ವಕೀಲರ ವೇಷದಲ್ಲಿದ್ದ ಕೆಲವು ಗೂಂಡಾಗಳು ಅಂದು ನ್ಯಾಯಾಲಯದ ಆವರಣದಲ್ಲಿ ನನ್ನ ಮತ್ತು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದಾಗ ಹೆಚ್ಚಿನ ಪೊಲೀಸರು ಅದನ್ನು ಕೈಕಟ್ಟಿ ನೋಡುತ್ತಿದ್ದುದ್ದು ನಿಜ. ಆದರೆ ತಮ್ಮ ಪ್ರಾಣ ಒತ್ತೆ ಇಟ್ಟು ಆ ದಿನ ನನ್ನನ್ನು ರಕ್ಷಿಸಿದ್ದು ಸಹ ಪೊಲೀಸರೇ ಎಂಬುದು ಸಹ ಸತ್ಯ ಎಂದು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ವಕೀಲರು ಮತ್ತು ಪೊಲೀಸರ ನಡುವಿನ ಘರ್ಷಣೆ ಹಿನ್ನೆಲೆಯಲ್ಲಿ ಸರಣಿ ಟ್ವಿಟ್ಗಳನ್ನು ಮಾಡಿರುವ ಅವರು ತಮ್ಮ ಮೇಲೇ ಅಂದು ವಕೀಲರು ನಡೆಸಿದ್ದ ದಾಳಿಯನ್ನು ಸ್ಮರಿಸಿಕೊಂಡಿದ್ದಾರೆ.
ಅಂದು ನನ್ನ ಮೇಲೆ ದಾಳಿ ಮಾಡಿದ ವಕೀಲರ ಮುಖಂಡನಿಗೂ, ಹಾಗೆಯೇ ಸುಮ್ಮನಿದ್ದ ಪೊಲೀಸ್ ಮುಖ್ಯಸ್ಥನಿಗೂ ಸರ್ಕಾರ ಬಹುಮಾನವನ್ನು ನೀಡಿತು. ಆದ್ದರಿಂದ ಇಂದಿಗೂ ನಾವು ಯಾವುದೇ ವೃತ್ತಿಗೆ ವಿರುದ್ಧವಾಗಿಲ್ಲ ಆದರೆ ನ್ಯಾಯದ ಪರವಾಗಿರುತ್ತೇವೆ ಎಂದು ಹೇಳಲು ಬಯಸುತ್ತೇನೆ.
ತನ್ನ ವಯಕ್ತಿಕ ಲಾಭಕ್ಕಾಗಿ ರಾಜಕೀಯವು ಪ್ರತಿ ವೃತ್ತಿಯ ಅಪರಾಧಿಗಳನ್ನು ರಕ್ಷಿಸುತ್ತದೆ ಎಂದು ನನ್ನ ವೈಯಕ್ತಿಕ ಅನುಭವ ಹೇಳುತ್ತದೆ. ಆದ್ದರಿಂದ ಅಪರಾಧದ ವಿರುದ್ಧ ಮಾತನಾಡಿ, ಯಾವುದೇ ವೃತ್ತಿಯ ವಿರುದ್ಧ ಅಲ್ಲ ಎಂದು ಕನ್ಹಯ್ಯ ಕುಮಾರ್ ಹೇಳಿದ್ದಾರೆ.
ಬಹುಸಂಖ್ಯಾತ ರಾಜಕಾರಣದ ಭಾಗವಾಹಿಯೇ ಘಟನೆ ನಡೆದು ಮೂರು ದಿನಗಳಾದರೂ ಸಹ ಕಾನೂನು ಸಚಿವರಾಗಲೀ ಅಥವಾ ಗೃಹ ಸಚಿವರಾಗಲೀ ಈ ಇಡೀ ವಿಷಯದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ.
ಪ್ರತಿ ವೃತ್ತಿಯಲ್ಲೂ ಕೆಲವರು ದೋಷಿಗಳಿರುತ್ತಾರೆ. ಆದರೆ ಅವರ ತಪ್ಪುಗಳ ಆಧಾರದ ಮೇಲೆ ಇಡೀ ವೃತ್ತಿಯನ್ನು ದ್ವೇಷಿಸಲು ಸಾಧ್ಯವಿಲ್ಲ. ಪ್ರಚೋದನಾಕಾರಿ ಮಾಧ್ಯಮ ಮತ್ತು ರಾಜಕೀಯ ವ್ಯಕ್ತಿಗಳ ಲಾಭಕ್ಕಾಗಿ ಕೆಲವು ವಕೀಲರು ನನ್ನ ಮೇಲೆ ಹಲ್ಲೆ ನಡೆಸಿದ್ದರು ಎಂಬುದು ನಿಜ, ಆದರೆ ಇದರ ಆಧಾರದ ಮೇಲೆ ಇಡೀ ವಕೀಲಿ ವೃತ್ತಿಯನ್ನು ದೂರಲು ಸಾಧ್ಯವಿಲ್ಲ.
ದೆಹಲಿಯಲ್ಲಿ ಪೊಲೀಸರು ಮತ್ತು ವಕೀಲರ ನಡುವೆ ನಡೆಯುತ್ತಿರುವ ಸಂಘರ್ಷವೂ ಒಂದನ್ನು ಮತ್ತೆ ಸಾಬೀತುಪಡಿಸಿದೆ. ಅದೆಂದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಈಗಲಾದರೂ ನಾವು ಸರಿಪಡಿಸದಿದ್ದರೆ ನಾಳೆ ಯಾರ ಪ್ರಾಣ ಬೇಕಾದರೂ ಹೋಗುವ ಸಂಭವವಿದೆ.
ಈ ಇಡೀ ಪ್ರಕರಣದಲ್ಲಿ ಅದು ಪೋಲಿಸ್ ಆಗಿರಲಿ ಅಥವಾ ವಕೀಲರಾಗಲಿ ಯಾರು ಕಾನೂನು ಉಲ್ಲಂಘಿಸಿದ್ದರೂ, ಅವರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಆದರೆ ದುಃಖಕರವೆಂದರೆ ನಮ್ಮ ದೇಶದ ರಾಜಕಾರಣವು ಕಾನೂನು ತನ್ನ ಕೆಲಸವನ್ನು ನ್ಯಾಯಯುತವಾಗಿ ಮಾಡಲು ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.