ದೀಪಾವಳಿ ಹಬ್ಬದಂದು ಲಕ್ನೋದ ಹೊರವಲಯದಲ್ಲಿರುವ ದೇವಸ್ಥಾನದ ಬಳಿ ವಯಸ್ಸಾದ ದಲಿತ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಿದ ನಂತರ ಅವರನ್ನು ಬಲವಂತವಾಗಿ ನೆಲ ನೆಕ್ಕುವಂತೆ ಒತ್ತಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
60 ವರ್ಷದ ದಲಿತ ವ್ಯಕ್ತಿಯ ಮೊಮ್ಮಗ ಮಾತನಾಡಿ, ‘ನನ್ನ ಅಜ್ಜನಿಗೆ ಉಸಿರಾಟದ ತೊಂದರೆ ಇದೆ, ಕೆಮ್ಮುವಾಗ ಆಕಸ್ಮಿಕವಾಗಿ ಮೂತ್ರ ವಿಸರ್ಜಿಸಿದ್ದಾರೆ’ ಎಂದು ಹೇಳಿಕೊಂಡಿದ್ದಾನೆ.
ಪೊಲೀಸರ ಪ್ರಕಾರ, ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆರೋಪಿಯು ದಲಿತ ವ್ಯಕ್ತಿಯನ್ನು ಬಲವಂತವಾಗಿ ನೆಲ ನೆಕ್ಕುವಂತೆ ಬಲವಂತಪಡಿಸಿದ್ದಾನೆ ಎಂದು ಹೇಳಿದ್ದಾರೆ. ಪ್ರಸ್ತುತ ಈ ಘಟನೆ ರಾಜಕೀಯ ಗದ್ದಲಕ್ಕೆ ಕಾರಣವಾಯಿತು, ವಿರೋಧ ಪಕ್ಷಗಳು ಬಿಜೆಪಿಯನ್ನು ಟೀಕಿಸಿದ್ದಾರೆ.
ಸಂತ್ರಸ್ತ ರಾಂಪಾಲ್ ರಾವತ್ ಪೊಲೀಸ್ ದೂರಿನಲ್ಲಿ, “ನಿನ್ನೆ ಸಂಜೆ, ನಾನು ಲಕ್ನೋದ ಕಾಕೋರಿ ಪ್ರದೇಶದ ಶೀತ್ಲಾ ಮಾತಾ ಮಂದಿರದಲ್ಲಿ ನೀರು ಕುಡಿಯುತ್ತಿದ್ದೆ, ಸ್ವಾಮಿ ಕಾಂತ್ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ” ಎಂದು ಆರೋಪಿಸಿದರು.
“ಮೂತ್ರ ವಿಸರ್ಜಿಸಿಲ್ಲ, ಅಲ್ಲಿ ನೀರು ಬಿದ್ದಿದೆ ಎಂದು ನಾನು ಹೇಳಿದೆ. ಆದರೆ, ಅವನು (ಪಮ್ಮು) ಸುಮ್ಮನಾಗಲಿಲ್ಲ, ನನ್ನ ಮೇಲೆ ಜಾತಿ ನಿಂದನೆ ಪದ ಬಳಸಿದನು. ಅವರು ನನ್ನನ್ನು ಬೆದರಿಸಿ ನೆಲ ನೆಕ್ಕುವಂತೆ ಮಾಡಿದರು” ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ರಾಂಪಾಲ್ ರಾವತ್ ಅವರ ಮೊಮ್ಮಗ ಮುಖೇಶ್ ಕುಮಾರ್ ಅವರನ್ನು ಸಂಪರ್ಕಿಸಿದಾಗ, “ನನ್ನ ಅಜ್ಜನಿಗೆ ಉಸಿರಾಟದ ತೊಂದರೆ ಇದೆ. ಅವರು ಔಷಧಿಗಳನ್ನು ತೆಗೆದುಕೊಳ್ಳದಿದ್ದರೆ ಬದುಕುಳಿಯುವುದಿಲ್ಲ. ನಿನ್ನೆ ಸಂಜೆ, ಅವರು ಕೆಮ್ಮಲು ಪ್ರಾರಂಭಿಸಿದರು, ಅವರು ಆಕಸ್ಮಿಕವಾಗಿ ಮೂತ್ರ ವಿಸರ್ಜನೆ ಮಾಡಿದರು. ಇದಾದ ನಂತರ, ಪಮ್ಮು ಅಲ್ಲಿಗೆ ಬಂದು ನನ್ನ ಅಜ್ಜನ ಮೇಲೆ ಜಾತಿನಿಂದನೆ ಪದ ಬಳಸಿದ್ದಾನೆ” ಎಂದು ವಿವರಿಸಿದರು.
