ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ವೇಳೆ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಮೇಲೆ ಝೀ ನ್ಯೂಸ್ ಮತ್ತು ನ್ಯೂಸ್ 18 ಇಂಡಿಯಾ ವಿರುದ್ದ ಎಫ್ಐಆರ್ ದಾಖಲಿಸುವಂತೆ ಕಾಶ್ಮೀರದ ಪೂಂಚ್ ನ್ಯಾಯಾಲಯ ಶನಿವಾರ (ಜೂ.28) ನಿರ್ದೇಶಿಸಿದೆ.
ಮೇ 7ರಂದು ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ ಸ್ಥಳೀಯ ಶಿಕ್ಷಕ ಖಾರಿ ಮೊಹಮ್ಮದ್ ಇಕ್ಬಾಲ್ ಅವರನ್ನು ಎರಡೂ ರಾಷ್ಟ್ರೀಯ ಚಾನೆಲ್ಗಳು ಲಷ್ಕರ್-ಎ-ತೋಯ್ಬಾ ಜೊತೆ ಸಂಬಂಧ ಹೊಂದಿರುವ ಮತ್ತು ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿರುವ “ಪಾಕಿಸ್ತಾನಿ ಭಯೋತ್ಪಾದಕ” ಎಂದು ತಪ್ಪಾಗಿ ಹೇಳಿವೆ ಎಂದು ಆರೋಪಿಸಿ ವಕೀಲ ಶೇಖ್ ಮೊಹಮ್ಮದ್ ಸಲೀಮ್ ಸಲ್ಲಿಸಿದ ದೂರಿನ ಮೇರೆಗೆ ಸಬ್-ನ್ಯಾಯಾಧೀಶ/ವಿಶೇಷ ಮೊಬೈಲ್ ಮ್ಯಾಜಿಸ್ಟ್ರೇಟ್ ಪೂಂಚ್ ಶಫೀಕ್ ಅಹ್ಮದ್ ಆದೇಶ ಹೊರಡಿಸಿದ್ದಾರೆ ಎಂದು barandbench.com ವರದಿ ಮಾಡಿದೆ.
ಮೃತ ಖಾರಿ ಇಕ್ಬಾಲ್ ಅವರು ಪೂಂಚ್ನ ಜಾಮಿಯಾ ಝಿಯಾ-ಉಲ್-ಉಲೂಮ್ನಲ್ಲಿ ಧಾರ್ಮಿಕ ಶಿಕ್ಷಕರಾಗಿದ್ದರು ಮತ್ತು ಪಾಕಿಸ್ತಾನದ ಶೆಲ್ ದಾಳಿಗೆ ಬಲಿಯಾದ ಭಾರತ ನಾಗರಿಕ ಎಂದು ವಕೀಲ ಸಲೀಮ್ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ಹೇಳಿದ್ದಾರೆ.
ಝೀ ನ್ಯೂಸ್ ಮತ್ತು ನ್ಯೂಸ್ 18 ಇಂಡಿಯಾ ಆಪರೇಷನ್ ಸಿಂಧೂರ್ ಕುರಿತು ನೇರ ಪ್ರಸಾರ ವರದಿಗಳನ್ನು ಮಾಡುವಾಗ ಖಾರಿ ಇಕ್ಬಾಲ್ ಅವರನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟ ‘ಕುಖ್ಯಾತ ಕಮಾಂಡರ್’ ಎಂದು ಬ್ರಾಂಡ್ ಮಾಡುವ ಕಥೆಗಳನ್ನು ಪ್ರಸಾರ ಮಾಡಿದೆ. ಯಾವುದೇ ಅಧಿಕೃತ ಮೂಲಗಳ ಮಾಹಿತಿ ಪಡೆಯದೆ ಖಾರಿ ಇಕ್ಬಾಲ್ ಅವರಿಗೆ ಭಯೋತ್ಪಾದನೆಯೊಂದಿಗೆ ಸಂಬಂಧ ಕಲ್ಪಿಸಿವೆ ಎಂದಿದ್ದಾರೆ.
ಖಾರಿ ಇಕ್ಬಾಲ್ ಅವರ ಹೆಸರು ಮತ್ತು ಫೋಟೋಗಳು ಇರುವ ವರದಿಯನ್ನು ನಂತರ ಹಿಂಪಡೆಯಲಾಗಿದೆ. ಆದರೆ, ಅವರ ಕುರಿತ ಸುಳ್ಳು ಸುದ್ದಿಯು ಅವರ ಕುಟುಂಬದ ಹೆಸರಿಗೆ ಕಳಂಕ ತಂದಿದೆ ಎಂದು ವಕೀಲ ಸಲೀಮ್ ಹೇಳಿದ್ದಾರೆ.
ವಿಚಾರಣೆ ವೇಳೆ, ವರದಿಯು ದೆಹಲಿಯಿಂದ ಪ್ರಸಾರಗೊಂಡಿರುವ ಕಾರಣ, ಈ ವಿಷಯ ಪೂಂಚ್ ನ್ಯಾಯಾಲಯದ ಪ್ರಾದೇಶಿಕ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ವಾದಿಸಿದ್ದರು.
