Homeಮುಖಪುಟಜೀತ ಪದ್ದತಿ ಜೀವಂತ: 9 ವರ್ಷದ ಬುಡಕಟ್ಟು ಬಾಲಕನ ಸಾವಿನಿಂದ ದೌರ್ಜನ್ಯ ಬಯಲು

ಜೀತ ಪದ್ದತಿ ಜೀವಂತ: 9 ವರ್ಷದ ಬುಡಕಟ್ಟು ಬಾಲಕನ ಸಾವಿನಿಂದ ದೌರ್ಜನ್ಯ ಬಯಲು

- Advertisement -
- Advertisement -

ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಸತ್ಯವೇಡು ಪೊಲೀಸರು 9 ವರ್ಷದ ಬುಡಕಟ್ಟು ಬಾಲಕ ಯಾನಾಡಿ ವೆಂಕಟೇಶು ಅವರ ಅಕ್ರಮ ಬಂಧನ ಮತ್ತು ನಂತರದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.

ಗುರುವಾರ (ಮೇ.22) ಸತ್ಯವೇಡು ಪೊಲೀಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಡಿಎಸ್ಪಿ ಜಿ. ರವಿಕುಮಾರ್ ಪ್ರಕರಣದ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಬಂಧಿತರನ್ನು ತಿರುಪತಿ ಜಿಲ್ಲೆಯ ಸತ್ಯವೇಡು ಮಂಡಲದ ಎನ್. ಮುತ್ತು (60), ಅವರ ಪತ್ನಿ ಎಂ. ಧನಭಾಗ್ಯಂ (52), ಮತ್ತು ಅವರ ಮಗ ಎಂ. ರಾಜಶೇಖರ್ (32) ಎಂದು ಗುರುತಿಸಲಾಗಿದೆ.

ಡಿಎಸ್ಪಿ ಪ್ರಕಾರ, ಗುಡೂರು ಮಂಡಲದ ಚವಟಪಾಲೆಂನ ನಿವಾಸಿಗಳಾದ ಅನಕಮ್ಮ ಮತ್ತು ಪ್ರಕಾಶ್ ಮೃತ ವೆಂಕಟೇಶು ಸೇರಿದಂತೆ ತಮ್ಮ ಮೂವರು ಮಕ್ಕಳೊಂದಿಗೆ ನೆಲ್ಲೂರು ಜಿಲ್ಲೆಯ ದತ್ತಲೂರು ಮಂಡಲದ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.

ಸತ್ಯವೇಡು ಮಂಡಲದ ಎನ್.ಆರ್ ಅಗ್ರಹಾರದ ಮುತ್ತು ಮತ್ತು ಧನಭಾಗ್ಯಂ ದಂಪತಿ ವೆಂಕಟೇಶು ಅವರ ಕುಟುಂಬವನ್ನು ಸಂಪರ್ಕಿಸಿ ತಮ್ಮ ಜಮೀನಿನಲ್ಲಿ ಕೆಲಸಕ್ಕೆ ಆಹ್ವಾನಿಸಿದ್ದರು. ಮಾಸಿಕ 10,000 ರೂ. ಸಂಬಳ ನೀಡುವ ಭರವಸೆ ಕೊಟ್ಟಿದ್ದ ದಂಪತಿ, 15,000 ರೂಪಾಯಿನ್ನು ಮುಂಗಡವಾಗಿ ಪಾವತಿಸಿದ್ದರು.

ಮಾತುಕತೆಯಂತೆ ಬಾಲಕ ವೆಂಕಟೇಶು ಕುಟುಂಬ ಒಂದು ವರ್ಷ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಮುತ್ತು ಅವರ ಜಮೀನಿನಲ್ಲಿ ಕೃಷಿ, ಬಾತುಕೋಳಿಗಳ ನಿರ್ವಹಣೆ ಸೇರಿದಂತೆ ವಿವಿಧ ರೀತಿಯ ಕೆಲಸಗಳನ್ನು ಮಾಡಿತ್ತು. ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಟ್ಟಾಗ ಮುತ್ತು ನಿರಾಕರಿಸಿದ್ದರು. ಈ ನಡುವೆ ಅನಕಮ್ಮ ಅವರ ಪತಿ, ಅಂದರೆ ವೆಂಕಟೇಶು ಅವರ ಅಪ್ಪ ಪ್ರಕಾಶ್ ನಿಧನರಾಗಿದ್ದರು. ಅನಕಮ್ಮ ತನ್ನ ಪತಿಯ ಅಂತಿಮ ವಿಧಿವಿಧಾನಗಳಿಗಾಗಿ ಊರಿಗೆ ತೆರಳಿದ್ದರು.

