ಬಳ್ಳಾರಿ ನಗರಕ್ಕೆ ಹೊಂದಿಕೊಂಡಿರುವ ಕೌಲ್ ಬಜಾರಿನ ದಾನಪ್ಪಬೀದಿ ಮತ್ತು ಬಂಡಿಹಟ್ಟಿ ಏರಿಯಾಗಳ ಬಡ ಜನರಿಗೆ ಇನಾಂ ರದ್ದತಿಯ ಬಳಿಕ ನೀಡಲಾಗಿದ್ದ ಭೂಮಿಯನ್ನು ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ) ದ ಮಾಜಿ ಅಧ್ಯಕ್ಷ ಎನ್. ಪ್ರತಾಪ್ ರೆಡ್ಡಿ ಪ್ರಭಾವ ಬಳಸಿ, ಬೆದರಿಕೆ ಹಾಕಿ ಕಿತ್ತುಕೊಂಡಿರುವ ಆರೋಪ ಕೇಳಿ ಬಂದಿದೆ.
ಶುಕ್ರವಾರ (ಡಿ.26) ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಪ್ರತಾಪ್ ರೆಡ್ಡಿ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದೆ.
1970ರ ದಶಕದಲ್ಲಿ ಇನಾಂ ರದ್ದತಿಯ ಬಳಿಕ ಸರ್ವೆ ನಂಬರ್ 715ಎ ಕೌಲ್ ಬಜಾರಿನ 1080 ಎಕರೆ ಇನಾಂ ಭೂಮಿಯಲ್ಲಿ 134 ಎಕರೆ ಭೂಮಿಯನ್ನು, 7 ಮಾದಿಗ, 4 ಕುರುಬ, 5 ಮಡಿವಾಳ ಹಾಗೂ 1 ಈಡಿಗ ಸೇರಿ 17 ಕುಟುಂಬಗಳಿಗೆ ಆಗಿನ ಭೂ ನ್ಯಾಯ ಮಂಡಳಿ ಹಂಚಿಕೆ ಮಾಡಿತ್ತು. ಈ ಎಲ್ಲಾ ಕುಟುಂಬಗಳಿಗೆ ಮಂಡಳಿ ಫಾರಂ ನಂಬರ್ 10 ನೀಡಿತ್ತು, ಅಲ್ಲದೆ ಫಲಾನುಭವಿಗಳ ಹೆಸರಿಗೆ ಹಕ್ಕು ಬದಲಾಯಿಸಿತ್ತು. ಅಂದಿನಿಂದ ಈ ಎಲ್ಲಾ ಕುಟುಂಬಗಳು ತಮಗೆ ದೊರೆತ ಭೂಮಿಯನ್ನು ನಂಬಿ ಬದುಕುತ್ತಿದ್ದವು ಎಂದು ಸಮಿತಿ ಹೇಳಿದೆ.
ಮುಂದುವರಿದು, 2006ರಿಂದ ಪ್ರತಾಪ್ ರೆಡ್ಡಿಯ ಕಣ್ಣು ಈ ಭೂಮಿಯ ಮೇಲೆ ಬಿದ್ದಿದೆ. ಆ ಬಳಿಕ ಅವರು ಗೂಂಡಾಗಿರಿ ಮಾಡುತ್ತಾ, ಬೆದರಿಕೆ ಹಾಕುತ್ತಾ ಬಂದಿದ್ದಾರೆ. ಇವರ ಕಿರುಕುಳಕ್ಕೆ ಬಡ ಜನರ ಬದುಕು ದಿವಾಳಿಯಾಗುತ್ತಾ ಸಾಗಿದೆ. ಭೂ ಒಡೆಯರಾಗಿದ್ದ ಮಾದಿಗ ಸಮುದಾಯದ ಕುಟುಂಬಗಳು ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುವ ಪೌರಕಾರ್ಮಿರಾಗಿ ಜೀವನ ಸಾಗಿಸುವಂತಾಗಿದೆ. ಮಡಿವಾಳರು ಜೀವ ಭಯದಿಂದ ಊರು ಬಿಟ್ಟಿದ್ದರೆ, ಈ ಭೂಮಿಯ ಸಹವಾಸವೇ ಬೇಡವೆಂದು ಜೀವ ಉಳಿಸಿಕೊಂಡು ಬದುಕುವ ಪರಿಸ್ಥಿತಿ ಕೆಲವರದ್ದಾಗಿದೆ. ಇನ್ನೂ ಕೆಲವರು ಜೀವ ಹೋದರೂ ಪರವಾಗಿಲ್ಲ, ನ್ಯಾಯ ಪಡೆದೇ ತೀರುತ್ತೇವೆಂದು ಕರ್ನಾಟಕ ಜನಶಕ್ತಿ ಮತ್ತು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೀದಿಗಿಳಿದು ಹಲವಾರು ಬಾರಿ ಹೋರಾಟ ನಡೆಸಿದ್ದಾರೆ ಎಂದು ಸಮಿತಿ ವಿವರಿಸಿದೆ.
