ಧರ್ಮಸ್ಥಳದ ಸುತ್ತಲ ಗ್ರಾಮಗಳಲ್ಲಿ ವರದಿಯಾಗಿರುವ ನೂರಾರು ಮಹಿಳೆಯರ ಅತ್ಯಾಚಾರ, ಕೊಲೆ, ಅನುಮಾನಾಸ್ಪದ ಸಾವುಗಳ ಪ್ರಕರಣಗಳನ್ನು ತನಿಖೆ ಮಾಡಲು ರಚಿಸಿರುವ ವಿಶೇಷ ತನಿಖಾ ತಂಡವು (ಎಸ್ಐಟಿ) ಯಾವ ಒತ್ತಡಗಳಿಲ್ಲದೆ, ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಅಗತ್ಯ ಅಧಿಕಾರವನ್ನು ಹಾಗೂ ಅವಕಾಶವನ್ನು ಒದಗಿಸಬೇಕು ಎಂದು ‘ಕೊಂದವರು ಯಾರು’ ಆಂದೋಲನವು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು ಆರಂಭವಾದ “ಕೊಂದವರು ಯಾರು” ಆಂದೋಲನವು, ‘ನೊಂದವರೊಂದಿಗೆ ನಾವಿದ್ದೇವೆ’ ಎಂದು ಘೋಷಿಸಿತು. ಜೊತೆಗೆ, ಎಲ್ಲ ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು, ತನಿಖೆಯನ್ನು ಸರಿಯಾಗಿ ನಡೆಸದೆ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳು, ವೈದ್ಯರು, ತನಿಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನೂ ಅಪರಾಧಿಗಳೆಂದು ಪರಿಗಣಿಸಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿತು.
ನೊಂದ ಕುಟುಂಬಗಳನ್ನು ಭೇಟಿ ಮಾಡಿದ ಅನುಭವಗಳನ್ನು ಹಂಚಿಕೊಂಡ ಮಾನಸ ಬಳಗದ ಚಂಪಾವತಿ, “ಮಹಿಳಾ ಚಳವಳಿಯು ಸದಾಕಾಲ ನೊಂದವರ ಜೊತೆ ನಿಂತಿದೆ, ಆದ್ದರಿಂದಲೇ ಧರ್ಮಸ್ಥಳದ ನೊಂದ ಕುಟುಂಬಗಳನ್ನು ಭೇಟಿ ಮಾಡುವುದು ನಮಗೆ ಅತ್ಯಗತ್ಯವಾಗಿತ್ತು” ಎಂದರು.
ಮಹಿಳಾ ಮುನ್ನಡೆ ಸಂಘಟನೆಯ ಮಲ್ಲಿಗೆ ಮಾತನಾಡಿ, “ಧರ್ಮಸ್ಥಳದಲ್ಲಿ ನಡೆದಿರುವ ಹಲವಾರು ಹೆಣ್ಣುಮಕ್ಕಳ ಅಪಹರಣ, ಅತ್ಯಾಚಾರ, ಕೊಲೆಗಳ ವಿರುದ್ದ ಹೋರಾಟ ಸುಧೀಘ ಕಾಲದಿಂದ ನಡೆದುಬಂದಿದೆ. ನಿರಂತರವಾಗಿ, ಅಂತರ್ಗಾಮಿಯಾಗಿ ಸ್ಥಳೀಯರು ಈ ಹೋರಾಟವನ್ನು ಆರದಂತೆ ಮುನ್ನಡೆಸುತ್ತಿದ್ದಾರೆ. ಇವರೊಂದಿಗೆ ʼಕೊಂದವರು ಯಾರು?ʼ ವೇದಿಕೆಯೂ ಜೊತೆನಿಂತಿದ್ದು, ನೊಂದವರಿಗೆ ನ್ಯಾಯ ದೊರೆಯುವ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಮುಂದುವರೆಯಲಿದೆ” ಎಂದು ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್ ವಿಮಲಾ ಮಾತನಾಡಿ, “ನಿನ್ನೆ ವಿಶ್ವ ಪ್ರಜಾಪ್ರಭುತ್ವದ ದಿನ; ವಿಪರ್ಯಾಸವೆದಂರೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಅಣಕವಾಗುತ್ತಿದೆ. ಧರ್ಮಸ್ಥಳದಲ್ಲಿ ಹಲವಾರುಹೆಣ್ಣುಮಕ್ಕಳ ಕೊಲೆಯಾಗಿದ್ದರೂ, ಇನ್ನೂ ತಪ್ಪಿಸ್ಥರಿಗೆ ಶಿಕ್ಷೆಕೊಡಿಸುವಲ್ಲಿ ವಿಳಂಬವಾಗುತ್ತಿದೆ. ವೇದವಲ್ಲಿ ಪ್ರಕರಣದಲ್ಲಿ ಗಂಡನನ್ನೇ ಆರೋಪಿಯನ್ನಾಗಿ ಮಾಡಿದ್ದರು. ಪದ್ಮಲತರವರ ಪ್ರಕರಣದಲ್ಲಿಯೂ ದೇವಾನಂದ್ ರವರನ್ನು ಆರೋಪಿಗಳನ್ನಾಗಿ ಮಾಡುವ ಷಡ್ಯಂತ್ರ ನಡೆಯಿತು. ಸೌಜನ್ಯ ಪ್ರಕರಣದಲ್ಲೂ ಮಾವನನ್ನೇ ಆರೋಪಿಯನ್ನಾಗಿ ಬಿಂಬಿಸುವ ಪ್ರಯತ್ನ ನಡೆಯಿತು” ಎಂದರು.