ಅನಕಮ್ಮ ತೆರಳುವ ವೇಳೆ, ಇಲ್ಲೇ ಕೆಲಸ ಮುಂದುವರಿಸಿದರೆ 25,000 ರೂಪಾಯಿ ಬಾಕಿ ಹಣವನ್ನು ಕೊಡುವುದಾಗಿ ಮುತ್ತು ಭರವಸೆ ಕೊಟ್ಟಿದ್ದರು. ಆದರೆ, ಕೆಲಸದ ಪರಿಸ್ಥಿತಿ ಅಸಹನೀಯವಾಗಿದ್ದ ಕಾರಣ ಅದನ್ನು ಬಿಟ್ಟು ಹೋಗಲು ಅನಕಮ್ಮ ಮುಂದಾಗಿದ್ದರು. ಈ ವೇಳೆ ತನಗೆ 45,000 ರೂಪಾಯಿ ಪಾವತಿಸುವಂತೆ ಮುತ್ತು ಬೇಡಿಕೆ ಇಟ್ಟಿದ್ದ. ತಕ್ಷಣ ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ಸಾಧ್ಯವಾಗದೆ, ಊರಿಗೆ ಹೋಗಿ ಹಣದೊಂದಿಗೆ ಹಿಂತಿರುಗುವ ಭರವಸೆ ನೀಡಿದ ಅನಕಮ್ಮ ತನ್ನ ಮಗನನ್ನು ಮುತ್ತು ಬಳಿ ಬಿಟ್ಟು ಹೋಗಿದ್ದರು.

ಅನಕಮ್ಮ ಊರಿಗೆ ಹೋಗಿ ಹಣ ಹೊಂದಿಸಿ 9 ತಿಂಗಳು ಕಳೆದು ವಾಪಸ್ ಬರುವ ಹೊತ್ತಿಗೆ, ಮಗ ವೆಂಕಟೇಶು ತಪ್ಪಿಸಿಕೊಂಡಿರುವುದಾಗಿ ಮುತ್ತು ಕಥೆ ಹೇಳಿದ್ದ. ಆತನನ್ನು ಕೆಲಸಕ್ಕೆಂದು ಹೊರಗಡೆ ಕಳಿಸಿದ್ದೆ. ಅಲ್ಲಿ ಅವನು ಅನಾರೋಗ್ಯಕ್ಕೆ ಒಳಗಾಗಿದ್ದ, ಆಸ್ಪತ್ರೆಗೆ ದಾಖಲಿಸಿದ್ದೆ. ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿಸಿದ್ದ.

ವರದಿಗಳ ಪ್ರಕಾರ, ಅನಕಮ್ಮ ಬಿಟ್ಟು ಹೋದ ಬಳಿ ಮುಂದಿನ ಒಂಬತ್ತು ತಿಂಗಳು ಮುತ್ತು ಬಾಲಕ ವೆಂಕಟೇಶುವಿನಿಂದ ಕಠಿಣ ಕೆಲಸಗಳನ್ನು ಮಾಡಿಸಿದ್ದ. ಆತ ಪದೇ ಪದೇ ತಾಯಿಯ ಬಳಿಗೆ ಹೋಗಲು ಅವಕಾಶ ನೀಡುವಂತೆ ಅಳುತ್ತಿದ್ದ. ಆದರೆ, ಮುತ್ತು ಅದಕ್ಕೆ ಅವಕಾಶ ನೀಡಿರಲಿಲ್ಲ. ಅನಕಮ್ಮ ಕೂಡ ತನ್ನ ಮಗನನ್ನು ಬಿಟ್ಟು ಕಳಿಸುವಂತೆ ಬೇಡಿಕೊಂಡಿದ್ದರು. ಆದರೆ, ಮುತ್ತು ಬೇರೆ ಬೇರೆ ಕಾರಣ ಕೊಟ್ಟು ಬಾಯಿ ಮುಚ್ಚಿಸುತ್ತಿದ್ದ.ಕಠಿಣ ಪರಿಸ್ಥಿತಿಯಿಂದ ತನ್ನನ್ನು ರಕ್ಷಿಸುವಂತೆ ವೆಂಕಟೇಶು ಅಮ್ಮನ ಬಳಿ ಬೇಡಿಕೊಂಡಿದ್ದ. ಅಮ್ಮ-ಮಗನ ಕೊನೆಯ ಸಂಭಾಷಣೆ ಫೋನ್ ಮೂಲಕ ಏಪ್ರಿಲ್ 15ರಂದು ನಡೆದಿತ್ತು.