ಮುಖೇಶ್ ಕುಮಾರ್ ಅವರ ಅಜ್ಜ ಭಯಭೀತರಾಗಿದ್ದಾರೆ. ಅವರನ್ನು ನೆಲ ನೆಕ್ಕಲು ಬಲವಂತಪಡಿಸಿದಾಗ, ರಾಂಪಾಲ್ ಅದನ್ನು ನೆಕ್ಕಿದರು ಎಂದು ಹೇಳಿದರು. ಇದಾದ ನಂತರ, ಆರೋಪಿ ರಾಂಪಾಲ್ ಅವರನ್ನು ಜಾಗವನ್ನು ನೀರಿನಿಂದ ತೊಳೆಯುವಂತೆ ಒತ್ತಾಯಿಸಿದರು ಎಂದು ಅವರು ಹೇಳಿಕೊಂಡರು.
“ನನ್ನ ಅಜ್ಜ ರಾತ್ರಿ ನಡೆದ ಘಟನೆಯ ಬಗ್ಗೆ ಯಾರಿಗೂ ಹೇಳಲಿಲ್ಲ. ಅವರು ಇಂದು ಘಟನೆಯನ್ನು ವಿವರಿಸಿದರು. ಇದರ ನಂತರ, ನಾವು ಪೊಲೀಸರಿಗೆ ದೂರು ನೀಡಿದ್ದೇವೆ” ಎಂದು ಮೊಮ್ಮಗ ಹೇಳಿದರು.
ಮುಖ್ಯ ದೇವಾಲಯವು ತನ್ನ ಅಜ್ಜ ಆಕಸ್ಮಿಕವಾಗಿ ಮೂತ್ರ ವಿಸರ್ಜನೆ ಮಾಡಿದ ಸ್ಥಳದಿಂದ ಕನಿಷ್ಠ 40 ಮೀಟರ್ ದೂರದಲ್ಲಿದೆ ಎಂದು ಮುಖೇಶ್ ಕುಮಾರ್ ಹೇಳಿದ್ದಾರೆ.