ಇನಾಂ ರದ್ದತಿಗೂ ಮೊದಲು ಈ ಭೂಮಿ ದಿವಂಗತ ರಾಜರಾಜೇಶ್ವರಿಶಾಸ್ತ್ರಿ ಮತ್ತು ಅವರ ಮಗ ಬ್ರಹ್ಮಶಾಸ್ತ್ರಿ ಅವರಿಗೆ ಸೇರಿತ್ತು. ಇದೇ ಭೂಮಿಯಲ್ಲಿ ಈಗಿನವರ ಎರಡು-ಮೂರು ತಲೆಮಾರುಗಳು ದುಡಿಯುತ್ತಾ ಬಂದಿದೆ. ಭೂಮಿಯ ಮಾಲೀಕರಾಗಿದ್ದ ಬ್ರಹ್ಮಶಾಸ್ತ್ರಿಯೇ ಈ ಭೂಮಿಯಲ್ಲಿ ದುಡಿಯುತ್ತಿದ್ದವರ ಕೂಲಿ, ಕೆಲಸ ಗೇಣಿ ಮಾಡುತ್ತಿದ್ದವರ ವಿವರಗಳನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಅದರ ಪ್ರಕಾರವೇ ನ್ಯಾಯ ಮಂಡಳಿ 134 ಎಕರೆ ಸೇರಿದಂತೆ ನೂರಾರು ಎಕರೆ ಭೂಮಿಯನ್ನು ಹಂಚಿದೆ. ಫಾರಂ ನಂಬರ್ 10, ಮ್ಯೂಟೇಷನ್, ಪಹಣಿ ಎಲ್ಲವೂ ವರ್ಗಾವಣೆಯಾಗಿ ಇಂದಿನವರೆಗೂ ಕಂದಾಯ ಕಟ್ಟುತ್ತಾ ಬರುತ್ತಿದ್ದಾರೆ. ಭೂಮಿಯ ಮೇಲೆ ಬ್ಯಾಂಕ್ ಸಾಲ, ಬೆಳೆ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಕುಟುಂಬಗಳು ಬೆಳದಂತೆ ಭೂಮಿಯು ವಿಭಾಗಗಳಾಗಿ ಹಂಚಿಹೋಗಿವೆ. ಜನರು ಭಾವಿ, ಬೋರ್ವೆಲ್ ಕೊರೆದು, ವಿದ್ಯುತ್ ಸಂಪರ್ಕ ಪಡೆದು ತರಕಾರಿ ಹಾಗೂ ಇನ್ನಿತರೆ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ. ಗಮನಾರ್ಹವಾಗಿ, ಈ ಭೂಮಿಯಲ್ಲಿ ಜೀವ ಸವೆಸಿದ್ದ ಅವರ ತಾತ-ಮುತ್ತಾಂದಿರ ಸಮಾಧಿಗಳು ಕೂಡ ಇದೇ ಎಂದು ಸಮಿತಿ ತಿಳಿಸಿದೆ.
ಮಡಿವಾಳರು ಈ ಜಮೀನಿನಲ್ಲಿ ಅವರ ಕುಲ ಕಸುಬು ಮಾಡಿಕೊಂಡು ಬಂದಿರುವುದಕ್ಕೆ ಅವರವರ ಹೊಲಗಳಲ್ಲಿ ಕಟ್ಟಿರುವ ನೀರಿನ ಕಟ್ಟೆಗಳು, ಚಿಕ್ಕ ಚಿಕ್ಕ ಬಾವಿಗಳು ಪುರಾವೆಯಾಗಿವೆ. ಈಗ 2006ರಿಂದ ಪ್ರತಾಪ್ ರೆಡ್ಡಿ ಆ ಭೂಮಿ ನನ್ನದು ಎಂದು ಹೇಳುತ್ತಿದ್ದಾರೆ ಎಂದಿದೆ.
