Homeಕರ್ನಾಟಕಬಿಜೆಪಿ ಜತೆ ಜೆಡಿಎಸ್ ಮೈತ್ರಿಗೆ ದೇವೇಗೌಡರ ಮುದ್ರೆ!

ಬಿಜೆಪಿ ಜತೆ ಜೆಡಿಎಸ್ ಮೈತ್ರಿಗೆ ದೇವೇಗೌಡರ ಮುದ್ರೆ!

- Advertisement -
- Advertisement -

| ನೀಲಗಾರ |

ಕಳೆದ ವಾರ ‘ಆಗಿಯೇಬಿಟ್ಟಿತಾ ಜೆಡಿಎಸ್-ಬಿಜೆಪಿ ಮೈತ್ರಿ?’ ಎಂಬ ವರದಿ ನಮ್ಮಲ್ಲಿ ಪ್ರಕಟವಾಗಿತ್ತು. ಮೇಲ್ನೋಟಕ್ಕೆ ಕುಮಾರಸ್ವಾಮಿಯವರ ಸಿದ್ಧಾಂತಹೀನ ದುಡುಕಿನ ಹೇಳಿಕೆಯಂತೆ ಕಂಡಿದ್ದ ಬೆಂಬಲದ ಹೇಳಿಕೆಯ ಹಿಂದೆ ಸ್ಪಷ್ಟ ಲೆಕ್ಕಾಚಾರವಿತ್ತು. ಸಿದ್ಧಾಂತಕ್ಕೂ ಅವರಿಗೂ ಸಂಬಂಧ ಹೇಗೂ ಇರಲಿಲ್ಲ. ಆದರೆ ಜೆಡಿಎಸ್‌ನ ಅಸ್ತಿತ್ವವೇ ಅಲುಗಾಡುತ್ತಿದೆ ಎಂಬುದನ್ನು ವಿವರಿಸುವ ನಾಲ್ಕು ಅಂಶಗಳನ್ನು ಆ ವರದಿಯಲ್ಲಿ ಬರೆಯಲಾಗಿತ್ತು.

ಇದೀಗ ದೇವೇಗೌಡರು ಒಂದು ಹೆಜ್ಜೆ ಮುಂದೆ ಹೋಗಿ, ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಅಭಯವನ್ನು ನೀಡಿದ್ದಾರೆ. ಬಹಳ ನಾಜೂಕಿನಿಂದ ಅದಕ್ಕೆ ಬೇಕಾದ ಸಮರ್ಥನೆಯನ್ನೂ ಕೊಡುವ ಪ್ರಯತ್ನ ಮಾಡಿದ್ದಾರೆ. ‘ಸಿದ್ದರಾಮಯ್ಯ ಅಹಿಂದ ನಾಯಕ. ನಾನು ಯಾವ ಹಿಂದ ನಾಯಕನೋ ಗೊತ್ತಿಲ್ಲ. ಅವರು ಬೇಕಾದರೆ ಇನ್ನೊಂದು ಚುನಾವಣೆ ಬರಲಿ ಎಂತಲೂ ಹೇಳಬಹುದು. ನಾನು ಅಷ್ಟು ಶಕ್ತನಲ್ಲ. ಹಾಗಾಗಿ ಚುನಾವಣೆ ಬರುವುದು ಬೇಡ’ ಎಂದಿದ್ದಾರೆ. ದೇವೇಗೌಡರು ಖುದ್ದಾಗಿ ಫೋನ್ ಮಾಡಿ ಯಡಿಯೂರಪ್ಪನವರ ಹತ್ತಿರ ಮಾತಾಡಿದ್ದಾರೆ ಎಂತಲೂ ಹೇಳಲಾಗುತ್ತಿದೆ.

