ಸೈಬರ್ ವಂಚಕರ ಕಾಟ ತಾಳಲಾರದೆ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಶುಕ್ರವಾರ (ಮಾ.28) ಬೆಳಕಿಗೆ ಬಂದಿದೆ.
ಬೀಡಿಯ ಕ್ರಿಶ್ಚಿಯನ್ ಓಣಿಯ ನಿವಾಸಿಗಳಾದ ಡಿಯಾಗೋ ನಜರತ್ (83) ಮತ್ತು ಅವರ ಪತ್ನಿ ಪ್ಲೇವಿಯಾ ಡಿಯಾಗೋ ನಜರತ್ (78) ಸಾವಿಗೆ ಶರಣಾದವರು.
ಸೈಬರ್ ವಂಚಕರ ಕಾಟ ತಾಳಲಾರದೆ ಸಾಯುತ್ತಿರುವುದಾಗಿ ಡಿಯಾಗೋ ಅವರು ಬರೆದಿಟ್ಟಿರುವ ಡೆತ್ನೋಟ್ ಪೊಲೀಸರಿಗೆ ಸಿಕ್ಕಿದೆ ಎಂದು ವರದಿಗಳು ಹೇಳಿವೆ.
ಡಿಯಾಗೋ ನಜರತ್ ಅವರು ಮಹಾರಾಷ್ಟ್ರದ ಸಚಿವಾಲಯದಲ್ಲಿ ಬಿಎಸ್ಎನ್ಎಲ್ ಸಂಸ್ಥೆಯ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಆ ಬಳಿಕ ತಮ್ಮ ಮೂಲ ಊರಾದ ಬೀಡಿಯಲ್ಲಿ ಪತ್ನಿ ಜೊತೆ ವಾಸವಿದ್ದರು. ದಂಪತಿಗೆ ಮಕ್ಕಳಿರಲಿಲ್ಲ.
ಡಿಯಾಗೋ ದಂಪತಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದರು. ಅವರು ಸಮಾಜ ಸೇವೆಗೆ ಹಣ ಖರ್ಚು ಮಾಡುತ್ತಿರುವುದನ್ನು ಗಮನಿಸಿದ ಸೈಬರ್ ವಂಚಕರು ದೆಹಲಿಯಿಂದ ಕರೆ ಮಾಡಿ ಬೆದರಿಸುತ್ತಿದ್ದರು ಎಂದು ವರದಿಯಾಗಿದೆ.
ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿ ಇರುವುದಾಗಿ ಹೇಳಿಕೊಂಡ ಅನಿಲ್ ಯಾದವ್ ಎಂಬ ವ್ಯಕ್ತಿ ಡಿಯಾಗೋ ದಂಪತಿಯ ಮೊಬೈಲ್ಗೆ ಪದೇ ಪದೇ ಕರೆ ಮಾಡುತ್ತಿದ್ದ. “ನಿಮ್ಮ ಮೊಬೈಲ್ನಿಂದ ನನಗೆ ಅಶ್ಲೀಲ ಫೋಟೋ, ಸಂದೇಶಗಳು ಬಂದಿವೆ. ನಾನು ಸೈಬರ್ ಸೆಲ್ಗೆ ದೂರು ನೀಡುತ್ತೇನೆ” ಎಂದು ಬೆದರಿಸುತ್ತಿದ್ದ. ದಂಪತಿಯಿಂದ 50 ಲಕ್ಷ ರೂಪಾಯಿ ಪಡೆದುಕೊಂಡರೂ ಕಿರುಕುಳ ನಿಲ್ಲಿಸಿರಲಿಲ್ಲ.