ಪ್ರತಾಪ್ ರೆಡ್ಡಿ ಮತ್ತು ಅವರ ಹೆಂಡತಿ ಶೈಲಜಾ ರೆಡ್ಡಿ ಹೆಸರಿಗೆ ಸರ್ವೆ ನಂಬರ್ 715ಎನಲ್ಲಿ 134 ಎಕರೆ ಭೂಮಿಯನ್ನು 2005-06ರಲ್ಲಿ ಟಿಎಸ್ ನಂಬರ್ (ಟೌನ್ ಸರ್ವೆ) ನೋಂದಣಿ ಮಾಡಿಕೊಂಡಿದ್ದಾರೆ. ಇದಾದ ನಂತರ ಸರ್ವೆ ನಂಬರ್ 715ಎನಲ್ಲಿ ಉಳುಮೆ ಮಾಡುತ್ತಿದ್ದ ಕುಟುಂಬಗಳನ್ನು ಒಕ್ಕಲೇಳುವಂತೆ ಮಾಡಿದ್ದಾರೆ. ಈ ವ್ಯಾಜ್ಯ ಪೊಲೀಸ್, ಕಂದಾಯ ಇಲಾಖೆ ಮತ್ತು ನ್ಯಾಯಾಲಯದ ಮೆಟ್ಟಿಲೇರಿದೆ. ಕೆಲ ಪೊಲೀಸ್ ಅಧಿಕಾರಿಗಳು ಪ್ರತಾಪ್ ರೆಡ್ಡಿಪರ ವಕಾಲತ್ ವಹಿಸಿ ಕೋರ್ಟ್ ವ್ಯಾಜ್ಯ ಇತ್ಯರ್ಥಪಡಿಸುವವರೆಗೆ ಯಾರೂ ಜಮೀನಿಗೆ ಹೋಗದಂತೆ ಫರ್ಮಾನು ಹೊರಡಿಸಿದ್ದಾರೆ. ಇದರಿಂದ ಭೂಮಿ ಉಳುಮೆ ಮಾಡದೆ ಬೀಳು ಬೀಳುವಂತಾಗಿದೆ. ಪ್ರತಾಪ್ ರೆಡ್ಡಿ ವಿರುದ್ದ ಧ್ವನಿ ಎತ್ತಿದ್ದಕ್ಕಾಗಿ ಫಲಾನುಭವಿಗಳ ಮೇಲೆ ಸುಳ್ಳು ಕೇಸ್ ದಾಖಲಿಸಿ ಕೋರ್ಟ್-ಕಚೇರಿ ಅಲೆಯುವಂತೆ ಮಾಡಲಾಗಿದೆ ಎಂದು ಸಮಿತಿ ಹೇಳಿದೆ.
ಪ್ರತಾಪ್ ರೆಡ್ಡಿ ತನ್ನ ಹೆಸರಿಗೆ 61.23 ಎಕರೆ ಭೂಮಿಗೆ 13,50,000 ರೂಪಾಯಿಗಳನ್ನು ಕೊಟ್ಟಿದ್ದರೆ, ಅವರ ಹೆಂಡತಿ ಶೈಲಜಾರೆಡ್ಡಿ 73 ಎಕರೆ ಭೂಮಿಗೆ 13,50,000 ರೂಪಾಯಿಗಳನ್ನು ಕೊಟ್ಟು ದಿನಾಂಕ : 17-10-2005 ನೋಂದಣಿ ಮಾಡಿಸಿಕೊಂಡಿದ್ದಾರೆಂದು ದಾಖಲೆಗಳು ಹೇಳುತ್ತಿವೆ. ಅಂದರೆ ಎಕರೆಗೆ ಕೇವಲ 20 ಸಾವಿರ ರೂಪಾಯಿ ಕೊಟ್ಟಂತಾಗಿದೆ. 134 ಎಕರೆ ಗಂಡ ಹೆಂಡತಿ ಹೆಸರಲ್ಲಿ ಒಂದೇ ದಿನ ನೋಂದಣಿ ಆಗಿರುವ ಈ ಭೂಮಿ ಬಳ್ಳಾರಿ ನಗರದಲ್ಲಿ ಇಷ್ಟು ಕಡಿಮೆ ದರದಲ್ಲಿ, ಅದೂ ಅವರ ಪ್ರಕಾರವೇ ಟೌನ್ ವ್ಯಾಪ್ತಿಗೊಳಪಟ್ಟ ಭೂಮಿ ಸಿಗುತ್ತದೆಂದರೆ ನಂಬಲು ಸಾಧ್ಯವೇ? ಎಂದು ಸಮಿತಿ ಪ್ರಶ್ನಿಸಿದೆ.
