ಲಿಂಗಾನುಪಾತಕ್ಕೆ ‘ದ್ರೌಪದಿ’ಯ ಉದಾಹರಣೆ ಕೊಡುವ ಮೂಲಕ ಮತ್ತು ತಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದರೆ ಮಾತ್ರ ಅನುದಾನ ಹಂಚಿಕೆ ಮಾಡುವುದಾಗಿ ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿವಾದ ಸೃಷ್ಟಿಸಿದ್ದಾರೆ.
ಬಾರಾಮತಿ ಲೋಕಸಭೆ ಕ್ಷೇತ್ರದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಜಿತ್ ಪವಾರ್, “ಕೆಲ ಜಿಲ್ಲೆಗಳಲ್ಲಿ ಲಿಂಗಾನುಪಾತ ಎಷ್ಟು ಕುಸಿದಿದೆ ಎಂದರೆ, 1000 ಪುರುಷರಿಗೆ 850 ಮಹಿಳೆಯರಷ್ಟೇ ಇದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ 1000 ಪುರುಷರಿಗೆ 790 ಮಹಿಳೆಯರಷ್ಟೇ ಇರುವ ಸ್ಥಿತಿಯೂ ಇದೆ. ಇದೇ ಪರಿಸ್ಥಿತಿ ಮುಂದುವರೆದರೆ ಭವಿಷ್ಯ ಭಯಾನಕವಾಗಲಿದೆ. ದ್ರೌಪದಿಯ ಸ್ಥಿತಿಯಾಗಿ ಪರಿವರ್ತನೆಯಾಗಲಿದೆ” ಎಂದು ಹೇಳಿದ್ದಾರೆ.
ಇನ್ನು, ತಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದರೆ ಮಾತ್ರ ಕ್ಷೇತ್ರಕ್ಕೆ ಅನುದಾನ ಹಂಚಿಕೆ ಮಾಡುವುದಾಗಿ ಅಜಿತ್ ಪವಾರ್ ಹೇಳಿರುವುದು ಕೂಡ ವಿವಾದಕ್ಕೆ ಕಾರಣವಾಗಿದೆ.
ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ಎನ್ಸಿಪಿ (ಶರದ್ ಪವಾರ್) ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಅಘಾಡಿ ಅಜಿತ್ ಪವಾರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದೆ. ಅಜಿತ್ ಪವಾರ್ ಮತಕ್ಕಾಗಿ ಜನರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದು, ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಕೋರಿದೆ.
ಶರದ್ ಪವಾರ್ ನೇತೃತ್ವದ ಎನ್ಸಿಪಿಯ ನಾಯಕರಾಗಿದ್ದ ಅಜಿತ್ ಪವಾರ್, ಪಕ್ಷದ ನಾಯಕತ್ವ ವಿರುದ್ದ ಬಂಡಾಯವೆದ್ದು ಮುಖ್ಯಮಂತ್ರಿ ಏಕ್ನಾಥ್ ಶಿಂದೆ ನೇತೃತ್ವದ ಶಿವಸೇನೆಯನ್ನು ಬೆಂಬಲಿಸಿದ್ದು, ಪ್ರಸ್ತುತ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದಾರೆ.
ಇದನ್ನೂ ಓದಿ : ಹೈದರಾಬಾದ್: ಮದರ್ ತೆರೇಸಾ ಶಾಲೆ ಮೇಲೆ ಕೇಸರಿ ವಸ್ತ್ರಧಾರಿಗಳಿಂದ ದಾಳಿ: ಜೈಶ್ರೀರಾಮ್ ಘೋಷಣೆ ಕೂಗಿ ಕಲ್ಲು ತೂರಾಟ