ಬಿಜೆಪಿಯ ಒತ್ತಡಕ್ಕೆ ಮಣಿದ ಮಿತ್ರಪಕ್ಷ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ಬೇಡಿಕೆಯಿಂದ ಹಿಂದೆ ಸರಿದಿದೆ ಎಂದು ವರದಿಗಳು ಹೇಳಿವೆ.
ಈ ಬೆಳವಣಿಗೆ ಹಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಎನ್ಡಿಎ ಮಿತ್ರಪಕ್ಷಗಳ ಮೇಲೆ ಬಿಜೆಪಿ ಹೊಂದಿರುವ ಹಿಡಿತವನ್ನು ಸ್ಪಷ್ಟಪಡಿಸುತ್ತದೆ.
ಅಕ್ಟೋಬರ್ 5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಕನಿಷ್ಠ ಎರಡು ಸ್ಥಾನಗಳನ್ನು ಬಿಟ್ಟು ಕೊಡುವಂತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸೇರುವ ಸಂದರ್ಭದಲ್ಲೇ ಆರ್ಎಲ್ಡಿ ಬೇಡಿಕೆ ಮುಂದಿಟ್ಟಿತ್ತು ಎಂದು ಪಕ್ಷದ ಮೂಲಗಳು ಹೇಳಿವೆ.
ರೈತರು ಹಾಗೂ ಪಶ್ಚಿಮ ಉತ್ತರ ಪ್ರದೇಶದ ಜಾಟ್ ಸಮುದಾಯದ ಸುತ್ತ ಕೇಂದ್ರಿತವಾಗಿರುವ ಆರ್ ಎಲ್ಡಿ ಪಕ್ಷದ ರಾಜಕೀಯವು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕ ಸಮುದಾಯ ಮತ್ತು ಜಾಟ್ ಸಮುದಾಯವನ್ನು ಹೊಂದಿರುವ ಹರಿಯಾಣಕ್ಕೆ ಪ್ರವೇಶಿಸುವ ಉದ್ದೇಶ ಹೊಂದಿತ್ತು ಎನ್ನಲಾಗಿದೆ.
ಉತ್ತರ ಪ್ರದೇಶದ ಮೀರ್ಪುರ ಕ್ಷೇತ್ರದಿಂದ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಇಂಗಿತವನ್ನು ಆರ್ಎಲ್ಡಿ ವ್ಯಕ್ತಪಡಿಸಿತ್ತು. ಹಾಲಿ ಶಾಸಕ ಚಂದನ್ ಚೌಹಾಣ್, ಬಿಜ್ನೂರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಹಿನ್ನೆಲೆ, ಇಲ್ಲಿ ಉಪಚುನಾವಣೆ ನಡೆಯುತ್ತಿದೆ.
2019ರ ಚುನಾವಣೆಯಲ್ಲಿ 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದಿತ್ತು ಮತ್ತು ಶೇಖಡ 36.49ರಷ್ಟು ಮತ ಪಡೆದಿತ್ತು. ಪ್ರಮುಖ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವೇ ಸ್ಪರ್ಧಿಸಲು ಸಣ್ಣ ಮಿತ್ರ ಪಕ್ಷಗಳು ಸಹಕಾರ ನೀಡಬೇಕು ಎನ್ನುವ ನಿಲುವನ್ನು ಬಿಜೆಪಿ ಹೊಂದಿದೆ.
ಗಮನಾರ್ಹ ಅಂಶವೆಂದರೆ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿ ವೇಳೆ ಆರ್ ಎಲ್ಡಿ ಪಕ್ಷ ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿದ್ದ ಹೋರಾಟಕ್ಕೆ ಬಹಿರಂಗ ಬೆಂಬಲ ಘೋಷಿಸಿತ್ತು. ಹರಿಯಾಣದ ಬದಲು ಜಮ್ಮು ಮತ್ತು ಕಾಶ್ಮೀರದ 10 ಸ್ಥಾನಗಳಿಗೆ ಸ್ಪರ್ಧಿಸಲು ಆಲ್ಎಲ್ಡಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ವಿನೇಶಾ ಒಲಿಂಪಿಕ್ ಸೋಲಿನ ಬಗ್ಗೆ ಬ್ರಿಜ್ ಭೂಷಣ್ ಸಂತೋಷಪಡುತ್ತಾರೆ: ಬಜರಂಗ್ ಪುನಿಯಾ