ಈ ರೀತಿಯ ದೊಡ್ಡ ಮಟ್ಟದ ಭೂಮಿಯ ನೋಂದಣಿ ಮಾಡಿರುವುದು ಕೂಡ ಕಾನೂನಿಗೆ ವಿರುದ್ಧವಾಗಿದೆ.
ಭೂಮಿಯು ಮೂಲತಃ ದಿವಂಗತ ರಾಜರಾಜೇಶ್ವರಿಶಾಸ್ತ್ರಿಯವರಿಗೆ ಸೇರಿದ್ದು ಇವರಿಗೆ ಬ್ರಹ್ಮಶಾಸ್ತ್ರಿ ಮತ್ತು ತಿಪ್ಪಾಶಾಸ್ತ್ರಿ ಇಬ್ಬರು ಮಕ್ಕಳು, ಬೃಹ್ಮಶಾಸ್ತ್ರಿಗೆ ಮಕ್ಕಳಿಲ್ಲ. ತಿಪ್ಪಶಾಸ್ತ್ರಿಗೆ 3 ಜನ ಮಕ್ಕಳೆಂದರೆ ವೆಂಕಟರಮಣಶಾಸ್ತ್ರಿ, ಕೃಷ್ಣಶಾಸ್ತ್ರಿ, ಮತ್ತು ದಕ್ಷಿಣಾಮೂರ್ತಿ, ಉಳಿದ ಭೂಮಿಯೆಲ್ಲವೂ ದಿವಂಗತವಾಗಿರುವ ವೆಂಕಟರಮಣಶಾಸ್ತ್ರಿಯ ಹೆಸರಿನಲ್ಲಿದೆ. ಕೃಷ್ಣಶಾಸ್ತ್ರಿ ಹೆಂಡತಿ ಲಲಿತಮ್ಮ ಮತ್ತು ಇವರ ಮಕ್ಕಳಿಂದ ಪ್ರತಾಪ್ರೆಡ್ಡಿಯವರು 27 ಲಕ್ಷ ಹಣ ಕೊಟ್ಟು ಭೂಮಿಯನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಾಸ್ತವದಲ್ಲಿ ಪ್ರತಾಪ್ರೆಡ್ಡಿಗೆ ಮಾರಾಟ ಮಾಡಿರುವ ವ್ಯಕ್ತಿಗಳ ಹೆಸರಿನಲ್ಲಿ ಭೂಮಿಯ ಹಕ್ಕು ಬದಲಾಗಿರುವ ಯಾವುದೇ ದಾಖಲೆಗಳಿಲ್ಲ. ಇದಕ್ಕೆ ಸಂಬಂಧಿಸಿದ ಲಿಂಕ್ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಕೇಳಿದರೆ, ಲಿಂಕ್ ದಾಖಲೆ ಪತ್ರಗಳನ್ನು ಸುಟ್ಟು ಹಾಕಲಾಗಿದೆ ಎಂದು ಲಿಖಿತವಾದ ಉತ್ತರವನ್ನು ಅಧಿಕಾರಿಗಳು ನೀಡಿದ್ದಾರೆ. ದಾಖಲೆಗಳನ್ನು ಸುಟ್ಟು ಹಾಕಲಾಗಿದೆ ಎಂದರೆ ವಾಸ್ತವವನ್ನು ಮರೆಮಾಚಿದಂತೆ ಆಗುವುದಿಲ್ಲವೇ? ಎಂದು ಸಮಿತಿ ಕೇಳಿದೆ. ಇದರ ಹಿಂದೆ ಭ್ರಷ್ಟ ಅಧಿಕಾರಿಗಳ ಕೈವಾಡ ಇರುವ ಇದೆ ಎನ್ನುವುದರಲ್ಲಿ ಸಂಶಯವಿಲ್ಲವೆಂದು ಹೇಳಬಹುದಾಗಿದೆ ಎಂದಿದೆ.
ಸರ್ಕಾರವೇ ಕೊಟ್ಟ ಎಲ್ಲಾ ದಾಖಲೆ ಪತ್ರಗಳು ಇದ್ದರೂ, ಜಿಲ್ಲಾಡಳಿತ ಬಡವರ ಪರವಾಗಿ ನಿಂತು ಗೊಂದಲವನ್ನು ಬಗೆ ಹರಿಸಬಹುದಾದ ವಿಷಯವಾಗಿದ್ದರೂ, ಕೆಲ ಅಧಿಕಾರಿಗಳು ಮಾಡಿದ ತಪ್ಪು ಮತ್ತು ಬೇಜವಾಬ್ದಾರಿತನಗಳು ವಿಷಯ ಕಗ್ಗಂಟಾಗಲು ಕಾರಣವಾಗಿದೆ. ಇದಕ್ಕೆ ಎನ್.ಪ್ರತಾಪ್ರೆಡ್ಡಿಯವರ ಅಧಿಕಾರ-ಹಣ ಕೆಲಸ ಮಾಡಿದೆ ಎಂದು ಯಾವುದೇ ಸಂಶಯವಿಲ್ಲದೇ ಹೇಳಬಹುದು ಎಂದು ಸಮಿತಿ ತಿಳಿಸಿದೆ.
