ಜಮ್ಮುಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಶಂಕಿತ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಮೌಲಾನಾ ಆಜಾದ್ ಮಾರುಕಟ್ಟೆಯ ರಸ್ತೆಯಲ್ಲಿ ಗ್ರೆನೇಡ್ ದಾಳಿ ನಡೆದಿದೆ. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಮಧ್ಯಭಾಗವಾದ ಹರಿಸಿಂಗ್ ಹಿಗ್ ಸ್ಟ್ರೀಟ್ ಏರಿಯಾದಲ್ಲಿ ದಾಳಿ ನಡೆದಿದೆ. ಒಂಭತ್ತು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಏರಿಯಾ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಹೆಚ್ಚಿನ ಯೋಧರು ಭದ್ರತೆಗೆ ನಿಯೋಜನೆಗೊಂಡಿದ್ದರು. ಇದನ್ನು ನೋಡಿಯೇ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೌಲಾನಾ ಆಜಾದ್ ರಸ್ತೆ ಜನಸಂದಣಿ ಪ್ರದೇಶ. ಎಂದಿನಂತೆ ಮಾರುಕಟ್ಟೆ ತೆರೆಯಲಾಗಿತ್ತು. ಜನರು ತಮ್ಮ ತಮ್ಮ ಕೆಲಸಗಳಲಿ ನಿರತರಾಗಿದ್ದರು. ಟೈಟ್ ಸೆಕ್ಯೂರಿಟಿಯಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಏಕಾಏಕಿ ಗ್ರೆನೇಡ್ ದಾಳಿ ಮಾಡಲಾಗಿದೆ. ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಚೆಕ್ ಮಾಡಲಾಗುತ್ತಿದ್ದು, ಉಗ್ರರಿಗಾಗಿ ತೀವ್ರ ಶೋಧ ನಡೆದಿದೆ.
ಕೆಲ ದಿನಗಳ ಹಿಂದಷ್ಟೇ ಉತ್ತರ ಕಾಶ್ಮೀರದ ಸೊಪೋರ್ ಭಾಗದಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಈಗ ಮತ್ತೊಂದು ಗ್ರೆನೇಡ್ ದಾಳಿ ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.