ಕಳೆದ ವಾರವೇ ಹೇಳಿದ್ದಂತೆ ಹಲವು ಶಾಸಕರು ಬಿಜೆಪಿಯ ಕಡೆಗೆ ಒಲವು ತೋರಿಸಿರುವುದು ಸ್ಪಷ್ಟವಿತ್ತು ಮತ್ತು ಬಿಜೆಪಿಯು ಘಾತುಕತನದಿಂದ ಇನ್ನಷ್ಟು ಜನರನ್ನು ಸೆಳೆದುಕೊಳ್ಳುವುದೂ ಕಷ್ಟವಿರಲಿಲ್ಲ. ಈ ವಾರದ ಬೆಳವಣಿಗೆ ಎಂದರೆ ಜೆಡಿಎಸ್‌ನ ವಿಧಾನಪರಿಷತ್ತಿನ ಸದಸ್ಯರು ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ಸೇರಿದಂತೆ ಹಲವರು ಸಭೆಯೊಂದನ್ನು ನಡೆಸಿದರು ಮತ್ತು ರೆಸಾರ್ಟ್ವೊಂದಕ್ಕೆ ಜೊತೆಗೂಡಿ ಹೋಗುವ ಕುರಿತೂ ಚರ್ಚಿಸಿದರು. ಶಾಸಕರ ಅಸಮಾಧಾನ ತಣಿಸಲು ದೇವೇಗೌಡರು ಸಭೆ ಕರೆದರೆ, ಕುಮಾರಸ್ವಾಮಿ ಲಂಡನ್ ವಿಮಾನ ಹತ್ತಿದ್ದರು. ಇಂತಹ ಹಲವು ಸಂದರ್ಭಗಳಲ್ಲಿ ತಂದೆ, ಮಗ ಏನೋ ಭಿನ್ನ ನಿಲುವು ತಳೆದಂತೆ ಮಾಡುವುದು, ಸಭೆಯಲ್ಲಿ ತನ್ನ ಅಸಹಾಯಕತೆಯನ್ನು ತಂದೆ ಮಗನ ಮೇಲೆ ಅಥವಾ ಮಗ ತಂದೆಯ ಮೇಲೆ ಹಾಕುವುದು ಇವೆಲ್ಲವೂ ಸಂದಿಗ್ಧವನ್ನು ಮ್ಯಾನೇಜ್ ಮಾಡುವ ಗೌಡರ ಕುಟುಂಬದ ವಿಧಾನಗಳಲ್ಲಿ ಒಂದು. ಆದರೆ, ಅಂತಿಮವಾಗಿ ಇಬ್ಬರೂ ಒಂದೇ ನಿಲುವಿಗೆ ಬಂದಿರುತ್ತಾರೆ. ಇದರಲ್ಲಿ ನಿಜಕ್ಕೂ ದೊಡ್ಡಗೌಡರು ಮತ್ತು ಎಚ್‌ಡಿಕೆ ನಡುವಿನ ಅಭಿಪ್ರಾಯಬೇಧವೂ ಕೆಲಸ ಮಾಡದಿರುವುದಿಲ್ಲ. ಆದರೆ ಅದನ್ನೇ ಭಿನ್ನಮತ ನಿಭಾಯಿಸುವ ಅಸ್ತ್ರವಾಗಿ ಬಳಸುವ ಚಾಕಚಕ್ಯತೆ ಅವರಿಗೆ ಸಿದ್ಧಿಸಿದೆ.