ಮಗನ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆ ಅನಕಮ್ಮ ಮೇ 19ರಂದು ಸತ್ಯವೇಡು ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಜೀತಪದ್ಧತಿ (ನಿರ್ಮೂಲನೆ) ಕಾಯ್ದೆ, ಬಾಲಕಾರ್ಮಿಕ (ತಡೆ) ಕಾಯ್ದೆ, ಬಾಲ ನ್ಯಾಯ ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ (ತಡೆ) ಕಾಯ್ದೆ ಸೇರಿದಂತೆ ಹಲವು ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.

ತನಿಖೆಯ ಭಾಗವಾಗಿ ಬಾಲಕ ಕೆಲಸ ಮಾಡುತ್ತಿದ್ದ ಮನೆಯ ಯಜಮಾನ ಮುತ್ತು, ಆತನ ಪತ್ನಿ ಧನಭಾಗ್ಯಂ ಮತ್ತು ಅವರ ಮಗ ರಾಜಶೇಖರ್ ಅನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.

ತನಿಖೆಯ ಆರಂಭದಲ್ಲಿ ಬಾಲಕ ವೆಂಕಟೇಶು ತೀವ್ರ ಅಸ್ವಸ್ಥಗೊಂಡಿದ್ದ ಹಿನ್ನೆಲೆ, ಏಪ್ರಿಲ್ 11ರಂದು ತಮಿಳುನಾಡಿನ ಪುದುಪಾಲಂನ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೆ ಏಪ್ರಿಲ್ 12ರಂದು ಆತನ ಕೊನೆಯುಸಿರೆಳೆದಿದ್ದ. ಕಾನೂನಿಗೆ ಹೆದರಿ ಮುತ್ತು ಹಾಗೂ ಆತನ ಕುಟುಂಬ ಬಾಲಕನ ಶವವನ್ನು ಪಾಲಾರ್ ನದಿಯಲ್ಲಿ ಹೂತು ಹಾಕಿದ್ದಾರೆ ಎಂಬುವುದು ಬಯಲಾಗಿತ್ತು. ಅದಕ್ಕೆ ಪುಷ್ಠಿ ನೀಡುವ ಸಿಸಿಟಿವಿ ವಿಡಿಯೋಗಳು ಲಭ್ಯವಾಗಿತ್ತು.

ತಮಿಳುನಾಡಿನ ಪುದುಪಾಲಂನಲ್ಲಿ ಮುತ್ತುವಿನ ಅತ್ತೆಯನ್ನು ನೋಡಿಕೊಳ್ಳುವುದು, ಅವರ ಬಾತುಕೋಳಿಗಳನ್ನು ನಿರ್ವಹಣೆ ಮಾಡುವುದು ಸೇರಿದಂತೆ ವಿವಿಧ ಕೆಲಸಗಳಿಗೆ ಬಾಲಕ ವೆಂಕಟೇಶುವನ್ನು ನೇಮಿಸಲಾಗಿತ್ತು. ಆತ ಸಾವನ್ನಪ್ಪಿದ ಬಳಿಕ ಶವವನ್ನು ಕಾಂಚಿಪುರಂ ಬಳಿ ಪಾಲಾರ್ ನದಿಯಲ್ಲಿ ಸಮಾಧಿ ಮಾಡಲಾಗಿತ್ತು.

