ಹಿಂದೂಗಳಿಗೆ ಮಕ್ಕಳಾಗದಂತೆ ತಡೆಯಲು ಮತ್ತು ಮಾರಕ ರೋಗಕ್ಕೆ ತುತ್ತಾಗುವಂತೆ ಮಾಡಲು ಮುಸ್ಲಿಮರು ಖರ್ಜೂರದಲ್ಲಿ ಮಾತ್ರೆಗಳ ಇಟ್ಟು ಮಾರಾಟ ಮಾಡುತ್ತಿದ್ದರು. ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂಬ ಬರಹದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವ್ಯಕ್ತಿಯೊಬ್ಬರು ಮಾತ್ರೆಗೆ ನೀರು ಹಾಕಿ ಕಲಸಿ, ಅದನ್ನು ಖರ್ಚೂರದ ಒಳಗೆ ಸೇರಿಸುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು.
“ಈ ಮುಸ್ಲಿಂ ಹಲ್ಕಾ ಭೇವಾರ್ಷಿಗಳು ಮಾರಕ ರೋಗ ಬರಲು ಮತ್ತು ಮಕ್ಕಳಾಗದಂತೆ ಖರ್ಜುರದಲ್ಲಿ ಮಾತ್ರೆ ಗಳನ್ನು ಇಟ್ಟು ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದವರನ್ನು ಪೊಲೀಸ್ ರವರು ಬಂಧಿಸಿದ್ದಾರೆ..ಇನ್ನಾದರೂ ಎಚೆತ್ತುಕೊಳ್ಳಿ ಈ ರಕ್ಕಸ ಸಮಾಜ ಇಡೀ ಹಿಂದೂ ಮನುಕುಲಕ್ಕೆ ಮಾರಕ ವೆಂಬುದನ್ನು ತಿಳಿಯಿರಿ” ಎಂಬ ಬರಹದೊಂದಿಗೆ ವಾಟ್ಸಾಪ್ನಲ್ಲಿ ವಿಡಿಯೋವನ್ನು ಜೊತೆಗೆ ಹಂಚಿಕೊಳ್ಳಲಾಗುತ್ತಿದೆ.
ಕೆಲ ಫೇಸ್ಬುಕ್ ಪೇಜ್ಗಳಲ್ಲಿಯೂ ಮೇಲಿನ ಬರಹೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ಅವುಗಳ ಸ್ಕ್ರೀನ್ ಶಾಟ್ ಕೆಳಗೆ ನೋಡಬಹುದು.


ಫ್ಯಾಕ್ಟ್ಚೆಕ್ : ವೈರಲ್ ವಿಡಿಯೋ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ನಾವು ವಿಡಿಯೋ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹಾಕಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ ‘ತಾಝಾ ಟಿವಿ ಚಾನೆಲ್‘ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಜನವರಿ 13, 2025ರಂದು ವಿಡಿಯೋ ಅಪ್ಲೋಡ್ ಆಗಿರುವುದು ಕಂಡು ಬಂದಿದೆ. ಅದರಲ್ಲಿ “ಡ್ರಗ್ ಗ್ಯಾಂಗ್ ರೈಲಿನಲ್ಲಿ ಪ್ರಯಾಣಿಕರನ್ನು ದರೋಡೆ ಮಾಡಲು ಖರ್ಜೂರದಲ್ಲಿ ಡ್ರಗ್ ಸೇರಿಸುವ ಮೂಲಕ ವಿಶಿಷ್ಟ ದಾರಿ ಕಂಡುಕೊಂಡಿದೆ. ಆರ್ಪಿಎಫ್ ತಂಡ ಇವರನ್ನು ಹೌರಾ ನಿಲ್ದಾಣದಲ್ಲಿ ಸೆರೆ ಹಿಡಿದಿದೆ” ಎಂದು ಬರೆದುಕೊಳ್ಳಲಾಗಿದೆ.

ಈ ವಿಡಿಯೋ ಕುರಿತು ನಾವು ಇನ್ನಷ್ಟು ಮಾಹಿತಿ ಹುಡುಕಿದಾಗ ಫ್ಯಾಕ್ಟ್ಚೆಕ್ ವೆಬ್ಸೈಟ್ ‘ಫ್ಯಾಕ್ಟ್ಲೀ‘ ಜನವರಿ 20,2025ರಂದು ಈ ಕುರಿತು ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ.
