ನವದೆಹಲಿ: ಉತ್ತರಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್ಪುರದಲ್ಲಿ ಗುರುವಾರ, 55 ವರ್ಷದ ನಿವೃತ್ತ ಶಿಕ್ಷಕ ನಬಿ ಅಹ್ಮದ್ ಅವರ ಮೂರು ಅಂತಸ್ತಿನ ಕನಸಿನ ಮನೆ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ನೆಲಸಮಗೊಳಿಸಲಾಯಿತು. ಬಸ್ಖಾರಿ ರಸ್ತೆಯಲ್ಲಿ ನಡೆದ ಈ ಘಟನೆ, ಜೀವನದುದ್ದಕ್ಕೂ ಕಟ್ಟಿಕೊಂಡ ಕನಸುಗಳು ಮತ್ತು ದುಡಿದ ಹಣದಿಂದ ನಿರ್ಮಿಸಿದ ಮನೆಯು ಕಣ್ಮುಂದೆಯೇ ಕೆಡವಲ್ಪಟ್ಟಿತ್ತು. “ಅಕ್ರಮ ಒತ್ತುವರಿ” ನೆಪದಲ್ಲಿ ಮುಸ್ಲಿಮರ ಮನೆಗಳನ್ನು ಗುರಿಯಾಗಿಸಿಕೊಂಡು ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ನಿರಂತರ ಅಭಿಯಾನಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಲೋಕೋಪಯೋಗಿ ಇಲಾಖೆಯು (PWD) ಈ ನೆಲಸಮ ಕಾರ್ಯವನ್ನು ಹೈಕೋರ್ಟ್ ಆದೇಶದಂತೆ ನಡೆಸಲಾಗಿದೆ ಎಂದು ಹೇಳಿದೆ. ಸರ್ಕಾರಿ ಭೂಮಿ ಎಂದು ಘೋಷಿಸಿದ ನಂತರವೇ ಈ ಮನೆಗೆ ಬುಲ್ಡೋಜರ್ ಹತ್ತಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ. ಜಲಾಲ್ಪುರ್ ಕೊತ್ವಾಲ್ ಸಂತೋಷ್ ಕುಮಾರ್ ಸಿಂಗ್ ಸಹ, “ಈ ಕಟ್ಟಡವು ಸರ್ಕಾರಿ ಭೂಮಿಯಲ್ಲಿದ್ದು, ಕಾನೂನುಬದ್ಧ ಅನುಮೋದನೆ ಇರಲಿಲ್ಲ. ನಾವು ಅಹ್ಮದ್ಗೆ ಪೂರ್ವ ಸೂಚನೆ ಸೇರಿದಂತೆ ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಿದ್ದೇವೆ,” ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
“ನನ್ನ ಇಡೀ ಜೀವನವನ್ನು ಈ ಮನೆಯನ್ನು ಕಟ್ಟಲು ಕಳೆದಿದ್ದೇನೆ. ಈಗ ನನ್ನ ಬ್ಯಾಗ್ನಲ್ಲಿರುವ ಬಟ್ಟೆಗಳನ್ನು ಹೊರತುಪಡಿಸಿ ನನಗೇನೂ ಇಲ್ಲ. ಇಲ್ಲಿ ಯಾವುದೇ ಹಿಂದೂ ಮನೆಗಳನ್ನು ಮುಟ್ಟಿಲ್ಲ; ನಮ್ಮನ್ನು ಮಾತ್ರ ಗುರಿಪಡಿಸಲಾಗುತ್ತಿದೆ,” ಎಂದು ನಬಿ ಅಹ್ಮದ್ ಅವರ ದನಿ ನೋವಿನಿಂದ ನಡುಗಿತು. ಇದು ಕೇವಲ ನಬಿ ಅಹ್ಮದ್ ಅವರೊಬ್ಬರ ಆರ್ತನಾದವಾಗಿರಲಿಲ್ಲ. ಸ್ಥಳೀಯ ಅಂಗಡಿ ಮಾಲೀಕ ಫೈಜಾನ್ ಅಲಿ ಇದೇ ಆತಂಕವನ್ನು ಪ್ರತಿಧ್ವನಿಸುತ್ತಾ, “ಈ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮನೆಗಳು ಸರ್ಕಾರಿ ಜಾಗದಲ್ಲಿಯೇ ಇವೆ, ಆದರೆ ಮುಸ್ಲಿಮರ ಮನೆಗಳನ್ನು ಮಾತ್ರ ಏಕೆ ಕೆಡವಲಾಗುತ್ತಿದೆ?” ಎಂದು ಪ್ರಶ್ನಿಸಿದರು. ಲೋಕೋಪಯೋಗಿ ಇಲಾಖೆ (PWD) 53 ಇತರ ಕುಟುಂಬಗಳಿಗೆ ನೋಟಿಸ್ ನೀಡಿದ್ದು, ಈ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಕುಟುಂಬಗಳಿವೆ ಎಂದು ಅವರು ದೂರುತ್ತಾರೆ.