ಭೂ ಫಲಾನುಭವಿಗಳು ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದ ಸಂದರ್ಭದಲ್ಲಿ ಇವರ ಬೆನ್ನಿಗೆ ನಿಲ್ಲಬೇಕಾಗಿದ್ದ ಕಾನೂನು ಪಾಲಕರು, ಕಂದಾಯ ಇಲಾಖೆಯಯವರು ಸರಿಯಾಗಿ ಮಾರ್ಗದರ್ಶನ ಕೂಡ ಮಾಡಿರುವುದಿಲ್ಲ. ಈ ಜನರಿಗೆ ಸರ್ಕಾರವೇ ಕೊಟ್ಟಿರುವ ಭೂಮಿಯ ದಾಖಲೆಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವರ್ತಿಸುತ್ತಾ ಬಂದಿರುವುದರಿಂದ ಪ್ರತಾಪ್ರೆಡ್ಡಿ ತೋಡಿದ ಮೋಸದ ಖೆಡ್ಡಾಕ್ಕೆ ಜಿಲ್ಲಾಡಳಿತವನ್ನು ಮತ್ತು ಶೋಷಿತ ಬಡ ಜನರನ್ನು ಬೀಳಿಸಿಕೊಂಡು, ಕಾನೂನು-ನ್ಯಾಯ, ನನ್ನ ಹಣ-ರಾಜಕೀಯ ಬಲಕ್ಕಿಂತ ದೊಡ್ಡದೇ? ಎಂದು ಸೆಡ್ಡು ಹೊಡೆದಿದ್ದಾರೆ ಎಂದಿದೆ.
ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವೇ ಆಗಿದೆ. ತಾಲ್ಲೂಕು ಸರ್ವೆಯರ್ ಹನುಮಂತಪ್ಪ ಎಂಬ ಅಧಿಕಾರಿಯನ್ನು ಕೋರ್ಟ್ ಕಮಿಷನ್ ವಾರಂಟ್ ಪ್ರಕಾರ ನೇಮಿಸಲಾಗಿದ್ದು, ಈ ಅಧಿಕಾರಿ ಕಾನೂನು ಪ್ರಕಾರ ಸರ್ವೆ ಮಾಡದೆ ರೈತರ ವಿರುದ್ಧ ಇರುವ ವಕೀಲರ ಮಾತಿನಂತೆ ಕೆಲಸ ಮಾಡುತ್ತೇನೆಂದು ಹೇಳಿ ಬಲಾಡ್ಯರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಅಧಿಕಾರಿಯ ವಿರುದ್ಧ ಮತ್ತು ಕಾನೂನು ಉಲ್ಲಂಘನೆ ಮಾಡುತ್ತಿರುವ ಎನ್. ಪ್ರತಾಪ್ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಹೈಕೋರ್ಟ್ನಲ್ಲಿ
ಪ್ರಕರಣ ಬಾಕಿಯಿದ್ದರೂ, ಪ್ರತಾಪ್ರೆಡ್ಡಿ ಬಡವರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ.
ಈ ವಿಚಾರವಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶ ಮಾಡಿ ಪ್ರತಾಪ್ರೆಡ್ಡಿ ನಡೆಸುತ್ತಿರುವ ಉಪಟಳ ಮತ್ತು ಬಡ ಜನರ ಭೂಮಿಯ ವಂಚನೆ ನಡೆಸುತ್ತಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಮುಖಂಡರುಗಳಾದ ಕುಮಾರ್ ಸಮತಳ, ಮರಿಯಪ್ಪ, ಕಾವೇರಿ ಹಾಗೂ ಭೂಮಿಯಿಂದ ವಂಚನೆಗೊಳಗಾಗುತ್ತಿರುವ ಕೆ.ಮೋಹನ್ , ಕೆ.ಎಸ್ ರಘು, ಈ.ಈರೇಶ್ ಇದ್ದರು.