ಕಾಂಚಿಪುರಂ ಸಬ್-ಕಲೆಕ್ಟರ್ ಮತ್ತು ಮ್ಯಾಜಿಸ್ಟ್ರೇಟ್ ರಫೀಕ್ ಅವರ ಮೇಲ್ವಿಚಾರಣೆಯಲ್ಲಿ, ಪೊಲೀಸರು ಶವವನ್ನು ಹೊರತೆಗೆದು ಚೆಂಗಲ್ಪಟ್ಟು ವೈದ್ಯಕೀಯ ಕಾಲೇಜಿನಲ್ಲಿ ಶವ ಪರೀಕ್ಷೆ ನಡೆಸಿದ್ದಾರೆ. ವಶಕ್ಕೆ ಪಡೆದಿದ್ದ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಡಿಎಸ್ಪಿ ತಿಳಿಸಿದ್ದಾರೆ.

ಮುಂದುವರಿದ ಜೀತ ಪದ್ದತಿಗೆ ಉದಾಹರಣೆ

ಮೇಲ್ಗಡೆ ವಿವರಿಸಿದ ಪ್ರಕರಣದಲ್ಲಿ ವೆಂಕಟೇಶು ಎಂಬ ಬಾಲಕನ ಕುಟುಂಬ ಜೀತ ಪದ್ದತಿಗೆ ಒಳಗಾಗಿತ್ತು. ವೆಂಕಟೇಶುವಿನ ತಾಯಿ ಹಣ ಹೊಂದಿಸಿಕೊಂಡು ಬರಲು ಊರಿಗೆ ಹೋಗಿ ವಾಪಸ್ ಬರುವಷ್ಟರಲ್ಲಿ, ವೆಂಕಟೇಶುವಿನಿಂದ ಕಠಿಣ ಕೆಲಸಗಳನ್ನು ಮಾಡಿಸಿದ್ದ ಭೂ ಮಾಲೀಕ ಮುತ್ತು ಮತ್ತು ಆತನ ಕುಟುಂಬ, ಕೊನೆಗೆ ಆತ ಅನಾರೋಗ್ಯಕ್ಕೆ ತುತ್ತಾಗಿ ಸಾಯಲು ಕಾರಣರಾಗಿದ್ದರು.

ತಾಯಿ ಊರಿಗೆ ಹೋದ ಬಳಿಕ, ಬಾಲಕ ವೆಂಕಟೇಶುವನ್ನು ಒಂದು ರೀತಿ ಬಂಧನದಲ್ಲಿ ಇಟ್ಟು ಭೂ ಮಾಲೀಕ ಮುತ್ತು ಮತ್ತು ಆತನ ಕುಟುಂಬ ದುಡಿಸಿಕೊಂಡಿದ್ದರು. ಈ ದೌರ್ಜನ್ಯವನ್ನು ವೆಂಕಟೇಶು, ಆತನ ತಂದೆ-ತಾಯಿ ಮಾತ್ರವಲ್ಲದೆ ಆತನ ಇಡೀ ‘ಯಾನಾಡಿ’ ಸಮುದಾಯವೇ ಎದುರಿಸಿದೆ. ಈಗಾಲೂ ಎದುರಿಸುತ್ತಿದೆ.

