ಚುನಾವಣಾ ಬಾಂಡ್ಗಳ ಕುರಿತ ಮಾಹಿತಿ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಮಹತ್ವದ ವಿಷಯಗಳು ಬಹಿರಂಗಗೊಂಡಿವೆ. ಕೋಟ್ಯಾಂತರ ರೂಪಾಯಿಯ ಬಾಂಡ್ಗಳನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕಂಪನಿಗಳು, ಅದಕ್ಕೆ ಪ್ರತಿಯಾಗಿ ಲಾಭ ಪಡೆದಿರುವುದು ಗೊತ್ತಾಗಿದೆ.
ಚುನಾವಣಾ ಆಯೋಗ ಪ್ರಕಟಿಸಿರುವ ಮಾಹಿತಿಯಲ್ಲಿ ಯಾವ ಕಂಪನಿ, ಎಷ್ಟು ದೇಣಿಗೆ ನೀಡಿದೆ ಎಂಬ ಅಂಕಿ ಅಂಶಗಳಿವೆ. ಆದರೆ, ಯಾರಿಗೆ ನೀಡಿದ್ದಾರೆ ಎಂಬುವುದು ಸ್ಪಷ್ಟವಾಗಿ ಇಲ್ಲ. ಆದರೂ, ದೇಣಿಗೆ ನೀಡಿದ ಬಳಿಕ ಹೆಚ್ಚಿನ ಕಂಪನಿಗಳು ಕೇಂದ್ರದ ಬಿಜೆಪಿ ಸರ್ಕಾರದ ಕಡೆಯಿಂದ ವಿವಿಧ ಲಾಭಗಳನ್ನು ಪಡೆದಿರುವುದು ಕಂಡು ಬಂದಿದೆ.
ಈ ಕುರಿತು ಕಾಂಗ್ರೆಸ್ ನಾಯಕರ ಜೈರಾಮ್ ರಮೇಶ್ ಕೆಲವೊಂದು ವಿವರಣೆಗಳನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವುಗಳು ಹೀಗಿವೆ..
2019 ರಿಂದ 1,300ಕ್ಕೂ ಹೆಚ್ಚು ಕಂಪನಿಗಳು ಮತ್ತು ವ್ಯಕ್ತಿಗಳು ಚುನಾವಣಾ ಬಾಂಡ್ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದಾರೆ. ಈ ಮೂಲಕ ಬಿಜೆಪಿ 6,000 ಕೋಟಿ ರೂಪಾಯಿ ದೇಣಿಗೆ ಪಡೆದಿದೆ.
ಚುನಾವಣಾ ಬಾಂಡ್ಗಳ ಮೂಲಕ ದೇಣಿಗೆ ನೀಡಿದ ಕಂಪನಿಗಳು ತಕ್ಷಣವೇ ಸರ್ಕಾರದಿಂದ ಭಾರೀ ಪ್ರಯೋಜನಗಳನ್ನು ಪಡೆದ ಅನೇಕ ಉದಾಹರಣೆಗಳಿವೆ.
- ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಈ ಕಂಪನಿಯು 966 ಕೋಟಿ ರೂ.ಮೌಲ್ಯದ ಬಾಂಡ್ ಖರೀದಿಸಿದೆ. ಏಪ್ರಿಲ್ 2023ರಲ್ಲಿ ಕಂಪನಿಯು 140 ಕೋಟಿ ರೂ. ದೇಣಿಗೆ ನೀಡಿತ್ತು. ಇದಾಗಿ ಒಂದು ತಿಂಗಳ ಬಳಿಕ ಕಂಪನಿಯು ಕೇಂದ್ರ ಸರ್ಕಾರದಿಂದ 14,400 ಕೋಟಿ ರೂ. ವೆಚ್ಚದ ಥಾಣೆ-ಬೊರಿವಲಿ ಅವಳಿ ಸುರಂಗ ಯೋಜನೆಯನ್ನು ತನ್ನದಾಗಿಸಿಕೊಂಡಿದೆ.
- ಅಕ್ಟೋಬರ್ 7, 2022ರಂದು ಜಿಂದಾಲ್ ಸ್ಟೀಲ್ & ಪವರ್ ಕಂಪನಿ 25 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿತ್ತು. ಇದಾಗಿ ಕೇವಲ ಮೂರು ದಿನಗಳ ಬಳಿಕ, ಅಂದರೆ 10 ಅಕ್ಟೋಬರ್ 2022 ರಂದು ಕಂಪನಿಯು ಗರೇ ಪಾಲ್ಮಾ IV/6 ಕಲ್ಲಿದ್ದಲು ಗಣಿಯನ್ನು ತನ್ನದಾಗಿಸಿಕೊಂಡಿದೆ.
