ಸರ್ಕಾರಿ ಶಾಲೆಗಳ ಶಿಕ್ಷಕರು ಅಮೆರಿಕ, ಕೆನಡಾದಲ್ಲಿದ್ದುಕೊಂಡು ವೇತನ ಪಡೆಯುತ್ತಿರುವ ದೊಡ್ಡ ಹಗರಣವೊಂದು ಗುಜರಾತ್ನಲ್ಲಿ ಬೆಳಕಿಗೆ ಬಂದಿದೆ.
ದಾಖಲೆಗಳ ಪ್ರಕಾರ, ದಂತಾ ತಾಲೂಕಿನ ಪಂಛಾ ಗ್ರಾಮದ ನಿವಾಸಿಯಾಗಿರುವ ಭಾವನಾ ಪಟೇಲ್ ಬನಸ್ಕಾಂತ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ವಾಸ್ತವವಾಗಿ ಅವರು ಅಮೆರಿಕದಲ್ಲಿ ವಾಸವಾಗಿದ್ದಾರೆ. ಪ್ರತಿ ತಿಂಗಳ ವೇತನ ಅವರ ಖಾತೆಗೆ ಜಮೆ ಆಗುತ್ತಿದೆ. ಅವರು ವರ್ಷಕ್ಕೊಮ್ಮೆ ದೀಪಾವಳಿಗೆ ಮಾತ್ರ ಗ್ರಾಮಕ್ಕೆ ಆಗಮಿಸುತ್ತಾರೆ ಎಂದು newindianexpress.com ವರದಿ ಮಾಡಿದೆ.
ಶಾಲೆಯ ಪ್ರಾಂಶುಪಾಲರು, ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದು ಎಚ್ಚರಿಸಿದ ಬಳಿಕ ಭಾವನಾ ಪಟೇಲ್ ಅವರ ಕಳ್ಳಾಟ ಬೆಳಕಿಗೆ ಬಂದಿದೆ. ಬಳಿಕ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ ಎಂದು ವರದಿ ಹೇಳಿದೆ.
ಕಪಡ್ವಂಜ್ ಮತ್ತು ವಾವ್ ತಾಲೂಕುಗಳಲ್ಲಿ ಇದೇ ರೀತಿಯ ಮತ್ತೆರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಕಪಡ್ವಂಜ್ನ ವಾಟಾ ಶಿವಪುರ ಪ್ರಾಥಮಿಕ ಶಾಲೆಯ ಶಿಕ್ಷಕ ಆಶಿಶ್ ಪಟೇಲ್ ಹಾಗೂ ವಾವ್ನ ಉಚ್ಚಾ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ ದರ್ಶನ್ ಪಟೇಲ್ ಕಳೆದ ಕೆಲ ತಿಂಗಳಿನಿಂದ ನಿರಂತರ ಕೆಲಸಕ್ಕೆ ಗೈರಾಗುತ್ತಿರುವುದು ಪತ್ತೆಯಾಗಿದೆ. ಆದರೆ, ಇಬ್ಬರೂ ತಿಂಗಳ ವೇತನ ಪಡೆಯುತ್ತಿದ್ದಾರೆ. ಆಶಿಶ್ ಪಟೇಲ್ ಅವರ ಬದಲಿಗೆ ವಿಜಯ್ ಎಂಬ ಹೆಸರಿನ ನಕಲಿ ಶಿಕ್ಷಕನೋರ್ವ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವುದು ಗೊತ್ತಾಗಿದೆ.
ಮಾಧ್ಯಮದವರು ಶಾಲೆಗೆ ಭೇಟಿ ನೀಡಿದಾಗ ವಿಜಯ್ ಅಲ್ಲಿಂದ ಪರಾರಿಯಾದ್ದಾನೆ. ಶಾಲೆಯ ಪ್ರಾಂಶುಪಾಲ ಅರ್ಜನ್ ರಾಥೋಡ್ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ವಿಷಯ ತಿಳಿದ ಬಳಿಕ ಕಪಡ್ವಂಜ್ ತಾಲೂಕು ಅಭಿವೃದ್ದಿ ಅಧಿಕಾರಿ ಮಹಿಪತ್ ಚೌಹಾನ್ ತನಿಖೆಗೆ ಆದೇಶಿಸಿದ್ದಾರೆ ಎಂದು newindianexpress.com ವರದಿ ತಿಳಿಸಿದೆ.
ವಾವ್ ತಾಲೂಕಿನ ಉಚ್ಚಾ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ ದರ್ಶನ್ ಪಟೇಲ್ ಕಳೆದ ಎರಡು ವರ್ಷಗಳಿಂದ ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಆದರೆ, ವೇತನ ಪಟ್ಟಿಯಲ್ಲಿ ಅವರ ಹೆಸರು ಈಗಲೂ ಇದೆ. ಶಿಕ್ಷಣ ಇಲಾಖೆಯಲ್ಲಿರುವ ಅಧಿಕಾರಿಗಳು ಅವರಿಗೆ ಬೆಂಬಲ ನೀಡುತ್ತಿರುವುದರಿಂದ ದರ್ಶನ್ ವಿರುದ್ದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಧಿಕೃತ ರಜೆ ಇಲ್ಲದಿದ್ದರೂ, ಪುನರಾವರ್ತಿತ ಸೂಚನೆ ನೀಡಿದ ಹೊರತಾಗಿಯೂ ಪಟೇಲ್ 2022ರ ನವೆಂಬರ್ 10ರಿಂದ ಗೈರು ಹಾಜರಾಗಿದ್ದಾರೆ ಎಂದು ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಬಿಬಿ ಬರೋಟ್ ಹೇಳಿದ್ದಾರೆ.
