ಅಸ್ಸಾಂನ ಧುಬ್ರಿ ಜಿಲ್ಲೆಯ ಚಿರಕೋಟಾ ಗ್ರಾಮದ 13 ವರ್ಷದ ಮುಸ್ಲಿಂ ಬಾಲಕಿಯನ್ನು ಉತ್ತರ ಪ್ರದೇಶದ ಯುವಕನೊಬ್ಬ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅಪಹರಿಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ಸ್ಥಳೀಯ ಮುಸ್ಲಿಂ ಸಮುದಾಯದಲ್ಲಿ ಹೆಚ್ಚುತ್ತಿರುವ ಕೋಪಕ್ಕೆ ಕಾರಣವಾಗಿದ್ದು, ಈ ಕುರಿತು ಪೊಲೀಸರ ನಿರ್ಲಕ್ಷ್ಯವು ಸ್ಥಳೀಯರ ಆಕ್ರೋಶಕ್ಕೆ ತುತ್ತಾಗಿದೆ.
ಧುಬ್ರಿಯ ಬಾಲಾಜಿ ಇಟ್ಟಿಗೆ ಉದ್ಯಮದಲ್ಲಿ ಕೆಲಸ ಮಾಡುತ್ತುದ್ದ ಪ್ರೇಮಚಂದ್ ಅಲಿಯಾಸ್ ಲಕ್ಕಿ ಎಂದು ಗುರುತಿಸಲಾದ ಆರೋಪಿಯು ತನ್ನ ಮಗಳೊಂದಿಗೆ ಸ್ನೇಹ ಬೆಳೆಸಿ ಅಂತಿಮವಾಗಿ ಅವಳನ್ನು ಕರೆದೊಯ್ದಿದ್ದಾನೆ ಎಂದು ಹುಡುಗಿಯ ತಂದೆ ಹೇಳಿದ್ದಾರೆ. ತನ್ನ ಮಗಳನ್ನು ವೇಶ್ಯಾವಾಟಿಕೆ ಅಥವಾ ಮಾನವ ಕಳ್ಳಸಾಗಣೆಕೆಗೆ ಮಾರಾಟ ಮಾಡಬಹುದೆಂಬ ಭಯದಿಂದ ತಂದೆ ಒಂದು ವಾರದ ಹಿಂದೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ಇನ್ನೂ ಯಾವುದೇ ಮಹತ್ವದ ಕ್ರಮ ಕೈಗೊಳ್ಳದಿರುವುದು ಸಮುದಾಯದೊಳಗೆ ಬೇಸರ ಮೂಡಿಸಿದೆ.
ಪ್ರೇಮಚಂದ್ ಕುರಿತು ತಿಳಿದಿರುವ ಇಟ್ಟಿಗೆ ಉದ್ಯಮದ ಹಲವಾರು ಕಾರ್ಮಿಕರು ಮುಂದೆ ಬಂದು, ಅವನು ಹುಡುಗಿಯೊಂದಿಗೆ ಉತ್ತರ ಪ್ರದೇಶಕ್ಕೆ ಹಿಂತಿರುಗಿದ್ದಾನೆ ಎಂದು ಖಚಿತಪಡಿಸಿದ್ದಾರೆ. ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಪೊಲೀಸರು ಪ್ರಕರಣದಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ. ಮುಸ್ಲಿಮ್ ಯುವಕರು ಮತ್ತು ಮುಸ್ಲಿಮೇತರ ಅಪರಾಧಿಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಪೊಲೀಸರು ನಡೆದುಕೊಳ್ಳುವ ರೀತಿಯಲ್ಲಿ ಸಂಪೂರ್ಣ ವ್ಯತಿರಿಕ್ತತೆಯನ್ನು ಇದು ತೋರಿಸುತ್ತದೆ. ಇದು ಬಾಲಕಿಯ ಕುಟುಂಬ ಮತ್ತು ಸ್ಥಳೀಯರಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ತೋರ್ಪಡಿಸುತ್ತಿದೆ.
ಪ್ರತಿ ಬಾರಿ ಮುಸ್ಲಿಂ ಹುಡುಗನು ಇದೇ ರೀತಿಯ ಪರಿಸ್ಥಿತಿಯಲ್ಲಿ ತೊಡಗಿಸಿಕೊಂಡಾಗ, ಅವನನ್ನು ತ್ವರಿತವಾಗಿ ಬಂಧಿಸಲಾಗುತ್ತದೆ ಮತ್ತು ಅದನ್ನು ಲವ್ ಜಿಹಾದ್ ನ ಹಣೆಪಟ್ಟಿ ಕಟ್ಟಲಾಗುತ್ತದೆ ಎಂದು ಹುಡುಗಿಯ ತಂದೆ ಹೇಳಿದ್ದಾರೆ. ಆದರೆ ಇಲ್ಲಿ, ಆರೋಪಿ ಮುಸ್ಲಿಮೇತರನಾಗಿದ್ದಕ್ಕಾಗಿ ಪೊಲೀಸರು ಅಸಡ್ಡೆ ತೋರುತ್ತಿದ್ದಾರೆ. ಯಾಕೆ ಈ ಡಬಲ್ ಸ್ಟಾಂಡರ್ಡ್? ಎಂದು ಅವರು ಪ್ರಶ್ನಿಸಿದ್ದಾರೆ.