ಈ ಕ್ರಮಗಳ ಕುರಿತು ಲಕ್ನೋ ಮೂಲದ ಮಾನವ ಹಕ್ಕುಗಳ ವಕೀಲ ಅಡ್ವೊಕೇಟ್ ಫಿರೋಜ್ ಖಾನ್, “ನ್ಯಾಯಾಲಯಗಳು ಆದೇಶಗಳನ್ನು ನೀಡಬಹುದು, ಆದರೆ ಆಡಳಿತದ ಕೆಲಸ ನ್ಯಾಯಯುತವಾಗಿ ವರ್ತಿಸುವುದು. ಮುಸ್ಲಿಂ ಮನೆಗಳನ್ನು ಮಾತ್ರ ಗುರಿಪಡಿಸುವುದು ಏನನ್ನು ಸೂಚಿಸುತ್ತದೆ,” ಎಂದು ನೇರವಾಗಿ ಪ್ರಶ್ನಿಸುತ್ತಾರೆ.
ಬುಲ್ಡೋಜರ್ ಕ್ರಮಗಳನ್ನು ಹಲವರು ಮುಸ್ಲಿಂ ಸಮುದಾಯದ ಮೇಲಿನ ನೇರ ಆಕ್ರಮಣ ಎಂದು ಪರಿಗಣಿಸಿದ್ದಾರೆ. ನಬಿ ಅಹ್ಮದ್ ಅವರ ಪುತ್ರ ಇಮ್ರಾನ್ ಅವರ ನೋವಿನ ನುಡಿಗಳು ಇದಕ್ಕೆ ಸಾಕ್ಷಿಯಾಗಿವೆ: “ನನ್ನ ಮಗಳ ಮದುವೆ ಮುಂದಿನ ತಿಂಗಳು ಇದೆ. ಅವಳ ವರದಕ್ಷಿಣೆ ವಸ್ತುಗಳು ಮನೆಯಲ್ಲಿದ್ದವು – ಈಗ ಎಲ್ಲವೂ ನಾಶವಾಗಿವೆ. ನಮ್ಮ ವಸ್ತುಗಳನ್ನು ತೆಗೆದುಹಾಕಲು ಸಹ ಅವರು ನಮಗೆ ಅವಕಾಶ ನೀಡಲಿಲ್ಲ.ಸರ್ಕಾರ ನಮಗೆ ಏನು ಸಂದೇಶ ಕಳುಹಿಸುತ್ತಿದೆ? ನಾವು ನಮ್ಮ ಸ್ವಂತ ದೇಶಕ್ಕೆ ಸೇರಿಲ್ಲವೇ? ಎಂದು ಕೇಳುತ್ತಾರೆ.
ನಾಗರಿಕ ಸಮಾಜ ಗುಂಪುಗಳು ಮತ್ತು ಅಖಿಲ ಭಾರತ ಮುಸ್ಲಿಂ ಮಜ್ಲಿಸ್-ಎ-ಮುಶಾವರತ್ನಂತಹ ಸಂಘಟನೆಗಳು ಈ ಬುಲ್ಡೋಜರ್ ಕ್ರಮಗಳನ್ನು “ನ್ಯಾಯಯುತ ವಿಚಾರಣೆಗಳಿಲ್ಲದ ಸಾಮೂಹಿಕ ಶಿಕ್ಷೆ” ಎಂದು ಬಲವಾಗಿ ಖಂಡಿಸಿವೆ.
ಅಂಬೇಡ್ಕರ್ ನಗರದ ಮುಸ್ಲಿಂ ನಿವಾಸಿಗಳು ನಿರಂತರ ಭಯದಲ್ಲಿ ದಿನ ದೂಡುತ್ತಿದ್ದಾರೆ. ನಿವಾಸಿ ಶಂಶಾದ್ ಆಲಮ್ ಅವರ ಮಾತುಗಳಲ್ಲಿ ಈ ಆತಂಕ ಸ್ಪಷ್ಟವಾಗಿದೆ: “ನಮ್ಮ ಮಕ್ಕಳು ಕೂಡ ಈಗ ಬುಲ್ಡೋಜರ್ಗಳಿಗೆ ಹೆದರುತ್ತಾರೆ. ಅವರು ಇದನ್ನು ಮುಸ್ಲಿಮರನ್ನು ನಾಶಮಾಡಲು ತಯಾರಿಸಿದ ಯಂತ್ರ ಎಂದು ಭಾವಿಸುತ್ತಾರೆ’’ ಎಂದಿದ್ದಾರೆ.
ನಬಿ ಅಹ್ಮದ್ ಮತ್ತು ಅವರಂತೆಯೇ ಅನ್ಯಾಯಕ್ಕೊಳಗಾದವರು ಈಗ ನ್ಯಾಯಾಲಯದ ಮೊರೆ ಹೋಗಲು ಸಿದ್ಧರಾಗಿದ್ದಾರೆ. ಪರಿಹಾರ ಮತ್ತು ಮುಂದಿನ ನೆಲಸಮಗಳಿಗೆ ತಡೆಯಾಜ್ಞೆ ಕೋರಿ ಅವರು ಕಾನೂನು ಹೋರಾಟ ನಡೆಸಲಿದ್ದಾರೆ. ನಮ್ಮ ಸಂವಿಧಾನವು ನಮಗೆ ಆಶ್ರಯ, ಕೇಳುವ ಮತ್ತು ಘನತೆಯ ಹಕ್ಕನ್ನು ನೀಡುತ್ತದೆ. ನಮಗೆ ಇವೆಲ್ಲವನ್ನೂ ಏಕೆ ನಿರಾಕರಿಸಲಾಗುತ್ತಿದೆ?” ಎಂದು ಅಡ್ವೊಕೇಟ್ ಶಕೀಲ್ ಅಹ್ಮದ್ ಅವರ ನೋವಿನ ಪ್ರಶ್ನೆಯಾಗಿದೆ.


