ರಾಜಸ್ಥಾನದಲ್ಲಿ ತನ್ನದೇ ಪಕ್ಷದ ಸರ್ಕಾರ ತನ್ನ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಹೇಳುವ ಮೂಲಕ ಸಂಪುಟ ಸಚಿವ ಡಾ. ಕಿರೋರಿ ಲಾಲ್ ಮೀನಾ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ಭಾರಿ ವಿವಾದ ಸೃಷ್ಟಿಸಿದ್ದ ಎಸ್ಐ (ಸಬ್-ಇನ್ಸ್ಪೆಕ್ಟರ್) ಪರೀಕ್ಷೆಯ ಭ್ರಷ್ಟಾಚಾರದ ಬಗ್ಗೆ ಆತಂಕ ವ್ಯಕ್ತಪಡಿಸಿದಾಗಿನಿಂದ ಸರ್ಕಾರ ತನ್ನ ಮೇಲೆ ನಿಗಾ ಇಟ್ಟಿದೆ ಎಂದು ಅವರು ಆರೋಪಿಸಿದ್ದಾರೆ. ರಾಜಸ್ಥಾನ | ಸಚಿವನ
ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಾ. ಮೀನಾ, “ನಾನು ಎಸ್ಐ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದಾಗ, ಸರ್ಕಾರ ನನ್ನನ್ನು ನಿರ್ಲಕ್ಷಿಸಿದೆ. ಬದಲಾಗಿ, ಈ ಹಿಂದಿನ ಸರ್ಕಾರದಂತೆಯೆ ನನ್ನನ್ನು ನಡೆಸಿಕೊಳ್ಳಲಾಗುತ್ತಿದೆ. ಸಿಐಡಿ ಪ್ರತಿ ಹಂತದಲ್ಲೂ ನನ್ನನ್ನು ಹಿಂಬಾಲಿಸುತ್ತಿದ್ದು, ನನ್ನ ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ. ಆದರೆ ಇದು ನನ್ನ ಮೇಲೆ ಯಾವುದೆ ಪರಿಣಾಮ ಬೀರುವುದಿಲ್ಲ.” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕೆಲವು ದಿನಗಳ ಹಿಂದೆ ರಾಜಸ್ಥಾನ ವಿಧಾನಸಭೆಯಲ್ಲಿ ಮಾತನಾಡಿದ್ದ ಡಾ. ಮೀನಾ, “ಇದು ವಂಚನೆಯ ಯುಗ. ಅವ್ಯವಸ್ಥೆಯನ್ನು ನಾವು ಒಪ್ಪಿದರೆ ಸಂಬಂಧಗಳು ಹಾಗೆಯೇ ಇರುತ್ತವೆ. ಆದರೆ ‘ಹೌದಪ್ಪ’ದ ಜಗತ್ತಿನಲ್ಲಿ ಯಾರಾದರೂ ‘ಇಲ್ಲ’ ಎಂದು ಹೇಳುವ ಧೈರ್ಯ ತೋರಿದರೆ, ಅವರು ನಾಶವಾಗುತ್ತಾರೆ. ಆದರೆ, ನಾನು ಕುರುಡಾಗಿ ಒಪ್ಪುವುದನ್ನು ನಂಬುವುದಿಲ್ಲ; ನಾನು ಸತ್ಯವನ್ನು ಮಾತನಾಡುತ್ತೇನೆ, ಅದು ನನಗೆ ನೋವುಂಟುಮಾಡಿದರೂ ಸಹ ನಾನು ಸತ್ಯ ಮಾತನಾಡುತ್ತೇನೆ.” ಎಂದು ಅವರು ಹೇಳಿದ್ದಾರೆ.
