ಅಕ್ಟೋಬರ್ ಅಂತ್ಯದೊಳಗೆ ಚನ್ನರಾಯಪಟ್ಟಣ ರೈತರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರ ನಿಯೋಗಕ್ಕೆ ಸೋಮವಾರ ಭರವಸೆ ನೀಡಿದ್ದಾರೆ. ಉಸ್ತುವಾರಿ ಸಚಿವರು ಮತ್ತು ಬೃಹತ್ ಕೈಗಾರಿಕಾ ಸಚಿವರು ಸಭೆ ನಡೆಸಿ ರೈತರ ಸಮಸ್ಯೆಯನ್ನು ಬಗೆಹರಿಸುವ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ಹೇಳಿದ್ದಾಗಿ ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸೇರಿದ್ದ ಸಭೆಯಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿ.ಸಿ. ಬಯ್ಯಾರೆಡ್ಡಿ ಮಾತನಾಡಿ, “ಚನ್ನರಾಯಪಟ್ಟಣ ಹೋಬಳಿಯಲ್ಲಿ 4 ಬಾರಿ ಭೂಸ್ವಾಧೀನ ಮಾಡಿಕೊಂಡಿದ್ದು ರೈತರು ಈಗಾಗಲೇ ಬಹುಪಾಲು ಭೂಮಿ ಕಳೆದುಕೊಂಡಿದ್ದಾರೆ. ಉಳಿದಿರುವುದು ಅಲ್ಪಸ್ವಲ್ಪ ಭೂಮಿ ಮಾತ್ರ. ಈ ಭೂಮಿಯನ್ನು ಸ್ವಾದೀನ ಪ್ರಕ್ರಿಯೆಯಿಂದ ಕೈಬಿಡಲೇಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷದಲ್ಲಿ ಇದ್ದಾಗ ಧರಣಿ ಸ್ಥಳಕ್ಕೆ ಬಂದು ರೈತರ ಪರ ನಿಲ್ಲುವುದಾಗಿ ಭರವಸೆ ನೀಡಿದ್ದೀರಿ” ಎಂದು ನೆನಪು ಮಾಡಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ | ಮೂವರಿಗೆ ಜಾಮೀನು; ದರ್ಶನ್ ಅರ್ಜಿ ಸೆ.27ಕ್ಕೆ ಮುಂದೂಡಿಕೆ
ಕರ್ನಾಟಕ ರಾಜ್ಯ ರೈತಸಂಘದ ಬಡಗಲಪುರ ನಾಗೇಂದ್ರ, ಹೋರಾಟ ಸಮಿತಿಯ ಕಾರಳ್ಳಿ ಶ್ರೀನಿವಾಸ್, ಮಾರೇಗೌಡ ಕೂಡ ದ್ವನಿಗೂಡಿಸಿ, ಅದೇ ಭೂಮಿಯಲ್ಲಿ ಬೆಂಗಳೂರಿಗೆ ಬೇಕಾದ ಹಣ್ಣು ತರಕಾರಿ, ಹೂವು ಎಲ್ಲವನ್ನೂ ಬೆಳೆಯುತ್ತಿದ್ದೇವೆ. ರೈತರ ವಾಸದ ಮನೆಗಳು, ಕೋಳಿಪಾರಂ ಸೇರಿದಂತೆ ಸುಮಾರು ಆರ್ಥಿಕ ಚಟುವಟಿಕೆಗಳು ಕೂಡ ಇದೇ ಭೂಮಿಯಲ್ಲಿ ನಡೆಯುತ್ತಿವೆ. ಆದ್ದರಿಂದ ಭೂಮಿಯನ್ನು ಸ್ವಾಧೀನದಿಂದ ಕೈಬಿಟ್ಟು ರೈತರನ್ನು ರಕ್ಷಿಸಬೇಕು ಎಂದು ಹೇಳಿದರು.
ಹೋರಾಟಗಾರರ ಮಾತು ಕೇಳಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಹೌದು ನಾನು ಅಧಿಕಾರಕ್ಕೆ ಬಂದಾಗ ರೈತರ ಪರವಾರ ನಿರ್ಧಾರ ಮಾಡೋಣ ಎಂದು ಹೇಳಿದ್ದೇನೆ. ಈ ಸಭೆಯಲ್ಲಿ ತೀರ್ಮಾನಕ್ಕೆ ಬರಲು ಬೇಕಾದ ತಯಾರಿ ಇಲ್ಲವಾದ್ದರಿಂದ, ಈ ಕುರಿತು ಮಾಹಿತಿ ತರೆಸಿಕೊಂಡು ಪರಿಶೀಲಿಸಿ ಅಕ್ಟೋಬರ್ ತಿಂಗಳಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರೋಣ ಎಂದು ತಿಳಿಸಿದ್ದಾಗಿ ಹೋರಾಟಗಾರರು ತಿಳಿಸಿದ್ದಾರೆ.
ಈ ವೇಳೆ ಮುಂದಿನ ದಿನಾಂಕವನ್ನು ಇಂದೇ ನಿಗದಿಪಡಿಸಿ ಎಂದು ರೈತರು ಪಟ್ಟು ಹಿಡಿದಾಗ, ದಸರಾ ಹಬ್ಬದ ನಂತರ ತಿಂಗಳ ಕೊನೆಯೊಳಗೆ ಒಂದು ದಿನಾಂಕ ನಿಗದಿಪಡಿಸಿ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸಭೆಯಲ್ಲಿ, ಕರ್ನಾಟಕ ಪ್ರಾಂತ್ಯ ರೈತಸಂಘದ ಪ್ರಭಾ ಬೆಳವಂಗಲ, ಚಂದ್ರ ತೇಜಸ್ವಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನಂಜಪ್ಪ, ಅಶ್ವತ್ಥಪ್ಪ, ರಾಮಚಂದ್ರಪ್ಪ, ಗೋಪಿನಾಥ್ ಸೇರಿದಂತೆ ರೈತ ಮುಖಂಡರು ಭಾಗಿಯಾಗಿದ್ದರು.
ವಿಡಿಯೊ ನೋಡಿ: ನಂಗ ಜೇನು ಕುರುಬ ಮಕ್ಕಾಳು.. ದೂರಿ ದೂರಿ, ನಂಗ ಕಾಡಿನ ಅರಸಾರು.. ದೂರಿ ದೂರಿ – ಜೇನು ಕುರುಬರ ಹಾಡು ಕೇಳಿ


