ಉತ್ತರ ಪ್ರದೇಶದ ಕಾನ್ಪುರದ ಪ್ರೇಮಪುರ ರೈಲು ನಿಲ್ದಾಣದ ಬಳಿ ರೈಲು ಹಳಿ ಮೇಲೆ 5 ಕೆ.ಜಿಯ ಖಾಲಿ ಎಲ್ಪಿಜಿ ಸಿಲಿಂಡರ್ ಪತ್ತೆಯಾಗಿತ್ತು. ಈ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಇದಕ್ಕೂ ಮುನ್ನ, ಕಳೆದ ಒಂದೆರಡು ವರ್ಷಗಳಿಂದ ದೇಶದ ಹಲವೆಡೆ ರೈಲು ಹಳಿಗಳ ಮೇಲೆ ವಿವಿಧ ವಸ್ತುಗಳನ್ನು ಇಟ್ಟ ಪ್ರಕರಣಗಳು ವರದಿಯಾಗುತ್ತಿವೆ.
ಈ ನಡುವೆ ಉತ್ತರ ಪ್ರದೇಶದ ರಾಂಪುರ ಬಳಿ ರೈಲು ಹಳಿ ಮೇಲೆ ಕಬ್ಬಿಣದ ಕಂಬವನ್ನು ಇಟ್ಟು ರೈಲನ್ನು ಹಳಿ ತಪ್ಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಫೋಟೋವೊಂದು ವೈರಲ್ ಆಗುತ್ತಿದೆ.
ಸೆಪ್ಟೆಂಬರ್ 21ರಂದು ಫೇಸ್ಬುಕ್ನಲ್ಲಿ ಫೋಟೋ ಹಂಚಿಕೊಂಡಿರುವ ‘ಆನಂದಗಿರಿ ರಾಮೇಗೌಡ‘ ಎಂಬವರು ” ಉತ್ತರ ಪ್ರದೇಶದ ರಾಂಪುರದಲ್ಲಿ ರೈಲ್ವೇ ಪಲ್ಟಿ ಮಾಡಬೇಕು ಅಂತ ಜೀ ಹಾದಿಗಳು ರೈಲ್ವೆ ಹಳಿ ಮೇಲೆ ಸುಮಾರು 8 ರಿಂದ 9 ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಇಟ್ಟಿದ್ದಾರೆ. ಆದರೆ, ಡೆಹ್ರಾಡೂನ್ ಎಕ್ಸ್ಪ್ರೆಸ್ ರೈಲಿನ ಲೋಕೋ ಪೈಲಟ್ನ ಜಾಣತನದಿಂದ ಅನಾಹುತ ತಪ್ಪಿದೆ. ಲೊಕೊ ಪೈಲಟ್ ಕಬ್ಬಿಣದ ಕಂಬವನ್ನು ನೋಡಿದ ತಕ್ಷಣ ತುರ್ತು ಬ್ರೇಕ್ ಹಾಕುವ ಮೂಲಕ ರೈಲನ್ನು ನಿಲ್ಲಿಸಿದರು. ಆದರೆ ಎಷ್ಟು ಕಾಲ? ಎಲ್ಲಿಯವರೆಗೆ, ಎಲ್ಲಿ ಮತ್ತು ಹೇಗೆ ನಾವು ಉಳಿಸಲ್ಪಡುತ್ತೇವೆ ಏಕೆಂದರೆ ಅವರು ನಮ್ಮನ್ನು ಎಲ್ಲಾ ಕಡೆಯಿಂದ ಸುತ್ತುವರೆದಿದ್ದಾರೆ!” ಎಂದು ಬರೆದುಕೊಂಡಿದ್ದರು.

