ಕಾಂಗ್ರೆಸ್ ದಿವಾಳಿಯಾಗಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರಣರಾಗಿದ್ದಾರೆ ಅಲ್ಲದೇ ಎಲ್ಲಾ ಮಾಫಿಯಾ ಜೊತೆಗೂ ಇವರ ಕನೆಕ್ಷನ್ ಇದೆ ಎಂದು ಅನರ್ಹ ಶಾಸಕ, ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ತಿ ಡಿ.ಸುಧಾಕರ್ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಅಜಾದ್ನಗರದಲ್ಲಿ ಪ್ರಚಾರ ನಡೆಸಿದ ನಂತರ ಮಾತನಾಡಿದ ಅವರು ದಿನೇಶ್ ಗುಂಡೂರಾವ್ ನಾಯಕತ್ವ ಬಂದ ನಂತರ ಕಾಂಗ್ರೆಸ್ ನೆಲಕಚ್ಚಿದೆ. ಲೋಕಸಭೆಯಲ್ಲಿ 28ರಲ್ಲಿ 1 ಸ್ಥಾನ ಮಾತ್ರ ಗೆಲ್ಲಲು ಕಾಂಗ್ರೆಸ್ಗೆ ಸಾಧ್ಯವಾಗಿದೆ. ನೈತಿಕತೆ ಇದ್ದರೆ ಆಗಲೇ ಅವರು ರಾಜೀನಾಮೆ ಕೊಡಬೇಕಿತ್ತು ಎಂದು ಟೀಕಿಸಿದ್ದಾರೆ.
ಅವರಿಗೆ ನೈತಿಕತೆಯೂ ಇಲ್ಲ, ರಾಜಕೀಯ ಸಿದ್ದಾಂತವೂ ಇಲ್ಲ. ಕೆಪಿಸಿಸಿ ಅಧ್ಯಕ್ಷರಾಗಿದ್ದುಕೊಂಡು ಶಾಸಕರ ಬಗ್ಗೆ ಕಾಳಜಿಯಿಲ್ಲ. ನಮಗೆ ಅನ್ಯಾಯವಾದಾಗ ಒಂದು ದಿನವೂ ಅವರು ನಮ್ಮ ಪರ ಮಾತಾಡಿಲ್ಲ, ಈಗ ನಮ್ಮ ಮಾತಾಡುವ ಯೋಗ್ಯತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಅವರು ನನಗೆ ಸರ್ಟಿಫಿಕೆಟ್ ಕೊಡುವುದು ಬೇಡ. ಅವರ ಎಲ್ಲಾ ಅಕ್ರಮಗಳು ನನಗೆ ಗೊತ್ತಿವೆ. ಗಾಂಧಿನಗರದಲ್ಲಿ ಹಫ್ತಾ ವಸೂಲಿ, ಡ್ಯಾನ್ಸ್ ಬಾರ್ಗಳ ಜೊತೆ ಸಂಬಂಧ, ಎಲ್ಲಾ ಮಾಫಿಯಾ ಜೊತೆಗೂ ಇವರ ಕನೆಕ್ಷನ್ ಇದೆ. ಯಾರಾದರೂ ಭ್ರಷ್ಟಾಚಾರಿಗಳು ಬೆಂಗಳೂರಿನಲ್ಲಿದ್ದರೆ ನಂಬರ್ 1 ಸ್ಥಾನ ಇವರಿಗೆ ಕೊಡಬೇಕಾಗುತ್ತದೆ ಅವರು ಆರೋಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ಗೆದ್ದರೆ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು, ಆಸ್ಪತ್ರೆ ಎಲ್ಲಾ ಬರಲಿವೆ ಎಂದು ಅವರು ಜನರಿಗೆ ಭರವಸೆ ನೀಡಿದ್ದಾರೆ. ಚಿತ್ರನಟಿ ತಾರ, ಸಂಸದ ಪಿ.ಸಿ ಮೋಹನ್ ಅವರ ಜೊತೆಗಿದ್ದರು.
BBMP civil contract mafia!