ಭಾರತಕ್ಕೆ ಚಿಕಿತ್ಸೆಗೆಂದು ಆಗಮಿಸಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅನಾರ್ ಕಳೆದ ಕೆಲವು ದಿನಗಳಿಂದ ಕೋಲ್ಕತ್ತಾದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಬಾಂಗ್ಲಾದೇಶದ ಉಪ ಹೈಕಮಿಷನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಆಡಳಿತಾರೂಢ ಅವಾಮಿ ಲೀಗ್ನ ಹಿರಿಯ ಸಂಸದ ಅನಾರ್ ಮೇ 13ರಿಂದ ನಾಪತ್ತೆಯಾಗಿದ್ದಾರೆ. ಅನ್ವರುಲ್ ಅಝೀಂ ಅನಾರ್ ಮೇ 12ರಂದು ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ತೆರಳಿದ್ದು ಬಾರಾನಗರದಲ್ಲಿರುವ ತನ್ನ ಸ್ನೇಹಿತನ ಸ್ಥಳದಲ್ಲಿ ತಂಗಿದ್ದರು. ಮೇ 13ರಂದು ಅವರು ಯಾರನ್ನೋ ಭೇಟಿಯಾಗಲು ಹೋಗಿದ್ದರು, ಆದರೆ ಹಿಂತಿರುಗಲಿಲ್ಲ. ಈ ಬಗ್ಗೆ ಅವರ ಸ್ನೇಹಿತ ಕೊಲ್ಕತ್ತಾದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅನಾರ್ ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರು ನವದೆಹಲಿಗೆ ತೆರಳಿರುವುದಾಗಿ ಕುಟುಂಬಸ್ಥರಿಗೆ ಸಂದೇಶಗಳನ್ನು ಕಳುಹಿಸಿರುವ ಬಗ್ಗೆಯೂ ಮಾಹಿತಿ ಇದೆ. ಆದರೆ ಈ ಬಗ್ಗೆ ದೃಢೀಕರಣವಿಲ್ಲ. ಅವರನ್ನು ಇದುವರೆಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಾವು ಪೊಲೀಸರು ಹಾಗೂ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಬಾಂಗ್ಲಾದೇಶದ ಉಪ ಹೈಕಮಿಷನ್ನ ಹಿರಿಯ ಅಧಿಕಾರಿ ಹೇಳಿದ್ದಾರೆ.
ಅನಾರ್ ಸಂಪರ್ಕಕ್ಕೆ ಸಿಗದ ಬಗ್ಗೆ ಅವರ ಕುಟುಂಬವು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಅವರ ಪುತ್ರಿ ಮುಮ್ತಾರಿನ್ ಫಿರ್ದೌಸ್ ಢಾಕಾ ಮೆಟ್ರೋಪಾಲಿಟನ್ ಪೊಲೀಸರಿಗೆ ನಾಪತ್ತೆ ಬಗ್ಗೆ ದೂರು ನೀಡಿದ್ದಾರೆ.
ಅನಾರ್ ಅವರು ಕೊನೆಯ ಬಾರಿಗೆ ಬಿಹಾರದಲ್ಲಿ ಮೊಬೈಲ್ ಬಳಕೆ ಮಾಡಿರುವುದು ನೆಟ್ವರ್ಕ್ ಪರಿಶೀಲಿಸಿದಾಗ ಪತ್ತೆಯಾಗಿದೆ. ಅವರ ಬಾಂಗ್ಲಾದೇಶ ಮತ್ತು ಭಾರತೀಯ ಸಿಮ್ ಕಾರ್ಡ್ಗಳನ್ನು ಮೇ 14ರಿಂದ ಸ್ವಿಚ್ ಆಫ್ ಮಾಡಲಾಗಿದೆ. ಅವರ ಹಠಾತ್ ಕಣ್ಮರೆ ಬಗ್ಗೆ ಕಳವಳ ವ್ಯಕ್ತವಾಗಿದೆ. ಸಂಸದ ಅನ್ವರುಲ್ ಅಝೀಂ ಅನಾರ್ ಅವರಿಗೆ ಸೇರಿದ ಫೋನ್ಗಳು ಇತ್ತೀಚೆಗೆ ಸ್ವಿಚ್ ಆಫ್ ಮತ್ತು ಆನ್ ಆಗಿವೆ, ಆದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಬಾಂಗ್ಲಾದೇಶದ ಹಿರಿಯ ಗುಪ್ತಚರ ಅಧಿಕಾರಿ ಮೊಹಮ್ಮದ್ ಹರೂನ್ ರಶೀದ್ ಹೇಳಿದ್ದಾರೆ. ಇದೀಗ ಬಾಂಗ್ಲಾದೇಶ ಮತ್ತು ಭಾರತೀಯ ಅಧಿಕಾರಿಗಳು ಅನಾರ್ ಅವರಿಗೆ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನು ಓದಿ: ಮಮತಾ ಬ್ಯಾನರ್ಜಿಗೆ ಅವಹೇಳನ: ಅಭಿಜಿತ್ ಗಂಗೋಪಾಧ್ಯಾಯ ಚುನಾವಣಾ ಪ್ರಚಾರಕ್ಕೆ ನಿರ್ಬಂಧ