ಚುನಾವಣಾ ಬಾಂಡ್ ನೀಡಿದ ಟಾಪ್ 30 ದಾನಿಗಳ ಪೈಕಿ 14 ದಾನಿಗಳ ಮೇಲೆ ಇಡಿ, ಸಿಬಿಐ, ಐಟಿ ದಾಳಿ ನಡೆದಿದೆ. ಇದನ್ನು ಹಪ್ತಾ ವಸೂಲಿ ಎಂದು ಬಣ್ಣಿಸಿರುವ ಜೈರಾಮ್ ರಮೇಶ್, “ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ಕಂಪನಿ ಮತ್ತು ವ್ಯಕ್ತಿಗಳನ್ನು ಬೆದರಿಸಿದ ನಂತರ ಬಿಜೆಪಿಗೆ ದೇಣಿಗೆ ಪಡೆದಿದೆ” ಎಂದು ಆರೋಪಿಸಿದ್ದಾರೆ.
- ಹೆಟೆರೊ ಫಾರ್ಮಾ ಮತ್ತು ಯಶೋದಾ ಆಸ್ಪತ್ರೆಯಂತಹ ಕಂಪನಿಗಳು ತನಿಖಾ ಸಂಸ್ಥೆಗಳ ದಾಳಿಗೆ ಒಳಗಾದ ಬಳಿಕ ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ.
- ಆದಾಯ ತೆರಿಗೆ (ಐಟಿ) ಇಲಾಖೆಯು ಡಿಸೆಂಬರ್ 2023ರಲ್ಲಿ ಶಿರಡಿ ಸಾಯಿ ಎಲೆಕ್ಟ್ರಿಕಲ್ಸ್ ಮೇಲೆ ದಾಳಿ ನಡೆಸಿತ್ತು. ಇದೇ ಕಂಪನಿ ಜನವರಿ 2024ರಲ್ಲಿ ಚುನಾವಣಾ ಬಾಂಡ್ ಮೂಲಕ 40 ಕೋಟಿ ರೂ. ದೇಣಿಗೆ ನೀಡಿದೆ.
- ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ಸ್ ಲಿಮಿಟೆಡ್, ರೂ. 1,200 ಕೋಟಿ ಮೌಲ್ಯದ ಬಾಂಡ್ ಖರೀದಿಸುವ ಮೂಲಕ ಅತೀ ಹೆಚ್ಚು ದೇಣಿಗೆ ನೀಡಿದ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
- ಏಪ್ರಿಲ್ 2, 2022 ರಂದು ಈ ಕಂಪನಿ ಮೇಲೆ ಇಡಿ ದಾಳಿ ನಡೆಸಿತ್ತು. ಇದಾಗಿ 5 ದಿನಗಳ ನಂತರ, ಅಂದರೆ ಏಪ್ರಿಲ್ 7ರಂದು ಕಂಪನಿಯು ಚುನಾವಣಾ ಬಾಂಡ್ ಮೂಲಕ 100 ಕೋಟಿ ರೂ. ದೇಣಿಗೆ ನೀಡಿದೆ.
- ಅಕ್ಟೋಬರ್ 2023ರಲ್ಲಿ ಐಟಿ ಇಲಾಖೆಯು ಫ್ಯೂಚರ್ ಕಂಪನಿ ಮೇಲೆ ದಾಳಿ ನಡೆಸಿತ್ತು. ಅದೇ ತಿಂಗಳು ಕಂಪನಿಯು ಚುನಾವಣಾ ಬಾಂಡ್ ಮೂಲಕ 65 ಕೋಟಿ ರೂ. ದೇಣಿಗೆ ನೀಡಿದೆ.
ಕೇಂದ್ರ ಸರ್ಕಾರದಿಂದ ಕೆಲ ದಾಖಲೆಗಳನ್ನು ಸ್ವೀಕರಿಸಿದ ಬೆನ್ನಲ್ಲೇ ಕಂಪನಿಗಳು ದೇಣಿಗೆ ನೀಡಿವೆ. ಇದನ್ನು ಜೈರಾಮ್ ರಮೇಶ್ ಕಿಕ್ ಬ್ಯಾಕ್ ಎಂದು ಆರೋಪಿಸಿದ್ದಾರೆ.