ವರದಿಯಲ್ಲಿ” ವಿಡಿಯೋ ಸಂಬಂಧ ನಾವು ಕೋಲ್ಕತ್ತಾದಲ್ಲಿ ‘ದಿ ಲೋಕಲ್ ಜರ್ನಲಿಸ್ಟ್’ ಎಂಬ ಸುದ್ದಿ ವೆಬ್ಸೈಟ್, ಫೇಸ್ಬುಕ್ ಪೇಜ್ ಮತ್ತು ಇನ್ಸ್ಟಾಗ್ರಾಂ ಪೇಜ್ ನಡೆಸುತ್ತಿರುವ ಸ್ಥಳೀಯ ಪತ್ರಿಕಾ ವರದಿಗಾರನನ್ನು ಸಂಪರ್ಕಿಸಿದ್ದೇವೆ. ಅವರು “ವೈರಲ್ ವಿಡಿಯೋ ಹೌರಾ ಜಿಆರ್ಪಿ ಪೊಲೀಸ್ ಠಾಣೆಯದ್ದು. ಖರ್ಜೂರದಲ್ಲಿ ಮತ್ತು ಬರುವ ಮಾತ್ರೆಗಳನ್ನು ಬೆರೆಸಿ ಪ್ರಯಾಣಿಕರಿಗೆ ಕೊಟ್ಟ ಬಳಿಕ ಹೇಗೆ ದರೋಡೆ ಮಾಡಲಾಗುತ್ತಿದ್ದು ಎಂಬುವುದನ್ನು ದರೋಡೆ ತಂಡ ಪೊಲೀಸರ ಮುಂದೆ ಮಾಡಿ ತೋರಿಸಿದೆ” ಎಂಬುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಮುಂದುವರಿದು..”ಈ ಘಟನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಹೌರಾ ಜಿಆರ್ಪಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದೇವೆ. ನಮ್ಮೊಂದಿಗೆ ಮಾತನಾಡಿದ ಹೌರಾ ಜಿಆರ್ಪಿ ಪೊಲೀಸ್ ಅಧಿಕಾರಿಗಳು, ಈ ದರೋಡೆಕೋರರು ಪ್ರಯಾಣಿಕರಿಗೆ ಮತ್ತು ಬರುವ ಆಹಾರವನ್ನು ನೀಡುವ ಮೂಲಕ ರೈಲುಗಳಲ್ಲಿ ದರೋಡೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದರೋಡೆಕೋರರು ಯಾವುದೇ ನಿರ್ದಿಷ್ಟ ಧಾರ್ಮಿಕ ಗುಂಪನ್ನು ಗುರಿಯಾಗಿಸಿಕೊಂಡು ಕೃತ್ಯವೆಸಗುತ್ತಿರಲಿಲ್ಲ. ಅಲ್ಲದೆ, ಮತ್ತು ಬರುವ ಮಾತ್ರೆಗಳು ದುರ್ಬಲತೆಯನ್ನು ಉಂಟುಮಾಡುವ ಔಷಧಿಗಳಲ್ಲ ಎಂದು ತಿಳಿಸಿದ್ದಾರೆ” ಎಂದು ಫ್ಯಾಕ್ಟ್ಲೀ ವರದಿ ವಿವರಿಸಿದೆ.
ಪ್ರಕರಣ ಸಂಬಂಧ ನಾವು ಪಶ್ಚಿಮ ಬಂಗಾಳ ಪೊಲೀಸ್ ವೆಬ್ಸೈಟ್ ಪರಿಶೀಲಿಸಿದಾಗ ಎಫ್ಐಆರ್ ಪ್ರತಿಯೂ ಲಭ್ಯವಾಗಿದೆ. ಎಫ್ಐಆರ್ ಪ್ರಕಾರ, ಜನವರಿ 11,2025 ರಂದು, ಹೌರಾ ರೈಲು ನಿಲ್ದಾಣದ ಹಳೆಯ ಸಂಕೀರ್ಣದ ಪ್ಲಾಟ್ಫಾರ್ಮ್ ಸಂಖ್ಯೆ 7 ರಿಂದ ಮೂವರು ದರೋಡೆಕೋರರ ಗುಂಪನ್ನು ಬಂಧಿಸಲಾಗಿದೆ. ಅವರು ರೈಲುಗಳಲ್ಲಿ ಪ್ರಯಾಣಿಕರಿಗೆ ಖರ್ಜೂರಲ್ಲಿ ಅಮಲು ಮಾತ್ರೆಗಳನ್ನು (ಅಟಿವಾನ್ 2 ಎಂಜಿ) ಬೆರೆಸಿ ಕೊಟ್ಟ ಬಳಿಕ ದರೋಡೆ ಮಾಡುತ್ತಿದ್ದರು.
ಎಫ್ಐಆರ್ನಲ್ಲಿ ಶಂಬ್ರು ಪಾಸ್ವಾನ್, ಗೋವಿಂದ್ ಕುಮಾರ್ ಮತ್ತು ಮೊಹಮ್ಮದ್ ಇರ್ಫಾನ್ ಎಂದು ಆರೋಪಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಎಫ್ಐಆರ್ ಪ್ರತಿಯನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಮೂವರು ದರೋಡೆಕೋರರ ತಂಡ ಖರ್ಜೂರದಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ರೈಲು ಪ್ರಯಾಣಿಕರಿಗೆ ಕೊಟ್ಟ ಬಳಿಕ ದರೋಡೆ ಮಾಡುತ್ತಿತ್ತು. ಈ ತಂಡವನ್ನು ಜನವರಿ 11,2025 ರಂದು ಪಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಬಳಿಕ, ಅವರಲ್ಲಿ ಒಬ್ಬ ಹೇಗೆ ದರೋಡೆ ಮಾಡುತ್ತಿದ್ದೆವು ಎಂದು ಪೊಲೀಸರಿಗೆ ತೋರಿಸಿದ್ದಾರೆ. ಆ ವಿಡಿಯೋ ಆಗಿದೆ ವೈರಲ್ ಆಗಿರುವುದು.
ಅದಲ್ಲದೆ, ಹಿಂದೂಗಳಿಗೆ ಮಕ್ಕಳಾಗದಂತೆ ತಡೆಯಲೋ, ಮಾರಕ ರೋಗ ಬರುವಂತೆ ಮಾಡಲೋ ಮುಸ್ಲಿಮರು ಮಾತ್ರೆ ಬೆರೆಸಿ ಕೊಟ್ಟದಲ್ಲ.
FACT CHECK | ಬೆಂಕಿಗೆ ಆಹುತಿ ಆಗುತ್ತಿರುವ ಲಾಸ್ ಏಂಜಲೀಸ್ ಎಂದು ಎಐ ರಚಿತ ವಿಡಿಯೋ ಹಂಚಿಕೆ