ಆದರೆ, ನ್ಯಾಯಾಲಯವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ನ ಸೆಕ್ಷನ್ 199ರ ಅಡಿಯಲ್ಲಿ, ಮಾನನಷ್ಟದಂತಹ ಕೃತ್ಯದ ಪರಿಣಾಮವು ಬೇರೆ ಸ್ಥಳದಲ್ಲಿ ಸಂಭವಿಸಿದಾಗ, ನ್ಯಾಯವ್ಯಾಪ್ತಿಯು ಎರಡೂ ಸ್ಥಳಗಳಲ್ಲಿ ಮಾನ್ಯವಾಗಿರುತ್ತದೆ ಎಂದು ಹೇಳಿ ಪೊಲೀಸರ ಆಕ್ಷೇಪಣೆಯನ್ನು ತಿರಸ್ಕರಿಸಿದೆ. ಮೃತರು ವಾಸಿಸುತ್ತಿದ್ದ, ಕೆಲಸ ಮಾಡುತ್ತಿದ್ದ ಮತ್ತು ಹುತಾತ್ಮರಾದ ಪೂಂಚ್ನಲ್ಲಿ ಹಾನಿ ಸಂಭವಿಸಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಮಾಧ್ಯಮಗಳ ಜವಾಬ್ದಾರಿಯ ಬಗ್ಗೆಯೂ ನ್ಯಾಯಾಲಯ ಅವಲೋಕನಗಳನ್ನು ಮಾಡಿದೆ. ಸಂವಿಧಾನದ 19(1)(a)ವಿಧಿಯ ಅಡಿಯಲ್ಲಿ ಪತ್ರಿಕಾ ರಕ್ಷಣೆ ಇದೆಯಾದರೂ, ಈ ಹಕ್ಕು 19(2) ವಿಧಿಯ ಅಡಿಯಲ್ಲಿ ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ವಿಶೇಷವಾಗಿ ಮಾನನಷ್ಟ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಭ್ಯತೆಯನ್ನು ಒಳಗೊಂಡ ಪ್ರಕರಣಗಳಲ್ಲಿ ಎಂದು ನ್ಯಾಯಾಲಯ ಹೇಳಿದೆ.
“ಯಾವುದೇ ಪರಿಶೀಲನೆ ಇಲ್ಲದೆ” ಮೃತ ನಾಗರಿಕ ಶಿಕ್ಷಕನನ್ನು ಭಯೋತ್ಪಾದಕ ಎಂದು ಬ್ರಾಂಡ್ ಮಾಡುವುದನ್ನು ನ್ಯಾಯಾಧೀಶರು ಪತ್ರಿಕೋದ್ಯಮ ಗಂಭೀರ ದುಷ್ಕೃತ್ಯ ಎಂದು ಕರೆದಿದ್ದು, ಇದು ಸಾರ್ವಜನಿಕ ಅಶಾಂತಿಗೆ ಉತ್ತೇಜನ ನೀಡುವ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಹಾನಿ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.
ಸುದ್ದಿ ವಾಹಿನಿಗಳು ನಂತರ ಕ್ಷಮೆಯಾಚಿಸಿದ್ದರೂ, 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯೊಂದಿಗೆ ಖಾರಿ ಇಕ್ಬಾಲ್ ಅವರಿಗೆ ಸಂಬಂಧ ಕಲ್ಪಿಸಿದ ಅವರ ಆರಂಭಿಕ ಪ್ರಸಾರವು ವಾಸ್ತವಿಕ ಪರಿಶೀಲನೆಯಿಲ್ಲದೆ ಮಾಡಲಾಗಿದೆ. ಇದು ಮಾನನಷ್ಟ ಉಂಟು ಮಾಡಿದೆ. ಸಾರ್ವಜನಿಕ ಅಶಾಂತಿ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸಿದೆ ಎಂದು ನ್ಯಾಯಾಲಯವು ಹೇಳಿದೆ.
ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 353(2),356, ಮತ್ತು 196 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಸೆಕ್ಷನ್ 66 ರ ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧಗಳಾಗಿವೆ ಎಂದಿದೆ.
ಸುಳ್ಳು ಸುದ್ದಿ ಪ್ರಸಾರಕ್ಕೆ ಕ್ಷಮೆಯಾಚನೆ ಸಾಕಾಗುವುದಿಲ್ಲ ಎಂದಿರುವ ನ್ಯಾಯಾಲಯ, ಗುರುತಿಸಬಹುದಾದ ಅಪರಾಧ ಬಹಿರಂಗವಾದ ನಂತರ ಕ್ರಮ ಕೈಗೊಳ್ಳುವುದು ಪೊಲೀಸರ ಕರ್ತವ್ಯ ಎಂದು ಒತ್ತಿ ಹೇಳಿದೆ.
ಅದರಂತೆ, ಸಂಬಂಧಪಟ್ಟ ಸ್ಟೇಷನ್ ಹೌಸ್ ಅಧಿಕಾರಿಗೆ ಏಳು ದಿನಗಳಲ್ಲಿ ಎಫ್ಐಆರ್ ದಾಖಲಿಸಿ ಅನುಸರಣಾ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ.
Courtesy : barandbench.com