- ವೇದಾಂತ ಕಂಪನಿಯು 3 ಮಾರ್ಚ್ 2021ರಂದು ರಾಧಿಕಪೂರ್ ವೆಸ್ಟ್ ಖಾಸಗಿ ಕಲ್ಲಿದ್ದಲು ಗಣಿಯನ್ನು ತನ್ನದಾಗಿಸಿಕೊಂಡಿತ್ತು. ಇದಾಗಿ ಒಂದು ತಿಂಗಳ ನಂತರ ಏಪ್ರಿಲ್ 2021ರಲ್ಲಿ ಕಂಪನಿಯು ಚುನಾವಣಾ ಬಾಂಡ್ಗಳ ಮೂಲಕ 25 ಕೋಟಿ ರೂ. ದೇಣಿಗೆ ನೀಡಿದೆ.
- ಮೇಘಾ ಇಂಜಿನಿಯರಿಂಗ್ ಕಂಪನಿಯು ಆಗಸ್ಟ್ 2020ರಲ್ಲಿ 4,500 ಕೋಟಿ ರೂ. ವೆಚ್ಚದ ಜೊಜಿಲಾ ಸುರಂಗ ಯೋಜನೆಯನ್ನು ತನ್ನದಾಗಿಸಿಕೊಂಡಿತ್ತು. ಅಕ್ಟೋಬರ್ 2020ರಲ್ಲಿ ಕಂಪನಿಯು ಚುನಾವಣಾ ಬಾಂಡ್ಗಳ ಮೂಲಕ 20 ಕೋಟಿ ರೂ. ದೇಣಿಗೆ ನೀಡಿದೆ.
- ಮೇಘಾ ಕಂಪನಿಯು ಡಿಸೆಂಬರ್ 2022ರಲ್ಲಿ ಬಿಕೆಸಿ ಬುಲೆಟ್ ರೈಲು ನಿಲ್ದಾಣದ ಗುತ್ತಿಗೆಯನ್ನು ಪಡೆದಿತ್ತು. ಅದೇ ತಿಂಗಳು ಕಂಪನಿ 56 ಕೋಟಿ ರೂ. ದೇಣಿಗೆ ನೀಡಿದೆ.
Here’s a quick first analysis of the Electoral Bonds data disclosure that the SBI put up last night, after weeks of attempting to postpone it until after the election:
•Over 1,300 companies and individuals have donated electoral bonds, including over 6,000 crores to the BJP…
— Jairam Ramesh (@Jairam_Ramesh) March 15, 2024
ಚುನಾವಣಾ ಬಾಂಡ್ ಹಣಕಾಸು ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೊಳಿಸಿದ ಯೋಜನೆಯಾಗಿದೆ. ತಿದ್ದುಪಡಿಯ ವೇಳೆ ಯಾವುದೇ ಕಂಪನಿಯ ಲಾಭದ ಒಂದು ಸಣ್ಣ ಶೇಕಡಾವಾರು ಭಾಗವನ್ನು ಮಾತ್ರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದೆಂಬ ನಿರ್ಬಂಧವನ್ನು ತೆಗೆದು ಹಾಕಲಾಗಿದೆ.
ಇದು ಶೆಲ್ ಕಂಪನಿಗಳಿಗೆ ಕಪ್ಪು ಹಣವನ್ನು ದೇಣಿಗೆ ನೀಡಲು ಅನುವು ಮಾಡಿ ಕೊಟ್ಟಿದೆ. ಇಂತಹ ಹಲವು ಅನುಮಾನಾಸ್ಪದ ಪ್ರಕರಣಗಳಿವೆ. ಉದಾಹರಣೆಗೆ ಕ್ವಿಕ್ ಸಪ್ಲೈ ಚೈನ್ ಲಿಮಿಟೆಡ್ ಎಂಬ ಕಂಪನಿಯು ರೂ. 410 ಕೋಟಿ ದೇಣಿಗೆ ನೀಡಿದೆ. ಈ ಕಂಪನಿಯ ಸಂಪೂರ್ಣ ಷೇರು ಬಂಡವಾಳ ಕೇವಲ 130 ಕೋಟಿ ರೂ. ಮಾತ್ರ.