“ನಾವು ನೊಂದವರ ಸಂಭಂಧಿಕರನ್ನು ಮಾತನಾಡಿಸಿದಾಗ ಧರ್ಮಸ್ಥಳದಲ್ಲಿ ನಡೆದಿರುವ ಹಲವು ಕೇಸ್ಗಳಲ್ಲಿ ಸೂಕ್ತ ತನಿಖೆ ಮಾಡಬೇಕಿದ್ದ ಪೋಲೀಸರೇ ಯಾವುದೋ ಖಾಸಗಿ ಸಂಸ್ಥೆಯ ವಾಹನದಲ್ಲಿ ಬಂದು ಜನರಿಗೆ ಬೆದರಿಕೆ ನೀಡಿದ ಪ್ರಸಂಗಳಿವೆ. ಹೀಗೆ, ಪ್ರಜಾತಾಂತ್ರಿಕವಾಗಿ ಕೆಲಸ ಮಾಡಬೇಕಾದ ಸಂಸ್ಥೆಗಳೇ ಇಲ್ಲಿ ವಿಫಲವಾಗಿರುವುದೇ ನ್ಯಾಯದೊರಕುವುದರಲ್ಲಾಗುತ್ತಿರುವ ವಿಳಂಬಕ್ಕೆ ಕಾರಣ. ಸೌಜನ್ಯ ಪ್ರಕರಣದಲ್ಲಿ ಈ ಹಿಂದೆ, ಮಂಗಳೂರು, ಬೆಳ್ತಂಗಡಿ ಹಾಗೂ ಬೆಂಗಳೂರಿನಲ್ಲಿ ಸುಮಾರು 56 ಜನಪರ ಸಂಘಟನೆಗಳು ಒಗ್ಗೂಡಿ ನ್ಯಾಯಕ್ಕಾಗಿ ಹೋರಾಡಿದ ಪರಿಣಾಮದಿಂದಾಗಿ ಮಾತ್ರ ಆ ಪ್ರಕರಣ ಸಿಬಿಐ ತನಿಖೆಗೆ ಹೋಗಿತ್ತು. ಇದೀಗ ಸೌಜನ್ಯ ಪ್ರಕರಣದೊಟ್ಟಿಗೆ ಅದೇ ರೀತಿಯ ಹಲವು ಪ್ರಕರಣಗಳು ಬೆಳಕಿಗೆ ಬಂದಿರುವ ಈ ಸನ್ನಿವೇಶದಲ್ಲಿ, ಎಲ್ಲ ನೊಂದವರಿಗೆ ನ್ಯಾಯ ದೊರಕುವವರೆಗೆ ಈ ವೇದಿಕೆಯ ಹೋರಾಟ ಮುಂದುವರಿಯಲಿದೆ” ಎಂದು ಪ್ರತಿಪಾದಿಸಿದರು.
ಹಿರಿಯ ಸಾಹಿತಿ ದು.ಸರಸ್ವತಿ ಮಾತನಾಡಿ, “ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರ, ದೌರ್ಜನ್ಯ ಹಾಗೂ ಅವರು ಇದನ್ನು ದಿಟ್ಟವಾಗಿ ಎದುರಿಸುತ್ತಿರುವುದು ಕೇವಲ ಹಿಂಸೆಯ ಖಂಡನೆಯಲ್ಲ, ಬದಲಾಗಿ ನನಗೆ ವ್ಯಕ್ತಿತ್ವ, ಗುರುತು ನೀಡಿರುವ ಈ ನನ್ನ ದೇಹ, ನನ್ನ ಹಕ್ಕು ಹಾಗೂ ಅದಕ್ಕೆ ಕಾಳಜಿ ವಹಿಸುವುದು ನನ್ನ ಹೊಣೆ ಎಂಬ ವಾಸ್ತವಕ್ಕೆ ಹೆಣ್ಣುಮಕ್ಕಳು ಎಚ್ಚೆತ್ತುಕೊಂಡಿದ್ದಾರೆಂಬುದಕ್ಕೆ ಉದಾಹರಣೆ” ಎಂದು ಹೇಳಿದರು.