ರಾಜಸ್ಥಾನದ ಭಜನ್ ಲಾಲ್ ಸರ್ಕಾರ ರಚನೆಯಾದಾಗಿನಿಂದ ಡಾ. ಕಿರೋರಿ ಲಾಲ್ ಮೀನಾ ಅವರ ಅತೃಪ್ತಿ ವ್ಯಕ್ತಪಡಿಸುತ್ತಲೆ ಇದ್ದಾರೆ. ರಾಜ್ಯದ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಿದೆ ಎಂದು ಅವರು ಪದೇ ಪದೇ ಆರೋಪಿಸುತ್ತಲೆ ಇದ್ದಾರೆ. ರಾಜಸ್ಥಾನ | ಸಚಿವನ
ಒಂದು ಹಂತದಲ್ಲಿ, ತಾನು ಸಂಪುಟಕ್ಕೆ ರಾಜೀನಾಮೆ ನೀಡುವ ಸುಳಿವು ಕೂಡಾ ನೀಡಿದ್ದರು. ಅದಾಗ್ಯೂ, ವೈದ್ಯಕೀಯ ಇಲಾಖೆಯಂತಹ ನಿರ್ಣಾಯಕ ಖಾತೆಯನ್ನು ನೀಡದ ಕಾರಣ ಅವರು ನಿರಾಶರಾಗಿದ್ದು, ಇದೇ ಕಾರಣಕ್ಕೆ ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ಸೂಚಿಸಿವೆ.
ಅದಾಗ್ಯೂ, ಬಿಜೆಪಿಯು ಅವರ ಸಹೋದರನನ್ನು ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿತ್ತು. ಆದರೆ ಮೀನಾ ಅವರ ಭದ್ರಕೋಟೆಯಲ್ಲೆ ಅವರು ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದು, ಇದು ಪಕ್ಷ ಮತ್ತು ಅವರ ನಡುವಿನ ಬಿರುಕನ್ನು ಇನ್ನಷ್ಟು ಹೆಚ್ಚಿಸಿತು.
ಸಚಿವ ಡಾ. ಮೀನಾ ಅವರ ಆರೋಪಗಳ ನಂತರ, ರಾಜಸ್ಥಾನ ವಿಧಾನಸಭೆಯಲ್ಲಿ ಭಾರಿ ರಾಜಕೀಯ ಹಣಾಹಣಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷವು ಫೋನ್ ಟ್ಯಾಪಿಂಗ್ ವಿಷಯವನ್ನು ಆಕ್ರಮಣಕಾರಿಯಾಗಿ ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಶೂನ್ಯ ವೇಳೆಯಿಂದ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯವರೆಗೆ, ವಿರೋಧ ಪಕ್ಷದ ಶಾಸಕರು ಸದನದಲ್ಲಿ ಸರ್ಕಾರದ ಮೇಲೆ ದಾಳಿ ಮಾಡಲು ಯೋಜಿಸಿದ್ದಾರೆ ಎಂದು ಅದು ಹೇಳಿದೆ.
ಈ ಮಧ್ಯೆ, ಹಿಂದಿನ ಸರ್ಕಾರದ ವಿರುದ್ಧ ಫೋನ್ ಟ್ಯಾಪಿಂಗ್ನ ಇದೇ ರೀತಿಯ ಆರೋಪಗಳನ್ನು ಎತ್ತಿ ತೋರಿಸುವ ಮೂಲಕ ಬಿಜೆಪಿ ಕಾಂಗ್ರೆಸ್ ಅನ್ನು ಎದುರಿಸುವ ಸಾಧ್ಯತೆಯಿದೆ. ಆದಾಗ್ಯೂ, ಈ ಪ್ರಕರಣದ ವಿಶೇಷವೇನೆಂದರೆ, ಹಾಲಿ ಸಚಿವರೊಬ್ಬರು ತಮ್ಮದೇ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಹಾಗಾಗಿ ಆಡಳಿತರೂಢ ಪಕ್ಷವನ್ನು ಇದು ಇಕ್ಕಟ್ಟಿನಲ್ಲಿ ಸಿಲುಕಿಸಲಿದೆ.
ಇದನ್ನೂಓದಿ: ಸರ್ಕಾರದ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕರಿಸಿದ ರಾಜ್ಯಪಾಲರು
ಸರ್ಕಾರದ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕರಿಸಿದ ರಾಜ್ಯಪಾಲರು