ಎಸ್ಬಿಐ ಒದಗಿಸಿದ ಡೇಟಾವು ಏಪ್ರಿಲ್ 2019ರಿಂದ ಮಾರಾಟ ಮಾಡಿದ ಬಾಂಡ್ಗಳದ್ದಾಗಿದೆ. ಆದರೆ ಎಸ್ಬಿಐ ಮಾರ್ಚ್ 2018 ರಲ್ಲಿ ಮೊದಲ ಬಾಂಡ್ಗಳನ್ನು ಮಾರಾಟ ಮಾಡಿದೆ. ಹಾಗಾಗಿ, ಡೇಟಾದಿಂದ 2,500 ಕೋಟಿ ರೂ. ಮೌಲ್ಯದ ಬಾಂಡ್ಗಳು ಕಾಣೆಯಾಗಿವೆ. ಮಾರ್ಚ್ 2018 ರಿಂದ ಏಪ್ರಿಲ್ 2019 ರವರೆಗಿನ ಈ ಕಾಣೆಯಾದ ಬಾಂಡ್ಗಳ ಡೇಟಾ ಎಲ್ಲಿದೆ? ಉದಾಹರಣೆಗೆ, ಬಾಂಡ್ಗಳ ಮೊದಲ ಕಂತಿನಲ್ಲಿ ಬಿಜೆಪಿ ಶೇ. 95 ಹಣವನ್ನು ಪಡೆದುಕೊಂಡಿದೆ. ಬಿಜೆಪಿ ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಚುನಾವಣಾ ಬಾಂಡ್ಗಳ ಅಂಕಿ ಅಂಶಗಳ ವಿಶ್ಲೇಷಣೆ ಮುಂದುವರಿದಂತೆ, ಬಿಜೆಪಿಯ ಭ್ರಷ್ಟಾಚಾರದ ಇನ್ನೂ ಅನೇಕ ಪ್ರಕರಣಗಳು ಬಯಲಿಗೆ ಬರಲಿವೆ. ನಾವು ವಿಶಿಷ್ಟ ಬಾಂಡ್ಗಳ ಐಡಿ ಸಂಖ್ಯೆ ಅಥವಾ ಸೀರಿಯಲ್ ನಂಬರ್ ಬಹಿರಂಗಗೊಳಿಸುವಂತೆ ಆಗ್ರಹಿಸುತ್ತಿದ್ದೇವೆ. ಇದರಿಂದ ಯಾವ ಪಕ್ಷ, ಯಾರಿಂದ ಎಷ್ಟು ದೇಣಿಗೆ ಪಡೆದಿದೆ ಎಂಬುವುದು ಗೊತ್ತಾಗಲಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 1,260 ಕಂಪನಿಗಳು ಹಾಗೂ ವ್ಯಕ್ತಿಗಳು 12,769 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದ್ದು, ಇದರಲ್ಲಿ ಅಗ್ರ 20 ಕಂಪನಿಗಳ ಪಾಲು 5,945 ಕೋಟಿ ರೂಪಾಯಿ. ಅಂದರೆ ಒಟ್ಟು ಮೌಲ್ಯದ ಸುಮಾರು ಶೇಕಡ 50ರಷ್ಟು.
ದೇಣಿಗೆ ನೀಡಿದ ಸುಮಾರು 500 ಕಂಪನಿಗಳ ಪೈಕಿ 28 ಕಂಪನಿಗಳು 2019ರ ಏಪ್ರಿಲ್ 12ರ ಬಳಿಕ ಸ್ಥಾಪನೆಯಾದ ಕಂಪನಿಗಳು. 20 ಅಗ್ರ ಖರೀದಿದಾರ ಕಂಪನಿಗಳ ಪೈಕಿ 13 ಕಂಪನಿಗಳ ಹಣಕಾಸು ಫಲಿತಾಂಶ ಲಭ್ಯವಿದ್ದು, ತಮ್ಮ ನಿವ್ವಳ ಲಾಭದ ಪ್ರಮಾಣಾನುಸಾರ ಈ ಕಂಪನಿಗಳು ಬಾಂಡ್ ಖರೀದಿಸಿವೆ.
ಇದನ್ನೂ ಓದಿ : ಚುನಾವಣಾ ಬಾಂಡ್: ಎಸ್ಬಿಐ ನೀಡಿದ ಮಾಹಿತಿ ವೆಬ್ಸೈಟ್ನಲ್ಲಿ ಪ್ರಕಟಿಸಿದ ಚು. ಆಯೋಗ