ಸ್ವಾಮಿ ಕಾಂತ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 351(3) (ಕ್ರಿಮಿನಲ್ ಬೆದರಿಕೆ) ಮತ್ತು 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
“ಬಲವಂತವಾಗಿ ನೆಲ ನೆಕ್ಕುವಂತೆ ಮಾಡಲಾಗಿದೆ ಎಂದು ಬಲಿಪಶು ಹೇಳುತ್ತಿದ್ದಾರೆ. ಆದರೆ, ಆರೋಪಿಯು ನೆಕ್ಕುವಂತೆ ಒತ್ತಾಯಿಸಿಲ್ಲ, ಅದನ್ನು ಮಾತ್ರ ಹೇಳಲಾಗಿತ್ತು ಎಂದು ಹೇಳುತ್ತಿದ್ದಾನೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಉತ್ತರ ಪ್ರದೇಶದ ವಿರೋಧ ಪಕ್ಷಗಳು ರಾಜ್ಯದ ಬಿಜೆಪಿ ಸರ್ಕಾರವನ್ನು ಟೀಕಿಸಿವೆ, ಈ ಘಟನೆಯನ್ನು ‘ಮಾನವೀಯತೆಗೆ ಎಸಗಿದ ಕಳಂಕ’ ಎಂದು ಕರೆದಿವೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ಯಾರದ್ದೋ ತಪ್ಪು ಎಂದರೆ ಅವರಿಗೆ ಅವಮಾನಕರ, ಅಮಾನವೀಯ ಶಿಕ್ಷೆ ವಿಧಿಸಬೇಕು ಎಂದಲ್ಲ. ಬದಲಾವಣೆ ಮಾತ್ರ ಬದಲಾವಣೆ ತರುತ್ತದೆ!” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪೋಸ್ಟ್ನಲ್ಲಿ, “ಲಕ್ನೋದಲ್ಲಿ, ಆರ್ಎಸ್ಎಸ್ ಕಾರ್ಯಕರ್ತನೊಬ್ಬ ವೃದ್ಧ ದಲಿತ ವ್ಯಕ್ತಿಯೊಬ್ಬರ ಮೂತ್ರವನ್ನು ನೆಕ್ಕುವಂತೆ ಒತ್ತಾಯಿಸಿದ್ದಾನೆ. ವೃದ್ಧ ವ್ಯಕ್ತಿ ದೇವಾಲಯದ ಅಂಗಳದಲ್ಲಿ ಕುಳಿತಿದ್ದಾಗ, ಅನಾರೋಗ್ಯದ ಕಾರಣ ಆಕಸ್ಮಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಾನೆ” ಎಂದು ಹೇಳಿಕೊಂಡಿದೆ.
“ಕೋಪಗೊಂಡ ಆರ್ಎಸ್ಎಸ್ ಕಾರ್ಯಕರ್ತನೊಬ್ಬ ಸ್ಥಳಕ್ಕೆ ಧಾವಿಸಿ, ಅವರ ಮೇಲೆ ಜಾತಿ ನಿಂದನೆ ಮಾಡಿ, ಅವರನ್ನು ಮೂತ್ರ ನೆಕ್ಕುವಂತೆ ಒತ್ತಾಯಿಸಿದ್ದಾನೆ” ಎಂದು ಪಕ್ಷ ಹೇಳಿಕೊಂಡಿದೆ.
ಆದರೆ, ಆರೋಪಿಗೆ ಆರ್ಎಸ್ಎಸ್ಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
“ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆ ಮಾನವೀಯತೆಗೆ ಕಳಂಕ” ಎಂದು ಹೇಳಿದೆ. “ಈ ಘಟನೆಯು ಆರ್ಎಸ್ಎಸ್-ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಯ ಸಂಕೇತವಾಗಿದೆ. ದಲಿತರ ಮೇಲಿನ ದ್ವೇಷ ಅವರ ರಕ್ತದಲ್ಲಿ ಹರಿಯುತ್ತಿದೆ. ಅದಕ್ಕಾಗಿಯೇ ಅವರು ಸಂವಿಧಾನವನ್ನು ರದ್ದುಗೊಳಿಸಿ ದೇಶದಲ್ಲಿ ‘ಮನುವಾದ’ವನ್ನು ಜಾರಿಗೆ ತರಲು ಬಯಸುತ್ತಾರೆ, ಇದರಿಂದ ಅವರು ಜಾತಿಯ ಆಧಾರದ ಮೇಲೆ ಜನರನ್ನು ಶೋಷಿಸಬಹುದು” ಎಂದು ಕಾಂಗ್ರೆಸ್ ಹೇಳಿದೆ.
ನಾಮಪತ್ರ ಹಿಂಪಡೆಯುವಂತೆ ಬಿಜೆಪಿ ನಾಯಕರಿಂದ ನಮ್ಮ ಅಭ್ಯರ್ಥಿಗಳಿಗೆ ಬೆದರಿಕೆ : ಪ್ರಶಾಂತ್ ಕಿಶೋರ್ ಆರೋಪ


