ತುಮಕೂರಿನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಕೊಲೆಗಳಾಗಿದ್ದು ತುಮಕೂರನ್ನು ಬೆಚ್ಚಿಬೀಳಿಸಿದೆ.
ಸ್ನೇಹಿತನೇ ರೌಡಿಶೀಟರ್ನನ್ನು ಹತ್ಯೆ ಮಾಡಿರುವ ಘಟನೆ ತುಮಕೂರು ವಲಯದ ಬೆಳಗುಂಬದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮೋಹನ್ ಕುಮಾರ್ ಅಲಿಯಾಸ್ ಚೊಟ್ಟ ಕುಮಾರ್ ಎಂದು ಗುರುತಿಸಲಾಗಿದೆ.
ಹತ್ಯೆಯಾದ ವ್ಯಕ್ತಿ ಮೋಹನ್ ಕುಮಾರ್ ತುಮಕೂರಿನ ವಿಜಯನಗರ ವಾಸಿ. ಪೊಲೀಸ್ ದಾಖಲೆಗಳಲ್ಲಿ ಈತ ರೌಡಿಶೀಟರ್. ಮೋಹನ್ ಕುಮಾರ್ ಮೂರು ಕೊಲೆ ಪ್ರಕರಣ, ಕಳವು ಮತ್ತು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗುತ್ತಿದೆ. ಶುಕ್ರವಾರ ರಾತ್ರಿ ಮೋಹನ್ ಕುಮಾರ್ ಊರ್ಡಿಗೆರೆಗೆ ಹೊರಟಿದ್ದ. ಮಾರ್ಗದ ನಡುವೆ ಬೆಳಗುಂಬದಲ್ಲಿ ಸ್ನೇಹಿತ ಸಿಕ್ಕಿದನೆಂದು ನಿಂತು ಮಾತನಾಡಿದ್ದಾನೆ. ಮಾತನಾಡುತ್ತ ನಿಂತಿದ್ದ ಇಬ್ಬರ ನಡುವೆ ಮಾತಿಗೆ ಮಾತು ನಡೆದು ಅತಿರೇಕಕ್ಕೆ ಹೋಗಿದೆ.
ಬೆಳಗುಂಬ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ನಡೆದ ಘಟನೆಯಲ್ಲಿ ಸಿಟ್ಟಿಗೆದ್ದ ಸ್ನೇಹಿತ ಟೆಂಪರ್ ರಾಜ ರಸ್ತೆಯ ಬದಿಯ ಸೈಜುಕಲ್ಲನ್ನು ಎತ್ತಿ ರೌಡಿಶೀಟರ್ ಮೋಹನ್ ಕುಮಾರ್ ತಲೆ ಮೇಲೆ ಹಾಕಿದ್ದಾನೆ. ತಲೆ ಜಜ್ಜಿ ಹೋಗಿದೆ. ಮುಖದ ಒಂದು ಭಾಗ ಸೀಳಿ ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಮಾಡಿರುವ ವ್ಯಕ್ತಿ ರಾಜು ಟೆಂಪರ್ ಎಂದು ಶಂಕಿಸಲಾಗಿದೆ. ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಮೋಹನ್ ಕುಮಾರ್ ಗೆ 4 ತಿಂಗಳ ಗಂಡುಮಗು, ಮಗಳು ಮತ್ತು ಪತ್ನಿ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋಹನ್ ಕುಮಾರ್ ಮೂರು ಕೊಲೆ ಪ್ರಕರಣ, ಕಳವು ಮತ್ತು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು ಪ್ರಕರಣ ದಾಖಲಾಗಿದೆ.
ಮಹಿಳೆ ಹತ್ಯೆ
ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ 3.30ರಲ್ಲಿ ದೊಡ್ಡಸಿದ್ದಯ್ಯನಪಾಳ್ಯದಲ್ಲಿ ಘಟನೆ ನಡೆದಿದೆ.
ಕೊಲೆಯಾದ ಮಹಿಳೆಯನ್ನು 35 ವರ್ಷದ ಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದರು. ದಾರಿಯ ನಡುವೆ ಹಳ್ಳ ಇಳಿಯುತ್ತಿದ್ದ ಭಾಗ್ಯಮ್ಮ ಕೊರಳಿಗೆ ಚಾಕು ಹಾಕಿ ಮಾಂಗಲ್ಯ ಸರ ಅಪಹರಿಸಲು ದುಷ್ಕರ್ಮಿ ಯತ್ನಿಸಿದ್ದಾನೆ.
ಆಗ ಹರಿತವಾದ ಚಾಕು ಭಾಗ್ಯಮ್ಮಳ ಕತ್ತು ಸೀಳಿ ಹೋಗುವಂತೆ ಮಾಡಿದೆ. ಹಳ್ಳ ದಾಟಿ ಸ್ವಲ್ಪ ದೂರ ಬರುವಷ್ಟರಲ್ಲಿ ತೀವ್ರ ರಕ್ತಸ್ರಾವವಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.