ಆರೋಪಿ ಮತ್ತು ಬಲಿಪಶುವಿನ ಧಾರ್ಮಿಕ ಗುರುತಿನಿಂದಾಗಿ ಅಧಿಕಾರಿಗಳು ಈ ಪ್ರಕರಣದಲ್ಲಿ ಕಣ್ಣು ಮುಚ್ಚಿದ್ದಾರೆ ಎಂದು ಸಮುದಾಯವು ಆರೋಪಿಸುತ್ತಿದೆ. ಇದು ಸ್ಥಳೀಯರ ಇನ್ನಷ್ಟು ಕೋಪಕ್ಕೆ ಕಾರಣವಾಗಿದೆ.
ರಾಜ್ಯದ ವಕೀಲ ಸಮುದಾಯದ ಪ್ರಮುಖರಾದ ಹಿರಿಯ ವಕೀಲ ಇಲ್ಯಾಸ್ ಅಹಮದ್ ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. “ಇವಳು ಹಿಂದೂ ಹುಡುಗಿಯಾಗಿದ್ದರೆ, ಈ ವಿಷಯವನ್ನು ಲವ್ ಜಿಹಾದ್ ಎಂದು ಹಣೆಪಟ್ಟಿ ಕಟ್ಟಲಾಗುತ್ತಿತ್ತು ಮತ್ತು ಪೊಲೀಸರು ಶೀಘ್ರವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಅಹ್ಮದ್ ಹೇಳಿದ್ದಾರೆ. “ಆದರೆ ಇದು ಮುಸ್ಲಿಂ ಬಾಲಕಿಯ ವಿಷಯವಾಗಿರುವುದರಿಂದ ಇದಕ್ಕೆ ಪೊಲೀಸರ ಪ್ರತಿಕ್ರಿಯೆಯು ಆಲಸ್ಯದಿಂದ ಕೂಡಿದೆ. ಇದು ಗಂಭೀರ ಅನ್ಯಾಯವಾಗಿದೆ” ಎಂದಿದ್ದಾರೆ.
ಅಸ್ಸಾಂ ಸರ್ಕಾರ ಮತ್ತು ಪೊಲೀಸರು ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ವಕೀಲ ಅಹ್ಮದ್ ಕರೆ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇಂತಹ ಪ್ರಕರಣದಲ್ಲಿ ಪೊಲೀಸರು ಕಾರ್ಯನಿರ್ವಹಿಸದಿರುವುದು ವಿಭಜಕ ಮನಸ್ಥಿತಿಯನ್ನು ಇನ್ನಷ್ಟು ಆಳವಾಗಿಸಲು ಮತ್ತು ಕಾನೂನು ಜಾರಿಯ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳನ್ನು ಎತ್ತುವಂತೆ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಹೆಚ್ಚುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದ ಸದಸ್ಯರು ತಮ್ಮ ಕಳವಳವನ್ನು ಅಧಿಕಾರಿಗಳು ಪರಿಹರಿಸಬೇಕು ಮತ್ತು ಪೊಲೀಸರು ತೋರುತ್ತಿರುವ ಪಕ್ಷಪಾತವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. “ಸಂತ್ರಸ್ತರು ಅಥವಾ ಆರೋಪಿಯು ಯಾವುದೇ ಸಮುದಾಯಕ್ಕೆ ಸೇರಿದವರಾಗಿದ್ದರೂ ಕಾನೂನನ್ನು ಸಮಾನವಾಗಿ ಅನ್ವಯಿಸಬೇಕು” ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.
ಕುಟುಂಬವು ನ್ಯಾಯಕ್ಕಾಗಿ ಕಾಯುತ್ತಿರುವಾಗ, ಈ ಪ್ರಕರಣದಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಎತ್ತಿ ತೋರಿಸುತ್ತದೆ ಮತ್ತು ಅವರ ಧಾರ್ಮಿಕ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಕಾನೂನಿನ ಅಡಿಯಲ್ಲಿ ಸಮಾನ ರಕ್ಷಣೆಯ ಅಗತ್ಯವನ್ನು ತೋರಿಸುತ್ತದೆ.
ಅಲ್ಲಾ ಕುರಿತು ಸಾಲು: ‘ರಘುಪತಿ ರಾಘವ ರಾಜ ರಾಮ್’ ಹಾಡದಂತೆ ತಡೆದ ಬಿಜೆಪಿ ನಾಯಕರು