ಈಗಲೂ ಅದೇ ಆಗಿದೆ. ಎಚ್‌ಡಿಕೆ ಹೇಳಿದ್ದನ್ನೇ ಗೌಡರೂ ಹೇಳಿದ್ದಾರೆ. ಕಾರಣಗಳನ್ನು ಅವರ ರೀತಿಯಲ್ಲಿ ಅವರೂ, ಇವರ ರೀತಿಯಲ್ಲಿ ಇವರೂ ಹೇಳಿದ್ದಾರಷ್ಟೇ. ‘ಸಿದ್ದರಾಮಯ್ಯರಿಂದಲೇ ಮೈತ್ರಿ ಸರ್ಕಾರ ಬಿದ್ದಿತು ಎಂದು ನನಗೆ ಈಗ ಮನವರಿಕೆಯಾಗಿದೆ’ ಎಂದು ದೊಡ್ಡ ಗೌಡರು ಇಂದು ಹೇಳಿದ್ದಾರೆ. ಅಂದರೆ ಇಡೀ ಕಾಂಗ್ರೆಸ್ ಪಕ್ಷಕ್ಕಿಂತ ಸಿದ್ದರಾಮಯ್ಯರನ್ನು ಗುರಿ ಮಾಡುವುದು, ಬಿಜೆಪಿಯ ಜೊತೆಗೆ ಕೈ ಜೋಡಿಸುವುದು ಮತ್ತು ಆ ಮೂಲಕ ಅಹಿಂದ ವರ್ಸಸ್ ಮೇಲ್ಜಾತಿ ಧ್ರುವೀಕರಣಕ್ಕೆ ಬೇಕಾದ ಕಥನ ಸಿದ್ಧ ಮಾಡುತ್ತಾ ಹೋಗುವುದು ಇದರ ಹಿಂದಿನ ಲೆಕ್ಕಾಚಾರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಅನ್ನು ಕೈ ಹಿಡಿದಿದ್ದು ಇದೇ ಆಗಿತ್ತು. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಇದಕ್ಕೆ ಒಂದಷ್ಟು ಧಕ್ಕೆ ಬಂದಿತ್ತು. ಈಗ ಮತ್ತೆ ಧ್ರುವೀಕರಣಕ್ಕೆ ಪ್ರಯತ್ನಿಸಿ ತಮ್ಮ ನೆಲೆ ಉಳಿಸಿಕೊಳ್ಳುವ ಯತ್ನ ಮಾಡುತ್ತಿರುವುದನ್ನು ಗೌಡರು ಇಂದು ಲೆಕ್ಕಾಚಾರ ಹಾಕಿ ಆಡಿದ ಮಾತುಗಳಲ್ಲಿ ನೋಡಬಹುದು.

ಅತ್ತ ಶರದ್‌ಪವಾರ್ ಜೊತೆಗೂ ಆಪ್ತರಾಗಿರುವ ದೇವೇಗೌಡರು ಹರಿಯಾಣ ಹಾಗೂ ಮಹಾರಾಷ್ಟ್ರಗಳಲ್ಲಿ ಅತಂತ್ರ ಪರಿಸ್ಥಿತಿ ಉಂಟಾದ ನಂತರ ಬಿಜೆಪಿಯ ಜೊತೆಗೆ ಕೈ ಜೋಡಿಸಲಾರರು ಎಂಬ ಮಾತು ಜೆಡಿಎಸ್ ವಲಯಗಳಲ್ಲಿತ್ತು. ಆದರೆ ಕರ್ನಾಟಕದ ಮಟ್ಟಿಗೆ ಜೆಡಿಎಸ್ ಪರಿಸ್ಥಿತಿ ಕಷ್ಟವಿತ್ತು. ಈಗಲೇ ಚುನಾವಣೆ ನಡೆದರೆ ಬಹಳವೇ ಕಷ್ಟವಿದೆ ಎಂಬ ದೇವೇಗೌಡರ ಮಾತು ಸುಳ್ಳಲ್ಲ. ರಾಜ್ಯಗಳ ಮಟ್ಟಿಗೆ ಏನೇ ವ್ಯತ್ಯಾಸ ಉಂಟಾದರೂ, ಕೇಂದ್ರದಲ್ಲಿ ಮೋದಿ-ಶಾರನ್ನು ಅಲುಗಾಡಿಸುವ ಶಕ್ತಿ ಸದ್ಯಕ್ಕಂತೂ ಕಾಣುತ್ತಿಲ್ಲ. ಹೀಗಾಗಿ ಇಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎನ್ನುವಷ್ಟು ದೂರಾಲೋಚನೆ ಪಳಗಿದ ರಾಜಕಾರಣಿಗಳಿಗೆ ಇರುವುದಿಲ್ಲವೇ?

