೆ ಹೇಳಿತ್ತು. ಶರಣಾದ ಆರೋಪಿಗಳಲ್ಲಿ ಇಬ್ಬರು ಕೆಲವೇ ದಿನಗಳಲ್ಲಿ ಪೆರೋಲ್ ಮೇಲೆ ಹೊರಗೆ ಬಂದಿದ್ದರು.
ಇದನ್ನು ಓದಿ: ಮೋದಿ ಚಿತ್ರವುಳ್ಳ ಚೀಲಗಳ ಖರೀದಿಗೆ ₹15 ಕೋಟಿ ವ್ಯಯಿಸಿದ ಕೇಂದ್ರ: ವರದಿ