ಸೆಪ್ಟೆಂಬರ್ 19ರಂದು ಅದೇ ಪೋಟೋವನ್ನು ಜೈ ಶ್ರೀರಾಮ್ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು “ಮುಖ ಮುಚ್ಚಿಕೊಂಡು ಪ್ರೀತಿಯ ಬಗ್ಗೆ ಮಾತನಾಡುವ ಮುಲ್ಲಾಗಳು ಎಲ್ಲಿದ್ದಾರೆ? ಇಂದು ಸಾವಿರಾರು ಹಿಂದೂಗಳ ಜೀವ ಉಳಿದಿದೆ. ರೈಲನ್ನು ಉರುಳಿಸುವ ಉದ್ದೇಶದಿಂದ ರಾಂಪುರದ ಮುಸ್ಲಿಂ ಕಾಲೋನಿಯ ಹಿಂದೆ ಹಾದು ಹೋಗುವ ರೈಲು ಮಾರ್ಗದ ಮೇಲೆ ಉಗ್ರರು ಕಬ್ಬಿಣದ ಕಂಬವನ್ನು ಹಾಕಿದ್ದರು. ಆದರೆ, ಡೆಹ್ರಡೂನ್ ಎಕ್ಸ್ಪ್ರೆಸ್ ಲೋಕೋ ಪೈಲಟ್ ಸರಿಯಾದ ಸಮಯಕ್ಕೆ ತುರ್ತು ಬ್ರೇಕ್ ಹಾಕುವ ಮೂಲಕ ಸಾವಿರಾರು ಹಿಂದೂಗಳ ಪ್ರಾಣ ಉಳಿಸಿದ್ದಾರೆ. ರೈಲ್ವೆ ಸಚಿವಾಲಯ ಕಣ್ಣು ತೆರೆಯುವುದು ಯಾವಾಗ?” ಎಂದು ಬರೆಯಲಾಗಿತ್ತು.
मोहब्बत की बात करने वाले मुल्ले कहा मुंह छुपाकर बैठे हैं
हज़ारों हिन्दुओं की जान जाते जाते बची…
रामपुर के मुस्लिम कॉलोनी के पीछे से गुज़र रही रेलवे लाइन पर ट्रेन को पलटाने के उद्देश्य से लोहे का खम्बा रख दिया आतंकवादियों ने
लेकिन देहरादून एक्सप्रेस लोको पॉयलेट ने समय रहते… pic.twitter.com/YBkZbsWgIV
— जय श्री राम (@Jaishreeram2050) September 19, 2024
ಇನ್ನೂ ಕೆಲ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇದೇ ಫೋಟೋ ಹಂಚಿಕೊಂಡು ಮುಸ್ಲಿಮರು ರೈಲನ್ನು ಹಳಿ ತಪ್ಪಿಸುವ ಉದ್ದೇಶದಿಂದ ಹಳಿ ಮೇಲೆ ಕಬ್ಬಿಣದ ಕಂಬ ಇಟ್ಟಿದ್ದಾರೆ ಎಂದು ಬರೆದುಕೊಂಡಿದ್ದರು.
ಫ್ಯಾಕ್ಟ್ಚೆಕ್ : ವೈರಲ್ ಫೋಟೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಫೋಟೋ ಕುರಿತು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಮಾಹಿತಿ ಹುಡುಕಿದಾಗ ಅದಕ್ಕೆ ಸಂಬಂಧಿಸಿದ ಹಲವು ವರದಿಗಳು ಲಭ್ಯವಾಗಿದೆ.
ಸೆಪ್ಟೆಂಬರ್ 22, 2024ರಂದು ಎಬಿಪಿ ನ್ಯೂಸ್ ಪ್ರಕಟಿಸಿದ ವರದಿಯ ಪ್ರಕಾರ, “ಸೆಪ್ಟೆಂಬರ್ 18ರಂದು ಬಿಲಾಸ್ಪುರ ರಸ್ತೆ ಮತ್ತು ರುದ್ರಾಪುರ ರೈಲು ನಿಲ್ದಾಣಗಳ ನಡುವೆ ಹಳಿಯಲ್ಲಿ ಆರು ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಇಟ್ಟು ನೈನಿ ಜನ ಶತಾಬ್ದಿ ಎಕ್ಸ್ಪ್ರೆಸ್ ರೈಲನ್ನು ಹಳಿ ತಪ್ಪಿಸುವ ಪ್ರಯತ್ನ ಮಾಡಲಾಗಿತ್ತು. ಈ ಘಟನೆ ಸಂಬಂಧಿಸಿದಂತೆ ರಾಂಪುರ ಜಿಲ್ಲೆಯ ನಿವಾಸಿಗಳಾದ ಸನ್ನಿ ಅಲಿಯಾಸ್ ಸಾನಿಯಾ ಅಲಿಯಾಸ್ ಸಂದೀಪ್ ಚೌಹಾಣ್ ಮತ್ತು ಬಿಜೇಂದ್ರ ಅಲಿಯಾಸ್ ಟಿಂಕು ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ”

“ಆರೋಪಿಗಳು ಕಬ್ಬಿಣದ ಕಂಬವನ್ನು ಕಳ್ಳತನ ಮಾಡಿ ಕೊಂಡೊಯ್ಯುತ್ತಿದ್ದರು. ಆಗ ರೈಲಿನ ಹಾರ್ನ್ ಕೇಳಿದೆ. ಆದ್ದರಿಂದ ಕಂಬವನ್ನು ಹಳಿ ಮೇಲೆ ಬಿಟ್ಟು ಓಡಿ ಹೋಗಿದ್ದಾರೆ. ರೈಲು ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದ ರಾಂಪುರದಿಂದ ಸುಮಾರಿ 43 ಕಿ.ಮೀ ದೂರದಲ್ಲಿರುವ ರುದ್ರಪುರ ಸಿಟಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.