ಹೀಗಾಗಿ ಈ ಸಾರಿ ಗೌಡರು ಯಾವ ಹಿಂಜರಿಕೆಯನ್ನೂ ತೋರಿಲ್ಲ. ಹಿಂದಿನ ಸಾರಿ ಜೆಡಿಎಸ್ ಬಿಜೆಪಿ ಮೈತ್ರಿಯಾದಾಗಲಾದರೂ ‘ಕೋಮುವಾದ, ಜಾತ್ಯಾತೀತತೆ’ ಇತ್ಯಾದಿ ಮಾತುಗಳು ಅವರ ಬಾಯಿಂದ ಬಂದಿದ್ದವು. ಆದರೆ ಈ ಸಾರಿ ಕೇವಲ ಸಿದ್ದರಾಮಯ್ಯರಿಗೆ ವಿರೋಧ ಮಾತ್ರವಲ್ಲದೇ ಯಡಿಯೂರಪ್ಪನವರ ಸರ್ಕಾರಕ್ಕೆ ಅಭಯವನ್ನೂ ನೀಡುವ ಸ್ಪಷ್ಟತೆಯನ್ನೂ ಅವರು ನೀಡಿಬಿಟ್ಟಿದ್ದಾರೆ. ಅದರ ಜೊತೆ ಜೊತೆಗೇ ಮುಂದಿನ ಯೋಜನೆಯನ್ನೂ ಪ್ರಕಟಿಸಿದ್ದಾರೆ. ಅದು – ಪಕ್ಷವನ್ನು ಕಟ್ಟುವುದು. ಸೈದ್ಧಾಂತಿಕ ಅವಕಾಶವಾದಿತನದ ಬಗ್ಗೆ ಏನೇ ಟೀಕೆ ಇದ್ದರೂ ಮೆಚ್ಚಿಕೊಳ್ಳಬೇಕಾದ್ದು ಗೌಡರ ಈ ಗುಣವನ್ನು.

ಏನು ತಿಪ್ಪರಲಾಗ ಹಾಕಿದರೂ ಯಡಿಯೂರಪ್ಪನವರ ಸರ್ಕಾರವು ಪೂರ್ಣಾವಧಿ ಬಾಳಲಾರದು ಎಂಬುದು ಖಚಿತ. ಹಾಗಾಗಿ ಒಂದಷ್ಟು ಕಾಲ ಸರ್ಕಾರವನ್ನು ಉಳಿಸಿ, ಅಷ್ಟು ಅವಧಿಯನ್ನು ಮುಂದಿನ ಚುನಾವಣೆಗೆ ತಯಾರಿ ಮಾಡಿಕೊಂಡರೆ ಒಳ್ಳೆಯದು ಎಂಬ ಮುಂದಾಲೋಚನೆ ಅವರದ್ದು. ಹೇಗೂ ಮುಂದೆಯೂ ಎರಡರಲ್ಲೊಂದು ಪಕ್ಷಕ್ಕೆ ತಮ್ಮ ಜೊತೆಗೆ ಮೈತ್ರಿ ಮಾಡಿಕೊಳ್ಳಲೇಬೇಕಾದಷ್ಟು ಅನಿವಾರ್ಯತೆಯಿರುವ ಅತಂತ್ರತೆ ಉಂಟಾಗುವಷ್ಟು ಪಕ್ಷ ಬೆಳೆಸುವುದಷ್ಟೇ ಸಾಧ್ಯ. ಆ ಮಧ್ಯೆ ಮಾಡಬೇಕಿರುವುದು ಸಿದ್ದರಾಮಯ್ಯರನ್ನು ಹಣಿಯುವುದಷ್ಟೇ.

ಬಹುಶಃ ಸಿದ್ದರಾಮಯ್ಯನವರ ಬೆಳವಣಿಗೆ ಇರುವುದೂ ಯಡಿಯೂರಪ್ಪ, ದೇವೇಗೌಡ ರಾಜಕಾರಣವನ್ನು ವಿರೋಧಿಸುವುದರಲ್ಲೇ ಇರಬಹುದು. ಹಾಗಾಗಿ ಕರ್ನಾಟಕದ ರಾಜಕಾರಣವು ಮತ್ತೆ 2018ರ ಹೊತ್ತಿಗೇ ಬಂದು ನಿಂತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...