ಮುಂಗಡ ಕೊಂಚ ಹಣ ಪಾವತಿಸಿ ತಳವರ್ಗದ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು. ನಂತರ ಅವರು ಕೆಲಸ ಸ್ಥಳ ಬಿಟ್ಟು ಎಲ್ಲೂ ಹೋಗದಂತೆ ನಿರ್ಬಂಧಿಸುವುದು, ಸಂಬಳ, ಊಟ, ವಸತಿ ಕೊಡದಿರುವುದು, ಕೆಲಸ ಬಿಟ್ಟು ಹೋಗದಂತೆ ತಡೆಯುವುದು, ಸಂಬಳ ಕೇಳಿದರೆ ಹಿಂಸಿಸುವುದು ಇತ್ಯಾದಿಗಳು ಜೀತ ಪದ್ದತಿ (ನಿರ್ಮೂಲನೆ) ಕಾಯ್ದೆ, 1976 ರ ಅಡಿ ಕ್ರಿಮಿನಲ್ ಅಪರಾಧಗಳಾಗಿವೆ. ಆದರೆ, ಇದು ದೇಶದ ವಿವಿಧ ರಾಜ್ಯಗಳಲ್ಲಿ ಅನಿಯಂತ್ರಿತವಾಗಿ ಮುಂದುವರಿಯುತ್ತಿದೆ. ಈ ದೌರ್ಜನ್ಯಕ್ಕೆ ಬಲಿಯಾದ ವ್ಯಕ್ತಿಗಳಲ್ಲಿ ವೆಂಕಟೇಶು ಕೂಡ ಒಬ್ಬ.

ಕಳೆದ ತಿಂಗಳಷ್ಟೇ, ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಯಾನಾಡಿ ಸಮುದಾಯದ ದಂಪತಿ ನಂಬೂರು ಪದ್ಮಾ ಮತ್ತು ಅಗ್ನಿ, 15 ವರ್ಷಗಳಿಗೂ ಹೆಚ್ಚು ಸಮಯದಿಂದ ಜೀತ ಪದ್ಧತಿಯಲ್ಲಿ ಸಿಲುಕಿಕೊಂಡಿರುವುದು ಬಹಿರಂಗವಾಗಿತ್ತು.

ಕಳೆದ ವರ್ಷಗಳಲ್ಲಿ ಆಂಧ್ರ ಪ್ರದೇಶ ಮತ್ತು ಅದರಾಚೆಗಿನ ಪ್ರದೇಶಗಳಲ್ಲಿ ಸುಮಾರು 50 ಯಾನಾಡಿ ವ್ಯಕ್ತಿಗಳನ್ನು ಜೀತಪದ್ಧತಿಯಿಂದ ರಕ್ಷಿಸಲಾಗಿದೆ. ಬಾತುಕೋಳಿ ಸಾಕಣೆ, ಇದ್ದಿಲು ಉತ್ಪಾದನೆ, ಇಟ್ಟಿಗೆ ಗೂಡುಗಳು, ಸೀಗಡಿ ಮತ್ತು ಏಡಿ ಸಂಸ್ಕರಣೆ ಮತ್ತು ಅಕ್ಕಿ ಗಿರಣಿಗಳಂತಹ ಕ್ಷೇತ್ರಗಳಲ್ಲಿ ಇವರ ಶೋಷಣೆ ವ್ಯಾಪಕವಾಗಿದೆ.

ಬಾಲಕ ವೆಂಕಟೇಶುವಿನ ಸಾವಿನಂತಹ ಪ್ರಕರಣಗಳು ಸಂಭವಿಸಿದಾಗ, ಅದಕ್ಕೆ ಸಂಬಂಧಿಸಿ ಮಾತ್ರ ಕ್ರಮ ಕೈಗೊಂಡರೆ ಸಾಲದು. ಆಂಧ್ರ ಪ್ರದೇಶವು ಕೈಗಾರಿಕೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಲ್ಲಿ ಜೀತದಾಳುಗಳಾಗಿ ಸಿಲುಕಿಕೊಂಡಿರುವ ದುರ್ಬಲ ಸಮುದಾಯದ ಜನರನ್ನು ರಕ್ಷಿಸಲು ರಾಜ್ಯ ಸರ್ಕಾರ ತುರ್ತಾಗಿ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಎಡಿಆರ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಮತ್ತು ಜೀತದಾಳುಗಳ ಮೇಲಿನ ಜಿಲ್ಲಾ ಜಾಗೃತ ಸಮಿತಿಯ ಸದಸ್ಯ ಶೇಕ್ ಬಶೀರ್ ಹೇಳಿದ್ದಾರೆ.

ಸೌಜನ್ಯ : newindianexpress.com

ಸೋನೆಪತ್ ಜೈಲಿನಿಂದ ಬಿಡುಗಡೆಯಾದ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...