ಸೆಪ್ಟೆಂಬರ್ 22, 2024ರಂದು ಈಟಿವಿ ಭಾರತ್ ಉತ್ತರ ಪ್ರದೇಶ ಪ್ರಕಟಿಸಿದ ಮತ್ತೊಂದು ವರದಿ ನಮಗೆ ಲಭ್ಯವಾಗಿದೆ ” ಅದರಲ್ಲೂ ಆರೋಪಿಗಳು ಕಬ್ಬಿಣದ ಕಂಬವನ್ನು ಕದ್ದೊಯ್ಯುವಾಗ ರೈಲು ಬಂದ ಹಿನ್ನೆಲೆ, ಅದನ್ನು ಹಳಿಯಲ್ಲಿ ಬಿಟ್ಟು ಹೋಗಿದ್ದಾರೆ” ಎಂದು ತಿಳಿಸಲಾಗಿದೆ.
“ಘಟನೆಯಲ್ಲಿ ಆರೋಪಿಗಳಿಗೆ ಯಾವುದೇ ದುರುದ್ದೇಶ ಇರಲಿಲ್ಲ. ಆರೋಪಿ ಸಂದೀಪ್ ವಿರುದ್ದ ಬಿಲಾಸ್ಪುರ ಪೊಲೀಸ್ ಠಾಣೆಯಲ್ಲಿ ಈಗಾಗಲೇ 14 ಪ್ರಕರಣಗಳು ದಾಖಲಾಗಿದ್ದು, ಆತ ಕ್ರಿಮಿನಲ್ ಸ್ವಭಾವದ ವ್ಯಕ್ತಿ. ಎರಡನೇ ಆರೋಪಿ ವಿಜಯೇಂದ್ರ ವಿರುದ್ದ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ತಮ್ಮ ಮಾದಕ ವ್ಯಸನವನ್ನು ಪೂರೈಸಲು ಕಬ್ಬಿಣದ ಕಂಬವನ್ನು ಕದಿದ್ದರು. ಅದನ್ನು ತೆಗೆದುಕೊಂಡು ಹೋಗುವಾಗ ರೈಲು ಬಂದಿದ್ದು, ಹಾಗಾಗಿ, ಅದನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ” ಎಂದು ಮೊರಾದಾಬಾದ್ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ವರ್ಮಾ ಹೇಳಿರುವುದಾಗಿ ವರದಿಯಲ್ಲಿದೆ.

ಇನ್ನೂ ಕೆಲ ಮಾಧ್ಯಮ ವರದಿಗಳಿಂದ ಆರೋಪಿಗಳು ಮುಸ್ಲಿಮರಲ್ಲ ಮತ್ತು ಅವರಿಗೆ ರೈಲು ಹಳಿ ತಪ್ಪಿಸುವ ಉದ್ದೇಶ ಇರಲಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : FACT CHECK : ಟೋಲ್ ಪ್ಲಾಝಾದಲ್ಲಿ ಗಲಾಟೆ ನಡೆಸಿದ ಮುಸ್ಲಿಮರು? ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?


