ಅಜಿತ್ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಶನಿವಾರದಿಂದ ಕಾಣೆಯಾಗಿದ್ದ ಎನ್ಸಿಪಿ ಪಕ್ಷದ ನಾಲ್ವರು ಶಾಸಕರು ಸಂಪರ್ಕಕ್ಕೆ ಸಿಕ್ಕಿದ್ದು ಮರಳಿ ಎನ್ಸಿಪಿ ಪಕ್ಷಕ್ಕೆ ಮರಳಿದ್ದಾರೆ ಪಕ್ಷ ತಿಳಿಸಿದೆ. ಎನ್ಸಿಪಿಯ 54 ಶಾಸಕರಲ್ಲಿ ಅಜಿತ್ ಪವಾರ್ ಹೊರತುಪಡಿಸಿ 53 ಮಂದಿ ಮತ್ತೆ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷ ಹೇಳಿಕೊಂಡಿದೆ.
ಮೂಲಗಳ ಪ್ರಕಾರ ಕೆಲ ಬಂಡಾಯ ಶಾಸಕರನ್ನು ಬಿಜೆಪಿಯು ಶನಿವಾರ ದೆಹಲಿಗೆ ಕಳಿಸಿದೆ. ಮೂವರು ಶಾಸಕರಾದ ದೌಲತ್ ದರೋಡಾ, ಅನಿಲ್ ಪಾಟೀಲ್ ಮತ್ತು ನಿತಿನ್ ಪವಾರ್ ಅವರನ್ನು ಗುರಗಾಂವ್ನಿಂದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಯುವ ವಿಭಾಗವು ರಕ್ಷಿಸಿ ಮರಳಿ ಮುಂಬೈಗೆ ಕರೆತಂದಿದೆ.
ಮೂವರು ಶಾಸಕರು ಇಂದು ಮುಂಜಾನೆ 4: 30 ರ ಸುಮಾರಿಗೆ ಮುಂಬೈ ತಲುಪಿದರು. ಮತ್ತೊಬ್ಬ ಶಾಸಕ ನರ್ಹಾರಿ ಝಿರ್ವಾಲ್ ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದಾರೆ ಎಂದು ಹೇಳಿದ್ದಾರೆ.
“ಪಕ್ಷದ 52 ಶಾಸಕರು ನಮ್ಮ ಬಳಿಗೆ ಬಂದಿದ್ದಾರೆ, ಇನ್ನೊಬ್ಬರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದು ಹಿರಿಯ ಎನ್ಸಿಪಿ ನಾಯಕ ನವಾಬ್ ಮಲಿಕ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ NCP – ಶಿವಸೇನೆ ಜಂಟಿ ಪತ್ರಿಕಾಗೋಷ್ಟಿ: NCP ಶಾಸಕಾಂಗ ನಾಯಕತ್ವದಿಂದ ಅಜಿತ್ ಪವಾರ್ ಉಚ್ಚಾಟನೆ
ಶನಿವಾರದ ಕ್ಷಿಪ್ರ ಘಟನೆಗಳ ನಂತರ ನಾಪತ್ತೆಯಾದ ದೌಲತ್ ದರೋಡಾ ಕಳೆದುಹೋಗಿದ್ದಾರೆ ಎಂದು ದೂರು ದಾಖಲಿಸಲಾಗಿದೆ. ಆದರೆ ಭಾನುವಾರ ವೀಡಿಯೊವೊಂದರಲ್ಲಿ ಅವರು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರಿಗೆ ನನ್ನ ಬೆಂಬಲವಿದೆ, ನಾನು ಸುರಕ್ಷಿತ. ಗಡಿಯಾರ ಚಿಹ್ನೆಯಲ್ಲಿ (ಎನ್ಸಿಪಿ) ಚುನಾವಣೆಯಲ್ಲಿ ಗೆದ್ದು ನಾನು ಬಂದಿದ್ದೇನೆ, ಆದ್ದರಿಂದ ಪಕ್ಷವನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಶರದ್ ಪವಾರ್ ಮತ್ತು ಅಜಿತ್ ಪವಾರ್ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಅದರೊಂದಿಗೆ ಇರುತ್ತೇನೆ. ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಅವರು ಹೇಳಿದ್ದರು.
ಬಹುಮತ ಸಾಬೀತುಪಡಿಸುವ ದೃಷ್ಟಿಯಿಂದ ಎನ್ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಎಲ್ಲರೂ ತಮ್ಮ ಶಾಸಕರನ್ನು ಮುಂಬೈನ ಐಷಾರಾಮಿ ಹೋಟೆಲ್ಗಳನ್ನು ಇರಿಸುವ ಮೂಲಕ ಕಾವಲು ಕಾಯುತ್ತಿದ್ದಾರೆ.