ನಂತರ, ಸುಮಿತ ಬಿಸ್ರಾ ಎಂಬ ಹೆಸರಿನಲ್ಲಿ ಕರೆ ಮಾಡಿ, ಅನಿಲ್ ಅವರು ದೂರು ಕೊಟ್ಟಿದ್ದಾರೆ. ಹಾಗಾಗಿ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಹಣ ಕೊಡದಿದ್ದರೆ ಅಶ್ಲೀಲ ಫೋಟೋ, ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾರೆ. ಅವರ ಕಾಟ ತಾಳಲಾರದೆ ಸಾಯುತ್ತಿದ್ದೇವೆ. ನಮ್ಮ ದೇಹಗಳನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಮೆಡಿಕಲ್ ಕಾಲೇಜಿಗೆ ಕೊಡಿ ಎಂದು ಡಿಯಾಗೋ ಅವರು ಡೆತ್ನೋಟ್ನಲ್ಲಿ ಬರೆದಿರುವುದಾಗಿ ವರದಿಗಳು ವಿವರಿಸಿವೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸೈಬರ್ ವಂಚಕರ ಕಾಟ ತಾಳಲಾರದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಏನಿದು ಡಿಜಿಟಲ್ ಅರೆಸ್ಟ್ ?
ಸೈಬರ್ ವಂಚಕರು ಸಿಬಿಐ, ಇಡಿ, ನಾರ್ಕೋಟಿಕ್ಸ್ ಬ್ಯೂರೋ ಅಥವಾ ಕಸ್ಟಮ್ಸ್ ಅಧಿಕಾರಿಗಳಂತಹ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ ವಾಟ್ಸಾಪ್, ಸ್ಕೈಪ್ನಂತಹ ಪ್ಲಾಟ್ಫಾರ್ಮ್ಗಳ ಮೂಲಕ ಆಡಿಯೋ-ವಿಡಿಯೋ ಬಳಸಿಕೊಂಡು ಜನರನ್ನು ಸಂಪರ್ಕಿಸಿ ಅವರಿಂದ ಹಣ ಸುಲಿಗೆ ಮಾಡುವ ಪ್ರಕ್ರಿಯೇ ಡಿಜಿಟಲ್ ಅರೆಸ್ಟ್. ಇಲ್ಲಿ ವಂಚಕರು ನಿಷೇಧಿಗಳ ವಸ್ತುಗಳ ಸಾಗಾಟ, ಮಾದಕ ವಸ್ತುಗಳ ವ್ಯವಹಾರ, ಹಣ ಅಕ್ರಮ ವರ್ಗಾವಣೆಯಂತಹ ಸುಳ್ಳು ಆರೋಪಗಳನ್ನು ಜನರ ಮೇಲೆ ಹೊರಿಸಿ, ಅವರನ್ನು ಬೆದರಿಸಿ ಹಣ ಪಡೆಯುತ್ತಾರೆ. ಇದಕ್ಕಾಗಿ ಮುಖ್ಯವಾಗಿ ಆಧಾರ್ ಕಾರ್ಡ್ನಲ್ಲಿರುವ ವೈಯಕ್ತಿಕ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಡಿಜಿಟಲ್ ಅರೆಸ್ಟ್ ಮೂಲಕ ಹಣ ಸುಲಿಗೆ ಮಾಡುವ ವಂಚಕರು, ಸರ್ಕಾರಿ ಅಧಿಕಾರಿಗಳಂತೆ ಜನರನ್ನು ನಂಬಿಸಲು ಸಮವಸ್ತ್ರ, ಕಚೇರಿ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ. ಇಲ್ಲದಿದ್ದರೆ ಡೀಪ್ಫೇಕ್ನಂತಹ ಪರಿಕರಗಳನ್ನು ಬಳಸಿಕೊಂಡು ವಿಡಿಯೋ ಕರೆಗಳನ್ನು ಮಾಡುತ್ತಾರೆ. ಒಂದು ಸಲ ಬಲಿಪಶು ವಂಚಕರ ಜೊತೆ ಮಾತನಾಡಿದರೆ, ಅವರು ಮನೆ ಬಿಟ್ಟು ಹೋಗದಂತೆ, ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಪ್ರತ್ಯೇಕವಾಗಿರುವಂತೆ ವಂಚಕರು ನೋಡಿಕೊಂಡಿರುತ್ತಾರೆ. ಒಂದು ರೀತಿಯಲ್ಲಿ “ನಾನು ಏನೋ ತಪ್ಪು ಮಾಡಿದ್ದೇನೆ, ಬಂಧನದಲ್ಲಿದ್ದೇನೆ” ಎಂಬ ಭಾವನೆಯನ್ನು ಬಲಿಪಶುಗಳ ಮನಸ್ಸಿನಲ್ಲಿ ಮೂಡಿಸುತ್ತಾರೆ.