ಸೌಜನ್ಯ ಪ್ರಕರಣದ ವಕೀಲರಲ್ಲಿ ಒಬ್ಬರಾದ ಮೋಹಿತ್ರ ಮಾತನಾಡಿ, “ಹಲವಾರು ಪ್ರಕರಣಗಳು ಕಣ್ಣ ಮುಂದಿದ್ದರೂ ಏಕೆ ಸತ್ಯ ಹೊರಗೆ ಬರುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆ. ಇದಕ್ಕೆ ಮುಖ್ಯ ಕಾರಣ ಈ ಪ್ರಕರಣಗಳು ಇದುವರೆಗೂ ತನಿಖೆಯಾಗದ ರೀತಿ. ಇದರಲ್ಲಿ ಬೆಳ್ತಂಗಡಿ ಪೋಲೀಸರ ಒಂದು ಪ್ಯಾಟರ್ನ್ ಕಾಣಸಿಗುತ್ತಿದೆ. ಬಹುಪಾಲು ಎಲ್ಲ ಪ್ರಕರಣಗಳಲ್ಲೂ ತನಿಖೆಯಲ್ಲಿ ಅಪಾರ ಲೋಪಗಳು, ಸಾಕ್ಷಿಗಳ ಆತ್ಮಹತ್ಯೆ ಅಥವಾ ಸಾವು, ಅಮಾಯಕರ ಮೇಲೆ ಆರೋಪ, ಅದರಿಂದಾಗಿ ಕೊನೆಗೆ ಪ್ರಕರಣದ ಮುಚ್ಚುವಿಕೆ… ಇದೇ ವಿಧಾನ ಕಾಣಬರುತ್ತದೆ. ಯಾಕೆ ಯಾವುದೇ ತನಿಖೆ ನಡೆದ ದಾಖಲೆಗಳಿಲ್ಲ? ಹಲವಾರು ಪ್ರಕರಣಗಳಲ್ಲಿ ಅಲ್ಲಿಗೆ ಬಂದ ಶ್ವಾನ ದಳ ಹಾಗೂ ಪೋರೀನ್ಸಿಕ್ ತಜ್ಙರನ್ನು ಘಟನೆ ನಡೆದ ಸ್ಥಳಕ್ಕೆ ಸ್ಥಳೀಯ ಪೋಲೀಸರು ಕರೆದುಕೊಂಡು ಹೋಗಲಿಲ್ಲ ಯಾಕೆ? ಸೌಜನ್ಯ ತಾಯಿಯನ್ನು ವಿಟ್ನೆಸ್ ಅಗಿ ಪರಿಗಣಿಸಲಿಲ್ಲ. ಈ ಪ್ರಶ್ನೆಗಳನ್ನು ನಾವು ಕೇಳಬೇಕಾಗಿದೆ” ಎಂದರು.
ಪ್ರಮುಖ ಬೇಡಿಕೆಗಳು:
1. ವಿಶೇಷ ತನಿಖಾ ತಂಡವು ಸ್ವತಂತ್ರವಾಗಿ, ಮುಕ್ತವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ದಶಕಗಳಿಂದ ಬಗೆಹರಿಯದೆ ಉಳಿದಿರುವ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸಬೇಕು.
2. ಸೌಜನ್ಯ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯದ ಆದೇಶದಂತೆ ತನಿಖೆಯಲ್ಲಿ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಶೀಘ್ರ ಕಠಿಣ ಕ್ರಮ ಕೈಗೊಳ್ಳಬೇಕು.
3. ಲಿಂಗತ್ವ ನ್ಯಾಯ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸಲು ಎಸ್ಐಟಿಯನ್ನು ಬೆಂಬಲಿಸುವ, ಮಹಿಳಾ ಹಕ್ಕುಗಳ ಪರಿಣತರಿರುವ ಸ್ವತಂತ್ರ ಬೆಂಬಲ ತಂಡವನ್ನು ರಚಿಸಬೇಕು; ಸಾಕ್ಷಿಗಳು ಮತ್ತು ದೂರುದಾರರು ಭೀತಿಯಿಲ್ಲದೆ ದೂರು ಸಲ್ಲಿಸಲು ಅನುವಾಗುವಂತೆ ಸರ್ಕಾರ ಅವರಿಗೆ ಸೂಕ್ತ ರಕ್ಷಣೆ, ಭದ್ರತೆ ಮತ್ತು ಗೌಪ್ಯತೆಯನ್ನು ಒದಗಿಸಬೇಕು.
4. ಧಾರ್ಮಿಕ ಕೇಂದ್ರಗಳನ್ನೂ ಒಳಗೊಂಡಂತೆ ಎಲ್ಲಾಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿಕಡ್ಡಾಯವಾಗಿನಿಯಮಗಳನ್ನು ರೂಪಿಸಬೇಕು.
5. ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆಯನ್ನು ತಡೆಗಟ್ಟಲು ಶಿಫಾರಸ್ಸುಗಳನ್ನು ಮಾಡಿರುವ ಉಗ್ರಪ್ಪ ಸಮಿತಿ ವರದಿ ಮತ್ತು ನ್ಯಾಯಮೂರ್ತಿ ವರ್ಮಾ ಸಮಿತಿ ವರದಿಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಪರಿಣತರ ಸಮಿತಿಯೊಂದನ್ನು ರಚಿಸಬೇಕು ಎಂಬ ಬೇಡಿಕೆಗಳನ್ನು “ಕೊಂದವರು ಯಾರು” ಆಂದೋಲನವು ಸರ್ಕಾರಕ್ಕೆ ಮಂಡಿಸಿತು.