ಇನ್ನು ಮೆಹ್ಸಾನ ಜಿಲ್ಲೆಯ ಕಾಡಿ ತಾಲೂಕಿನ ರಾಂಚೋಡ್ಪುರ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕ ಕವಿತಾ ದಾಸ್ ಕಳೆದ 9 ತಿಂಗಳಿನಿಂದ ಶಾಲೆಗೆ ಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಹ್ಸಾನ ಜಿಲ್ಲೆಯ ಪ್ರಾಥಮಿಕ ಶಿಕ್ಷಣ ಅಧಿಕಾರಿ ಡಾ. ಶರದ್ ತ್ರಿವೇದಿ “ರಾಂಚೋಡ್ಪುರ ಪ್ರಾಥಮಿಕ ಶಾಲೆಯ ಶಿಕ್ಷಕಿ ಕವಿತಾ ದಾಸ್ ಅವರು ಶಿಕ್ಷಣ ಇಲಾಖೆಯ ಅನುಮತಿ ಪಡೆದುಕೊಂಡು ವಿದೇಶಕ್ಕೆ ತೆರಳಿದ್ದಾರೆ. ಅವರಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಅವರು ಈ ನೋಟಿಸ್ಗೆ ಪ್ರತಿಕ್ರಿಯೆ ನೀಡದಿದ್ದರೆ, ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾಗಿ ವರದಿ ಹೇಳಿದೆ.
ಈ ಕುರಿತು ಮಾತನಾಡುವಾಗ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಪ್ರಫುಲ್ಲ ಪನ್ಸೇರಿಯಾ ಅವರು ರಕ್ಷಣಾತ್ಮಕ ಮಾತುಗಳನ್ನಾಡಿದ್ದಾರೆ. “ವಿದೇಶದಲ್ಲಿ ನೆಲೆಸಿರುವ ಶಿಕ್ಷಕರಿಗೆ 2024ರ ಜನವರಿ 1ರಿಂದ ವೇತನ ಪಾವತಿಯಾಗಿಲ್ಲ. ಶಿಕ್ಷಕರು ಮಧ್ಯಂತರ ರಜೆಯಲ್ಲಿದ್ದಾರೆ. ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮಕೈಗೊಳ್ಳಲು ವಿಚಾರಣೆ ನಡೆಸಲಾಗುವುದು” ಎಂದಿದ್ದಾರೆ.
ರಾಜ್ಯ ಸರ್ಕಾರದ ವಕ್ತಾರ ಸಚಿವ ರಿಷಿಕೇಶ್ ಪಟೇಲ್ ಮಾತನಾಡಿ “ಈ ಬಗ್ಗೆ ನಾವು ಸಂಪೂರ್ಣ ತನಿಖೆ ನಡೆಸುತ್ತೇವೆ. ಪಾಸ್ಪೋರ್ಟ್ ಕಚೇರಿ ದಾಖಲೆಗಳಿಂದ ಹಿಡಿದು ಹಾಜರಾತಿ ಶೀಟ್ಗಳವರೆಗೆ ಎಲ್ಲವನ್ನೂ ಪರಿಶೀಲಿಸುತ್ತೇವೆ. ಈ ವಿಷಯವು ಸಂಪೂರ್ಣ ಪಾರದರ್ಶಕವಾಗಿರುತ್ತದೆ ಮತ್ತು ಸಮಗ್ರ ತನಿಖೆ ನಡೆಸಲಾಗುವುದು” ಎಂದು ಹೇಳಿದ್ದಾರೆ.
ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ : ಕಾಂಗ್ರೆಸ್ ಕಿಡಿ
”ಶಿಕ್ಷಣ ಕ್ಷೇತ್ರದಲ್ಲಿ ನಡೆದಿರುವ ದೊಡ್ಡ ಹಗರಣದ ಬಗ್ಗೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ವಿದೇಶದಲ್ಲಿ ನೆಲೆಸಿರುವ (ಯುಎಸ್ ಮತ್ತು ಕೆನಡಾ) ಶಾಲಾ ಶಿಕ್ಷಕರು ವೇತನ ಪಡೆಯುತ್ತಲೇ ಇದ್ದಾರೆ” ಎಂದು ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ಹೇಳಿದ್ದಾರೆ.
ಇದನ್ನೂ ಓದಿ : ಗೌರಿ ಲಂಕೇಶ್ ಹತ್ಯೆ ಆರೋಪಿಯನ್ನು ಭೇಟಿಯಾದ ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ



ಸೂಪರ್