ಸುಳ್ಳು ತನಿಖೆ, ಜೈಲು ಇತ್ಯಾದಿ ವಿಚಾರಗಳನ್ನು ವಿಡಿಯೋ, ಆಡಿಯೋ ಕರೆಗಳ ಮೂಲಕವೇ ಮಾಡುವ ವಂಚಕರು, ಬಲಿಪಶು ಇರುವ ಜಾಗದ ಮೇಲೆ ನಿಗಾ ಇಟ್ಟು ಅವರಲ್ಲಿ ಭಯ ಮೂಡಿಸುತ್ತಾರೆ. ನಾನು ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿಯದ ಅಮಾಯಕ ಜನರು ವಂಚಕರು ಹೇಳಿದಂತೆ ಕೇಳಲು ಶುರು ಮಾಡುತ್ತಾರೆ. ತಾನು ಅನುಭವಿಸುತ್ತಿರುವ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಇದರ ಲಾಭ ಪಡೆಯುವ ವಂಚಕರು ಹಣ ಸುಲಿಗೆ ಮಾಡುತ್ತಾರೆ.
ವಂಚಕರು ತಮ್ಮನ್ನು ನಂಬುವಂತೆ ಮಾಡಲು ನಕಲಿ ಬಂಧನ ವಾರೆಂಟ್, ನ್ಯಾಯಾಲಯದ ಆದೇಶ ಪ್ರತಿಗಳನ್ನು ತೋರಿಸುತ್ತಾರೆ. ಅದನ್ನು ಬಲಿಪಶುವಿನ ಮೊಬೈಲ್ಗೆ ಕಳುಹಿಸಿಕೊಡುತ್ತಾರೆ. ಕೆಲವೊಮ್ಮೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಕಲಿ ನ್ಯಾಯಾಲಯದ ಕಲಾಪಗಳನ್ನು ನಡೆಸುತ್ತಾರೆ.
ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಪ್ರಕಾರ, ಭಾರತದಲ್ಲಿ 2024ರಲ್ಲಿ ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡಿದೆ. ಮೊದಲ ತ್ರೈಮಾಸಿಕವೊಂದರಲ್ಲೇ ಭಾರತೀಯರು ಡಿಜಿಟಲ್ ವಂಚನೆಗಳಿಂದ 120.3 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ಪೈಕಿ ಹೆಚ್ಚಿನವು ಡಿಜಿಟಲ್ ಬಂಧನ ಪ್ರಕರಣಗಳಾಗಿವೆ.
ನಿಮಗೆ ಏನಾದರು ಅನುಮಾನಾಸ್ಪದ ಕರೆಗಳು ಬಂದರೆ, ರಾಷ್ಟ್ರೀಯ ಸೈಬರ್ ಸಹಾಯವಾಣಿ 1930, ಅಥವಾ cybercrime.gov.in ಗೆ ಮಾಹಿತಿ ನೀಡಿ. ಆ ಬಗ್ಗೆ ನಿಮ್ಮ ಕುಟುಂಬ ಮತ್ತು ಪೊಲೀಸರ ಗಮನಕ್ಕೆ ತನ್ನಿ. ಸಾಕ್ಷ್ಯಗಳನ್ನು ಸಂಗ್ರಹಿಸಲು ಮರೆಯದಿರಿ.
ಸಹಕಾರ ಸಚಿವ ರಾಜಣ್ಣ ಮಗನ ಹತ್ಯೆಗೆ ಸಂಚು ಆರೋಪ: ಐವರ ವಿರುದ್ಧ ಎಫ್ಐಆರ್ ದಾಖಲು


